Tuesday, 10 July 2018

ವರ್ಚುವಲ್ ಅಸಿಸ್ಟಂಟ್’ನ ರಿಯಲ್ ಟ್ರಬಲ್


1893ರಲ್ಲಿ ಚಿಕ್ಯಾಗೋದಲ್ಲಿ ನಡೆದ ಪ್ರಥಮ ವಿಶ್ವ ಧರ್ಮ ಸಂಸತ್ನಲ್ಲಿ   ಸ್ವಾಮಿ ವಿವೇಕಾನಂದರ ಭಾಷಣ ಪ್ರಾರಂಭಿಸಿದಾಗ ಹೇಳಿದ “Sisters and brothers of America” ಶಬ್ದಗಳನ್ನು ಕೇಳಿ, ಅಲ್ಲಿ ನೆರಿದಿದ್ದ 7000 ಜನ ಮಂತ್ರಮುಗ್ಧರಾಗಿ ಎದ್ದು ನಿಂತು 2  ನಿಮಿಷಗಳವರೆಗೆ ಕರತಾಡನ ಮಾಡಿದ್ದು ಪ್ರತಿಯೊಬ್ಬ ಭಾರತಿಯನಿಗೆ  ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಆ ಕಾಲದಲ್ಲಿ ಸ್ಮಾರ್ಟ್ ಫೋನ್, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿದ್ದಿದ್ದರೆ, ಜಗತ್ತಿಗೆ ಭಾರತದ ವಿಶ್ವರೂಪ ತೋರಿಸಿದ ಈ ಭಾಷಣ, ವೈರಲ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುತ್ತಿತ್ತು ! ಆ ಸಮಯದಲ್ಲಿ ಅಂತರಜಾಲವಿಲ್ಲದಿದ್ದರೂ ಸ್ವಾಮಿ ವಿವೇಕಾನಂದರ ಭಾಷಣ ಜಗತ್ತಿನ ಅತ್ಯಂತ ಪ್ರಭಾವಿ ಭಾಷಣಗಳಲ್ಲೊಂದಾಗಿದೆ. ಅದೇ ಆ ಕಾಲದಲ್ಲಿ ಮೊಬೈಲ್ಗಳಿದನ್ನು ಊಹಿಸಿದಾಗ, ಭಾಷಣದ ಸಮಯದಲ್ಲಿ ಮೋಬೈಲ್ ರಿಂಗಿನ ಹಾವಳಿಯಿಂದ ಕಿರಿ ಕಿರಿಯುಂಟಾಗುತ್ತಿತ್ತು ಅಥವಾ ಅವರ ಆಸುಪಾಸಿನಲ್ಲಿದ್ದ ಸ್ಮಾರ್ಟ್ ಫೋನ್ನ ವರ್ಚುಯಲ್ ಅಸಿಸ್ಟಂಟ್ ಅಡ್ಡ ಬಾಯಿ ಹಾಕಿ ಅವರ ಭಾಷಣಕ್ಕೆ ಅಡ್ಡಿಯಾಗಿ ವಿಘ್ನ  ತಂದೊಡ್ಡುತ್ತಿತ್ತೇನೋ! 

ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಜೇಬಿನಲ್ಲಿ ಅಂತರಜಾಲದ ಸಂಪರ್ಕದಲ್ಲಿದ್ದ ಸ್ಮಾರ್ಟ್ಫೋನ್ ಇದ್ದಲ್ಲಿ ಯಾವುದೇ ಅಡೆತಡೆಯಿಲ್ಲದೆ 15 ನಿಮಿಷ ಭಾಷಣಮಾಡುವದೂ ಅಸಾಧ್ಯ! ಸದಾಕಾಲ ಇಂಟರ್ನೆಟ್ ಸಂಪರ್ಕದಲ್ಲಿರುವ ಸ್ಮಾರ್ಟ್ ಫೋನ್ಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಪ್ರತಿ ಕ್ಷಣವೂ  ನಮ್ಮ ಧ್ವನಿ ಕೇಳುತ್ತಾ ನಮ್ಮ ಆದೇಶ ಪಾಲನೆ ಮಾಡುವ ಆಜ್ಞಾಧಾರಿ ವರ್ಚುವಲ್ ಸೇವಕನಂತೆ ನಮ್ಮ ಸಹಾಯಕ್ಕಾಗಿ ಸದಾ ಸಜ್ಜಾಗಿರುತ್ತವೆ. ಇದರಿ೦ದ ಅನೇಕಬಾರಿ ಸ್ಮಾರ್ಟ್ ಫೋನ್ಗಳು  ಜನರ ಜೀವನದಲ್ಲಿ ಮೂಗುತೂರಿಸುತ್ತವೆ. ಈ ರೀತಿಯ ಘಟನೆಯೊಂದು ಕಳೆದ ವಾರ ಬ್ರಿಟನ್ನ ಸಂಸತ್ ಹೌಸ್ ಆಫ್ ಕಾಮನ್ಸ್ನಲ್ಲಿ ಜರುಗಿತು ಮತ್ತು ಜಗತ್ತಿನಾದ್ಯಂತ ಇದರ  ಚರ್ಚೆಯಾಗುತ್ತಿದೆ. ಬ್ರಿಟನ್ನ ರಕ್ಷಣಾ ಕಾರ್ಯದರ್ಶಿ ಟೋರಿ ಗೆವಿನ್ ವಿಲಿಯಮ್ಸನ್  ಹೌಸ್ ಆಫ್ ಕಾಮನ್ಸ್ನಲ್ಲಿ ಭಯೋತ್ಪಾದನೆಯ ಕುರಿತು ಮಾತಾನಾಡುತ್ತಿದ್ದಾಗ ಅನೇಕಬಾರಿ ಸಿರಿಯಾದ ಉಲ್ಲೇಖ ಮಾಡಿದರು. ಕಾಕತಾಳೀಯ ಎಂಬತ್ತೆ ಅವರ ಸ್ಮಾರ್ಟ್ ಫೋನ್ನ ವರ್ಚುವಲ್ ಅಸಿಸ್ಟಂಟ್ನ ಹೆಸರು ಕೂಡ  “ಸಿರಿ”ಯಾಗಿದ್ದರಿಂದ, ಸಿರಿಯಾದ ಹೆಸರು ಕೇಳುತ್ತಿದ್ದಂತೆ ಸಿರಿ ತನ್ನನ್ನೇ ಕೂಗಿದರೆಂದು ತಿಳಿದು ಅಂತರಜಾಲವನ್ನು ಜಾಲಾಡಿ ಸಿರಿಯ ಕುರಿತು ಮಾಹಿತಿ ನೀಡುವ ಮಾತುಗಳನ್ನಾಡಿತು. ವಿಲಿಯಮ್ಸನ್  ತಂತ್ರಜ್ಞಾನದ  ಹಸ್ತಕ್ಷೇಪಕ್ಕೆ ಸದನದ  ಕ್ಷಮೆ ಕೇಳಿದಾಗ, ಸಭೆ ನಗೆಯಲ್ಲಿ ಮುಳುಗಿತು. ಇದಕ್ಕಿತೆ  ಮುಂಚೆ ಬ್ರಿಟನ್ ಸಾರಿಗೆ ಸಚಿವರು ಚರ್ಚೆಯೊಂದರಲ್ಲಿ ಭಾಗವಹಿಸಿದ್ದಾಗ ಅವರ ಮೊಬೈಲ್ನ ವರ್ಚಲ್ ಅಸಿಸ್ಟಂಟ್  ಸಿರಿ’, ಸಿರಿಯಾದ ಹೆಸರು ಕೇಳಿ ಗೊಂದಲಕ್ಕೀಡಾಗಿ ಏನೇನೋ ಗೊಣಗಿತ್ತು.

ವರ್ಚುವಲ್ ಅಸಿಸ್ಟಂಟ್  ನಮ್ಮ  ಪ್ರಶ್ನೆಗಳಿಗೆ ತಂತ್ರಾಂಶದ ಸಹಾಯದಿಂದ ಅಂತರ್ಜಾಲವನ್ನು ಜಾಲಾಡಿ ಉತ್ತರಿಸುವ ಪ್ರೇತರೂಪದ,  ಡಿಜಿಟಲ್ ಅಸಿಸ್ಟೆಂಟ್ ಅಥವಾ ವಾಸ್ತವ ಸಹಾಯಕ. ಇದು ಆಡು ಭಾಷೆಯ ಧ್ವನಿ ಆದೇಶಗಳನ್ನು ಅರ್ಥಮಾಡಿಕೊಂಡು ಮತ್ತು ಬಳಕೆದಾರ ಕಾರ್ಯಗಳನ್ನು ಪೂರ್ಣಗೊಳಿಸುವ ಒಂದು ಅಪ್ಲಿಕೇಷನ್ ಪ್ರೊಗ್ರಾಮ್ ಆಗಿದೆ. ಸಾಮಾನ್ಯವಾಗಿ ವೈಯಕ್ತಿಕ ಸಹಾಯಕ ಅಥವಾ ಕಾರ್ಯದರ್ಶಿಯ ಮೂಲಕ ನಿರ್ವಹಿಸಲಾಗುವ  ಕಾರ್ಯಗಳಾದ  ಟಿಪ್ಪಣಿ ಬರೆಯುವದು, ಇ-ಮೇಲ್ ಸಂದೇಶಗಳನ್ನು ಓದುವುದು, ಫೋನ್ ಸಂಖ್ಯೆಗಳನ್ನು ಹುಡುಕುವುದು, ವೇಳಾಪಟ್ಟಿ ಮಾಡುವುದು, ಫೋನ್ ಕರೆಗಳನ್ನು ಮಾಡುವುದು ಮತ್ತು ಮೀಟಿಂಗ್ಗಳ ಕುರಿತು ನೆನಪಿಸುವುದು ಮುಂತಾದ ಕರ್ತವ್ಯಗಳನ್ನು ವರ್ಚುವಲ್ ಅಸಿಸ್ಟಂಟ್ ನಿರ್ವಹಿಸುತ್ತದೆ. ಜನಪ್ರಿಯ ವರ್ಚುಯಲ್ ಅಸಿಸ್ಟಂಟ್ಗಳಲ್ಲಿ  ಅಮೆಜಾನ್ ಅಲೆಕ್ಸಾ’, ಯ್ಯಾಪಲ್ಸಿರಿ, ಗೂಗಲ್ ಅಸಿಸ್ಟಂಟ್, ಸ್ಯಾಮ್ಸಂಗ್ಬಿಕ್ಸ್ಬೈ  ಮತ್ತು ಮೈಕ್ರೋಸಾಫ್ಟ್ ಕೊರ್ಟಾನಾಪ್ರಮುಖವಾಗಿವೆ. 2017ರಲ್ಲಿ ಅಮೇರಿಕಾದಲ್ಲಿ ನಡೆಸಿದ ಸಮೀಕ್ಷೆಯೊಂದರಂತೆ   ಸಿರಿ 34%, ಗೂಗಲ್ ಅಸಿಸ್ಟೆಂಟ್ 19%, ಅಮೆಜಾನ್ ಅಲೆಕ್ಸಾ 6%, ಮತ್ತು ಮೈಕ್ರೊಸಾಫ್ಟ್ ಕೊರ್ಟಾನಾ 4% ರಷ್ಟು   ಗ್ರಾಹಕರು ಉಪಯೋಗಿಸುತ್ತಿದ್ದಾರೆ.

