Thursday, 11 January 2018

ಹರಿಯ ಭಕ್ತರಿಗೆ ಹರಿ - ಹರನ ಭಕ್ತರಿಗೆ ಹರ ಖಿದ್ರಾಪುರ ಕೊಪೇಶ್ವರ- ಸಾಂಸ್ಕೃತಿಕ ಧರೋವರ

 

 “ದೇವರ ಅನಂತತೆಯು ನಿಗೂಢವಲ್ಲ, ಇದು ಕೇವಲ ಅಗಾಧವಾಗಿರುತ್ತದೆ; ರಹಸ್ಯವಾಗಿಲ್ಲ, ಆದರೆ ಅಗ್ರಾಹ್ಯವಲ್ಲ; ಇದು ಶುದ್ಧ ಅನಂತತೆ, ಶುದ್ಧ ಶೋಧಿಸಲಾಗದ ಸಮುದ್ರದ ಕತ್ತಲೆಯಾಗಿದೆ” - “ಮಾನವನ ಅನಂತ ಮುಖ ಭಾವನೆಗಳ ಪ್ರಬಲ ಪ್ರವಾಹವು ಕಲೆಯ ರೂಪದಲ್ಲಿ ಹೊರಬೀಳುವುದು ಇವು ವಿಕ್ಟೋರಿಯನ್ ಯುಗದ ಪ್ರಮುಖ ಇಂಗ್ಲಿಷ್ ಕಲಾ ವಿಮರ್ಶಕ, ಕಲಾ ಪೋಷಕ, , ಜಲವರ್ಣಕಾರ ಮತ್ತು ಸಾಮಾಜಿಕ ಚಿಂತಕ ಜಾನ್ ರಸ್ಕಿನ್ರ  ಪ್ರಸಿದ್ಧ ಮಾತುಗಳು.

ಜಾನ್ ರಾಸ್ಕಿನ್ರ  ಮಾತುಗಳನ್ನು ಅಕ್ಷರಶಃ ಪುಷ್ಟೀಕರಿಸುವ ಕಲಾಕೃತಿಗಳ,ದೇಗುಲಗಳ  ಹಾಗೂ ಭವ್ಯ ಸಂಸ್ಕೃತಿಯ ಬೀಡೇ ನಮ್ಮ ಭಾರತ. ನಮ್ಮ ದೇಶದ ಸಾ೦ಸ್ಕೃತಿಕ ಧರೋವರಗಳಾಗಿ ಪಡೆಯಬೇಕಾದ ಪ್ರಾಮುಖ್ಯತೆಯನ್ನು ಪಡೆಯದೇ  ಹೆಚ್ಚು ಬೆಳಕಿಗೆ ಬಾರದೇ ಇರುವ ಅನೇಕ  ಪುರಾತನ ದೇವಾಲಯಗಳ ಪೈಕಿ ಖಿದ್ರಾಪುರದ ‘ಕೊಪೇಶ್ವರ ದೇವಾಲಯ’ವೂ ಒಂದು. ಚಿಕ್ಕೋಡಿಯಿಂದ ೩೫ಕಿ.ಮೀ ಹಾಗೂ ಕೊಲ್ಹಾಪುರದಿಂದ ೭೫ಕಿ.ಮೀ ದೂರದಲ್ಲಿರುವ ಕರ್ನಾಟಕ  ಮಹಾರಾಷ್ಟ್ರ ಗಡಿ ಭಾಗದ ಗ್ರಾಮ ಖಿದ್ರಾಪುರ. ಖಿದ್ರಾಪುರದ ಕೃಷ್ಣಾ ತೀರದಲ್ಲಿ ಬಾದಾಮಿಯ ಚಾಲುಕ್ಯರಿಂದ ೭ನೇ ಶತಮಾನದಲ್ಲಿ ನಿರ್ಮಿತವಾದ ಭವ್ಯ ಕಲಾತ್ಮಕ ಮತ್ತು ಅನನ್ಯ ಮಂದಿರ ಈ ಕೊಪೇಶ್ವರ ದೇವಾಲಯ’.

