ಈ ಜಗತ್ತಿನಲ್ಲಿ ಹಿಡಕಲ್ ಡ್ಯಾಮ್
ಒಂದು ನಂದನವನ, ಅದರಲ್ಲೂ ನಮ್ಮ ಎಚ್.ಡಿ.ಪಿ
ಹೈಸ್ಕೂಲ್ ಹಿಡಕಲ್ ಡ್ಯಾಮಗೆ ಮುಕುಟವಿದ್ದ೦ತೆ. ನಮ್ಮ ಈ ಶಾಲೆ ಕೇವಲ ಶಾಲೆಯಾಗಿರದೇ
ಜ್ಞಾನ ದೇಗುಲವಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪೋಷಿಶಿಸಿ ಅವನ ವ್ಯಕ್ತಿತ್ವವನ್ನು
ವಿಕಸನಗೊಳಿಸಿ ಒಬ್ಬ ಸತ್ಪ್ರಜೆಯನ್ನಾಗಿ ನಿರ್ಮಿಸುವ
ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ನಮ್ಮ ಎಚ್.ಡಿ.ಪಿ.ಎಚ್.ಎಸ್. ನ ಶಿಕ್ಷಕ ವೃಂದಕ್ಕೆ
ಹ್ಯಾಟ್ಸ್ ಆಫ್. ನಮ್ಮ ಈ ಶಾಲೆ ಕೇವಲ ಶೈಕ್ಷಣಿಕ ಚಟುವಟಿಗಳಿಗೆ ಮಾತ್ರ ಸೀಮಿತವಾಗಿರದೆ ಕಲೆ, ಆಟ, ಸಾಂಸ್ಕೃತಿಕ ಮುಂತಾದ ಚಟುವಟಿಗಳಲ್ಲಿಯೂ ಮುಂಚೂಣಿಯಲ್ಲಿತ್ತು.
ನನ್ನ ಜೀವನದ ಮಹತ್ವದ ಘಟ್ಟ ಅಂದರೆ
ನಾನು ಎಚ್.ಡಿ.ಪಿ.ಎಚ್.ಎಸ್. ನಲ್ಲಿ ಕಲಿತ ಎಂದು
ಮರೆಯಲಾಗದ 3 ವರುಷಗಳು(1986-1989). ನಮ್ಮ ಈ ಹೈಸ್ಕೂಲನ ದೊಡ್ಡ ಆಸ್ತಿ ಅಂದರೆ ನಿಸ್ವಾರ್ಥ
ಮನೋಭಾವದ ಅತ್ಯಂತ ಪ್ರತಿಭಾನ್ವಿವಿತ ಹಾಗು
ಕ್ರಿಯಾಶೀಲವವಾದ ಶಿಕ್ಷಕ ವೃಂದ. ನಿಸ್ಸಂಕೋಚವಾಗಿ ನಮ್ಮ ಶಾಲೆಯ ಗುಣಮಟ್ಟ ಉತ್ಕೃಷ್ಟಮಟ್ಟದಾಗಿತ್ತು ಮತ್ತು ಇಡೀ ಬೆಳಗಾ೦ವಿ
ಜಿಲ್ಲೆಯಲ್ಲಿಯೇ ಅದ್ವಿತೀಯ ಹೈಸ್ಕೂಲ್ ಆಗಿತ್ತು. ಇದು ನನಗೆ ನನ್ನ ಶಾಲೆಯ ಮೇಲಿರುವ ಅಭಿಮಾನ
ಮಾತ್ರವಲ್ಲ ವಸ್ತುಸ್ತಿಥಿಯೂ ಹೌದು.
