ಅಮೇರಿಕಾದ ಖ್ಯಾತ ಲೇಖಕ, ವ್ಯಂಗ್ಯಕಾರ ಮಾರ್ಕ್ ಟ್ವೈನ್’ರ ಪ್ರಸಿದ್ಧ ಮಾತು “ A lie can travel half way around the world while the truth is
putting on its shoes”, ಅರ್ಥಾತ್ ಸತ್ಯ ತನ್ನ ಪಾದರಕ್ಷೆ ಧರಿಸಿರುವ ಮುನ್ನ ಸುಳ್ಳು
ಶರವೇಗದಲ್ಲಿ ಅರ್ಧ ಜಗತ್ತನ್ನು ಕ್ರಯಿಸಿ ಆವರಿಸಿಕೊಂಡಿರುತ್ತದೆ! ಸಾಮಾಜಿಕ ಜಾಲತಾಣಗಳಿಗೆ ಈ
ಮಾತು ಅಕ್ಷರಶಃ ಅನ್ವಯಿಸುತ್ತದೆ. ಸೋಷೀಯಲ್
ಮೀಡಿಯಾದಲ್ಲಿ ಸತ್ಯ ಕುಂಟುತ್ತಾ ಸಾಗಿದರೆ, ತಿರುಚಿದ ಸುಳ್ಳು
ಸುದ್ದಿಗಳು ಎಲ್ಲೆ ಇಲ್ಲದೆ ರೆಕ್ಕೆ ಕಟ್ಟಿಕೊಂಡು ಹಾರಾಡುತ್ತವೆ.
ತೀರಾ ಇತ್ತೀಚೆಗಷ್ಟೇ ಮಾಜಿ ರಾಷ್ಟ್ರಪತಿ ಡಾ.ಪ್ರಣಬ್ ಮುಖರ್ಜಿ ಆರ್.ಎಸ್.ಎಸ್’ನ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಿನ ಚಿತ್ರವನ್ನೂ
ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಟ್ಟಿರುವದು ಜಾಲತಾಣಗಳ ಸುಳ್ಳಿನ ಕಂತೆಗೆ ಜ್ವಲಂತ
ಉದಾಹರಣೆ. ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮದಲ್ಲಿ ತೋರಿಸಿದ ಸುದ್ದಿಗಳೆಲ್ಲ ಸಾರ್ವತ್ರಿಕ
ಸತ್ಯವೆಂದು ನಂಬುವ ಬಹುಪಾಲು ಮುಗ್ಧ ಜನತೆಯ ವಿಶ್ವಾಸಕ್ಕೆ ಧಕ್ಕೆಯುಂಟಾಗುತ್ತಿದೆ. ಫೇಕ್’ನ್ಯೂಸ್’ನ ಹಾವಳಿಯಿಂದ ಜಾಲತಾಣಗಳಲ್ಲಿ ತಥ್ಯಗಳನ್ನು
ಹುಡುಕುವದು ಪ್ರಯಾಸದ ಕೆಲಸವಾಗಿದೆ. ಸುಳ್ಳು ಸುದ್ದಿಯ ಪ್ರಕೋಪ ಇಂದು ನಿನ್ನೆಯದಲ್ಲ. ಮಹಾಭಾರತದ ಯುದ್ಧದಲ್ಲಿ
ದ್ರೋಣಾಚಾರ್ಯರನ್ನು ಕುರುಕ್ಷೇತ್ರದಿಂದ ಹೊರಗಿಡಲು ಭೀಮ, ಅಶ್ವಥಾಮ್
ಎಂಬ ಆನೆಯನ್ನು ಸಂಹರಿಸಿ, ತಾನು ಅಶ್ವಥಾಮ್’ನನ್ನು
ಕೊಂದೆ ಎಂದು ದ್ರೋಣರ ಮುಂದೆ ಗುಡುಗುತ್ತಾನೆ. ಯಾವಾಗ ಈ ಅರ್ಧಸತ್ಯ ಯುಧಿಷ್ಟರನ ಬಾಯಿಯಿಂದ
ಹೊರಬಿತ್ತೋ, ದ್ರೋಣಚಾರ್ಯರು ಚಿರಂಜೀವಿಯಾದ ತಮ್ಮ ಪುತ್ರ ಹತನಾದನೆಂದು
ನಂಬುತ್ತಾರೆ! ಪ್ರಥಮ ವಿಶ್ವಯುದ್ಧದ ಸಮಯದಲ್ಲೂ ಸುಳ್ಳು ಮಾಹಿತಿಯನ್ನು ಹಬ್ಬಿಸುವ ಮೂಲಕ ವೈಚಾರಿಕತೆಯ
ಪ್ರಚಾರಕ್ಕಾಗಿ ಜನಭಿಪ್ರಾಯವಾನ್ನು ಪ್ರಭಾವಿತಗೊಳಿಸಿ, ಜನರಲ್ಲಿ
ಭ್ರಾಂತಿ ಸೃಸ್ಟಿಸುವ ಕಸಬು ಚಾಲ್ತಿಯಲ್ಲಿತ್ತು. ಇಂತಹ ಭ್ರಮೆಯ ಸ್ಥಿತಿಯಲ್ಲಿ ಜನರಿಂದ ಅನೈತಿಕ
ಕೆಲಸಗಳನ್ನು ಮಾಡಿಸುವದು ಸುಲಭ, ಹಾಗಾಗಿ ಪ್ರಥಮ
ವಿಶ್ವಯುದ್ಧದಲ್ಲಿ ಸುಳ್ಳು ಸುದ್ದಿಗಳ ಭರಪೂರ್ ಪ್ರಯೋಗವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸುಲಭ
ಮತ್ತು ತ್ವರಿತವಾಗಿ ಸುಳ್ಳು ಸುದ್ದಿಯನ್ನು
ಹಬ್ಬಿಸುವ ಸಾಧನ ವಾಟ್ಸ್’ಅಪ್.