ಈ ದೇವಲಯಕ್ಕೊಂದು ಪೌರಾಣಿಕ ಹಿನ್ನಲೆ ಉಂಟು. ದಕ್ಷ ರಾಜನ ಮಗಳಾದ ಸತಿ ಭಗವಾನ್ ಶಿವನನ್ನು ವರಿಸುತ್ತಾಳೆ. ಈ ಸತಿಯ ತಂದೆ ದಕ್ಷ ರಾಜನಿಗೆ ಶಿವನನ್ನು ಕಂಡರೆ ಆಗಿ ಬರುತ್ತಿರಲಿಲ್ಲ. ಒಮ್ಮೆ ದಕ್ಷ ತನ್ನ ಆಸ್ಥಾನದಲ್ಲಿ ಯಜ್ಞವೊಂದನ್ನು ಏರ್ಪಡಿಸಿ ಉದ್ದೇಶಪೂರ್ವಕವಾಗಿಯೇ ಶಿವ ಮತ್ತು ಸತಿಯರನ್ನು ಅವ್ಹಾನಿಸಲಿಲ್ಲ. ತವರಿನ ಮಮತೆಯಿಂದ ಕರೆಯದಿದ್ದರೂ ದಕ್ಷನ ಯಜ್ಞಕ್ಕೆ ಸತಿಯು ನಂದಿಯ ಮೇಲೆ ಕುಳಿತು ತವರಿಗೆ ಆಗಮಿಸುತ್ತಾಳೆ. ಆದರೆ ದಕ್ಷ ಸತಿಯ ಮುಂದೆ ಪತಿಯಾದ ಶಿವನನ್ನು ನಿಂದಿಸಿ ಹೀಯಾಳಿಸುತ್ತಾನೆ, ಅವಮಾನ ತಾಳಾರದೆ ಸತಿ ಯಜ್ಞ ಕುಂಡಕ್ಕೆ ಹಾರಿ ಆಹುತಿಯಾಗಿ ಬಿಡುತ್ತಾಳೆ.
ಕೋಪೋದ್ರಿಕ್ತನಾದ ಶಿವ ಅಲ್ಲಿಗೆ ಆಗಮಿಸಿ  ದಕ್ಷನ  ಶಿರಚ್ಚೆಧಿಸುತ್ತಾನೆ. ಅಲ್ಲಿರುವ ಇತರ ದೇವತೆಗಳು ಶಿವನ ಸಿಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈ ಸ್ಥಳಕ್ಕೆ ಕರೆತರಲಾಗಿ, ಕೃಷ್ಣೆಯ ಒಡಲಲ್ಲಿ  ತನ್ನ ಜಟವನ್ನು (ಕೂದಲು) ಭೂಮಾತೆಯ ಮೇಲೆ ಅಪ್ಪಳಿಸಿ  ಶಿವ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾನೆ. ಅದಕ್ಕಾಗಿಯೇ                                                                                                                                                                                                                                                                                                                                                                                                                                                                                                                   ಈ ದೇವಾಲಯದ ಹೆಸರು ಕೊಪೇಶ್ವರ ದೇವಾಲಯ’. ಶಿವನನ್ನು ಶಾಂತಗೊಳಿಸಿದ ವಿಷ್ಣುವಿನ ವಿಗ್ರಹವನ್ನುಧೋಪೆಶ್ವರ ಎಂದು ಕರೆದು  ಲಿಂಗದ ರೂಪದಲ್ಲಿ ಇಲ್ಲಿ ಸ್ಥಾಪಿಸಲಾಗಿದೆ.   ಕೊಪೇಶ್ವರ ದೇವಾಲಯದಲ್ಲಿ ಲಿಂಗರೂಪದಲ್ಲಿ ವಿಷ್ಣುವಿನ ಇರುವಿಕೆಯ ಕುರಿತು ಇನ್ನೊಂದು ಸ್ವಾರಸ್ಯಕರ ಕಥೆಯಿದೆ. ಕೇವಲ ಶಿವ ಸಂಸ್ಥಾನಗಳಾದ ಕೊಪೇಶ್ವರ ಮತ್ತು ಸುತ್ತಲಿನ ಇನ್ನೆರಡು ಶಿವ ಲಿಂಗಗಳ ದರ್ಶನ ಪಡೆದ ಭಕ್ತರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆಂದು ಶಿವನ ವರವಿತ್ತಂತೆ. ಇದರಿಂದ ಸ್ವರ್ಗಕ್ಕೆ ಬರುವರ ಸಂಖ್ಯೆ ಹೆಚ್ಚಾಗಿ ದೇವತೆಗಳನ್ನು ಚಿಂತೆಗೀಡು ಮಾಡಿತ್ತಂತೆ, ಆಗ ದೇವತೆಗಳೆಲ್ಲ ಸೇರಿ ವಿಷ್ಣುವಿನ ಮೊರೆಹೊಕ್ಕು ಶಿವನ ವರದಿಂದ ಉದ್ಭವಿಸಿದ ಸಮಸ್ಯೆಯ ಕುರಿತು ಮನವರಿಕೆ ಮಾಡಿಕೊಟ್ಟರಂತೆ. ಆಗ ವಿಷ್ಣುವು  ಕೊಪೆಶ್ವರ ದೇವಾಲಯಕ್ಕೆ  ಆಗಮಿಸಿ ಧೋಪೆಶ್ವರನಾಗಿ ಲಿಂಗರೂಪದಲ್ಲಿ ಶಿವನ ಪಕ್ಕದಲ್ಲಿ ವಿರಾಜಮಾನನಾಗಿ, ವ್ಯಾವರ್ತವಾಗಿ (exclusively) ಶಿವ ಸಂಸ್ಥಾನವಾಗಿದ್ದ  ಕೊಪೆಶ್ವರ ದೇವಾಲಯವನ್ನು  ವಿಷ್ಣುಸಹಿತವಾದ ಶಿವಾಲಯವಾಗಿಸುತ್ತಾನೆ. ಇದರಿಂದ ಸ್ವರ್ಗಕ್ಕೆ ಬರುವವರ ಸಂಖ್ಯೆ ಕಡಿಮಿಯಾಯಿತಂತೆ!! ಈ ದೇವಸ್ಥಾನದ ಇನ್ನೊಂದು ವಿಶಿಷ್ಟತೆಯೆಂದರೆ  ಇಲ್ಲಿ ಶಿವನ ವಾಹನವಾದ ನ೦ದಿಯ ವಿಗ್ರಹವಿಲ್ಲ! ಬಹುಶಃ ನಂದಿಯಿಲ್ಲದ ಶಿವಾಲಯವನ್ನು ನಾವೆಲ್ಲೂ ನೋಡಿರಲಿಕ್ಕಿಲ್ಲ.


