Wednesday, 24 September 2014

ಎಂದೂ ಮರೆಯಲಾಗದ ಆ ದಿನಗಳು - ಭಾಗ-1

ನಮ್ಮ ಹೈಸ್ಕೂಲನಲ್ಲಿ  ಒಬ್ಬರು ಹಿಂದಿ ಶಿಕ್ಷಕರಿದ್ದರು,ಇತ್ತೀಚಿಗೆ ನಿಧನ ಹೊಂದಿದರು.ಅವರು ಯಾವತ್ತೂ ನಗುತ್ತಾ ಎಲ್ಲರನ್ನೂ ನಗಿಸುತ್ತಾ ಜೀವನ ಕಳೆದ ವ್ಯಕ್ತಿ. ಅವರು ಯಾವಾಗಲೂ ಪಠ್ಯ ಕ್ರಮವನ್ನು  ಬೇರೆ ಎಲ್ಲಾ ಶಿಕ್ಷಕರಿಗಿಂತ ಮೊದಲು ಮುಗಿಸಿಬಿಡುತ್ತಿದ್ದರು. ಜನೇವರಿ – ಫೆಬ್ರವರಿ ಅನ್ನುವಷ್ಟರಲ್ಲಿ ಪೂರ್ತಿ ಸಿಲಬಸ್ ಮುಗಿಸಿ  ಮಕ್ಕಳಿಗಿ ರಿವಿಸನ್ ಮಾಡಿಸುತ್ತಿದ್ದರು. ಇವರ ಪಿರೇಡ್ ಬಂತು ಅಂದರೆ ಎಲ್ಲಾ ಮಕ್ಕಳಿಗೂ ಖುಷಿ. 45 ನಿಮಿಷದ ಪಿರೇಡದಾಗ, ಒಂದು ಹಿಂದಿ ಪದ್ಯ ಅಥವಾ ಗದ್ಯ ಮುಗಿದು ಕನಿಷ್ಠ ಹತ್ತು ನಿಮಿಷದ ಸಮಯ ಉಳಿಯುತ್ತಿತ್ತು. ಈ ವೇಳೆಯಲ್ಲಿ ವಿದ್ಯಾರ್ಥಿಗಳು ಕಿತಾಪತಿ ಮಾಡ್ತಿದ್ದರು.ಯಾಂವರೇ ಒಬ್ಬವ “ಸರ್ ಇಂವ ನನಗ ಚುಟ್ಯಾನರಿ” ಅಂದರ, ಅವರ ಪ್ರತಿಕ್ರಿಯೆ ಎಷ್ಟು ಸಿಂಪಲ್ ಇರ್ತಿತ್ತಂದರ್  “ನೀನು ಚೂಟು”  ಅಂದಬಿಡವರು.  ಅವರು ನಮ್ಮನ್ನೆಲ್ಲಾ ಯಾವತ್ತೂ ಒಂದು ಪ್ರಶ್ನೆ ಕೇಳ್ತಿದ್ದರೂ “ನಿಮಗ 1 ಲಕ್ಷ ರೂಪಾಯಿ ಲಾಟ್ರೀ ಹೊಡದರ  ಏನ ಮಾಡ್ತೀರಪಾ?” ನಾವೆಲ್ಲ ಸ್ವಲ್ಪ ಸುಮ್ಮನಿದ್ದು “ಸರ್ ನೀವೇನ್  ಮಾಡ್ತೀರಿ?” ಅಂತ ಕೇಳಿದರ, ಅವರು “ನಾನು ಆಲ್ ಇಂಡಿಯಾ ಟೂರ್ ಮಾಡ್ತೀನಿ” ಅನ್ನವರು.  ಅವರು ಮುಗ್ಧ ನಿಷ್ಕಲ್ಮಶ  ಹ್ಯಾಪಿ ಗೋ ಲಕ್ಕೀ ಸ್ವಭಾವದ ಜಾಲಿ ವ್ಯಕ್ತಿಯಾಗಿದ್ದರು.