1961ರಲ್ಲಿ ನಿರ್ಮಿತ  ಐ.ಬಿ. ಎಂಶೂ ಬಾಕ್ಸ್  ಧ್ವನಿ ಗುರಿತಿಸುವ ಮೊದಲ ಡಿಜಿಟಲ್ ಉಪಕರಣವಾಗಿತ್ತು. ಇದು 16 ಶಬ್ದಗಳನ್ನು ಮತ್ತು ಶೂನ್ಯದಿಂದ ಒಂಬತ್ತರವರೆಗಿನ ಅಂಕೆಗಳನ್ನು ಗುರುತಿಸುತಿತ್ತು. ತದನಂತರ 1970ರಲ್ಲಿ  ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ  ಸಾವಿರ ಶಬ್ದಗಳನ್ನು ಗುರುತಿಸುವ ಹಾರ್ಪಿ ಎಂಬ ಉಪಕರಣವನ್ನು ಅಭಿದ್ಧಿಪಡಿಸಲಾಯಿತು. 1990ರ ದಶಕದಲ್ಲಿ ಡಿಜಿಟಲ್ ಸ್ಪೀಚ್ ರಿಕಗ್ನೆಷನ್ ತಂತ್ರಜ್ಞಾ ಇನ್ನಷ್ಟು ವಿಕಸಿತಗೊಂಡು ಮುಂಚೂಣಿಯಲ್ಲಿದ್ದ ಪರ್ಸನಲ್ ಕ0ಪ್ಯೂಟರ್ಗಳಲ್ಲಿ ಅಳವಡಿಸಲ್ಪಟ್ಟಿತು.  1994ರಲ್ಲಿ ಐ.ಬಿ.ಎಮ್. ನಿರ್ಮಿತ ಸೈಮನ್ ಸ್ಮಾರ್ಟ್ ಫೋನ್ನಿಂದ ಇಂದಿನ ಯುಗದ ವರ್ಚುವಲ್  ಅಸಿಸ್ಟಂಟ್ಗಳಿಗೆ ನಾ೦ದಿಯಾಯಿತು. 2011 ರಲ್ಲಿ ಫೋನ್ 4ಎಸ್   ಸಿರಿ ಸ್ಮಾರ್ಟ್ ಫೋನ್ನಲ್ಲಿ ಸ್ಥಾಪಿತ ಪ್ರಥಮ ಆಧುನಿಕ ಡಿಜಿಟಲ್ ವರ್ಚುವಲ್ ಸಹಾಯಕ,

ವರ್ಚುವಲ್ ಸಹಾಯಕರನ್ನು ಬಳಸುವದು ತಪ್ಪಲ್ಲ ಆದರೆ ಅವುಗಳನ್ನು ಬಳಸುವ ಸಮಯ ಮತ್ತು ಸಂದರ್ಭ ಮಾತ್ರ ನಮ್ಮ ಆಯ್ಕೆಗೆ ಬಿಟ್ಟದ್ದು. ಇಂತಹ ಉಪಕರಣಗಳನ್ನು ವಿಶೇಷವಾಗಿ ಯಾವುದಾದರೊಂದು ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಅಥವಾ ಉಪನ್ಯಾಸ ನಿಡುವಾಗ ಬಳಸಿದಲ್ಲಿ ಒಮ್ಮೊಮ್ಮೆ ಮುಜುಗುರದ ಪ್ರಸಂಗಗಳು ಒದಗಿ ಬರಬಹುದು.

ಕಾಲಕ್ಕೆ ತಕ್ಕಂತೆ ಕುಣಿಯದೇ ಕಾಲ್’ತುಳಿತಕ್ಕೆ ಸಿಕ್ಕ ಯಾಹೂ!


Yet Another Hierarchical Officious Oracle ಎಂಬ ಹೆಸರನ್ನು ಕೇಳಿದ್ದೀರಾ? ಕೇವಲ ಎರಡು ದಶಕಗಳ ಹಿಂದೆ ಇಂಟರ್ನೆಟ್ನ ಇನ್ನೊಂದು ಹೆಸರೇ ಯಾಹೂ ಆಗಿತ್ತು. 90ರ ದಶಕದ ಅಂತ್ಯದಲ್ಲಿ ಮತ್ತು 2000ರದ ಪ್ರಾರಂಭದಲ್ಲಿ ಈ ಮೇಲ್ ಉಪಯೋಗಿಸಲಾರಂಭಿಸಿದ ಬಹುತೇಕರು ತಮ್ಮ ಪ್ರಥಮ ಈ ಮೇಲ್ ಖಾತೆ ತೆರೆದದ್ದು, ಇಂದು ಅವಸಾನದಂಚಿನಲ್ಲಿರುವ/ಅಪ್ರಾಸಂಗಿಕ/ಅಸಂಗತವಾಗಿರುವ ಯಾಹೂವಿನಲ್ಲೇ! ಒಂದು ಕಾಲದಲ್ಲಿ  ಯಾಹೂವಿನ ಚಾಟ್ ರೂಮ್ ಮತ್ತು ಯಾಹೂ ಮೇಸೆಂಜರ್  ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣದ ವೇದಿಕೆಗಳಾಗಿದ್ದವು. ಆಗ ಬಹುತೇಕ ಅಂತರ್ಜಾಲ ಬಳಕೆದಾರರ ಹೋಮ್ಪೇಜ್ ಕೂಡ ಯಾಹೂವಿನದೇ ಆಗಿರುತ್ತಿತ್ತು. ಅರ್ಥಾತ್ ಆಗ ಇಂಟರ್ನೆಟ್ನ ಜಗತ್ತಿನ ಪ್ರವೇಶ ದ್ವಾರ ಯಾಹೂವಿನ ಕಿಟಕಿಯಿಂದ ಹಾದು ಹೋಗುತ್ತಿತ್ತು!.

ಡೇವಿಡ್ ಫಿಲೋ ಮತ್ತು ಜರ್ರಿ ಯಾ೦ಗರಿಂದ 1994ರಲ್ಲಿ ಸ್ಥಾಪಿತವಾದ ಯಾಹೂ’, ಕೆಲವೇ ವರ್ಷಗಳಲ್ಲಿ ಅಂತರ್ಜಾಲ ಲೋಕದ ಅತ್ಯಂತ ಸಫಲ ಕಂಪನಿಯಾಗಿ ಬೆಳೆದಿತ್ತು. ಆದರೆ 2017ರಲ್ಲಿ ಯಾಹೂವನ್ನು ಅಮೇರಿಕಾದ ಟೆಲಿಕಾಮ್ ಕಂಪನಿ ವೇರಿಜೋನ್ ಸುಮಾರು 32000ಕೋಟಿ ರೂಪಾಯಿಗೆ ಖರೀದಿಸಿತು.  ಇಂಗ್ಲೀಷನ ನಾಣ್ಣುಡಿ “Jack of all trades but master of none” ಯಾಹೂಗೆ ಸರಿಯಾಗಿ ಹೊಂದುತ್ತದೆ. ಅಂದರೆ ಒಬ್ಬ ವ್ಯಕ್ತಿಗೆ ಅನೇಕ ವಿಷಯಗಳ ಮಾಹಿತಿ ಇದ್ದು, ತಕ್ಕ ಮಟ್ಟಿಗೆ ಕೆಲಸವನ್ನೂ ಮಾಡಬಲ್ಲ ಆದರೆ ಯಾವುದೊಂದು ವಿಷಯದಲ್ಲೂ ಪರಿಣಿತಿ ಇರುವದಿಲ್ಲ. ಒಂದೇ ಬಾರಿ ಹಲವು ಕ್ಷೇತ್ರಗಳಿಗೆ ಕಾಲಿಟ್ಟ ಯಾಹೂ ಜಾಕ್ ಆಫ್ ಆಲ್ ಟ್ರೇಡ್ಸ್ನ ಖ್ಯಾತಿ ಪಡೆಯಿತು ಆದರೆ ಯಾವುದೊಂದು ಕ್ಷೇತ್ರದಲ್ಲೂ ತನ್ನ ಪ್ರಾವೀಣ್ಯದ  ಹೆಗ್ಗುರುತು ಮೂಡಿಸಿ ವಿಶೇಷತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಯಿತು.

2000ನೇ ಇಸವಿಯಲ್ಲಿ ಯಾಹೂನ ಕಿಮ್ಮತ್ತು ಸರಿಸುಮಾರು 8 ಲಕ್ಷ 30 ಸಾವಿರ ಕೋಟಿ ರೂಪಾಯಿಯಾಗಿತ್ತು! 2002ರಲ್ಲಿ ಯಾಹೂ’, ಇಂಟರ್ನೆಟ್ ಲೋಕದ ದಿಗ್ಗಜ ಕಂಪನಿಯಾದ ಗೂಗಲ್ನ್ನು ಖರೀದಿಸಲು ಪ್ರಯತ್ನಿಸಿತ್ತು. ಗೂಗಲ್ನ್ನು ಖರೀದಿಸಲು, ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು ಆದರೆ ಗೂಗಲ್ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು! ನೇತೃತ್ವದ   ದೂರದೃಷ್ಟಿಯ ಕೊರತೆಯಿಂದ ಯಾಹೂ ಈ ವ್ಯವಹಾರದ ಚೌಕಾಶಿಯಲ್ಲಿ ಎಡವಿ ಇಂದು ಕೊರಗುತ್ತಿದೆ!  ಹಾಗೆಯೇ 2006ರಲ್ಲಿ ಯಾಹೂಗೆ ಫೇಸ್ಬುಕ್ನ್ನು ಖರೀದಿಸುವ ಸುವರ್ಣಾವಕಾಶವಿತ್ತು, ಆದರೆ ಯಾಹೂ ಫೇಸ್ಬುಕ್  ಮೌಲ್ಯವನ್ನು ಗುರುತಿಸುವಲ್ಲಿ ಮತ್ತೆ ಮುಗ್ಗರಿಸಿತ್ತು. 2017ರಲ್ಲಿ ಕೇವಲ 32000ಕೋಟಿ ರೂಪಾಯಿಗೆ ಮಾರಾಟವಾದ ಯಾಹೂ’, ಗೂಗಲ್ ಮತ್ತು ಫೇಸ್ಬುಕ್ಗಳಿಗೆ ಹೊಲಿಸಿದಲ್ಲಿ ಕ್ಷುದ್ರ ಕಂಪನಿಯಾಗುಳಿದಿದೆ.  ಫೋರ್ಬ್ಸ್ ಮ್ಯಾಗಜೀನ್ನಲ್ಲಿ ಉಲ್ಲೇಖಿಸಿದಂತೆ ಇವತ್ತಿನ ಗೂಗಲ್ನ ಬ್ರ್ಯಾಂಡ್ ವ್ಯಾಲ್ಯು ಯಾಹೂನ ಸುಮಾರು 18 ಪಟ್ಟಿದೆ! ಇದೆ ರೀತಿ 2008 ರಲ್ಲಿ ಐ.ಟಿ. ದಿಗ್ಗಜ ಮೈಕ್ರೋಸಾಫ್ಟ್ ಯಾಹೂವನ್ನು 2 ಲಕ್ಷ 95 ಕೋಟಿ ರೂಪಾಯಿಗೆ ಕೊಂಡುಕೊಳ್ಳುವ ಪ್ರಸ್ತಾವ ಇಟ್ಟಿತ್ತು. ಆದರೆ ಯಾಹೂ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು, ಆದರೆ 2017ರಲ್ಲಿ  2008ಕಿ೦ತಲೂ 9ಪಟ್ಟು ಕಡಿಮೆ ಬೆಲೆಗೆ ಮಾರಾಟವಾಯಿತು! ಸಮಯಕ್ಕನುಗುಣವಾಗಿ ಬದಲಾಗದಿರುವುದೇ ಯಾಹೂವಿನ ಪತನಕ್ಕೆ ಮುಖ್ಯ ಕಾರಣ.2000ನೇ ಇಸವಿಯ ನಂತರ ಇಂಟರ್ನೆಟ್ ಜಗತ್ತಿನಲ್ಲಾದ ಬದಲಾವಣೆಯ ವೇಗಕ್ಕೆ ಯಾಹೂ ಹೊಂದಿಕೊಳ್ಳಲಿಲ್ಲ. ಸಮಾಜಿಕ ಜಾಲತಾಣ ಮತ್ತು ಮೊಬೈಲ್ ಫೋನ್ಗಳ  ಶಕ್ತಿಯನ್ನು ಗುರುತಿಸಿ ವಿವಿಧ ಇಂಟರ್ನೆಟ್ ಕಂಪನಿಗಳು ಹೊಸ ಮತ್ತು ಆಕರ್ಷಕ ಸೇವೆಗಳಿಗೆ ವೇದಿಕೆ  ವದಗಿಸುತ್ತಿದ್ದಾಗ, ಯಾಹೂ ತನ್ನ ಪುರಾತನ ಶೈಲಿಯಲ್ಲೇ ಕಾರ್ಯನಿರ್ವಹಿಸುತ್ತಿತ್ತು.