ಕೊಪೇಶ್ವರ ದೇವಾಲಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.ಇವುಗಳು ಹಜಾರದ  (ಮುಖಮಂಟಪ) ಮೂಲಕ ಅಂತರ್ಸಂಪರ್ಕಿಸಲ್ಪಟ್ಟಿವೆ. ನಾವು ಪ್ರವೇಶಿಸುವ ದೇವಾಲಯದ ಮೊದಲ ವಿನ್ಯಾಸವೇ ಸ್ವರ್ಗ ಮಂಟಪ, ಅದ್ಭುತ ಕೆತ್ತನೆಯುಳ್ಳ  ಕಂಬಗಳಿಂದ ಅಲಂಕೃತ, ವರ್ತುಳಾಕರದಲ್ಲಿ ನಿರ್ಮಿಸಲ್ಪಟ್ಟ  ಆಕಾಶಕ್ಕೆ ತೆರೆದುಕೊಂಡಿರುವ ಮೇಲ್ಛಾವಣಿಯುಳ್ಳ ದೇವಸ್ಥಾನದ ಮುಂಭಾಗದ ಪ್ರಾಂಗಣವೇ ಸ್ವರ್ಗಮಂಟಪ. ವರ್ತುಲಾಕಾರದ ತೆರೆದ ಮೇಲ್ಛಾವಣಿ  ಪೂರ್ಣಿಮೆಯ ಚಂದ್ರನ ಬಿಂಬದಂತೆ ಗೋಚರಿಸುತ್ತದೆ.ಇಲ್ಲಿ ರಾಜ ತನ್ನ ಮಂತ್ರಿಗಳೊಡನೆ ಹಾಗೂ ಆಸ್ಥಾನ ಪಂಡಿತರೊಡನೆ ಕುಳಿತು ಚರ್ಚಿಸುತ್ತಿದ್ದನಂತೆ.  ಸ್ವರ್ಗ ಮಂಟಪದ ವಾಸ್ತುಶಿಲ್ಪ ವಿಶಿಷ್ಟವಾಗಿದೆ. ಪ್ರತಿಯೊಂದು ಸ್ತಂಭವನ್ನು ಚದರ, ಷಟ್ಕೋನ ಮತ್ತು ಆಕ್ಟಾಗನ್  ಹೀಗೆ ವಿವಿಧ ಆಕಾರಗಳಲ್ಲಿ ಕೆತ್ತಲಾಗಿದೆ. ಶಂಕುವಿನಾಕಾರದ ಗರ್ಭಗುಡಿಯು ವಿಶಿಷ್ಟವಾಗಿದೆ, ಕೋಪೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ವಿಷ್ಣು (ಧೋಪೆಶ್ವರ) ಹಾಗೂ ಕೋಪೇಶ್ವರ (ಶಿವ) ಲಿಂಗಗಳಿವೆ. ಗರ್ಭಗುಡಿಯ  ದ್ವಾರದಲ್ಲಿ ಜಯವಿಜಯರ ಸುಂದರ ವಿಗ್ರಹಗಳನ್ನು ಕೆತ್ತಲಾಗಿದೆ. ದೇವಾಲಯದ ಹೊರಮೈಯಲ್ಲಿ ಆನೆಗಳ ಮೇಲೆ ಆಭೂಷಣ ಹಾಗೂ ಆಯುಧಗಳಿಂದ  ವಿಜೃಂಭಿಸುವ ಅನೇಕ ದೇವತೆಗಳ ವಿಗ್ರಹಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಸುಮಾರು ೯೨ ಆನೆಗಳ ವಿಗ್ರಹಗಳನ್ನು ದೇವಸ್ಥಾನದ ಹೊರಮೈಯಲ್ಲಿ ಕೆತ್ತಲಾಗಿದೆ.