ಜನತೆ ತಮಗೆ ಬಂದ ವಾಟ್ಸ್’ಅಪ್ ಸಂದೇಶ,
ವಿಡಿಯೋ ಅಥವಾ ಆಡಿಯೋದ ಪೂರ್ವಾಪರಗಳನ್ನು ತಿಳಿಯದೇ,
ಸತ್ಯಾಸತ್ಯತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸದೆ ವಿವಿಧ ಗುಂಪುಗಳಿಗೆ ಹಾಗೂ ತಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತಾರೆ. ಇದು ಹೀಗೆ
ಮುಂದುವರೆದು ಕೆಲ ಸುಳ್ಳು ಉದ್ದಿಗಳು ನೋಡುನೋಡುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಆಮೇಲೆ ಇಂತಹ
ಸುದ್ದಿಗಳ ಕುರಿತು ಟಿ.ವಿ. ಚಾನಲ್’ಗಳಲ್ಲಿ ಬಿಸಿ ಬಿಸಿ ಚರ್ಚೆ ಬೇರೆ. ಭಾರತದಲ್ಲಿ
ಕೇವಲ ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೆಲ
ದೃಶ್ಯ ಮಾಧ್ಯಮಗಳು ಮತ್ತು ಮುದ್ರಣ ಮಧ್ಯಮದಲ್ಲೂ ಸಹ ‘ಎಲ್ಲರಿಗಿಂತ
ಮುಂಚೆ ಮತ್ತು ಎಲ್ಲರಿಗಿಂತ ವೇಗದಲ್ಲಿ’ ಸುದ್ದಿ ಬಿತ್ತರಿಸುವ ಧಾವಂತದಲ್ಲಿ ಸುಳ್ಳಿನ ಮೋಹಕ್ಕೆ ಬಲಿಯಾಗಿ ವೀಕ್ಷಕರಿಗೆ ತಪ್ಪು
ಸುದ್ದಿ/ಮಾಹಿತಿ/ಸಂದೇಶಗಳನ್ನು ಬಿತ್ತರಿಸುತ್ತವೆ.
ಪರಿಣಿತರ ಪ್ರಕಾರ ಭಾರತದಲ್ಲಿ ನಾವೆಲ್ಲ ಪೋಸ್ಟ್ ಟ್ರತ್ ಯುಗದಲ್ಲಿ ಬದುಕುತ್ತಿದ್ದೇವೆ. ಅಂದರೆ
ಭಾರತದಲ್ಲಿ ತಥ್ಯವನ್ನು ತಿರುಚಿ ಅನರ್ಥ/ಅಪಾರ್ಥ ಕಲ್ಪಿಸುವ ಸುದ್ದಿಗಳ ಚಾಲನೆಯಲ್ಲಿ ಹೆಚ್ಚಳ
ಕಂಡುಬಂದಿದೆ. ಸುಳ್ಳನ್ನು ಸಾವಿರಾರುಬಾರಿ ಪುನರುಚ್ಚರಿಸಿದಾಗ ಅದೇ ಸತ್ಯವಿರಬಹುದೇನೋ ಎಂದು ಜನ
ನಂಬಲಾರಂಭಿಸುತ್ತಾರೆ.ಪೋಸ್ಟ್ ಟ್ರತ್ ಅಂದರೆ ಈ ರೀತಿಯ ಸುಳ್ಳನ್ನೇ ಸತ್ಯವೆಂದು ನಂಬುವಂತೆ ಮಾಡಿದ
ನಂತರ ಉದ್ಭವಿಸುವ ವಾತಾವರಣಕ್ಕೆ ಪೂರಕವಾಗಿ
ವೇದಿಕೆ ಸಿದ್ಧಗೊಳಿಸಲಾಗುತ್ತದೆ.