ಆಗ ನಮಗೆ ಅರ್ಧ ವಾರ್ಷಿಕ ಮತ್ತು ವಾರ್ಷಿಕ ಪರೇಕ್ಷೆಗೆ ಹಿಂದಿ 50 ಮಾರ್ಕ್ಸ್ ಪೇಪರ, ಮೂರು ತಿಂಗಳು ಮತ್ತು ಒ0ಬತ್ತು ತಿಂಗಳ ಪರೀಕ್ಷೆಯಲ್ಲಿ 25 ಮಾರ್ಕ್ಸ್ ಪೇಪರ.ಎಲ್ಲಾ ವಿದ್ಯಾರ್ಥಿಗಳಿಗೂ ಸ್ವಾಭಾವಿಕವಾಗಿ ಹೆಚ್ಚಿಗೆ ಅಂಕ ತೆಗಿದುಕೊಳ್ಳಬೇಕೆಂಬ ಆಕಾ೦ಕ್ಷೆ. ಅದಕ್ಕೆ ಹಿಂದಿ ವಿಷಯದಲ್ಲಿ ಹೆಚ್ಚಿಗೆ ಅಂಕ ತೆಗೆಯಲು ಒಂದು ಉಪಾಯವನ್ನು ಕಂಡುಕೊಂಡಿದ್ದರು, ಅದೇನೆಂದರೆ ಹಿಂದಿಯಲ್ಲಿ ನಾಲ್ಕು ಸಾಲಿನ ಯಾವುದಾದರೊಂದು ಪದ್ಯ (ಕಬೀರ್ ಕೆ ದುಹೇ ಅಥವಾ ಬೇರೆ ಯಾವದಾದರೊಂದು ಪದ್ಯ ಇರಬಹುದು) ಬರೆಯಬೇಕಾಗುತ್ತಿತ್ತು. ಅದನ್ನು ಕೆಲವರು ಉತ್ತರ ಪತ್ರಿಕೆಯಲ್ಲಿ ಪ್ರಾರ೦ಭದಲ್ಲೋಮ್ಮೆ ಹಾಗೂ ಕೊನೆಗೊಮ್ಮೆ ಬರೆಯುತಿದ್ದರು.ನಮ್ಮ ಹಿಂದಿ ಸರ್ ಎರಡಕ್ಕೂ ಮಾರ್ಕ್ಸ್ ಹಾಕಿರುತಿದ್ದರು. ಹೀಗಾಗಿ ಹಿಂದಿಯಲ್ಲಿ ಎಲ್ಲರಿಗೂ 25ಕ್ಕೆ 18ಕಿ೦ತ ಹೆಚ್ಚು ಅಂಕಗಳು ಬಂದಿರುತ್ತಿದ್ದವು.ಒಮ್ಮೊಮ್ಮೆ ಈ ಉಪಾಯ ಫಲಿಸುತ್ತಿರಲ್ಲಿಲ, ಎರಡನೆಯ ಸಲ ಬರೆದ ಉತ್ತರವನ್ನು ಖಾಟ್ ಹಾಕಿ ಬಿಡತಿದ್ದರು ಆದರೆ ಎಂದಿಗೂ ಯಾರಿಗೂ ಈ ವಿಷಯವಾಗಿ ಬಯ್ಯುವದಾಗಲಿ ಅಥವಾ ಮೂದಲಿಸುವದಾಗಲಿ ಮಾಡುತ್ತಿರಲ್ಲಿಲ್ಲ.

 ಈ ನಮ್ಮ ಹಿಂದಿ ಸರ್ ನಮಗೆ 8ನೇ ಕ್ಲಾಸ್ಸಿನಲ್ಲಿದ್ದಾಗ ಹಿಸ್ಟರಿಯನ್ನೂ ಕಲಿಸುತಿದ್ದರು. ಸಮಾಜ ಅವರ ವಿಷಯವಾಗಿರಲಿಲ್ಲ ಆದರೂ ತಕ್ಕಮಟ್ಟಿಗೆ ಕಲಿಸುತಿದ್ದರು. ಒಂದು ಕುತೂಹಲದ ಸಂಗತಿಯೆಂದರೆ ಅವರು ನಮಗ ಹಿಸ್ಟರಿ ನೋಟ್ಸ್ ಬರೆಸುತ್ತಿದ್ದರು, ಅದು ಪುಸ್ತಕದಲ್ಲಿರುವದೇ ಆಗಿರುತ್ತಿದುದರಿಂದ ಯಾರು ನೋಟ್ಸ್ ಗಂಭೀರವಾಗಿ ಬರೆಯುತ್ತಿರಲಿಲ್ಲ. ಆ ದಿನದ ಪಾಠ ಮುಗಿದಮೇಲೆ ನೋಟ್ಸ್ ನೋಡಿ ಸಹಿ ಮಾಡುತಿದ್ದರು. ಕೆಲ ದಿನ ಸರಿಯಾಗಿ ನೋಟ್ಸ್ ಬರೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಇದಕ್ಕೂ ಒಂದು ಉಪಾಯವನ್ನು ಕಂಡು ಹಿಡಿದರು. ನಮ್ಮ ಸರ್ ಪಾಠ ಮುಗಿದು ನೋಟ್ಸ್ ಪರಿಶೀಲಿಸಿ ರುಜು ಹಾಕುವಾಗ “ಲಾಸ್ಟ್ ಪೇಜ್ ತಗಿರೆಪಾ” ಅನ್ನವರು. ಹಾಗಾಗಿ ಹುಡಗುರು ಯಾವದೇ ನೋಟ್ಸ್ ಮಾಡದೆ ಕಡೆಯ ಎರಡು ಸಾಲುಗಳನ್ನು ನೆನಪಿಟ್ಟುಕೊಂಡು, ಸರ್ ಇವತ್ತಿನ ನೋಟ್ಸ್ ಮುಗಿಯಿತು ಅಂದ ಕೂಡಲೇ, ಆ ಎರಡು ಸಾಲುಗಳನ್ನು ಹೊಸ ಪೇಜಿನಲ್ಲಿ ಬರೆದು ಗುರುಗಳಿಗೆ ತೋರಿಸಿ ಸಹಿ ಹಾಕಿಸಿಕೊಳ್ಳುತಿದ್ದರು. ಕೊನೆಗೆ ಇದೆ ರೀತಿ  8ನೇ ತರಗತಿ ಮುಗಿಸಿ 9ನೇ ತರಗತಿಗೆ ಕಾಲಿಟ್ಟಾಗ ಈ ನಮ್ಮ ಹಿಂದಿ ಸರ್ ಒಬ್ಬ ವಿದ್ಯಾರ್ಥಿಗೆ “ಹೋದ ವರ್ಷದ ಹಿಸ್ಟರಿ ನೋಟ್ಸ್ ಕೊಡಪಾ ಈ ವರ್ಷನು ಹುಡುಗುರಿಗೆ ಬರ್ಸಬೇಕು” ಅಂದಾಗ, ಆ ವಿದ್ಯಾರ್ಥಿ ತಬ್ಬಿಬ್ಬಾದ ಯಾಕಂದ್ರ ಹಿಸ್ಟರಿ ನೋಟ್ಸ್ ಹೆಂಗ ಬರಕೊಂಡಿದ್ದ ಅಂತ ಅ೦ವಗ ಗೊತ್ತು!  ಒಮ್ಮೆ  ಅರ್ಧ ವಾರ್ಷಿಕ ಪರೀಕ್ಷೆಯ 65ಅಂಕಗಳ ಹಿಸ್ಟರೀ ಪೇಪರ ಇತ್ತು. ಈ ನಮ್ಮ ಸರ್ ಹಿಸ್ಟರೀ(ಮಾತ್ರ) ಪೇಪರ್ ಮೌಲ್ಯಮಾಪನ ಮಾಡುವ ಪದ್ಧತಿ ಹೇಗೆಂದರೆ ಯಾರು ಹೆಚ್ಚು ಸಪ್ಲಿಮೆಂಟ್ ಕಟ್ಟಿ ಬರಿತಾರೋ ಅವರಿಗೆ ಹೆಚ್ಚು ಅಂಕ ಕೊಡುತಿದ್ದರು. ನನ್ನ ಸ್ನೇಹಿತನೊಬ್ಬ ಬಹಳಸ್ಟು ಸಪ್ಲಿಮೆಂಟ್ ಕಟ್ಟಿದ್ದ , ಪರೇಕ್ಷೆ ಮುಗಿದು ಮೌಲ್ಯಮಾಪನ ಆಗಿ ಪೇಪರ್ ಕೊಟ್ಟಾಗ ಅವನಿಗೆ 63.5ಅಂಕಗಳು ಬಂದಿದ್ದವು. ಅವನ ಪೇಪರನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮ್ಮ ಸರ್ ಮೊದಲು 67.5 (65ಕ್ಕೆ) ಅಂಕಗಳನ್ನು ಕೊಟ್ಟು ನ೦ತರ ಅಲ್ಲಿ ಇಲ್ಲಿ ಅರ್ಧರ್ಧ ಅಂಕಗಳನ್ನು ಕಟ್ ಮಾಡಿ 63.5ಅಂಕ  ಕೊಟ್ಟಿದ್ದರು!  