ಕೆಳಭಾಗದಲ್ಲಿ ಕೆತ್ತಲ್ಪಟ್ಟಿರುವ ಆನೆಗಳು ದೇವಸ್ಥಾನದ ಭಾರ ಹೊತ್ತಿವೆಯೇನೋ ಎಂದು ಭಾಸವಾಗುತ್ತದೆ!! ಮಾನವನ ವಿವಿಧ ಭಾವಭಂಗಿಗಳನ್ನು ಶಿಲ್ಪಿಗಳು ತಮ್ಮ ಕಲಾಕೃತಿಯಲ್ಲಿ ಸೆರೆಹಿಡಿದು ಜೀವತುಂಬಿದ ಕೆತ್ತನೆಗಳು ಅದ್ಭುತವಾಗಿವೆ. ಬೇಲೂರು ಹಳೆಬೀಡಿನಂತೆ ಇಲ್ಲಿಯೂ ದರ್ಪಣ ಸುಂದರಿಯನ್ನು, ರಾಮಾಯಣ ಮಹಾಭಾರತದ ವಿವಿಧ ಪ್ರಸಂಗಗಳನ್ನು ಶಿಲ್ಪಕಾರರು ದೇವಾಲಯದ ಸುತ್ತಲೂ ತಮ್ಮ ಕೆತ್ತನೆಗಳಲ್ಲಿ ಬಳಸಿಕೊಂಡಿದ್ದಾರೆ.  ಶಿವನ ಪರಮ ಭಕ್ತನಾದ ಕೀರ್ತಿಸುರ ಎಂಬ್ಬೊಬ್ಬ ರಾಕ್ಷಸನಿಗೆ ಅನಂತ ಹಸಿವಿನ ವರವಿತ್ತ೦ತೆ! ಎಷ್ಟು ತಿಂದರೂ ಮತ್ತಷ್ಟು ಬಕ್ಕರಿಸುವ ಬಕಾಸುರತೆಯಿಂದ ಕೊನೆಗೆ ತನ್ನ ದೇಹವನ್ನೇ ತಿಂದನ೦ತೆ, ಆಗ ಉಳಿದದ್ದು ಕೀರ್ತಿಮುಖವೆಂದು ಕರೆಯಲ್ಪಡುವ ಕೇವಲ ಆತನ ಮುಖ ಮಾತ್ರ. ಶಿವ ತನ್ನ ದೇವಸ್ಥಾನಗಳಲ್ಲಿ ಕೀರ್ತಿಸುರನಿಗೆ ಸ್ಥಾನ ಕಲ್ಪಿಸಿದನಂತೆ. ಈ ಕೀರ್ತಿಸುರನ ಕೀರ್ತಿಮುಖವನ್ನು ಅತ್ಯಂತ ಚಾಕಚಕ್ಯತೆಯಿಂದ ಕೋಪೇಶ್ವರ ದೇವಾಲಯದ ಕೆತ್ತನೆಗಳಲ್ಲಿ ಬಿಂಬಿಸಲಾಗಿದೆ. ಚಾಲುಕ್ಯರಿಂದ ನಿರ್ಮಿತವಾದ ಈ ದೇವಾಲಯದ ಅನೇಕ ವಿಗ್ರಹಗಳು ಪರಕೀಯರ ದಾಳಿಯಿಂದಾಗಿ ಭಗ್ನವಾಗಿವೆ. ೧೨ನೇ ಶತಮಾನದಲ್ಲಿ ಶಿಲಾಹಾರ ಮತ್ತು ಯಾದವ ಮನೆತನದ ರಾಜರು ಈ ದೇವಾಲಯವನ್ನು ನವೀಕರಣಗೊಳಿಸಿದರೆಂದು ನಂಬಲಾಗಿದೆ. ಅದ್ಭುತ ಶಿಲ್ಪ ಕಲಾಕೃತಿಗಳನ್ನೊಳಗೊಂಡ ಕರ್ನಾಟಕದ ಚಾಲುಕ್ಯರಿಂದ ನಿರ್ಮಿತವಾದ ಮಹಾರಾಷ್ಟ್ರದ ಉತ್ಕೃಷ್ಟ ವಾಸ್ತುಶಿಲ್ಪಗಳಲ್ಲೋ೦ದಾದ  ಖಿದ್ರಾಪುರದ ಕೋಪೇಶ್ವರ ದೇವಾಲಯ ಒಮ್ಮೆ ನೋಡಲೇಬೇಕಾದ ಸ್ಥಳ.              