ಜನರು ಬೆಳ್ಳಿಗ್ಗೆ ಎದ್ದು ಚಹಾ ಸೇವಿಸುತ್ತಾ
ವಾಟ್ಸ್’ಅಪ್, ಫೇಸ್’ಬುಕ್, ಟ್ವಿಟರ್ ಹಾಗೂ
ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಾಡಿಸುತ್ತಾ ಸುದ್ದಿ ಓದುತ್ತಾರೆ. ಈ ಸುದ್ದಿಗಳನ್ನು
ಸತ್ಯವೆಂದು ನಂಬುತ್ತಾರೆ. ಇಂತಹ ಸುದ್ದಿಗಳನ್ನು ಓದಿ ಒಮ್ಮೆ ಮನದಲ್ಲಿ ದೇಶ ಭಕ್ತಿಯ ಭಾವ
ಜಾಗೃತವಾದರೆ, ಮತ್ತೊಮ್ಮೆ ಯಾವುದಾದರೂ ರಾಜಕೀಯ ಧುರೀಣ ಅಥವಾ ಪಕ್ಷದ ಮೇಲೆ ಸಿಟ್ಟು
ಬರುತ್ತದೆ ಮಗದೊಮ್ಮೆ ಯಾವುದೋ ಧುರೀಣ ಅಥವಾ
ಪಕ್ಷದಲ್ಲಿ ಚಮತ್ಕಾರಕ ಶಕ್ತಿ ಗೋಚರಿಸತೊಡಗುತ್ತದೆ.
ಜನರು ಭಾವತೀವ್ರತೆಯ ಉತ್ತಂಗದಲ್ಲಿ ಇಂತಹ ಸಂದೇಶಗಳನ್ನು ಸ್ನೇಹಿತರೊಂದಿಗೆ
ಹಂಚಿಕೊಳ್ಳುತ್ತಾರೆ. ಈ ರೀತಿ ಬೆಳ್ಳಿಗ್ಗೆಯಿಂದ ಸಂಜೆಯವರೆಗೆ ಸುಳ್ಳಿನ ಸರಪಳಿ ಸೃಷ್ಟಿಯಾಗುತ್ತದೆ. ಈ ಸುದ್ದಿಗಳ ಹಕೀಕತ್ತು ತಿಳಿದಾಗ ಮಾಧ್ಯಮಗಳ ಮೇಲೆ ಕೋಪ/ಆಕ್ರೋಶ ಹುಟ್ಟುತ್ತದೆ. ಬಿಹಾರದ ಮೋತಿಹಾರಿಯಲ್ಲಿ
ಜನಿಸಿದ, ಬ್ರಿಟನ್’ನ ಪ್ರಖ್ಯಾತ ಲೇಖಕ ಪತ್ರಕರ್ತ ಜಾರ್ಜ್ ಆರ್ವೆಲ್ ದಶಕಗ
ಹಿಂದೆಯೇ ‘ಯಾವಾಗ ವಸ್ತುನಿಷ್ಠ
ಸತ್ಯದ ಪರಿಕಲ್ಪನೆ ಸಮಾಜದಿಂದ ಮಾಯವಾಗಿ ಸುಳ್ಳಿನ
ಭ್ರಮಾಲೋಕಕ್ಕೆ ಸಮಾಜ ಲಗ್ಗೆ ಇಡುತ್ತದೆಯೋ , ಆಗ ಸುಳ್ಳು ಇತಿಹಾಸ ಸೇರಿ, ಸತ್ಯವಂತರ ಮೇಲೆ ದ್ವೇಷ ಹುಟ್ಟುತ್ತದೆ’ ಎಂದಿದ್ದರು. ಈ ಮಾತುಗಳು ಇಂದಿನ ಭಾರತೀಯ ಸಮಾಜಕ್ಕೆ ಹಿಂದೆಂದಿಗಿಂತಲೂ ಹೆಚ್ಚು
ಪ್ರಸ್ತುತವಾಗಿವೆ.
No comments:
Post a Comment
Note: only a member of this blog may post a comment.