 ಇನ್ನೊ೦ದು ಪ್ರಸಂಗ ಆಗಿನ್ನೂ ನಮ್ಮೂರಿಗೆ TV ಬಂದು ಬಹಳ ದಿನಗಳಾಗಿರಲಿಲ್ಲ , ಈ ನಮ್ಮ ಸರ್  ಶಾಲೆಯಲ್ಲಿ ನಮ್ಮೆಲರ ಕುರಿತು ಒಂದು ಸಂಗತಿ ಹೇಳ್ತಿದ್ದರೂ “ಜಪಾನ ದೇಶದಾಗ TV,ಫ್ರಿಜ್,ಟೇಪ ರಿಕೊರ್ಡರ್  ಮತ್ತು ಇನ್ನೂ ಅನೇಕ ಇಲೆಕ್ಟ್ರಾನಿಕ್ ಉಪಕರಣಗಳನ್ನು ಉಪಯೋಗಿಸಿ ಕೆಲ ವರ್ಷಗಳ ನ೦ತರ ಸಮುದ್ರದೊಳಗ ಒಗಿತಾರ”.ಆಗ ಅದಕ ನಾವೇನ್ ಮಾಡಬೇಕ್ರಿ ಸರ್ ಅಂದರ, ಅವರು “ನೀವು ಅವನೆಲ್ಲಾ ಆರಾಸಕ್ ಹೊಗ್ರಿ” ಅಂತಿದ್ದರು.ಅವರ ಈಸೀ ಜೀವನಕ್ಕೆ ಬೆಳಕು ಚೆಲ್ಲುವ ಇನ್ನೊಂದು ಸಂಗತಿಯೆಂದರೆ ಅವರು ಪಕ್ಕದ ಮನೆಯ ಚಕ್ರವರ್ತಿ ಅಂಕಲ್(ಬುಲ್ ಡೋಜರ್ ಓಡಿಸುತ್ತಿದ್ದ) ಜೊತೆಗೂಡಿ ಲಗೋರಿಯಾಡುತ್ತಿದ್ದುದು.ಅವರನ್ನು ನಾವು ಯಾವತ್ತೂ ಟೆನ್ಷನಲ್ಲಿ ಇದ್ದದನ್ನು ನೋಡಿಲ್ಲ, ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆತು  ಸರಳ ಜೀವನ ಸಾಗಿಸಿದ  ವ್ಯಕ್ತಿ ಅವರು.      






Tuesday, 16 September 2014

ಜೀವನ ಚಕ್ರ


ಜೀವನ ಹುಟ್ಟಿನಿಂದ ಸಾವಿನವರೆಗಿನ  ಒಂದು ಪಯಣ, ಈ ಹುಟ್ಟು ಸಾವಿನ ಮಧ್ಯದಲ್ಲಿನ ಕಾಲ ಘಟ್ಟ ಬದಲಾಗುತ್ತಾ ಸಾಗುತ್ತದೆ.ಇದನ್ನೇ ನಾವು ವಿಧಿ ಅಂತಾ ಕರೀತೀವಿ. ಈ ವಿಧಿ ಅಥವಾ ಹಣೆಬರಹದ ಪ್ರಕಾರ ಜೀವನದಲ್ಲಿ ಏನೇನು ನಡಿಬೇಕು ಅದು ನಡೀತಾ ಇರುತ್ತದೆ. ಕೆಲ ಚಿಂತಕರ ಪ್ರಕಾರ ನಾವು ಜೀವನದಲ್ಲಿ ನಡೆದದ್ದನ್ನೇ ವಿಧಿ ಅಂತಾ ಹೇಳ್ತೀವಿ ಅಂತಾ ಅ೦ಬೋಣ. ಇನ್ನೂ ಕೆಲವರು ಇವೆರಡು ನಿಲುವುಗಳ ದ್ವ೦ದ್ವದಲ್ಲಿ ತೊಳಲಾಡುತ್ತಾ ಜೀವನ ಸಾಗಿಸುತ್ತಾರೆ. ಈ ಸಂದರ್ಭದಲ್ಲಿ ನನಗೆ ಹಿಂದಿ ಚಲನ ಚಿತ್ರ “ಶರಾಬಿ”ಯಲ್ಲಿನ ಅಮಿತಾಭ್ ಬಚ್ಚನರ ಒಂದು ಡೈಲಾಗ್ ನೆನಪಿಗೆ ಬರುತ್ತದೆ.ಆ ಡೈಲಾಗನ ತಾತ್ಪರ್ಯ ಏನೆಂದರೆ ಇದ್ದವರು(Haves) ಇಲ್ಲದವರಿಗೆ(Have-nots)  ತಮ್ಮ ಕೈಲಾದಷ್ಟು ಯಾವಾಗಲೂ ಸಹಾಯ ಮಾಡ್ತಾ ಇರಬೇಕು. ದೇವರು ಕೆಲವರನ್ನು ಈ ಉದ್ದೇಶಕ್ಕಾಗಿಯೇ ಸ್ಥಿತಿವಂತರನ್ನಾಗಿ ಅಥವಾ ಸ್ಥಿತಿವಂತರ ಮನೆಯಲ್ಲಿ  ಹುಟ್ಟಿಸಿರುತ್ತಾನೆ. ಹಾಗಾಗಿ ನಾವು ಇಲ್ಲದಕ್ಕಾಗಿ ಮರುಗದೆ ಇದ್ದದ್ದರಲ್ಲೇ ಜೀವನವನ್ನು ಅನುಭವಿಸುತ್ತಾ  ಕೈಲಾದಷ್ಟನ್ನೂ  ಇಲ್ಲದವರಿಗಾಗಿ ಸಹಾಯ ಮಾಡುತ್ತಾ ಜೀವನ ಸಾಗಿಸಬೇಕು.
  
    ನಮ್ಮ ಜೀವನವನ್ನು ಮತ್ತು ನಮ್ಮನ್ನು ನಾವು ಯಾವತ್ತೂ ತುಂಬಾ ಗಂಭೀರವಾಗಿ (ಸೀರಿಯಸ್ ಆಗಿ) ಪರಿಗಣಿಸಬಾರದು. ಯಾವುದೇ ವಿಷಯದಲ್ಲಿ ನಮ್ಮ ಪ್ರಯತ್ನ ಪರಿಪೂರ್ಣ ಮತ್ತು ನಿರಂತರವಾಗಿರಬೇಕು,ಆಗ ಅದರ ಪ್ರತಿಫಲ ನಿರೀಕ್ಷೆಗೆ ತಕ್ಕಂತೆಯೇ  ಇರುತ್ತದೆ.  ಮೊನ್ನೆ ನಮ್ಮ ಪ್ರಧಾನಿ ಮೋದಿಯವರು ಮಕ್ಕಳೊ೦ದಿಗಿನ  ಸ೦ವಾದದಲ್ಲಿ ಹೇಳಿದ ಒಂದು ಮಾತು- “ಮಕ್ಕಳು ಏನಾಗಬೇಕೆಂದು ಕನಸು ಕಾಣುವದು ತಪ್ಪಲ್ಲ ಆದರೆ ಏನಾಗುತ್ತಾರೆ ಅಥವಾ ಏನಾಗಿರುತ್ತಾರೆ ಅದನ್ನು ಅನುಭವಿಸಿ ಆನ೦ದಿಸೋದು ಬಹಳ ಮುಖ್ಯ”.  ಈ ಮಾತು ಇಡೀ ದೇಶದ ಜನತೆಯ ಮನ ಸೋಕಿತು. ನಾವು ಮಕ್ಕಳಲ್ಲಿ ಚಿಕ್ಕಂದಿನಿ೦ದಲೂ  ಇಂಜಿನೀಯರ್ ಅಥವಾ ಡಾಕ್ಟರ್  ಆಗಬೇಕು ಅನ್ನೋ ಭಾವನೆಯನ್ನು ತುಂಬುತ್ತ ಬೆಳೆಸುತ್ತೇವೆ. ಇದಕ್ಕೆ ಯಾವ ಪಾಲಕರು ಹೊರತಲ್ಲ ಮತ್ತು ಒಂದು ಹಂತದವರಗೆ ಇಂತಹ ಅಪೇಕ್ಷೆ ಸಮ೦ಜಸವು ಹೌದು.ಸಾಮಾನ್ಯವಾಗಿ ನಾವು ಯಾವುದನ್ನೂ ನಮ್ಮ ಜೀವನದಲ್ಲಿ ಕಾರಣಾ೦ತರದಿಂದ ಸಾಧಿಸಲು ಸಫಲರಾಗಿರುವದಿಲ್ಲವೋ ಅಂತಹುದನ್ನು ನಮ್ಮ ಮಕ್ಕಳ ಮುಖಾಂತರ ಸಾಕಾರಗೊಳಿಸಲು ಪ್ರಯತ್ನಿಸುತ್ತೇವೆ.ಆದರೆ ಇ೦ತಹ ಭಾವನೆಗಳನ್ನೂ ಮಕ್ಕಳಿಗೆ  ಒತ್ತಾಯಪೂರ್ವಕವಾಗಿ ಹೇರುವ ಬದಲು ಅವರಿಚ್ಛಿಸಿದ ಕ್ಷೇತ್ರದಲ್ಲಿ ಅವರಿಗೆ ಭಾರವೆನಿಸದ೦ತೆ ಮೂಲಭೂತವೆನಿಸುವ ತತ್ವಗಳನ್ನು ಹಾಗೂ ಮೌಲ್ಯಗಳನ್ನು ಕಲಿಸುವದು ನಮ್ಮ ಗುರಿಯಾಗಬೇಕು. 