Wednesday, 10 January 2018

ಜೀವನೋತ್ಸಾಹಕ್ಕೆ ಮೂರು ಸೂತ್ರಗಳು ಈಟ್-ಪ್ರೇ ಐಂಡ್ ಲವ್


ಸುಪ್ರಸಿದ್ಧ ಲೇಖಕಿ ಎಲಿಜೆಬೆತ್ ಗಿಲ್ಬರ್ಟ್ರ ೨೦೦೬ರಲ್ಲಿ ಬಿಡುಗಡೆಯಾದ “ಈಟ್-ಪ್ರೇ-ಲವ್” ಪುಸ್ತಕ ಅತ್ಯಂತ ಜನಪ್ರಿಯವಾಗಿತ್ತು. ಜೀವನದಲ್ಲಿ ಪತಿಯಿಂದ ವಿಚ್ಛೇಧಿತಳಾಗಿ,ನಿರಾಶಳಾಗಿ,ಹತಾಶಳಾಗಿ ತನ್ನ ಜೀವನದಲ್ಲಿ ಕಳೆದುಹೋದ ಖುಷಿಯನ್ನು ಮರಳಿ ಪಡೆಯಲು ವಿಶ್ವ ಪರ್ಯಟನ ಮಾಡ ಹೊರಟ ಎಲಿಜೆಬೆತ್ ಎಂಬ ಮಹಿಳೆಯೋರ್ವಳ ಕಾಲ್ಪನಿಕ ಕಥೆ ಇದು. ಎಲಿಜೆಬೆತ್ ಮೊಟ್ಟಮೊದಲು ಇಟಲಿಯತ್ತ ಪ್ರಯಾಣ ಬೆಳೆಸಿ ನಾಲ್ಕು ತಿಂಗಳುಗಳಕಾಲ ಮೃಷ್ಟಾನ್ನ ಭೋಜನದ ರುಚಿಯನ್ನು ಸವಿಯುತ್ತಾಳೆ, ಅದಕ್ಕೆ ಪುಸ್ತಕದ ಈ ಭಾಗದ ಹೆಸರು ಈಟ್’. ಎಲಿಜೆಬೆತ್ ತನ್ನ ಪ್ರವಾಸವನ್ನು ಮುಂದುವರೆಸಿ ಭಾರತಕ್ಕೆ ಬಂದಿಳಿದು, ಮೂರು ತಿಂಗಳುಗಳ ಕಾಲ ಜೀವನದ ಆಧ್ಯಾತ್ಮಿಕ ಮಗ್ಗಲುನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾಳೆ, ಅದಕ್ಕೆ ಪುಸ್ತಕದ ಈ ಭಾಗದ ಹೆಸರು ಪ್ರೇ’. ಅಂತಿಮವಾಗಿ ಪ್ರೀತಿಯನ್ನು ಅರಿಸಿ ಎಲಿಜೆಬೆತ್ ಇಂಡೋನೆಶೀಯದ ಬಾಲಿಗೆ ತಲುಪಿ ಪ್ರೀತಿ ಪ್ರೇಮದ ಹಲವು ಆಯಾಮಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ, ಅದಕ್ಕೆ ಪುಸ್ತಕದ ಈ ಭಾಗದ ಹೆಸರು ಲವ್’.



ನಮ್ಮ ಕಥಾನಾಯಕಿಯರ ಬದುಕಿನಲ್ಲಿ ಈಟ್’, ಪ್ರೇ ಮತ್ತು ಲವ್ಗಳ ಅಂಶ ತುಂಬಾ ಗಣನೀಯವಾಗಿದೆ ಅದಕ್ಕೆ ಈ ಪುಸ್ತಕದ ಉಲ್ಲೇಖ. ನಮ್ಮ ದೇಶಕ್ಕೆ ಸಂಬಧಿಸಿದ  ಈ ಮೂವರು ನಾಯಕಿಯರ ವಯಸ್ಸು ೯೭,೯೮ ಮತ್ತು ೧೦೬, ಈ ಮೂವರು ಮಹಿಳೆಯರ ಜೀವನ  ಬರೀ ವೃದ್ಧರಿಗಷ್ಟೇ ಅಲ್ಲ ದೇಶದ ಯುವಕರಿಗೂ ಬದುಕಿನ ಪಾಠವಾಗಬಲ್ಲದು. ಈಟ್-ಪ್ರೇ-ಲವ್ ಪುಸ್ತಕದ೦ತೆ ಮೊದಲಿಗೆ ಈಟ್ಕುರಿತು, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪುಟ್ಟ ಗ್ರಾಮ ಗುಡ್ಡಿವಾಡಾದ ನಿವಾಸಿ ೧೦೬ ವರ್ಷದ ಮಸ್ತಾನಮ್ಮಾ ಜಗತ್ತಿನ ಅತ್ಯಂತ ವೃದ್ಧ ಯೂಟ್ಯೂಬರ್ ಆಗಿದ್ದರೆ. ಯೂಟ್ಯೂಬ್ನಲ್ಲಿಯೇ ಜನರಿಗೆ ಹೊಸ ರುಚಿಯ ತಿಂಡಿ ತಿನಿಸುಗಳ ಕುರಿತು  ಅಡುಗೆ ಅರಮನೆಯ ದರ್ಶನ ಮಾಡಿಸುತ್ತಾರೆ. ಯೂಟ್ಯೂಬ್ನಲ್ಲಿ ಮಸ್ತಾನಮ್ಮಾರ ಹಿಂಬಾಲಕರ ಸಂಖ್ಯೆ ಎಂಟು ಲಕ್ಷಕ್ಕೂ ಅಧಿಕ!! ಇದರಿಂದ ಅವರ ಅಡುಗೆಯ ಸವಿಯನ್ನು ಅಂದಾಜಿಸಬಹುದು. ಮಸ್ತಾನಮ್ಮಾರ ಪ್ರಶಂಸಕರು ಕೇವಲ ಭಾರತದಲ್ಲಿಯೇ ಅಲ್ಲ ವಿದೇಶಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಇವರ ಯೂಟ್ಯೂಬ್ ಚಾನಲ್ನ ಹೆಸರು ಕಂಟ್ರಿ ಫುಡ್ಸ್’, ಇದರ ನಿರ್ವಹಣೆಯನ್ನು ಮಸ್ತಾನಮ್ಮರ ಮೊಮ್ಮಗ ಮಾಡುತ್ತಾರೆ. ಕಳೆದ ವರ್ಷ ಮಸ್ತನಮ್ಮಾರ ಮೊದಲ ಸವಿರುಚಿಯ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಕಾಲಕ್ರಮೇಣವಾಗಿ ಇವರ ರಿಸೆಪಿಗಳ ಜನಪ್ರೀಯತೆ ಹೆಚ್ಚಿ ಇವರು ಒಬ್ಬ ಇಂಟರ್ನೆಟ್ ಸೂಪರ್ ಸ್ಟಾರ್ ಆಗಿ ಎಲ್ಲರ ಅಡುಗೆಮನೆ ಮಾತಾದರು. ಮಸ್ತಾನಮ್ಮಾರ ವಿಶೇಷ ಭಕ್ಷ್ಯಗಳಲ್ಲಿ  ಪಾರಂಪರಿಕ ಚಿಕನ್ ಕರಿ,ಬೆಂಡೆಕಾಯಿಯ ಫ್ರೈ, ವಾಟರ್ ಮೆಲನ್ ಎಗ್ಗ ಬುರ್ಜಿ,ಎಗ್ ದೋಸೆ, ತರಬೂಜ್ ಚಿಕನ್ ಹಾಗೂ ಬೀಟ್ರೂಟ್ನ ಭಾಜಿ ಪ್ರಮುಖವಾದವು. ಮಸ್ತಾನಮ್ಮಾರನ್ನು ನೋಡಿ ವಯಸ್ಸು ಕೇವಲ ಒಂದು ಸಂಖ್ಯೆ ಅಥವಾ ಅಂಕ ಎಂಬುದು ಮತ್ತಷ್ಟು ಧೃಡವಾಗುತ್ತದೆ. ಪ್ರತಿ ವ್ಯಕ್ತಿಯಲ್ಲಿಯೂ ಏನನ್ನಾದರೂ ಸಾಧಿಸಬೇಕೆಂಬ ಛಲವಿದ್ದಲ್ಲಿ ವಯಸ್ಸು ಎಂದಿಗೂ ಅಡ್ಡಬರಲಾರದೆಂಬುದಕ್ಕೆ ಜೀವಂತ ಉದಾಹರಣೆ ಮಸ್ತಾನಮ್ಮಾ. ವಯಸ್ಸಾಗಿದೆ ಎಂಬ ನೆಪದಲ್ಲಿ ಕೊರಗಿ ಕೈ ಚಲ್ಲಿ ಕುಳಿತುಕೊಳ್ಳುವರೆಲ್ಲರೂ  ಮಸ್ತಾನಮ್ಮಾರಿಂದ   ಜೀವನೋತ್ಸಾಹದ ಪಾಠ ಕಲಿಯಬಹುದು.