ಎಲ್ಲಿ ಹೊಸ ವಿಚಾರಗಳಿಗೆ ಅವಕಾಶವಿರುವದಿಲ್ಲವೋ ಮತ್ತು ಸಮಯಕ್ಕನುಗುಣವಾಗಿ ಬದಲಾಗುವ ಮನೋಭಾವ ಮತ್ತು ಇಚ್ಛಾಶಕ್ತಿ ಇರುವದಿಲ್ಲವೋ, ಅಂತಹ ಸ್ಥಳ ಬಹುಬೇಗ ಇತಿಹಾಸದ ಪುಟ ಸೇರಿಕೊಳ್ಳುತ್ತದೆ. ಇದು ಬರಿ ಯಾಹೂವಿನ ಕತೆಯಷ್ಟೇ ಅಲ್ಲ, ಇದೆ ರೀತಿ ಸಮಯದ ಕರೆಗೆ ಓಗೊಡದ ಅನೇಕ ಕಂಪನಿಗಳು ಪಾತಾಳ ಸೇರಿವೆ. ಅಂತಹ ಇನ್ನೊಂದು ಕಂಪನಿ ನೋಕಿಯಾ 1991ರಲ್ಲಿ ಫಿನ್ಲ್ಯಾಂಡ್ನ ಪ್ರಧಾನಮಂತ್ರಿ ನೋಕಿಯಾದ ಫೋನ ಬಳಸಿ ವಿಶ್ವದ ಪ್ರಥಮ ಜಿ.ಎಸ್.ಎಂ.(Global System For Mobile Communication) ಕರೆ ಮಾಡಿದ್ದರು. 2009ರಷ್ಟೊತ್ತಿಗೆ ನೋಕಿಯಾ ತನ್ನ ಮಾರುಕಟ್ಟೆಯ ಪಾಲನ್ನು ಕಳೆದುಕೊಳ್ಳಹತ್ತಿತು. ನೋಕಿಯಾ ಮೊಬೈಲ್ ಫೋನ್ಗಳ ಆಪರೇಟಿಂಗ್ ಸಿಸ್ಟಮ್ನಲ್ಲಾದ ಕ್ರಾಂತಿಕಾರಿ ಬದಲಾವಣೆಗಳ ಮಹತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ತನ್ನ ಹಳೆಯ ರಾಗದಲ್ಲೇ ಮುಂದುವರೆಯಿತು. ಮುಂದೆ ಸುಧಾರಿಸಿಕೊಳ್ಳದ ಸ್ಥಿತಿ ತಲುಪಿದ  ನೋಕಿಯಾ 2013ರಲ್ಲಿ ಮೈಕ್ರೋಸಾಫ್ಟ್ನ ಪಾಲಾಗಿತ್ತು. ಇದೆ ರೀತಿ 1888ರಲ್ಲಿ ವಿಶ್ವದ ಮೊಟ್ಟಮೊದಲ ಕ್ಯಾಮೆರಾ ನಿರ್ಮಿಸಿದ ಕೊಡ್ಯಾಕ್      ಕಂಪನಿಯೂ ಕಾಲಕ್ಕೆ ತಕ್ಕಂತೆ ಕುಣಿಯುವಲ್ಲಿ ವಿಫಲವಾಗಿ  ಬೇರೆ ಕಂಪನಿಗಳೊಂದಿಗೆ ಸ್ಪರ್ಧೆಯಲ್ಲಿ ಹಿಂದೆ ಬಿತ್ತು. ಕೊಡ್ಯಾಕ್  1975ರಲ್ಲೇ ಡಿಜಿಟಲ್ ಕ್ಯಾಮರಾವನ್ನು ನಿರ್ಮಿಸಿದರೂ ಡಿಜಿಟಲ್ ಫೋಟೋಗ್ರಾಫಿಯ ಮಹತ್ವವನ್ನು ಅರಿಯುವಲ್ಲಿ ಎಡವಿತ್ತು, 2012ರಲ್ಲಿ ಕೊಡ್ಯಾಕ್ ದಿವಾಳಿಯಾಯಿತು!

ಯಾಹೂ, ನೋಕಿಯಾ ಮತ್ತು ಕೊಡ್ಯಾಕ್ ಕಂಪನಿಗಳ ಸಂದರ್ಭದಲ್ಲಿ ಬ್ರಿಟಿಷ್ ಲೇಖಕ ಜಾರ್ಜ್ ಬರ್ನಾರ್ಡ್ ಷಾರ ಈ ವಾಕ್ಯ  Progress without change is impossible and those who can’t change their minds can’t change anything”, ಅತ್ಯಂತ ಸೂಕ್ತ ಮತ್ತು ಪ್ರಾಸಂಗಿಕವೆನಿಸುತ್ತದೆ. ಈ ಎಲ್ಲ ಕಂಪನಿಗಳು ಅಭೂತ್ಪೂರ್ವ ಪ್ರಾರಂಭದ ಹೊರತಾಗಿಯೂ ಅವಧಿಗೆ ಮುನ್ನ ಇತಿಹಾಸದ ಪುಟ ಸೇರಿದವು. ಬದಲಾವಣೆ ಪ್ರಕೃತಿಯ ನಿಯಮ, ಹಳೆಯದನ್ನು ಮೆಲಕು ಹಾಕುತ್ತಾ ಹೊಸತನ್ನು ಸ್ವಾಗತಿಸುತ್ತಾ, ಹೊಸ ವಿಚಾರಗಳನ್ನು ಅಪ್ಪಿಕೊಳ್ಳುತ್ತ ,ಹೊಸ ಭಾವ, ಹೊಸ ಕಲ್ಪನೆಯೊಂದಿಗೆ, ಹೊಸ ಜನರನ್ನು ಸಂಧಿಸುತ್ತಾ ಸುಖೀ ಮತ್ತು ಮಂಗಳಮಯ ಜೀವನ ಕಳೆಯುವದು ಜೀವನದ ಗುರಿಯಾಗಬೇಕು.      

ಮಾನವನನಿಗೂ ಯಂತ್ರಕ್ಕೂ ಇನಿತು ಅಂತರ


ಇಂದಿನ ಡಿಜಿಟಲ್ ಯುಗದಲ್ಲಿ ಮಾನವ ಬರಬರುತ್ತಾ ಯಂತ್ರವಾಗಿ ಬದಲಾಗುತ್ತಿದ್ದನಾ? ಕೆಲ ವರ್ಷಗಳ ಹಿಂದೆ ಏನೇ ಖರೀದಿಸಲು ನಗದಿನ ಅವಶ್ಯಕತೆ ಇರುತ್ತಿತ್ತು, ಆದರೆ ಈಗ ಎಲ್ಲವೂ ಕಾರ್ಡ್ಮಯ ಇಲ್ಲ ಮೊಬೈಲ್ಮಯ. ಒಂದು ಕ್ಲಿಕ್ನ ಮೇಲೆ ನಮ್ಮೆಲ್ಲ  ವ್ಯವಹಾರಗಳು ನಿಂತಿವೆ. ಆದರೆ ಭವಿಷ್ಯದಲ್ಲಿ ಮೊಬೈಲ್ನ ಅವಶ್ಯಕತೆಯೂ ಗೌಣವಾಗಬಹುದು. ಮಾನವನ ಶರೀರದಲ್ಲೇ ಚಿಪ್ಪೊಂದನ್ನು ಸೇರಿಸಿ, ಅದೆ ನಮ್ಮ  ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಎನ್.ಎಫ್.ಸಿ. (ನೀಯರ್ ಫೀಲ್ಡ್ ಕಮ್ಯೂನಿಕೇಶನ್) ಸಪೋರ್ಟ್, ಕಚೇರಿಯ ಪಂಚಿಂಗ್ ಕಾರ್ಡ್ ಆಗಿ ಕಾರ್ಯನಿರ್ವಹಿಸಿದರೆ ಅಚ್ಚರಿಪಡಬೇಕಾಗಿಲ್ಲ.

ಸ್ವೀಡನ್ನ ಸ್ಟಾರ್ಟ್ಅಪ್ ಕಂಪನಿ ಎಪಿಸೆಂಟರ್ ತನ್ನ 150 ಉದ್ಯೋಗಿಗಳ ಕೈಯಲ್ಲಿ ಮೈಕ್ರೊಚಿಪ್ ಅಳವಡಿಸಿದೆ. ಅಕ್ಕಿ ಕಾಳಿನಕಿಂತಲೂ ಚಿಕ್ಕದಾದ  ಈ ಮೈಕ್ರೋಚಿಪ್ನ್ನು ಇಂಜೆಕ್ಷನ್ ಮುಖಾಂತರ ಕಿರು ಬೆರಳು ಮತ್ತು ಉಂಗುರಬೆರಳಿನ ಮಧ್ಯದಲ್ಲಿ ಅಳವಡಿಸಿ ಅದನ್ನು ಮುಂಗೈವರೆಗೆ ನೂಕಿಸಲಾಗುತ್ತದೆ. ಈ ಚಿಪ್ನ ಸಹಾಯದಿಂದ ಕಚೇರಿಯ ಬಾಗಿಲನ್ನು ತೆರೆಯಬಹುದು, ಪ್ರಿಂಟರ್ಗಳನ್ನು ಚಾಲಿತಗೊಳಿಸಬಹುದು. ಅಷ್ಟೇ ಏಕೆ ಕ್ಯಾಂಟೀನ್ನಲ್ಲಿ ಅವಶ್ಯಕ ಸಾಮಗ್ರಿಗಳನ್ನು ಕೇವಲ ಕೈಸನ್ನೆಯ  ಮೂಲಕ ಖರೀದಿಸಹುದು ಅಥವಾ ಆರ್ಡರ್ ಮಾಡಬಹುದು. ಈ ಚಿಪ್ನಲ್ಲಿ ಎನ್.ಎಫ್.ಸಿ. ಅಂದರೆ ನೀಯರ್ ಫೀಲ್ಡ್ ಕಮ್ಯೂನಿಕೇಶನ್ ತಂತ್ರಜ್ಞಾನಾದ ಪ್ರಯೋಗಿಸಲಾಗಿದೆ. ಎನ್.ಎಫ್.ಸಿ. ಸಮರ್ಥಿಸುವ  ಉಪಕರಣಗಳ ರೀಡರ್ ಈ ಚಿಪ್ ಸಮೀಪಿಸುತ್ತಿದ್ದಂತೆ  ಕ್ರೀಯಾನ್ವಿತಗೊಳ್ಳುತ್ತವೆ. ಈ ಚಿಪ್ ಮತ್ತು ಸಂಬಂಧಿತ ಉಪಕರಣಗಳ ಮಧ್ಯ ಕಡಿಮೆ ಅಂತರದ ಸಂಪರ್ಕ ಸ್ಥಾಪಿತಗೊ೦ದು ವಿದ್ಯುತ್ಕಾಂತೀಯ ತರಂಗಗಳ ಮುಖಾಂತರ ದತ್ತಾಂಶದ (ಡೇಟಾ) ಪ್ರಸರಣವಾಗುತ್ತದೆ.   
   