ಪ್ರತಿಯೊಬ್ಬರ ಜೀವನದಲ್ಲಿ ಏಳು-ಬೀಳುಗಳು ಸಾಮಾನ್ಯ.ಎದ್ದಾಗ ತುಂಬಾ ಹಿಗ್ಗದೇ, ಬಿದ್ದಾಗ ಎದೆಗುಂದದೇ ಜೀವನದ ರಥವನ್ನು ಎಳೆಯುತ್ತಾ – ತಳ್ಳುತ್ತಾ ಮುಂದೆ ಸಾಗಬೇಕು. ಈ ಜೀವನದ ಕುರಿತಾದ ಕಿಶೋರಕುಮಾರ-ಲತಾ ಮಂಗೇಶಕರ್ ಹಾಡಿದ ಇನ್ನೊ೦ದು ಹಿಂದಿ ಹಾಡು ನನ್ನ  ನೆನಪಿಗೆ ಬರುತ್ತೆ “ ಜಿಂದಗಿ ಪ್ಯಾರ ಕಾ ಗೀತ್ ಹೈ, ಇಸೆ ಹರ ದಿಲ್ ಕೋ ಗಾನಾ ಪಡೆಗಾ-ಜಿಂದಗಿ ಗಮ್ ಕಾ ಸಾಗರ್ ಭೀ ಹೈ, ಹಸ್ಕೆ ಉಸ ಪಾರ್ ಜಾನಾ ಪಡೆಗಾ”. ಇದೆಲ್ಲ ಬರೀತಾನಲ್ಲಪಾ ಇಂವ  ಏನ ಭಾಳ ಫಿಲೋಸಫಿ ಹೇಳ್ತಾನ ಅನಕೊಬ್ಯಾಡ್ರಿ. ನನಗ ಸ್ವಲ್ಪ ಹಳೆಯ ನೆನಪುಗಳನ್ನು ಮೆಲಕು ಹಾಕು ಚಾಳಿ. ನಾ ಹೇಳ ಬಯುಸುವದಿಷ್ಟೆ, ಜೀವನ ಅನ್ನುವದನ್ನು  ಈಸೀಯಾಗಿ ತಗೊಂಡು ಮಾಡಬೇಕಾದ ಸಾಧನೆಯನ್ನು ಮಾಡಿ ಹಾಯಾಗಿ ಕಳೆಯಬೇಕು,ಬಹಳಷ್ಟು ಬೇಡದಿರುವ ಟೆನ್ಷನ್ ತೆಗೆದುಕೊಂಡು ಅನವಶ್ಯಕವಾಗಿ ಬಿ‌.ಪಿ. ಶುಗರನ್ನು ಅವಧಿಗೆ ಮುನ್ನ (ಮಧ್ಯ ವಯಸ್ಸಿನಲ್ಲೇ) ಅವ್ಹಾನಿಸಿಕೊಳ್ಳುವದನ್ನು ತಡೆಗಟ್ಟಬಹುದು. ಜೀವನದಲ್ಲಿ ಎಲ್ಲವೂ ನಾವು ಅಂದು ಕೊಂಡಂತೆ ನಡೆಯುವದಿಲ್ಲ, ಆದರೆ ಜೀವನದ ಒಂದು ಘಟ್ಟದಲ್ಲಿ ಅಥವಾ ಒಂದು ಘಳಿಗೆಯಲ್ಲಿ ಬಹುಶಃ ಆಗಿದ್ದೆಲ್ಲಾ ನಮ್ಮ ಒಳ್ಳೆಯದಕ್ಕೆನೋ ಅಂತ ನಮಗೆ ಅನಿಸದೆ ಇರದು.ಜೀವನದಲ್ಲಿ ಸಮತೋಲನವನ್ನು ಕಳೆದುಕೊಳ್ಳದೆ, ಜೀವನೋತ್ಸಾಹವನ್ನು ಕುಂದಿಸದೆ,ಕಳೆದುಕೊಂಡದ್ದರ ಬಗ್ಗೆ ಬಹಳ ಮರುಗದೆ,ಬಂದ ಸುಖ-ದುಖಃಗಳನ್ನು ಅನುಭವಿಸುತ್ತಾ “ನೆವರ್ ಸೇ ಡೈ ಯ್ಯಾಟಿಟ್ಯೂಡ್ (ಮರಳಿ ಯತ್ನವ ಮಾಡು) ” ರೂಢಿಸಿಕೊಂಡು ಬದುಕುವದೇ ಸಾರ್ಥಕ ಜೀವನದ ಲಕ್ಷಣ. 