ಮಸ್ತಾನಮ್ಮಾರ೦ತೆಯೇ ಬದುಕಿನಲ್ಲಿ ಭಗವಂತನನ್ನು ಕಾಣುವ ೯೭ರ ಇಳಿಪ್ರಾಯದಲ್ಲಿ ಯುವಕ ಯುವತಿಯರನ್ನು
ಮೀರಿಸುವ ಯೋಗಗುರು-ಯೋಗಮಾತೆ   ನನ್ನಾಮಲ್! ಯಾವ ವಯಸ್ಸಿನಲ್ಲಿ   ಬಹುತೇಕ ಜನ ನಡೆದಾಡಲೂ ಪ್ರಯಾಸ ಪಡುವರೋ ಅಂತಹ ಮುಪ್ಪಿನ ಪ್ರಾಯದಲ್ಲಿ ಯೋಗದ ಪಾಠಮಾಡುವ ದೇಶದ ಅತ್ಯಂತ ಹಿರಿಯ ಯೋಗ ಶಿಕ್ಷಕಿ ನನ್ನಾಮಲ್. ಯೋಗದ ಕಠಿಣ ಆಸನಗಳನ್ನು ಕೂಡ ಸರಳವಾಗಿ ಮಾಡುವ ನನ್ನಾಮಲ್ ತಮ್ಮ  ಆರೋಗ್ಯದ ಗುಟ್ಟೇ ಯೋಗವೆನ್ನುತ್ತಾರೆ. ಆಧುನಿಕ ಜೀವನ ಶೈಲಿಯ ಕೊಡುಗೆಯಿಂದ ೩೦-೩೫ರ ಹರೆಯದಲ್ಲೇ ವೃದ್ಧಾಪ್ಯದ ಹೊಸ್ತಿಲಲ್ಲಿ ಕಾಲಿಟ್ಟು ಅವಧಿಗೆ ಮುನ್ನವೇ ಮುಪ್ಪಿನ ಭಾಗ್ಯ ಪಡೆದುಕೊ೦ಡು, ಕುಂದಿದ ಜೀವನೋತ್ಸಾಹದ ಫಲವಾಗಿ, ಪ್ರೇಮದಿಂದ ಬದುಕುವದನ್ನು ಮರೆತು, ಜೀವನ ಒಂದು ಹೊರೆ ಎಂಬಂತೆ ಕಾಲ ಕಳೆಯುವ ಇಂದಿನ ಪೀಳಿಗೆಗೆ   ಎಂದಿಗೂ ವೈದ್ಯರ ಕಾಣದ ನನ್ನಾಮಲ್ ಸ್ಪೂರ್ತಿಯಲ್ಲವೇ? 


ಜೀವನದಲ್ಲಿ ಜಿಗುಪ್ಸೆಹೊಂದಿ  ನಿರುತ್ಸಾಹದಿಂದ ಬದುಕುವ ನಿರಾಶವಾದಿಗಳಿಗೆ ಹುರುಪು ತುಂಬಿ ಮಾದರಿಯಾಗಬಲ್ಲ ಬದುಕು ೯೮ ವರ್ಷದ ತಾವೊ ಪೊರ್ಚೋನ್ ಲಿಂಚ್ರದು. ಗಿನ್ನೀಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಯಂತೆ ತಾವೊ ಪೊರ್ಚೋನ್ ಲಿಂಚ್  ವಿಶ್ವದ ಅತ್ಯಂತ ಹಿರಿಯ ಯೋಗ ತರಬೇತುದಾರರಾಗಿದ್ದಾರೆ. ಗಿನ್ನೀಸ್ ವರ್ಲ್ಡ್ ರೆಕಾರ್ಡ್ಸ್ ಈ ಪ್ರಶಸ್ತಿಯನ್ನು ೨೦೧೨ರಲ್ಲಿ ಇವರಿಗೆ ನೀಡಿತ್ತು, ಆಗ ತಾವೊ ಪೊರ್ಚೋನ್ ಲಿಂಚ್ರ  ವಯಸ್ಸು ೯೩ ಆಗಿತ್ತು. ತಾವೊ ಪೊರ್ಚೋನ್ ಲಿಂಚ್ರ ಭಾರತದೊಂದಿಗಿನ ನಂಟು ಇಂದು ನಿನ್ನೆಯದಲ್ಲ, ಅವರ ತಾಯಿ  ಭಾರತಿಯರಾಗಿದ್ದರು ತಂದೆ ಫ್ರಾನ್ಸ್ನ ನಾಗರಿಕರಾಗಿದ್ದರು. ಚಿಕ್ಕವರಿದ್ದಾಗ ಸಮುದ್ರ ತಟದಲ್ಲಿ ಯೋಗ ಮಾಡುವ ಕೆಲ ಜನರನ್ನು ನೋಡಿ ಯೋಗದ ಕುರಿತು ಆಸಕ್ತಿ ಮತ್ತು ಒಲವು ತಾವೊರಿಗೆ ಹುಟ್ಟಿತು. ತಾವೊ ಭಾರತದಲ್ಲಿದ್ದಾಗ ಮಹಾತ್ಮ ಗಾಂಧೀಜಿಯೊಂದಿಗೆ ಎರಡು ಮಾರ್ಚ(ನಡಿಗೆ)ಗಳಲ್ಲಿ ಭಾಗವಹಿಸಿದ್ದರಂತೆ! ತಾವೊ ೯೮ರ ಹರೆಯದಲ್ಲಿ ಕೇವಲ ಯೋಗ ಶಿಕ್ಷಕಿಯಷ್ಟೆಯಾಗಿರದೇ ಒಬ್ಬ ಅದ್ಭುತ ನೃತ್ಯಗಾತಿ ಕೂಡ ಹೌದು! ಅವರು ಅಮೆರಿಕಾದ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ಪ್ರೇಕ್ಷಕರ ಕಣ್ಮಣಿಯಗಿದ್ದರು.ತಾವೊಗೆ ವೈನ್ ಎಂದರೆ ತುಂಬ ಇಷ್ಟ! ತಾವೊ ನೀರಿನ ಬದಲು ಕೇವಲ ವೈನ್ ಮತ್ತು ಚಹಾ ಕುಡಿಯುವರಂತಲೂ ಹಲವರು ಹೇಳುವದುಂಟು. ತಾವೊ ಇಂದಿಗೂ ವಾರದಲ್ಲಿ ೬ ರಿಂದ ೮ ಬಾರಿ ಯೋಗ ತರಗತಿಗಳಲ್ಲಿ ತರಬೇತಿ ನೀಡುತ್ತಾರೆ. ತಾವೊರ ಪ್ರಶ೦ಸಕರ ಪಟ್ಟಿಯಲ್ಲಿ  ಹಾಲಿವುಡ್ನ ಅನೇಕ ತಾರೆಯರಿದ್ದಾರೆ. ತಮ್ಮ ಕೊನೆಯುಸಿರಿರುವರೆಗೂ  ಯೋಗ ಮತ್ತು ನೃತ್ಯದಲ್ಲಿ ನಿರತರಾಗಿ ಜನರಿಗೂ ಕಲಿಸುತ್ತಾ ಕಾಲ ಕಳೆಯುವದೇ ತಮ್ಮ  ಧ್ಯೇಯವೆನ್ನುತ್ತಾರೆ ತಾವೊ.