ಇತ್ತೀಚಿನ ದಿನಗಳಲ್ಲಿ ಅಮೆಜಾನ್ನ ಇಕೋ, ಅಲೆಕ್ಸಾ ಮತ್ತು ಗೂಗಲ್ನ ಹೋಮ್ ಸ್ಮಾರ್ಟ್ ಸ್ಪೀಕರಗಳು ಕ್ಷಣಾರ್ಧದಲ್ಲಿ ನಮ್ಮ ಪ್ರಶ್ನೆಗೆ ಅಂತರ್ಜಾಲವನ್ನು ಜಾಲಾಡಿ ಉತ್ತರ ಹುಡುಕಿ ಮಾತಿನ ರೂಪದಲ್ಲಿ ತಿಳಿಸುವದು ಮುಂದುವರೆಯುತ್ತಿರುವ ತಂತ್ರಜ್ಞಾನಕ್ಕೆ  ದಿಕ್ಸೂಚಿ. ಬಹುತೇಕ ಸ್ಮಾರ್ಟ್ ಫೋನ್ಗಳು ಎನ್.ಎಫ್.ಸಿ. ತಂತ್ರಜ್ಞಾನವನ್ನೊಳಗೊಂಡಿರುತ್ತವೆ. ಇದರಿಂದ ಹಣದ ವ್ಯವಹಾರ ಅಥವಾ ಪೊರ್ಟೇಬಲ್ ಸ್ಪೀಕರ್ಗಳನ್ನು  ಆನ್/ಆಫ್ ಮಾಡುವದು ಹಾಗೂ ಮನೆಯಲ್ಲಿಯ ಲೈಟ್ಗಳನ್ನೂ ಆನ್/ಆಫ್ ಮಾಡಬಹುದು! ಲ್ಯಾಪ್ಟಾಪ್/ಟ್ಯಾಬ್ಲೆಟ್/ಕಂಪ್ಯೂಟರ್ಗಾಗಿ ಹಾಟ್ಸ್ಪಾಟ್ ಮಾಡಬಹುದು, ಮನೆಗೆ ಬಂದ ಅತಿಥಿಗಳಿಗೆ ಎನ್.ಎಫ್.ಸಿ.  ಮುಖಾಂತರ ವೈಫೈ ಸೇವೆಯನ್ನು ಒದಗಿಸಬಹುದು. ಎನ್.ಎಫ್.ಸಿ. ತಂತ್ರಜ್ಞಾನ ಹೊಸದಲ್ಲದಿದ್ದರೂ ಮಾನವರ ಮೇಲೆ ಇದರ ಪ್ರಯೋಗ ಖಂಡಿತವಾಗಿಯೂ ನವೀನ ಕಲ್ಪನೆ.   

 ಕೇವಲ ಶರೀರದಲ್ಲಿ ಚಿಪ್ ಅಳವಡಿಸುದಕ್ಕಿಂತ ಭವಿಷ್ಯದಲ್ಲಿ ಮಾನವನ ಮೆದುಳನ್ನು ತಂತ್ರಜ್ಞಾನಾದ ಸಹಾಯದಿಂದ ನಿಯಂತ್ರಿಸಬಹುದೆಂಬ ವಿಚಾರ ಕ್ರಾಂತಿಕಾರಿ! ವಿಶ್ವದ ಪ್ರಖ್ಯಾತ ಉದ್ಯೋಗಪತಿಗಳಲ್ಲೊಬ್ಬರಾದ ಎಲಾನ್ ಮಸ್ಕ್ ನ್ಯೂರಾಲಿಂಕ್  ಎಂಬ ಹೊಸ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ. ನ್ಯೂರಾಲಿಂಕ್ನ ಉದ್ದೇಶ ಮಾನವನ  ಮೆದುಳನ್ನು ಅಲ್ಟ್ರಾ ಹೈ ಬ್ಯಾಂಡ್ವಿಡ್ತ್ ಬ್ರೈನ್ ಮಶೀನ್ ಇಂಟರ್ಫೇಸ್ನ ಸಹಾಯದಿಂದ ಪರ್ಯಾಯ ಬುದ್ಧಿವಂತಿಕೆಯ iಜೊತೆ ವಿಲೀನಗೊಳಿಸಿ, ಮೆದುಳಿನ ಸಾಮರ್ಥ್ಯವನ್ನು ಅಸಾಧಾರಣ ಮಟ್ಟಕ್ಕೆರಿಸಿ ಗಣಕೀಕರಿಸುವದು! ಈ ತಂತ್ರಜ್ಞಾನಾದ ಹೆಸರು ನ್ಯೂರಾಲೇಸ್, ಇದರಿಂದ ಮಾನವನ ಮೆದುಳನ್ನು ಅಂತರ್ಜಾಲ ಸಹಿತವಾಗಿ ಹೊರಜಗತ್ತಿನ ಡಿಜಿಟಲ್ ಉಪಕರಣಗಳೊಂದಿಗೆ ಸಮ್ಮಿಲಿತಗೊಳಿಸಿ ಸಂಪರ್ಕ ಸಾಧಿಸುವದು. ಎಲಾನ್ ಮಸ್ಕ್ರ ಪ್ರಕಾರ ಮಾನವನ ಮೆದುಳನ್ನು ತಾಂತ್ರಿಕತೆಯೊಂದಿಗೆ   ಸ೦ಯೋಜಿಸಿ ಸೂಪರ್ ಕಂಪ್ಯೂಟರ್ನಂತೆ ಪರಿವರ್ತಿಸದಿದ್ದಲ್ಲಿ, ಬುದ್ಧಿಶಕ್ತಿಯಲ್ಲಿ ಮಶೀನ್ಗಳು ಮಾನವನನ್ನು ಹಿಂದಿಕ್ಕುವ ದಿನಗಳು ದೂರವಿಲ್ಲ! ಇಂದು ಬುದ್ಧಿ ಶಕ್ತಿ ಮತ್ತು ಸಾಮರ್ಥ್ಯದಲ್ಲಿ ಸಾಕು ಬೆಕ್ಕಿಗೆ ಮತ್ತು ಮನುಷ್ಯನಗಿರುವ ಅಜಗಜಾಂತರ ಅಂತರ ಭವಿಷ್ಯದಲ್ಲಿ ಮಾನವ ಮತ್ತು ಮಶೀನ್ನ ಅ೦ತರವಾಗಬಹುದು!

ನ್ಯೂರಾಲೇಸ್ ತಂತ್ರಜ್ಞಾನ ಸಫಲವಾದಲ್ಲಿ  ಮಾನವನ  ಮೆದುಳಿನಲ್ಲಿ ಎಲೆಕ್ಟ್ರೋಡಗಳನ್ನು (ವಿದ್ಯುದ್ವಾರ) ಅಳವಡಿಸಿ, ಮೆದುಳಿನೊಂದಿಗೆ ನಿರಂತರ ಸಂಪರ್ಕ  ಸಾಧಿಸಲಾಗುವದು. ಹಾಗಾದಲ್ಲಿ ಅವಶ್ಯಕ ಮಾಹಿತಿಯನ್ನು ಮೆದುಳಿನಲ್ಲೇ ಡೌನ್ಲೋಡ್ ಮಾಡಿ ಶೇಖರಿಸಿಡಬಹುದು ಮತ್ತು ಬಾಹ್ಯ ಜಗತ್ತಿಗೆ ಕಳಿಸಬೇಕಾದ ಮಾಹಿತಿಯನ್ನು ಮೆದುಳಿನಿಂದ ಅಪ್ಲೋಡ್ ಮಾಡಬಹುದು! ಈ ತಂತ್ರಜ್ಞಾನದ ಸಹಾಯದಿಂದ ಮನುಷ್ಯ ತನ್ನ ವಿಚಾರಗಳ ಪ್ರತಿಯನ್ನು ಸೇವ್ ಮಾಡಿಡಬಹುದು! ಮರಣೋಪಾರಂತವಾಗಿಯೂ ಒಬ್ಬ ಮನುಷ್ಯನ  ವಿಚಾರಗಳನ್ನು, ಜ್ಞಾನಭಂಡಾರವನ್ನು ಒಂದು ಮಶೀನ್ನ ರೂಪದಲ್ಲಿ ಅಥವಾ  ಇನ್ನೊಬ್ಬ ಮಾನವನ ಮೆದುಳಿನಲ್ಲಿ ಕಸಿಮಾಡಲು ಸಾಧ್ಯವಾಗಬಹುದು! ನ್ಯೂರಾಲೇಸ್ ತಂತ್ರಜ್ಞಾನ ಸಫಲವಾದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಂತೆ, ದೂರ ಕುಳಿತುಕೊಂಡೆ ಜನರು ತಮ್ಮ ಭಾವನೆ, ವಿಚಾರ, ಸಂತೋಷ, ದು:,ಹೆದರಿಕೆ, ಆಸೆ ಆಕಾಂಕ್ಷೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಸಾಧ್ಯವಾಗಬಹುದು.  ಈ ಎಲ್ಲ ಮಾತುಗಳು ಸೈನ್ಸ್ ಫಿಕ್ಷನ್  ಸಿನೇಮಾದ೦ತೆ ಕಂಡರೂ ಭವಿಷ್ಯದ ದಿನಗಳಲ್ಲಿ ನಿಜವಾದರೂ ಅಚ್ಚರಿ ಪ ಡಬೇಕಿಲ್ಲ. ಮಾನವ ಮತ್ತು ಮಶೀನ್ನ ಈ ಕಾಂಬೋ ಒಂದು ಸುಖಾನುಭವವನ್ನು ತಂದೊಡ್ಡುವದೋ ಅಥವಾ ಒಂದು  ಭಯಂಕರ ಭವಿಷ್ಯಕ್ಕೆ ನಾ೦ದಿಯಾಗುವದೋ ಕಾದು ನೋಡಬೇಕು. ಆದರೆ ನಮ್ಮ ದೇಶದಲ್ಲಿ ಆಗಲೂ ರಾಜಕೀಯ ಪುಢಾರಿಗಳು ಚುನಾವಣೆಯಲ್ಲಿ ಸೋತ ನಂತರ ಮತದಾರರ ಮೆದುಳನ್ನು ಹ್ಯಾಕ್ ಮಾಡಲಾಗಿತ್ತೆಂದು ತಗಾದೆ ಎತ್ತಿದರೆ ಕಷ್ಟ! ನಮ್ಮ ರಾಜಕೀಯ ನಾಯಕರ ಶರೀರದಲ್ಲಿ/ಮೆದುಳಿನಲ್ಲಿ  ಹೈ ಟೆಕ್ ಚಿಪ್ನ್ನು ಸೇರಿಸಿದಲ್ಲಿ ದೇಶದ ವಿಕಾಸವೂ ಸೂಪರ್ಕಂಪ್ಯೂಟರ್ನ ವೇಗದಲ್ಲಿ ಆಗಬಹುದೇನೋ!

ಸಕಲವೂ ನಂಬಲರ್ಹವಲ್ಲ ಸಾಮಾಜಿಕ ಜಾಲತಾಣಗಳ ಮೋಹಕ ಭ್ರಮಾಲೋಕದಲ್ಲಿ


ಅಮೇರಿಕಾದ ಖ್ಯಾತ ಲೇಖಕ, ವ್ಯಂಗ್ಯಕಾರ ಮಾರ್ಕ್ ಟ್ವೈನ್ರ ಪ್ರಸಿದ್ಧ ಮಾತು “  A lie can travel  half way around the world while the truth is putting on its shoes”, ಅರ್ಥಾತ್ ಸತ್ಯ  ತನ್ನ ಪಾದರಕ್ಷೆ ಧರಿಸಿರುವ ಮುನ್ನ ಸುಳ್ಳು ಶರವೇಗದಲ್ಲಿ ಅರ್ಧ ಜಗತ್ತನ್ನು ಕ್ರಯಿಸಿ ಆವರಿಸಿಕೊಂಡಿರುತ್ತದೆ! ಸಾಮಾಜಿಕ ಜಾಲತಾಣಗಳಿಗೆ ಈ ಮಾತು  ಅಕ್ಷರಶಃ ಅನ್ವಯಿಸುತ್ತದೆ. ಸೋಷೀಯಲ್ ಮೀಡಿಯಾದಲ್ಲಿ ಸತ್ಯ ಕುಂಟುತ್ತಾ ಸಾಗಿದರೆ, ತಿರುಚಿದ ಸುಳ್ಳು ಸುದ್ದಿಗಳು ಎಲ್ಲೆ ಇಲ್ಲದೆ ರೆಕ್ಕೆ ಕಟ್ಟಿಕೊಂಡು ಹಾರಾಡುತ್ತವೆ.   