Friday, 5 September 2014

ಇಂದಿನ ಶಿಕ್ಷಣ ಪದ್ಧತಿ


ನನಗೆ ಈ ಶಿಕ್ಷಣ ಕ್ಷೇತ್ರದ ಬಗ್ಗೆ ಒಲವು ಮತ್ತು ಆಸಕ್ತಿ ಕೊಂಚ ಜಾಸ್ತಿನೇ. ಆದ್ದರಿಂದ ಮತ್ತೆ ನಾನು ಬರೆಯುತ್ತಿರುವ ವಿಷಯ ಶಿಕ್ಷಣದ ಕುರಿತಾದುದೇ ಆಗಿದೆ. ವಿಶೇಷವಾಗಿ  ಪ್ರಾಥಮಿಕ  ಶಿಕ್ಷಣ ಮಕ್ಕಳಿಗೆ ಹೊರೆ ಆಗಬಾರದು, ಇದನ್ನು ಆದಷ್ಟು ನೀತಿ ಕಥೆಗಳ ಮುಖಾಂತರ  ಕಲಿಸಿದರೆ  ತುಂಬಾ ಒಳ್ಳೆಯದು. ಆದರೆ ಈಗ ಒಂದನೇ ತರಗತಿಯಿಂದಲೇ ಪರಿಸರ ಜ್ಞಾನ (EVS) ಮತ್ತು ಇನ್ನೂ ಮಕ್ಕಳಿಗೆ ತುಂಬಾ  ಭಾರ ಎನಿಸುವ ವಿಷಯಗಳನ್ನು ಕಲಿಸಲಾಗುತ್ತಿದೆ. ನಮ್ಮ ಮಕ್ಕಳಿಗೆ ಪಂಚತಂತ್ರದ ಕಥೆಗಳು ,ರಾಮಾಯಣ –ಮಹಾಭಾರತದ ಕಥೆಗಳು,ಜಾನಪದ ಕಥೆಗಳು ಹಾಗೂ ಅಜ್ಜಿಯ ಕಥೆಗಳನ್ನು ಪಠ್ಯದ ಮುಖಾಂತರ ಕಲಿಸಿದರೆ ಅವರಿಗೆ ಅದರಲ್ಲಿರುವ ನೀತಿಪಾಠಗಳ ಬಗ್ಗೆ ಅರಿವು ಮೂಡುತ್ತದೆ.

ಈಗ ಯಾವದೇ ಕ್ಲಾಸಿನ  ಪುಸ್ತಕ ಹುಡುಕಿದರು “ರವಿಯು ಅಜ್ಜನ ಮನೆಗೆ ಹೋದನು”,”ಸೋಮನ ಗೌಡರ ನಾಯಿ”, ಗಮಯನ ಕಥೆ”, ಕೆರೆಗೆ ಹಾರ”,”ಸೋನೆ ಕಿ ಅಂಡಾ ದೇನೆವಾಲಿ ಮುರಗಿ”,”ರೋಮಿಯೋ ಜುಲಿಯಟ್”,”ವಂಡರ್ ಹೆಡ್”   ಮತ್ತು ಈ ತರಹದ ಅನೇಕ ಕಥೆಗಳ ಕುರುಹೆ ಸಿಗುವದಿಲ್ಲ. ಪಠ್ಯಕ್ರಮ ಪರಿಷ್ಕರಿಸುವರು ಯಾವ ಮಾನದಂಡವನ್ನು ಅನುಸರಿಸುತ್ತಾರೋ ಗೊತ್ತಿಲ್ಲ,ಇದಕ್ಕೆ ಈ ಎಡಪ೦ಥೀಯರ  ತುಷ್ಟೀಕರಣದ ರಾಜಕೀಯ ಕಾರಣ ಇದ್ದರೂ ಇರಬಹುದು.

ಇನ್ನು ಈ ಸೆಮಿಸ್ಟರ್ ಪದ್ಧತಿಯನ್ನು  ನೋಡಿ,ಇದು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಬೇಕಾ? ಖಂಡಿತವಾಗಿಯೂ ಬೇಡ.ಇದು ನಮ್ಮ ಮಕ್ಕಳನ್ನು ಕೇವಲ A+ ತೆಗಿದುಕೊಳ್ಳೋ ಯಂತ್ರಗಳನ್ನಾಗಿ ಮಾಡ್ತಾ  ಇದೆ. ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ  ಹಿಂದೆ ಕಲಿತದ್ದನ್ನು ನೆನಪಿಟ್ಟುಕೊಂಡು ಮುಂದುವರಿಸಿಕೊಂಡು ಹೋಗುವದು ಅತ್ಯ೦ತ ಅವಶ್ಯಕ.ಆದರೆ ಈ ಸೆಮಿಸ್ಟರ್ ಪದ್ಧತಿಯಲ್ಲಿ ಮಕ್ಕಳು ಹಿಂದೆ ಕಲಿತದನ್ನು ಮರೆತು ಕೇವಲ ಮುಂದಿನ ಸೆಮಿಸ್ಟರನ ಪರೀಕ್ಷೆಗೋಸ್ಕರ ಓದುತ್ತಾರೆ. ಇದರಿಂದ ನಿಜವಾಗಿ ಮಕ್ಕಳ ಮುಂದಿನ ಶಿಕ್ಷಣದ ಭವಿಷ್ಯಕ್ಕೆ ಬೇಕಾಗುವ ಮೂಲ ತತ್ವಗಳನ್ನು  ಕಲಿಯುವದರಲ್ಲಿ ಹಿಂದುಳಿದು ಬಿಡುತ್ತಾರೆ.         