೧೦೬ ವರ್ಷದ ಮಸ್ತಾನಮ್ಮಾ, ೯೭ರ ಪ್ರಾಯದ ನನ್ನಾಮಲ್ ಹಾಗೂ ೯೮ರ ಹರೆಯದ ತಾವೊ ಪೊರ್ಚೋನ್ ಲಿಂಚ್ರ ಕಥೆಗಳು ಕೇವಲ ವೃದ್ಧರ ಜೀವನ ಬದಲಿಸುವದಷ್ಟೆ ಅಲ್ಲದೆ, ಚಿಕ್ಕ ಪುಟ್ಟ ಅಸಫಲತೆಗಳಿಂದ ಜೀವನದಲ್ಲಿ ಸೋತು ನೊಂದು, ಬೆಂದು, ಎದೆಗುಂದಿ, ಕೈ ಚಲ್ಲಿ ಆಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವ  ಇಂದಿನ ಯುವ ಪೀಳಿಗೆಗೂ ಪ್ರೇರಣೆಯಾಗಲಿವೆ. ಈ ಮೂವರು ಮಹಿಳೆಯರ ಜೀವನದ ಅತ್ಯಂತ  ಕುತೂಹಲಕಾರಿ ಸಂಗತಿ ಅವರ ವಯಸ್ಸು, ಒಂದು ಕ್ಷಣ ನಾವು ಇವರ ವಯಸ್ಸನ್ನು ಮರೆತು ನಾವು ಇವರಂತೆ ಬದುಕಬಲ್ಲೆವಾ? ಎಂದು ನಮ್ಮನ್ನು ನಾವೆ ಪ್ರಶ್ನಿಸಿಕೊಂಡರೆ ನಮ್ಮ ಜೀವನದಲ್ಲಿ ಅಡುಗಿದ ಸತ್ಯದ ದರ್ಶನವಾಗುತ್ತದೆ. ಈ  ತೇಜಸ್ವಿ ಮಹಿಳೆಯರ ಆಹಾರ, ಯೋಗ ಮತ್ತು ಪ್ರೀತಿಯೇ ಮನೆ ಮಂದಿಗೆಲ್ಲ ಆದರ್ಶವಾಗಬೇಕು. ನಿರಾಸೆ ಮತ್ತು ಉದಾಸೀನತೆಯನ್ನು ಬದಿಗಿರಿಸಿ ಉತ್ಸಾಹ ಮತ್ತು ಉಲ್ಲಾಸದಿಂದ ಬದುಕಿದರೆ ಪ್ರತಿ ಮನೆಯೂ ದೇವಾಲಯವಾದಂತೆ. ಜೀವನದ ಎಲ್ಲ ಚಿಂತೆಗಳನ್ನು ರುಚಿಯ ಸವಿಯಲ್ಲಿ ತೂರಿ, ಯೋಗ ಮತ್ತು ಪ್ರಾರ್ಥನೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು, ನೃತ್ಯ ಮತ್ತು ಪ್ರೇಮದ ಏಣಿಯ ಮೆಟ್ಟಿಲಿನ ಮೇಲೆ ಕಾಲಿಟ್ಟು ಜೀವನದ ಉತ್ತುಂಗಕ್ಕೇರಿ  ಸಾರ್ಥಕ ಬದುಕು ನಡೆಸುವ ಈ ಮಹಿಳೆಯರ ಬಾಳು ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದೆಯಲ್ಲವೇ.....?