ತೀರಾ ಇತ್ತೀಚೆಗಷ್ಟೇ ಮಾಜಿ ರಾಷ್ಟ್ರಪತಿ ಡಾ.ಪ್ರಣಬ್ ಮುಖರ್ಜಿ ಆರ್.ಎಸ್.ಎಸ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಿನ ಚಿತ್ರವನ್ನೂ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಟ್ಟಿರುವದು ಜಾಲತಾಣಗಳ ಸುಳ್ಳಿನ ಕಂತೆಗೆ ಜ್ವಲಂತ ಉದಾಹರಣೆ. ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮದಲ್ಲಿ ತೋರಿಸಿದ ಸುದ್ದಿಗಳೆಲ್ಲ ಸಾರ್ವತ್ರಿಕ ಸತ್ಯವೆಂದು ನಂಬುವ ಬಹುಪಾಲು ಮುಗ್ಧ ಜನತೆಯ ವಿಶ್ವಾಸಕ್ಕೆ ಧಕ್ಕೆಯುಂಟಾಗುತ್ತಿದೆ. ಫೇಕ್ನ್ಯೂಸ್ನ ಹಾವಳಿಯಿಂದ ಜಾಲತಾಣಗಳಲ್ಲಿ ತಥ್ಯಗಳನ್ನು ಹುಡುಕುವದು ಪ್ರಯಾಸದ ಕೆಲಸವಾಗಿದೆ. ಸುಳ್ಳು ಸುದ್ದಿಯ ಪ್ರಕೋಪ  ಇಂದು ನಿನ್ನೆಯದಲ್ಲ. ಮಹಾಭಾರತದ ಯುದ್ಧದಲ್ಲಿ ದ್ರೋಣಾಚಾರ್ಯರನ್ನು ಕುರುಕ್ಷೇತ್ರದಿಂದ ಹೊರಗಿಡಲು ಭೀಮ, ಅಶ್ವಥಾಮ್ ಎಂಬ ಆನೆಯನ್ನು ಸಂಹರಿಸಿ, ತಾನು ಅಶ್ವಥಾಮ್ನನ್ನು ಕೊಂದೆ ಎಂದು ದ್ರೋಣರ ಮುಂದೆ ಗುಡುಗುತ್ತಾನೆ. ಯಾವಾಗ ಈ ಅರ್ಧಸತ್ಯ ಯುಧಿಷ್ಟರನ ಬಾಯಿಯಿಂದ ಹೊರಬಿತ್ತೋ, ದ್ರೋಣಚಾರ್ಯರು ಚಿರಂಜೀವಿಯಾದ ತಮ್ಮ ಪುತ್ರ ಹತನಾದನೆಂದು ನಂಬುತ್ತಾರೆ! ಪ್ರಥಮ ವಿಶ್ವಯುದ್ಧದ ಸಮಯದಲ್ಲೂ ಸುಳ್ಳು ಮಾಹಿತಿಯನ್ನು ಹಬ್ಬಿಸುವ ಮೂಲಕ ವೈಚಾರಿಕತೆಯ ಪ್ರಚಾರಕ್ಕಾಗಿ ಜನಭಿಪ್ರಾಯವಾನ್ನು ಪ್ರಭಾವಿತಗೊಳಿಸಿ, ಜನರಲ್ಲಿ ಭ್ರಾಂತಿ ಸೃಸ್ಟಿಸುವ ಕಸಬು ಚಾಲ್ತಿಯಲ್ಲಿತ್ತು. ಇಂತಹ ಭ್ರಮೆಯ ಸ್ಥಿತಿಯಲ್ಲಿ ಜನರಿಂದ ಅನೈತಿಕ ಕೆಲಸಗಳನ್ನು ಮಾಡಿಸುವದು ಸುಲಭ, ಹಾಗಾಗಿ ಪ್ರಥಮ ವಿಶ್ವಯುದ್ಧದಲ್ಲಿ  ಸುಳ್ಳು ಸುದ್ದಿಗಳ ಭರಪೂರ್ ಪ್ರಯೋಗವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ  ಅತ್ಯಂತ ಸುಲಭ ಮತ್ತು ತ್ವರಿತವಾಗಿ  ಸುಳ್ಳು ಸುದ್ದಿಯನ್ನು ಹಬ್ಬಿಸುವ ಸಾಧನ ವಾಟ್ಸ್ಅಪ್. ಜನತೆ ತಮಗೆ ಬಂದ ವಾಟ್ಸ್ಅಪ್ ಸಂದೇಶ, ವಿಡಿಯೋ ಅಥವಾ ಆಡಿಯೋದ ಪೂರ್ವಾಪರಗಳನ್ನು ತಿಳಿಯದೇ, ಸತ್ಯಾಸತ್ಯತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸದೆ ವಿವಿಧ ಗುಂಪುಗಳಿಗೆ ಹಾಗೂ ತಮ್ಮ  ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತಾರೆ. ಇದು ಹೀಗೆ ಮುಂದುವರೆದು ಕೆಲ ಸುಳ್ಳು ಉದ್ದಿಗಳು ನೋಡುನೋಡುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಆಮೇಲೆ ಇಂತಹ ಸುದ್ದಿಗಳ ಕುರಿತು ಟಿ.ವಿ. ಚಾನಲ್ಗಳಲ್ಲಿ ಬಿಸಿ ಬಿಸಿ ಚರ್ಚೆ ಬೇರೆ. ಭಾರತದಲ್ಲಿ ಕೇವಲ ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲ,  ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೆಲ  ದೃಶ್ಯ ಮಾಧ್ಯಮಗಳು ಮತ್ತು ಮುದ್ರಣ ಮಧ್ಯಮದಲ್ಲೂ ಸಹ ಎಲ್ಲರಿಗಿಂತ ಮುಂಚೆ  ಮತ್ತು ಎಲ್ಲರಿಗಿಂತ ವೇಗದಲ್ಲಿ ಸುದ್ದಿ ಬಿತ್ತರಿಸುವ ಧಾವಂತದಲ್ಲಿ ಸುಳ್ಳಿನ ಮೋಹಕ್ಕೆ ಬಲಿಯಾಗಿ ವೀಕ್ಷಕರಿಗೆ ತಪ್ಪು ಸುದ್ದಿ/ಮಾಹಿತಿ/ಸಂದೇಶಗಳನ್ನು ಬಿತ್ತರಿಸುತ್ತವೆ.  ಪರಿಣಿತರ ಪ್ರಕಾರ ಭಾರತದಲ್ಲಿ ನಾವೆಲ್ಲ  ಪೋಸ್ಟ್ ಟ್ರತ್ ಯುಗದಲ್ಲಿ ಬದುಕುತ್ತಿದ್ದೇವೆ. ಅಂದರೆ ಭಾರತದಲ್ಲಿ ತಥ್ಯವನ್ನು ತಿರುಚಿ ಅನರ್ಥ/ಅಪಾರ್ಥ ಕಲ್ಪಿಸುವ ಸುದ್ದಿಗಳ ಚಾಲನೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸುಳ್ಳನ್ನು ಸಾವಿರಾರುಬಾರಿ ಪುನರುಚ್ಚರಿಸಿದಾಗ ಅದೇ ಸತ್ಯವಿರಬಹುದೇನೋ ಎಂದು ಜನ ನಂಬಲಾರಂಭಿಸುತ್ತಾರೆ.ಪೋಸ್ಟ್ ಟ್ರತ್ ಅಂದರೆ ಈ ರೀತಿಯ ಸುಳ್ಳನ್ನೇ ಸತ್ಯವೆಂದು ನಂಬುವಂತೆ ಮಾಡಿದ ನಂತರ  ಉದ್ಭವಿಸುವ ವಾತಾವರಣಕ್ಕೆ ಪೂರಕವಾಗಿ ವೇದಿಕೆ ಸಿದ್ಧಗೊಳಿಸಲಾಗುತ್ತದೆ.

ಜನರು ಬೆಳ್ಳಿಗ್ಗೆ ಎದ್ದು ಚಹಾ ಸೇವಿಸುತ್ತಾ  ವಾಟ್ಸ್ಅಪ್, ಫೇಸ್ಬುಕ್, ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಾಡಿಸುತ್ತಾ ಸುದ್ದಿ ಓದುತ್ತಾರೆ. ಈ ಸುದ್ದಿಗಳನ್ನು ಸತ್ಯವೆಂದು ನಂಬುತ್ತಾರೆ. ಇಂತಹ ಸುದ್ದಿಗಳನ್ನು ಓದಿ ಒಮ್ಮೆ ಮನದಲ್ಲಿ ದೇಶ ಭಕ್ತಿಯ ಭಾವ ಜಾಗೃತವಾದರೆ, ಮತ್ತೊಮ್ಮೆ  ಯಾವುದಾದರೂ ರಾಜಕೀಯ ಧುರೀಣ ಅಥವಾ ಪಕ್ಷದ ಮೇಲೆ ಸಿಟ್ಟು ಬರುತ್ತದೆ ಮಗದೊಮ್ಮೆ  ಯಾವುದೋ ಧುರೀಣ ಅಥವಾ ಪಕ್ಷದಲ್ಲಿ ಚಮತ್ಕಾರಕ ಶಕ್ತಿ ಗೋಚರಿಸತೊಡಗುತ್ತದೆ.  ಜನರು ಭಾವತೀವ್ರತೆಯ  ಉತ್ತಂಗದಲ್ಲಿ  ಇಂತಹ ಸಂದೇಶಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಈ ರೀತಿ ಬೆಳ್ಳಿಗ್ಗೆಯಿಂದ ಸಂಜೆಯವರೆಗೆ ಸುಳ್ಳಿನ  ಸರಪಳಿ ಸೃಷ್ಟಿಯಾಗುತ್ತದೆ.  ಈ ಸುದ್ದಿಗಳ ಹಕೀಕತ್ತು ತಿಳಿದಾಗ ಮಾಧ್ಯಮಗಳ ಮೇಲೆ  ಕೋಪ/ಆಕ್ರೋಶ ಹುಟ್ಟುತ್ತದೆ. ಬಿಹಾರದ ಮೋತಿಹಾರಿಯಲ್ಲಿ ಜನಿಸಿದ, ಬ್ರಿಟನ್  ಪ್ರಖ್ಯಾತ ಲೇಖಕ ಪತ್ರಕರ್ತ ಜಾರ್ಜ್ ಆರ್ವೆಲ್ ದಶಕಗ ಹಿಂದೆಯೇ  ಯಾವಾಗ ವಸ್ತುನಿಷ್ಠ ಸತ್ಯದ ಪರಿಕಲ್ಪನೆ ಸಮಾಜದಿಂದ  ಮಾಯವಾಗಿ ಸುಳ್ಳಿನ ಭ್ರಮಾಲೋಕಕ್ಕೆ ಸಮಾಜ  ಲಗ್ಗೆ ಇಡುತ್ತದೆಯೋ , ಆಗ ಸುಳ್ಳು ಇತಿಹಾಸ ಸೇರಿ, ಸತ್ಯವಂತರ ಮೇಲೆ ದ್ವೇಷ ಹುಟ್ಟುತ್ತದೆ ಎಂದಿದ್ದರು. ಈ ಮಾತುಗಳು ಇಂದಿನ ಭಾರತೀಯ ಸಮಾಜಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ.  