ಇನ್ನೊ೦ದು ವಿಷಯವನ್ನು ಗಮನಿಸೋಣ CBSE ಶಾಲೆಗಳಲ್ಲಿ CCE (CONTINUOUS AND COMPREHENSIVE EVALUATION) ಪದ್ಧತಿ ಜಾರಿಯಲ್ಲಿದೆ. ಇದರಲ್ಲಿ ಯಾವುದೇ ವಿದ್ಯಾರ್ಥಿಯನ್ನು 9 ನೇ ತರಗತಿಯವರಗೆ ಫೇಲ್ ಆದರೂ ಪಾಸ್ ಮಾಡಲಾಗುತ್ತದೆ ಅಂದರೆ ಎತ್ತಿ ಹಾಕಲಾಗುತ್ತದೆ.  ಕೇವಲ 10ನೇ ತರಗತಿಯಲ್ಲಿ ಮಾತ್ರ ಫೇಲ್ ಆದರೆ  ಅದೇ ತರಗತಿಯಲ್ಲಿ ಮತ್ತೆ ಕಲಿಯಬೇಕಾಗುತ್ತದೆ. ಹಾಗದಲ್ಲಿ ಒಂದು ಮಗುವಿನ ಪ್ರತಿಭೆ ಹಾಗೂ ಸಾಮರ್ಥ್ಯ  ಮಗುವಿಗಾಗಲಿ ಅದರ ಹೆತ್ತವರಿಗಾಗಲೀ ಅರಿವಾಗೋವಷ್ಟರಲ್ಲಿ   ಸಮಯ ಮೀರಿ ಹೋಗಿರುತ್ತದೆ. ಈ ಪದ್ಧತಿ ಜಾರಿಯಲ್ಲಿ ಬಂದದ್ದು U.P.A.-1 ರ ಅವಧಿಯಲ್ಲಿ,ಇದಕ್ಕೆ ಕೊಟ್ಟ ಕಾರಣವೇನೆ೦ದರೆ  ಯಾವ ಮಕ್ಕಳಲ್ಲೂ ಶಿಕ್ಷಣದ ಬಗ್ಗೆ ಹೆದರಿಕೆ ಹುಟ್ಟಬಾರದು ಮತ್ತು ಎಲ್ಲ ಮಕ್ಕಳು 10ನೇ ತರಗತಿಯವರಗೆ ಹಾಯಾಗಿ ಯಾವುದೇ ಒತ್ತಡವಿಲ್ಲದೆ ಕಲಿಯಲಿಬೇಕು.  ಆದರೆ ಇದರಿಂದ ಆಗಿರೋದೇನು? ಯಾವದೇ ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯ ಸರಿಯಾದ ಸಮಯದಲ್ಲಿ ಶಿಕ್ಷಕರಿಗಾಗಲಿ ಅಥವಾ ಮಗುವಿನ ಪೋಷಕರಿಗಾಗಲಿ ಅರಿವಾಗುತ್ತಿಲ. ದೇವರು ಎಲ್ಲರಲ್ಲೂ ಒಂದಿಲ್ಲಾ ಒಂದು ರೀತಿಯ ಪ್ರತಿಭೆಯನ್ನು ಕರುಣಿಸಿರುತ್ತಾನೆ,ಅದನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಪೋಷಿಸೋದು ನಮ್ಮೆಲ್ಲರ ಕರ್ತವ್ಯ. ಒಂದು  ಮಗು ಗಣಿತದಲ್ಲಿ ಅಥವಾ ವಿಜ್ಞಾನದಲ್ಲಿ   ಹಿಂದಿರಬಹುದು ಆದರೆ ಆಟದಲ್ಲಿ ಅಥವಾ ಸಂಗೀತದಲ್ಲಿ ಅಥವಾ ಸಾಮಾನ್ಯ ಜ್ಞಾನದಲ್ಲಿ   ತುಂಬಾ ಚೆನ್ನಾಗಿರಬಹುದು. ಇನ್ನೂ ಕೆಲ ಮಕ್ಕಳು ಓದಿನ ವಿಷಯದಲ್ಲಿ ತುಂಬಾ ಹಿಂದಿರಬಹುದು ಆದರೆ ಆ ಮಕ್ಕಳ ಆಸಕ್ತಿಯನ್ನೂ ಅರಿತು ಆಯಾ ಕ್ಷೇತ್ರದಲ್ಲಿ ಆ ಮಕ್ಕಳನ್ನು ತೊಡಗಿಸಿ ಬೆಳಸಬೇಕು.

ಆದ್ದರಿಂದ ಈ C. C. E. ಪದ್ಧತಿ ಆದಷ್ಟು ಬೇಗ ತೊಲಗಬೇಕು. ಈ ಕುರಿತಾಗಿ  ನಾನು ಈಗಾಗಲೇ ಶಿಕ್ಷಣ ಮಂತ್ರಿ (ಎಚ್‌.ಆರ್‌.ಡಿ. ಮಿನಿಸ್ಟರ್) ಹಾಗೂ ಪ್ರಧಾನ ಮಂತ್ರಿಗಳ ವೆಬ್-ಸೈಟ್ ನಲ್ಲಿ ಹಾಗೂ ಫೆಸಬುಕ್ ಪೇಜ್ ನಲ್ಲಿ ಮಾಹಿತಿಯನ್ನು ಹಾಕಿ ಅವರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದೇನೆ.ನೀವೂ ಕೂಡ ಇದನ್ನು ಅನುಸರಿಸಬಹುದು.