ಯಾವ ಸಮಯದಲ್ಲಿ ಕಾಲೇಜಗಳಲ್ಲಿಯೂ ಡಿಸೆಕ್ಷನ್
ಮಾಡುವದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರೋ ಆ ಕಾಲದಲ್ಲಿ ನಮಗೆ ಕಪ್ಪೆ, ಮೀನ ಮತ್ತು ಜಿರಲೆಗಳ
ಡಿಸೆಕ್ಷನ್ ಮಾಡಿ ಅವುಗಳ ಬಗ್ಗೆ ವಿವವರವಾಗಿ ತಿಳಿಸಿ ನಮಗೆ ವಿಜ್ಞಾನ ಹಾಗೂ ಬೀಜ ಗಣಿತದ ಭದ್ರ ಬುನಾದಿ ಹಾಕಿ
ಕೊಟ್ಟ ಮುರಗೊಡ ಸರ್,ಇಂಗ್ಲೀಷ್ ವಿಷಯವನ್ನು ಅತ್ಯಂತ ಸರಳವಾಗಿ ಮನ
ಮುಟ್ಟುವಂತೆ ಹಾಗೂ ಯಾವುದೇ ಇಂಗ್ಲಿಷ್ ಮಾಧ್ಯಮದ ಶಾಲೆಯನ್ನು ಮೀರಿಸುವಂತೆ ಕಲಿಸುತ್ತಿದ್ದ ತಿಮ್ಮಾಪುರ್ ಸರ್ ,ಅಂಕ ಗಣಿತ ಮತ್ತು ಭೌತಶಾಸ್ತ್ರ ವನ್ನು ನಮಗಾಗಿ
ಎಕ್ಸ್ಟ್ರಾ ಕ್ಲಾಸ್ ಇಟ್ಟು ಕಲಿಸಿ ನಮ್ಮ ಸಾಧನೆಯಲ್ಲಿ ಸಂಭ್ರಮಿಸುತ್ತಿದ್ದ ಬೆಟಗೇರಿ ಸರ್,ಕನ್ನಡ ಭಾಷೆಯ
ಪಾಂಡಿತ್ಯವನ್ನು ಉಣಬಡಿಸುತಿದ್ದ ಜೋಶಿ ಟೀಚರ್,ಭೌಗೋಳವನ್ನು ತಮ್ಮದೇ ಆದ
ವಿಶಿಷ್ಟ ಶೈಲಿಯಲ್ಲಿ ಕಲಿಸುತ್ತಿದ್ದ ನಾಡಿಗೇರ್ ಟೀಚರ್,ಹಿಂದಿಯನ್ನು
ಮೋಜೀನೊಂದಿಗೆ ಕಲಿಸುತ್ತಿದ್ದ ದಿವಂಗತ ನೀಡೋಣಿ ಸರ್, ಸಮಾಜ ವಿಷಯವನ್ನು
ಅತ್ಯಂತ ವೈಶಿಷ್ಟಪೂರ್ಣವಾಗಿ ಮತ್ತು ಆ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿವೆಯೇನೋ ಎಂಬಂತೆ
ಭಾಸವಾಗುವಂತೆ ನಮ್ಮ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸಿ ಈ ಪೀರಿಯಡ್ ಯಾಕಪಾ ಮುಗೀತು
ಅನಿಸುವಂತೆ ಕಲಿಸುತ್ತಿದ್ದ ದಿವಂಗತ ಜಿ.ಎಸ್.ಪಾಟೀಲ ಸರ್, ರೇಖಾಗಣಿತವನ್ನು
ಅತ್ಯಂತ ಸರಳವಾಗಿ ಮನದಟ್ಟು ಮಾಡಿಸುತಿದ್ದ ನಮ್ಮ ಅಂದಿನ ಮುಖ್ಯೋಪಾಧ್ಯಾಯರಾಗಿದ್ದ ದಿವಂಗತ
ಕಾಪ್ಸೆ ಸರ್, ಕಲೆಯನ್ನು
ಆಟವಾಡಿಸುತ್ತಾ ನಮ್ಮನ್ನು ತಿದ್ದುತ್ತಾ ಕಲಿಸುತಿದ್ದ
ಪತ್ತಾರ ಸರ್, ನಮ್ಮಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ
ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಮೂಡಿಸಿ ಅಷ್ಟೇ ಅಲ್ಲ ಆ ಸಮಯದಲ್ಲಿ ಬೆಳಗಾವಿ ಜಿಲ್ಲೆಯ
ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ನಮ್ಮ ಶಾಲೆಯ ಕೀರ್ತಿ ಪತಾಕೆ ಹಾರಿಸಲಿಕ್ಕೆ ಕಾರಣೀಕರ್ತರಾದ
ನಾಡಗೌಡ ಸರ್. ಈ ರೀತಿ ಪ್ರತಿಯೊಂದು ಘಟನೆಯನ್ನು ಮೆಲಕು ಹಾಕಲು ಹೋದರೆ ಒಂದು ಪುಸ್ತಕವನ್ನೇ ಹೊರ
ತರಬಹುದು.