ವಿ.ಸಿ.ಆರ್’ನ ಫ್ಲ್ಯಾಶ್’ಬ್ಯಾಕ್ ಲೋಕದ ರಿವೈಂಡ್


ಡಿಜಿಟಲ್ ಕ್ರಾಂತಿಯ ಮನೋರಂಜನೆಯ ಆಧುನಿಕ ಸಾಧನಗಳಾದ ಸ್ಮಾರ್ಟ್ ಫೋನ್ ,ಎಲ್.ಈ.ಡಿ. ಟೆಲೆವೆವಿಷನ್, ಲ್ಯಾಪ್ಟಾಪ್ಗಳಲ್ಲಿ ಚಲನ ಚಿತ್ರಗಳನ್ನು ನೋಡುವ ಜನಾಂಗಕ್ಕೆ ಬಹುಶಃ ವಿ.ಸಿ.ಆರ್. (ವಿಡಿಯೋ ಕ್ಯಾಸೆಟ್ ರಿಕಾರ್ಡರ್)ನ ಪರಿಚಯವಿರಲಿಕ್ಕಿಲ್ಲ. ನಮ್ಮ ನೆನಪುಗಳ ಕ್ಯಾಸೆಟ್ನ್ನು ರಿವೈಂಡ್ ಮಾಡಿ ಸಮಯ ಯಂತ್ರವನ್ನು 80  ಮತ್ತು 90ರ ದಶಕಕ್ಕೆ ಕೊಂಡೊಯ್ದಾಗ,  ಮನೆ ಮಂದಿಯೆಲ್ಲಾ ಕುಳಿತು ಬಾಡಿಗೆ ತಂದ ವಿ.ಸಿ.ಆರ್. ಹಾಗೂ ಕಲರ್ ಟಿ.ವಿ.ಯಲ್ಲಿ ದಿನಪೂರ್ತಿ ಸಿನೆಮಾ ನೋಡಿದ ದೃಶ್ಯಗಳು ತಾಜಾಗೊಳ್ಳುತ್ತವೆ.  ದೂರದರ್ಶನದ ಏಕಚಕ್ರಾಧಿಪತ್ಯವಿದ್ದ ಕಾಲದಲ್ಲಿ ಮನೋರಂಜನೆಯ ಈ ವಿಕಲ್ಪ ವೀಡಿಯೋ ಕ್ರಾಂತಿಯ ಸಂಕೇತವಾಗಿತ್ತು..

ಜನತೆಯ ಮಟ್ಟಿಗೆ ವಿ.ಸಿ.ಆರ್ನ ಅಂತ್ಯವಾಗಿ ಎರಡೂವರೆ ದಶಕಗಳು ಕಳೆದಿವೆ. ಆದರೆ ಜಪಾನಿನ ಫ್ಯೂನಾಯಿ ಎಲೆಕ್ಟ್ರಿಕಲ್ ಕಾರ್ಪೊರೇಷನ್ ಮಾತ್ರ  2016ರವರೆಗೂ ವಿ.ಸಿ.ಆರ್ಗಳನ್ನು ತಯಾರಿಸುತ್ತಿತ್ತು. ಈ ಕಂಪನಿ ಕಳೆದ ವರ್ಷವಷ್ಟೇ ವಿ.ಸಿ.ಆರ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ವೀಡಿಯೋ ಕ್ರಾಂತಿಯ ಜನ್ಮದಾತನ ಅಧ್ಯಾಯಕ್ಕೆ ಮಂಗಳ ಹಾಡಿದೆ. ಫ್ಯೂನಾಯಿ ಕಂಪನಿ 2015ರಲ್ಲಿ ಏಳೂವರೆ ಲಕ್ಷ ವಿ.ಸಿ.ಆರ್ಗಳನ್ನು ಉತ್ಪಾದಿಸಿತ್ತು.1970ರಲ್ಲಿ ಜಪಾನನ ಜೆ.ವಿ.ಸಿ, ಸೋನಿ, ಮತ್ತು ನೆದರ್ಲ್ಯಾಂಡ್ನ ಫಿಲಿಪ್ಸ್  ವಿ.ಸಿ.ಆರ್ನ ನಿರ್ಮಾಣದಲ್ಲಿ ಮುಂಚೂಣಿಲ್ಲಿದ್ದವು. ದೀರ್ಘಾವಧಿಯ ವೀಡಿಯೋ ರಿಕಾರ್ಡ್ ಮಾಡಬಲ್ಲ ವಿ.ಎಚ್.ಎಸ್. (ವೀಡಿಯೋ ಹೋಮ್ ಸಿಸ್ಟಮ್) ಉತ್ಪಾದಿಸಿ  ಜೆ.ವಿ.ಸಿ. ಇತರ ಕಂಪನಿಗಳನ್ನು ಹಿಂದಿಕ್ಕಿತ್ತು.

ಭಾರತದಲ್ಲಿ ವಿ.ಸಿ.ಆರ್ನ ಪ್ರವೇಶವಾಗಿದ್ದು 1980ರ ದಶಕದಲ್ಲಿ. ಇಂದಿಗೆ ಬರೋಬ್ಬರಿ 36 ವರ್ಷಗಳ ಹಿಂದೆ 1982ರಲ್ಲಿ ಏಶೀಯನ್ ಕ್ರೀಡಾಕೂಟವನ್ನು  ದೆಹಲಿಯಲ್ಲಿ ಆಯೋಜಿಸಲಾಗಿತ್ತು. ದೂರದರ್ಶನ ಏಶೀಯನ್ ಕ್ರೀಡಾಕೂಟದ ಕಲರ್ ಪ್ರಸಾರಣ ಮಾಡಿ ಭಾರತೀಯ ದರ್ಶಕರ   ಕಪ್ಪು ಬಿಳುಪಿನ ಜಗತ್ತಿಗೆ ಪ್ರಥಮ ಬಾರಿಗೆ  ಬಣ್ಣದ ಚಿತ್ತಾರ ಬಳೆದಿತ್ತು. ಆ ಸಮಯದಲ್ಲಿ ಸರ್ಕಾರ  90ಸಾವಿರ ಕಲರ್ ಟಿ.ವಿ. ಕಿಟ್ಗಳನ್ನು ವಿದೇಶಗಳಿಂದ ತರಿಸಿ ಭಾರತದಲ್ಲಿ ಜೋಡಣೆ ಮಾಡಿಸಿತ್ತು. ಭಾರತದಲ್ಲಿ ಕಲರ್ ಟಿ.ವಿ.ಯೊಂದಿಗೆ ವಿ.ಸಿ.ಆರ್.ನ ಪ್ರವೇಶವೂ ಆಗಿತ್ತು. ಆದರೆ ಆಗ ದುಬಾರಿ ಬೆಲೆಯ ಕಲರ್ ಟಿ.ವಿ.  ಮತ್ತು ವಿ.ಸಿ.ಆರ್. ಮಧ್ಯಮ ವರ್ಗದ ಕೈಗೆಟುಕದ, ಕೇವಲ ಉಳ್ಳವರ ಐಷಾರಾಮದ ಸ್ವತ್ತಾಗಿದ್ದವು. 1980ರ ದಶಕದ ಆರಂಭದಲ್ಲಿ ವಿ.ಸಿ.ಆರ್ನ ಬೆಲೆ 50ಸಾವಿರ ರೂಪಾಯಿಯಾಗಿತ್ತು, ಕೆಲ  ಭಾರತೀಯ ಕಂಪನಿಗಳು ವಿ.ಸಿ.ಆರ್. ಉತ್ಪಾದನೆಯಲ್ಲಿ ತೊಡಗಿದ ನಂತರ 1982ರ ಹೊತ್ತಿಗೆ ಇವುಗಳ ಬೆಲೆ 30ಸಾವಿರ ರೂಪಾಯಿಗೆ ಇಳಿಯಿತು. ದೇಶದಲ್ಲಿ ಕಲರ್ ಟಿ.ವಿ.ಯ ಬಳಕೆಯನ್ನು ಪ್ರೋತ್ಸಾಹಿಸಲು ಸರ್ಕಾರ  ವಿದೇಶಗಳಿಂದ ಉಡುಗರೆಯ ರೂಪದಲ್ಲಿ ತರಲ್ಪಡುವ ಟಿ.ವಿ.ಗಳ ಮೇಲಿದ್ದ ಆಯಾತ ಶುಲ್ಕವನ್ನು ಕಡಿತಗೊಳಿಸಿತ್ತು. 1982ರಲ್ಲಿ ಏಶೀಯನ್ ಕ್ರೀಡಾಕೂಟದ ಸಮಯದಲ್ಲಿ ಸರಾಸರಿ 8000 ರೂಪಾಯಿ ಬೆಲೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಕಲರ್ ಟಿ.ವಿ. ಖರೀದಿಸಿದ್ದರು. ಇದೇ  ರೀತಿ ಸರ್ಕಾರ, ಪ್ರಯಾಣಿಕರು ವಿ.ಸಿ.ಆರ್ನ್ನು ತಮ್ಮ ವೈಯಕ್ತಿಕ ಸರಕಿನ ಭಾಗವಾಗಿ  ತರಬಹುದೆಂದು ಘೋಷಣೆ ಮಾಡಿತ್ತು. ಹೀಗಾಗಿ ದೇಶದಲ್ಲಿ ವಿ.ಸಿ.ಆರ್ನ ಆಗಮನ ಶುಲ್ಕರಹಿತವಾಗಿತ್ತು. ಮಾರುಕಟ್ಟೆಯಲ್ಲಿ ವಿ.ಸಿ.ಆರ್ನ ದರ 20ಸಾವಿರ ರೂಪಾಯಿಯಾಗಿದ್ದಾರೆ, ವಿದೇಶದಿಂದ ತಂದ ವಿ.ಸಿ.ಆರ್ 9000 ಸಾವಿರ ರೂಪಾಯಿಗೆ ಸಿಗುವಂತಾಗಿತ್ತು. 