ಇನ್ನೂ ಉನ್ನತ ಶಿಕ್ಷಣದ ಬಗ್ಗೆ ಸ್ವಲ್ಪ ಗಮನಿಸೋಣ.ಈಗ ನಮ್ಮ ರಾಜ್ಯದಲ್ಲಿ ಇಂಜಿನೀಯರಿಂಗ್ ಕಾಲೇಜಗಳ ಸಂಖೆ ನಾಯಿ ಕೊಡೆಗಳಂತೆ ಬೆಳದಿದೆ, ಮೂಲಭೂತ  ಸೌಕರ್ಯ ಹಾಗೂ ಗುಣಮಟ್ಟದ ಸೌಲಭ್ಯಗಳು  ಇಲ್ಲದೆ ಇದ್ದರೂ ಕೇವಲ ಹಣ ಮಾಡುವ ಯಂತ್ರಗಳಾಗಿ  ತಲೆ ಎತ್ತಿ ನಿಂತಿವೆ.ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ನಮಗೆ ಮೊದಲು ಗೋಚರಿಸೋದು 12th (PUC-II) ನಲ್ಲಿ PCM 45% ಮಾಡಿ CETಯಲ್ಲಿ 50000 ರೈ೦ಕಿಂಗ್  ಬಂದರೂ ಇಂಜಿನೀಯರಿಂಗ್ ಸೀಟು ಗ್ಯಾರಂಟಿ ಅನ್ನೋದು. ಈ ಪರಿಸ್ಥಿತಿ 1992ರ ನಂತರ ಕ್ರಮೇಣವಾಗಿ ಇಂಜಿನೀಯರಿಂಗ್ ಕಾಲೇಜುಗಳ   ಸಂಖ್ಯೆ ಬೆಳೆಯುತ್ತಾ  ಹೋದಂತೆ ನಿರ್ಮಾಣವಾಯಿತು.  ಇಂತಹ  ಪರಿಸ್ಥಿತಿಯಲ್ಲಿ PUCಯಲ್ಲಿ ಚೆನ್ನಾಗಿ ಪರ್ಸೆಂಟೇಜ್ ಮಾಡಿ  ಸ್ವ ಇಚ್ಚೆಯಿಂದ  BSc ತದನಂತರ MSc  ಮಾಡ ಬಯಸುವ ವಿದ್ಯಾರ್ಥಿಗಳು ತುಂಬಾ ವಿರಳ. ಹಾಗದಲ್ಲಿ ಯಾರಿಗೆ ಇಂಜಿನೀಯರಿಂಗ್ ಸೀಟು ಸಿಗುವದಿಲ್ಲವೋ ಅಂಥವರು ಮಾತ್ರ BSc ಆಯ್ದುಕೊಳ್ಳುತ್ತಾರೆ ಆಮೇಲೆ ಕೆಲವರು MSc ಮಾಡಿ ಉಪನ್ಯಾಸಕರಗುತ್ತಾರೆ. ಹಾಗದಲ್ಲಿ ನಮ್ಮ ಕಾಲೇಜಗಳಲ್ಲಿಯ ಉಪನ್ಯಾಸಕರ ಗುಣಮಟ್ಟ ಹೇಗಿರಬೇಡ?  ನೀವೇ ಊಹಿಸಬಹುದು!  ಮತ್ತು ಇಂಥ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಕಲಿತ ಇಂಜಿನೀಯರಗಳ   ಗುಣಮಟ್ಟ ಹೇಗಿರಬಹುದು?

ನಮ್ಮ ಕಾಲೇಜ್ ಗಳಲ್ಲಿಯ ಪ್ರಾಧ್ಯಾಪಕರ ಹಾಗು ವಿದ್ಯಾರ್ಥಿಗಳ  ಗುಣಮಟ್ಟ ಉನ್ನತಮಟ್ಟದಾಗಿರಬೇಕಾದರೆ,
  • ಇಂಜಿನೀಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು  PUC (12th) ಯಲ್ಲಿ PCM ಕನಿಷ್ಟ 70% ಅಂಕಗಳನ್ನು  ಪಡೆಯುವದು ಕಡ್ಡಾಯವಾಗಬೇಕು.
  • ಮೂಲಭೂತ ಸೌಕರ್ಯಗಳಿಲ್ಲದ ಇಂಜಿನೀಯರಿಂಗ್ ಕಾಲೇಜ್  ಹಾಗೂ PU ಕಾಲೇಜುಗಳನ್ನು ಮುಚ್ಚಬೇಕು.
  • ಯಾವುದೇ ಹೊಸ ಇಂಜಿನೀಯರಿಂಗ್ ಕಾಲೇಜ್ ತೆರೆಯಲು ಕನಿಷ್ಟಪಕ್ಷ 10 ವರ್ಷ ಪರವಾನಿಗೆ ಕೊಡಬಾರದು.
  • PUCಯಲ್ಲಿ (PCM) ಶೇಕಡಾ 80ಕಿಂತ ಹೆಚ್ಚು ಅಂಕ ಪಡೆದು BSc ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು.
  • ಕಾಲೇಜ್ ಪ್ರಾಧ್ಯಾಪಕರ ಭಾಷಾ ಜ್ಞಾನ (ಇಂಗ್ಲೀಷ್) ವ್ಯಾಕರಣ ಬದ್ಧವಾಗಿರಬೇಕು ಹಾಗೂ ಪರಿಣಿತರ  ಸಮಿತಿಯಿಂದ ಪ್ರಾಧ್ಯಾಪಕರ ಮೌಲ್ಯಮಾಪನ ನಡೆಯುವಂತಾಗಬೇಕು.ಕಾಲೇಜುಗಳಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಪಾರಂಪರಿಕ ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳುವಂತಾಗಬೇಕು. 
  • ತಜ್ಞರ ಒಂದು ಸಮಿತಿ ರಚಿಸಿ  (ಸರಕಾರಿ ಮತ್ತು ಖಾಸಗಿ) ಕಾಲೇಜುಗಳ   ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.

ಇವೆಲ್ಲ ನನ್ನ  ಅನಿಸಿಕೆ ಮತ್ತು ಆಶಯಗಳು,ಎಷ್ಟರ ಮಟ್ಟಿಗೆ ನಮ್ಮ ಸರಕಾರ ಅವುಗಳನ್ನು ಸಕಾರಗೊಳಿಸತ್ತೋ ಗೊತ್ತಿಲ್ಲ. ಆದರೂ ನನಗನಿಸಿದ್ದನ್ನು ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದೇನೆ ಅಷ್ಟೆ.