ಆಗಿನ ಕಾಲದಲ್ಲಿಯೇ ಸುಸಜ್ಜಿತವಾದ
ಪ್ರಯೋಗಾಲಯನ್ನು ಹೊಂದಿದ ಹೆಮ್ಮೆ ನಮ್ಮ ಈ ಎಚ್.ಡಿ.ಪಿ.ಎಚ್.ಎಸ್. ನದು. ಕನ್ನಡ ಮಾಧ್ಯಮದ
ಶಾಲೆಯಾಗಿ ವಿದ್ಯಾರ್ಥಿಗಳನ್ನು ಇಂಗ್ಲೀಷ್ ಸಹಿತವಾಗಿ ಎಲ್ಲಾ ವಿಷಯಗಳಲ್ಲಿ ಪರಿಣಿತರನ್ನಾಗಿಸಿದ ಹಿರಿಮೆ
ನಮ್ಮ ಎಚ್.ಡಿ.ಪಿ.ಎಚ್.ಎಸ್. ನದು. ಈ ಶಾಲೆಯಲ್ಲಿ ಕಲಿತಂಥವರು ದೇಶ ಹಾಗೂ ವಿದೇಶಗಳಲ್ಲಿ
ಇಂಜಿನೀಯರ್,ಡಾಕ್ಟರ್,ಪ್ರಾಧ್ಯಾಪಕ,ವಿಜ್ಞಾನಿಗಳಾಗಿ ಸೇವೆ
ಸಲ್ಲಿಸುತ್ತಿದ್ದಾರೆ.ಫೇಸ್ ಬುಕ್ ನ
ಎಚ್.ಡಿ.ಪಿ.ಎಚ್.ಎಸ್. ಪುಟದಲ್ಲಿಯೂ ನಾವೆಲ್ಲ ಇವರನ್ನು ಕಾಣಬಹುದು ಮತ್ತು ಸಂಪರ್ಕಿಸಬಹುದು.
ಯಾವ ಜನ್ಮದ ಪುಣ್ಯದ ಫಲವೋ ಇಂಥ
ಶಾಲೆಯಲ್ಲಿ ಕಲಿಯುವ ಅವಕಾಶ ನನ್ನದಾಯಿತು ಮತ್ತು ಇಂಥ ಶಾಲೆಯಲ್ಲಿ ಕಲಿತಿದ್ದಕ್ಕಾಗಿ ಯಾವಾಗಲೂ
ಹೆಮ್ಮೆ ಪಡುತ್ತೇನೆ ಹಾಗೂ ನಮ್ಮ ಮಕ್ಕಳಿಗೆ ಇಂಥ ಶಾಲೆಯಲ್ಲಿ ಕಲಿಯುವ ಅವಕಾಶವಿಲ್ಲವಲ್ಲವೆಂಬ
ಕೊರಗು ಇದೆ. ಭವಿಷ್ಯದಲಿಯೂ ಎಚ್.ಡಿ.ಪಿ.ಎಚ್.ಎಸ್. ಹೀಗೆ ಮುಂದುವರಿದು ಶಿಕ್ಷಣದ ಕಂಪನ್ನು
ಪಸರಿಸುವಲ್ಲಿ ಮುಂಚೂಣಿಯಲ್ಲಿರಿವುದೆಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ.
No comments:
Post a Comment
Note: only a member of this blog may post a comment.