ಇಷ್ಟಾದರೂ ಕಲರ್ ಟಿ.ವಿ. ಮತ್ತು ವಿ.ಸಿ.ಆರ್.  ಭಾರತೀಯ ಮಧ್ಯಮದ ವರ್ಗದ ಪಾಲಿಗೆ ಮರೀಚಿಕೆಯಾಗಿದ್ದವು. ಈ ಪರಿಸ್ಥಿತಿಯನ್ನು  ತಮ್ಮ ಉಪಯೋಗಕ್ಕೆ ಬಳಸಿಕೊಂಡ ಕೆಲ ಬುದ್ಧಿವಂತರು ವೀಡಿಯೋ ಲೈಬ್ರರಿಗಳನ್ನು ಹುಟ್ಟುಹಾಕಿ, ಟಿ.ವಿ, ವಿ.ಸಿ.ಆರ್ ಹಾಗೂ ವೀಡಿಯೋ ಕ್ಯಾಸೆಟ್ಗಳನ್ನು ಬಾಡಿಗೆಗೆ ನೀಡುವ ಉದ್ಯೋಗವನ್ನು ಪ್ರಾರಂಭಿಸಿದರು. 1980ರ ದಶಕದ ಅಂತ್ಯ ಮತ್ತು 1990ರ ದಶಕದ ಪ್ರಾರಂಭದಷ್ಟೊತ್ತಿಗೆ ಟಿ.ವಿ, ವಿ.ಸಿ.ಆರ್ ಮತ್ತು 3 ವೀಡಿಯೋ ಕ್ಯಾಸೆಟ್ಗಳು 150ರಿಂದ 250ರೂಪಾಯಿಗೆ ಒಂದು ದಿನದ ಮಟ್ಟಿಗೆ ಬಾಡಿಗೆಗೆ ದೊರೆಯಹತ್ತಿದವು. ತಡವಾಗಿ ವಿ.ಸಿ.ಆರ್. ಮರಳಿಸುವಾಗ ಪಾವತಿಸಬೇಕಾದ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು, ಬಾಡಿಗೆಯ ಅವಧಿ ಮುಗಿಯುವಷ್ಟರಲ್ಲೇ ಇಡೀ ಪರಿವಾರ ಬಿಡುವಿಲ್ಲದೆ ಒಂದರ ಹಿಂದೊಂದರಂತೆ ಮೂರು ಚಲನ ಚಿತ್ರಗಳನ್ನು ನೋಡಿ ಮುಗಿಸುತ್ತಿತ್ತು. ದೂರದರ್ಶನದ ಸ್ಪಷ್ಟ ಸಿಗ್ನಲ್ಗಳಿಲ್ಲದ, ಕರ್ನಾಟಕದ ಹಲವು ಪ್ರದೇಶಗಳು ಸೇರಿದಂತೆ ದೇಶದ ಬಹುಭಾಗಗಳಲ್ಲಿ  ಕೇಬಲ್ ಟಿ.ವಿ.ಯ ಜಾಲ ವಿಸ್ತಾರವಾಗಿತ್ತು.  ಕೇಬಲ್ ಟಿ.ವಿ.ಜಾಲದ ಮುಖಾಂತರ ವಿ.ಸಿ.ಆರ್. ಬಳಸಿ ಹೊಚ್ಚ ಹೊಸ ಚಲನ ಚಿತ್ರಗಳನ್ನು  ತೋರಿಸಲಾಗುತ್ತಿತ್ತು. 1990ರ ದಶಕದಲ್ಲಿ ಚಿತ್ರ ಮಂದಿರಗಳಿಗೆ ಹೋಗಿ ಸೀನೆಮಾ ನೋಡುವವರ ಸಂಖ್ಯೆ ಇಳಿಮುಖವಾಗಿ, ಯಾವ ಸಿನೆ ತಾರೆಯರನ್ನು ನೋಡಲು ಜನತೆ ಟಾಕೀಜ್ಗಳಿಗೆ ಹೋಗಬೇಕಿತ್ತೋ, ವಿ.ಸಿ.ಆರ್. ಮುಖಾಂತರ ತಾರೆಗಳೇ ಜನರ ಪಡಸಾಲೆಯ ಮೆರಗು ಹೆಚ್ಚಿಸಿದ್ದರು! ಖಾಸಗಿ ಸುಖಾಸೀನ ಬಸ್ಗಳಲ್ಲೂ ಪ್ರಯಾಣಿಕರ ಮನೋರಂಜನೆಗಾಗಿ ವಿ.ಸಿ.ಆರ್ನಲ್ಲಿ  ಸಿನೆಮಾ ತೋರಿಸಲಾಗುತ್ತಿತ್ತು. ಭಾರತದಲ್ಲಿ ವಿದೇಶಿ ಚಲನ ಚಿತ್ರಗಳನ್ನು/ಧಾರವಾಹಿಗಳನ್ನು  ನೋಡಿ ವಿದೇಶಿ ಸಂಸ್ಕೃತಿಯ ಇಣುಕುನೋಟ ಪಡೆಯುವ  ಏಕೈಕ ಸಾಧನ ವಿ.ಸಿ.ಆರ್. ಆಗಿತ್ತು. ಒಂದು ಸಮಯದಲ್ಲಿ  ಮದುವೆಯ ಸಮಾರಂಭದ ಫೋಟೋ ಅಲ್ಬಮ್ಗೆ ತಗಲುವ ವ್ವೆಚ್ಚಗಿಂತ ವೀಡಿಯೋ ರಿಕಾರ್ಡಿಂಗ್ ಅಗ್ಗವಾಗಿತ್ತು!

1980ರ ದಶಕದಲ್ಲಿ ಭಾರತದಲ್ಲಿ  ಭಾರತದ ಚಿಕ್ಕ ಪುಟ್ಟ ಪಟ್ಟಣಗಳಲ್ಲೂ ವೀಡಿಯೋ ಪಾರ್ಲ್ರಗಳು ತೆರೆದುಕೊಂಡು, ಚಲನ ಚಿತ್ರದ ಜೊತೆಗೆ ಮಧ್ಯಂತರದಲ್ಲಿ ಬಾದಾಮಿ ಹಾಲು ಹಾಗೂ ಇನ್ನಿತರ ಪಾನೀಯಗಳನ್ನು ಉಚಿತವಾಗಿ ನೀಡಿ  ಪ್ರೇಕ್ಷಕರನ್ನು  ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಉತ್ತಮ ದರ್ಜೆಯ  ಸಿನೆಮಾ ಟಾಕೀಜ್ಗಳಿಲ್ಲದ ಆ ಸಮಯದಲ್ಲಿ ವೀಡಿಯೋ ಪಾರ್ಲ್ರಗಳು ಸಹಜವಾಗಿಯೇ ಜನರ ಮೊದಲ ಆಯ್ಕೆಯಾಗಿದ್ದವು. ಬಾಲಿವುಡ್ನ ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಮತ್ತು ಮಧುರ್ ಭಂಡಾರ್ಕರ್ ಕೂಡ ಒಂದು ಕಾಲದಲ್ಲಿ ವೀಡಿಯೋ ಲೈಬ್ರರಿ ನಡೆಸುತ್ತಿದ್ದರು!

ವಿ.ಸಿ.ಆರ್. ಜಗತ್ತಿನಾದ್ಯಂತ 20ವರ್ಷಗಳ ಕಾಲ ಮನೋರಂಜನೆಯ ರಾಜ್ಯವಾಳಿತ್ತು. ತಾಂತ್ರಿಕತೆಯ ವಿಕಾಸ,  ಸಿ.ಡಿ. ಮತ್ತು ಡಿ.ವಿ.ಡಿ.ಗಳ ಆವಿಷ್ಕಾರ ವಿ.ಸಿ.ಆರ್. ತಂತ್ರಜ್ಞಾನವನ್ನು ಮೂಲೆಗುಂಪು ಮಾಡಿತ್ತು.2006ರ ಹಾಲಿವುಡ್ ಚಿತ್ರ ದಿ ಹಿಸ್ಟರಿ ಆಫ್ ವೈಲೆನ್ಸ್ ವಿ.ಎಚ್.ಎಸ್. ಟೇಪ್ನಲ್ಲಿ  (ಫಾರ್ಮ್ಯಾಟ್ನಲ್ಲಿ) ಬಿಡುಗಡೆಯಾದ ಕಡೆಯ ಚಿತ್ರವಾಗಿತ್ತು.   

ಇತಿಹಾಸದ ಪುಟ ಸೇರಿದ ವಿ.ಸಿ.ಆರ್ನಲ್ಲಿ ನೆನಪುಗಳ ಕ್ಯಾಸೆಟ್ ಹಾಕಿ ರಿವೈಂಡ್ ಮಾಡಿದಾಗ ಗತಕಾಲದ ವೈಭವವನ್ನು ಮೆಲಕುಹಾಕಬಹುದು!    

ನೋಮೋ ಫೋಬಿಯಾ ಮತ್ತು ಫೊಮೊ ಫೋಬಿಯಾ


ನಮ್ಮ ದೇಶದ ವಿರೋಧ ಪಕ್ಷಗಳೆಲ್ಲಾ ನಮೋಫೋಬಿಯಾದಿಂದ ಬಳಲುತ್ತಿದ್ದರೆ ದೇಶದ ನಗರಪ್ರದೇಶದ ಬಹುತೇಕ ಜನರು ನೋಮೋಫೋಬಿಯಾದಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆಯ ಜೀವ ಮೋಬೈಲನಲ್ಲಿಯೇ ಅಡಗಿದೆ ಎಂದರೆ ತಪ್ಪಾಗಲಾರದು. ಪರಿಣಿತರ ಪ್ರಕಾರ ಸ್ಮಾರ್ಟ್ಫೋನ್ ಹಾಗೂ ಇಂಟರ್ನೆಟ್ನ ಉಪಯೋಗದ ಶೇಕಡಾ 15ರಷ್ಟು ಮಾತ್ರ ಅರ್ಥಪೂರ್ಣ ಅವಶ್ಯಕ ಕೆಲಸಕ್ಕಾಗಿರುತ್ತದೆ. ಶರೀರಕ್ಕೆ ಹೇಗೆ ಸಮತೋಲಿತ ಆಹಾರ ಅವಶ್ಯವೋ ಹಾಗೆ ಮಾನಸಿಕ ನೆಮ್ಮದಿಗೆ ಡಿಜಿಟಲ್ ಡೈಟಿಂಗ್ ಅತ್ಯವಶ್ಯ. ಯಾವಾಗ ಇಂಟರ್ನೆಟ್ ಬಳಕೆಯಿಂದ ಸಾಮಾಜಿಕ, ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ಹಾಳಾಗಿ ದೈಹಿಕ ಆಲಸ್ಯ, ಸ೦ಬಂಧಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳು ಉಧ್ಬವಿಸಿದಲ್ಲಿ ಇಂಟರ್ನೆಟ್ ಬಳಕೆಯಿಂದ ವ್ಯಸನದತ್ತ ವಾಲುತ್ತಿದ್ದೇವೆಂದರ್ಥ.

ಸಂಶೋಧನೆಯೊಂದರ ಪ್ರಕಾರ ಯಾರು ಬಿಡುವಿಲ್ಲದೆ, ಸದಾ ತಮ್ಮ ಸ್ಮಾರ್ಟ್ಫೋನ್ ನೋಡುತ್ತಾ,  ಸ್ನೇಹಿತರೊಂದಿಗೆ ಹರಟುವಾಗಲೂ ಚಿತ್ತ ಎತ್ತಲೋ ಪಯಣಿಸಿ ಮೊಬೈಲ್ ಸ್ಕ್ರೀನ್ ಮೇಲೆ ಪದೇ ಪದೇ  ದೃಷ್ಟಿಹರಿಸಿದರೆ,ನಿದ್ರಿಸಿ ಹಾಯಾದ ಕನಸಿನ ಲೋಕದಲ್ಲಿ ತೇಲುವ ಸಮಯದಲ್ಲೂ ಮೊಬೈಲ್ ಫೋನ್ ಪಕ್ಕಕಿರಿಸಿಕೊಂಡು ಅನವಶ್ಯಕವಾಗಿ ಹೊತ್ತಿಲ್ಲದ  ಹೊತ್ತಿನಲ್ಲಿ ಮೊಬೈಲ್ ಮೇಲೆ ಕಣ್ಣಾಡಿಸಿದರೆ ಖಂಡಿತವಾಗಿಯೂ ಅಂಥವರು ಮೊಬೈಲ್ ಫೋನ್ನ ವ್ಯಸನಕ್ಕೊಳಗಾಗಿದ್ದರ೦ತಲೇ ಅರ್ಥ. ಕಿವಿ ಸರಿಯಾಗಿ ಕೇಳದಿರುವುದು, ಕತ್ತು ಹಾಗೂ ಬೆರಳುಗಳ ನೋವು,ಅನಾವಶ್ಯಕ ಚಿಂತೆ/ಗೊಂದಲ/ಚಡಪಡಿಕೆ ಮುಂತಾದ  ದೈಹಿಕ  ಹಾಗೂ ಮಾನಸಿಕ ದುಷ್ಪರಿಣಾಮಗಳು ಮೊಬೈಲ್ ಮತ್ತು ಅಂತರ್ಜಾಲದ ಮಿತಿಮೀರಿದ ಉಪಯೋಗದ ಕೊಡುಗೆ!

ಈ ರೀತಿಯ ವ್ಯಸನಕ್ಕೆ ತುತ್ತಾದವರ  ಮಲಗುವ ಮುನ್ನದ ಕೊನೆಯ ಕೆಲಸ ಮತ್ತು ಮುಂಜಾನೆಯ ಸುಪ್ರಭಾತ ಮೊಬೈಲ್ ಪರಿಶೀಲಿಸುವದು! ವಿಜ್ಞಾನಿಗಳು ಮತ್ತು ಮನೋವೈದ್ಯರು ಪ್ರಕಾರ ಇಂಥವರಿಗೆ ಕೆಲ ದಿನಗಳ ಮಟ್ಟಿಗೆ ಡಿಜಿಟಲ್ ಉಪಕರಣಗಳಿಂದ ದೂರವಿರುವದು ಅನಿವಾರ್ಯ. ಯಾವಾಗಲೂ ಇಂಟರ್ನೆಟ್ನಲ್ಲಿ ಆನ್ ಲೈನ್ ಇರುವ ವ್ಯಸನಿಗಳಿಗೋಸ್ಕರ ವಿಶ್ವದ ಹಲವೆಡೆ ಇಂಟರ್ನೆಟ್ ನಶಾ ಮುಕ್ತಿ ಕೇಂದ್ರಗಳು ತೆರೆದುಕೊಂಡಿವೆ. ಈ ಪ್ರಕ್ರಿಯೆಗೆ ಡಿಜಿಟಲ್ ಡಿಟಾಕ್ಸ್  ಎಂದು ಹೆಸರು. ಸಕಲ ಡಿಜಿಟಲ್ ಉಪಕರಣಗಳಿಂದ ದೂರವಿದ್ದು ವ್ಯಕ್ತಿ ತನ್ನೊಂದಿಗೆ ತಾನು ಕೆಲ ಸಮಯ ಕಳೆಯುವ೦ತೆ ಮಾಡಿ ನೋಮೋ  ಮತ್ತು ಫೋಮೊ ಫೋಬಿಯಾಗೊಳಗಾದ ಜನರನ್ನು ಗುಣಮುಖರಾಗಿಸುವದು ಈ ಡಿಜಿಟಲ್ ಡಿಟಾಕ್ಸ್ ಕೇಂದ್ರಗಳ ಉದ್ದೇಶ.  ನೋಮೊ-ಫೋಬಿಯ ಅ೦ದ್ರೆ ನೋ ಮೊಬೈಲ್ ಫೋಬಿಯಾ: ಮೊಬೈಲ್ ಫೋನ್ ಜೊತೆಗಿಲ್ಲವಾದಲ್ಲಿ ಹೆದರಿಕೆ ಹುಟ್ಟುವದು,  ಏನೋ ಕಳೆದುಕೊಂಡಂತೆ ಭಾಸವಾಗುವದು, ಮೊಬೈಲ್ನ ಬ್ಯಾಟರಿ ಖಾಲಿಯಾದಾಗ ಮನದ ತುಮುಲ ಹೆಚ್ಚುವದು, ಕ್ಷಣ  ಕ್ಷಣಕ್ಕೂ ಮೊಬೈಲ್ನ ಸಂದೇಶಗಳು ಮತ್ತು ನೋಟಿಫಿಕೇಶನ್ಗಳನ್ನು ನೋಡುವದು, ಅಂತರ್ಜಾಲದ ವ್ಯಾಪ್ತಿ ಪ್ರದೇಶದಿಂದ  ಹೊರಗಿದ್ದಾಗ ಕಾರಣವಿಲ್ಲದೆ ರೇಗುವದು ನೋಮೋಫೋಬಿಯಾದ ಕೆಲ ಲಕ್ಷಣಗಳು. ಜಗತ್ತಿನಾದ್ಯಂತ ಬಹಳಷ್ಟು ಜನರು  ನೋಮೋ-ಫೋಬಿಯಾದೊಂದಿಗೆ ಫೋಮೊ-ಫೋಬಿಯದಿಂದಲೂ ಬಳಲುತ್ತಿದ್ದರೆ. ಫೋಮೋ (FOMO)ದ ಅರ್ಥ ಫೀಯರ್ ಆಫ್  ಮಿಸ್ಸಿಂಗ್ ಔಟ್ ಅಂದ್ರೆ ಮೊಬೈಲ್ ಫೋನ್ ಹತ್ತಿರವಿಲ್ಲದ ಕಾರಣ ಹೊರಜಗತ್ತಿನ ಆಗುಹೋಗುಗಳನ್ನು  ಅರಿಯಲಸಾಧ್ಯವೆಂಬ  ಗಾಬರಿ/ಹೆದರಿಕೆ/ಕೀಳರಿಮೆಯ ಪರಿಸ್ಥಿತಿ. ಚೀನಾದಲ್ಲಿ ಸುಮಾರು 2.5ಕೋಟಿ ಜನ ಇಂಟರ್ನೆಟ್ನ ವ್ಯಸನಿಗಲಾಗಿದ್ದು, ಇವರಲ್ಲಿ ಬಹುತೇಕರು ಪ್ರತಿ ದಿನ  17ಗಂಟೆಗೂ ಹೆಚ್ಚು ಕಾಲ ಗುಂಪುಕಟ್ಟಿಕೊಂಡು ಇಂಟರ್ನೆಟ್ ಸಂಬಂಧಿ ಆಟಗಳನ್ನಾಡುತ್ತಾ  ಅಂತರ್ಜಾಲದ ಗಂಭೀರ ವ್ಯಸನಿಗಳಾಗಿ ಬಳಲುತ್ತಿದ್ದಾರೆ. ಅಚ್ಚರಿಯೆಂದರೆ ಆಟದಲ್ಲಿ ಸೋಲುವ ಭೀತಿಯಿಂದ ಆತ್ರಾಜಾಲಕ್ಕಂಟಿಕೊಂಡೆ ನೈಸರ್ಗಿಕ ಕರೆಯನ್ನು ಪೂರೈಸಲು ಡೈಪರಗಳನ್ನು ಉಪಯೋಗಿಸುತ್ತಾರೆ! ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಕ್ಯಾಂಪ್ ಗ್ರೌಂಡೆಡ್  ಡಿಜಿಟಲ್ ಡಿಟಾಕ್ಸ್ ಕೇಂದ್ರದಲ್ಲಿ ಜನರ ಮನ ಕಿ ಬಾತ್ನ್ನು ಫೇಸ್ಬುಕ್ ಗೋಡೆಯ ಬದಲು ಇದಕ್ಕೆಂದೆ ಮೀಸಲಿಟ್ಟ ಅಸಲಿ ಗೋಡೆಯ  ಮೇಲೆ ಬರೆಸಲಾಗುತ್ತದೆ.  

ನಮ್ಮ ದೇಶದಲ್ಲಿ ಸ್ಮಾರ್ಟ್ಫೋನ್ ಉಪಯೋಗಿಸುವ 50ಪ್ರತಿಶತ ಜನ ಸಂಗೀತಕ್ಕೆ ಸಂಬಂಧಿಸಿದ ವೀಡಿಯೋ ನೋಡುವ/ಕೇಳುವ ಖಯಾಲಿಯವರಾದರೆ, ವಾಟ್ಸ್ಆಪ್ ಬಳಸುವರ ಸಂಖ್ಯೆ ಇದಕ್ಕಿಂತ ಮಿಗಿಲು. ನಂತರದ ಸ್ಥಾನ ಗೂಗಲ್ ಸರ್ಚ್, ಯೂಟ್ಯೂಬ್ ಹಾಗೂ ಈ-ಕಾಮರ್ಸ್ ಜಾಲತಾಣಗಳದು. ಒಂದು ಅಂದಾಜಿನ ಪ್ರಕಾರ 2021ರ ಹೊತ್ತಿಗೆ ಭಾರತದಲ್ಲಿ ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆ ಜನಸಂಖ್ಯೆಯ 58 ಪ್ರತಿಶತಕ್ಕೇರಲಿದೆ, ಅ೦ದರೆ 75ಕೋಟಿ ಜನ ಸ್ಮಾರ್ಟ್ಫೋನ್ನ ದಾಸರಾಗಲಿದ್ದಾರೆ!  ಟೈಮ್ ಮ್ಯಾಗ್ಝಿನ್ ವರದಿಯಂತೆ ವಿಶ್ವದ 68 ಪ್ರತಿಶತ ಜನರು ನಿದ್ರಿಸುವಾಗ ಡಿಜಿಟಲ್ ಉಪಕರಣಗಳನ್ನು ಪಕ್ಕದಲ್ಲೇ ಅಥವಾ ದಿಂಬಿನಡಿಯಲ್ಲೇ ಇಟ್ಟುಕೊಳ್ಳುತ್ತಾರೆ ಹಾಗೂ ಶೇಕಡಾ 20ರಷ್ಟು ಜನರು ಕ್ಷಣ ಕ್ಷಣಕ್ಕೂ ಮೊಬೈಲ್ನ ನೋಟಿಫಿಕೇಶನ್ ಪರಿಶೀಲಿಸುತ್ತಾರೆ! ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್  ವರದಿಯಂತೆ ದಿನದ 24ಗಂಟೆಗಳ ಕಾಲ ಫೇಸ್ಬುಕ್ನಲ್ಲಿ ಮುಳುಗಿರುವರು ತಮ್ಮ ನಿಜಜೀವನದಲ್ಲಿ ಹತಾಶರಾಗಿ ನಿರಾಶರಾಗಿರುತ್ತಾರೆ! ಇದೆ ರೀತಿ ಅಚಾನಕಾಗಿ ಮೊಬೈಲ್ ಫೋನ್ ರಿಂಗಾದಂತೆ ಭಾಸವಾಗುವದು, ರಿಂಗ್ ಟೋನ್ ಕಿವಿಯಲ್ಲಿ ಗು೦ಯಗುಟ್ಟಿದ೦ತಾದರೆ ಫ್ಯಾ೦ಟಮ್ ಫೋನ್ ಸಿಡ್ರೋಮ್ ಅರ್ಥಾತ್ ರಿಂಗ್ಸೈಟಿಯ ಸಂಕೇತ.     
              
ದಿನನಿತ್ಯದ ಜಂಜಾಟಗಳಿಂದ ಬೇಸತ್ತು ಕುಟುಂಬದೊಂದಿಗೆ ಹಾಯಾಗಿ ರಜೆ ಕಳೆಯಲು ಸುಂದರ ಪ್ರದೇಶಯೊಂದಕ್ಕೆ ಪ್ರಯಾಣಿಸುವ  ಯೋಜನೆ ರೂಪಿಸುವಾಗ,  ಇಂಟರ್ನೆಟ್/ವೈಫೈ  ಸೌಲಭ್ಯಗಳಿಲ್ಲದ  ಹೊಟೇಲ್ಗಳನ್ನೇ ಹುಡುಕಿ ಮನಸೇಚ್ಛೆಯಾಗಿ ಶಾಂತತೆಯನ್ನು/ಏಕಾಂತವನ್ನು ಆನಂದಿಸುವದು ಒಳಿತು. ಹೊಟೇಲ್  ಮೊಬೈಲ್ ನೆಟ್ವರ್ಕ್ ಇಲ್ಲದಿರುವ ಜಾಗದಲ್ಲಿದ್ದರೆ ಇನ್ನೂ ಸುಖ. ರಜಾಕಾಲದ ಪರಮಾನಂದಕ್ಕೆ ಭಂಗ ತರುವ ಲ್ಯಾಪ್ಟಾಪ್,ಟ್ಯಾಬ್,ಸ್ಮಾರ್ಟ್ ವಾಚ್ನಂಥ ಉಪಕರಣಗಳನ್ನು  ಜೊತೆಗೆ ಒಯ್ಯದಿರುವದರಿಂದ ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ನೆಮ್ಮದಿಯೂ ಖಂಡಿತವಾಗಿ ದೊರೆಯುವದು.  ಇಂಟರ್ನೆಟ್ಮುಕ್ತ ರಜೆಯಿಂದ ಜೀವನದ ತಾಜಾತನ ಮರಳಿ ಉಲ್ಲಾಸದ ಚಿಲುಮೆ ಚಿಮ್ಮಿ,ಸಂವೇದನಶೀಲ ವ್ಯಕ್ತಿಯಾಗಿ ಹೊರಹೊಮ್ಮುವದರಲ್ಲಿ ಸಂಶಯವೇ ಇಲ್ಲ.