Monday, 17 July 2017

ಭಾರತ ಮತ್ತು ಇಸ್ರೇಲ್- ಇಟ್ ಟೇಕ್ಸ್ ಟೂ ಟು ಟ್ಯಾಂಗೋ


ಇಸ್ರೇಲ ಒಂದು ಸ್ವತಂತ್ರ ದೇಶವಾದದ್ದು ೧೪-೦೫-೧೯೪೮ರಂದು. ರೋಮನ್ನರು ಹೊರದಬ್ಬಿದ ತಮ್ಮ ತಾಯ್ನಾಡಿಗೆ ಮರಳಬೇಕೆಂಬ  ೨೦೦೦ ವರ್ಷಗಳ ಯಹೂದಿಗಳ ಆಶಯ ಕೈಗೂಡಿತ್ತು. ಮೊದಲನೇಯ ಮಹಾಯುದ್ಧದ ನಂತರ ಬ್ರಿಟೀಷರ ನಿಯಂತ್ರಣಕ್ಕೊಳಪಟ್ಟಿದ್ದ ಪ್ಯಾಲೆಸ್ಟೈನ್-ನಲ್ಲಿ ವಾಸಿಸುತ್ತಿದ್ದ ಅರಬ್-ರು ಮತ್ತು ಯಹೂದಿಗಳ ನಡುವಣ ವಿರಸ ಹೆಚ್ಚಾಗಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ ಭೂಮಿಯೊಂದಿಗಿನ  ಸಾವಿರಾರು ವರ್ಷಗಳ ಕಾಲ ಐತಿಹಾಸಿಕ, ಧಾರ್ಮಿಕ ಮತ್ತು ಭಾವನಾತ್ಮಕ  ಸಂಬಂಧ  ಹೊಂದಿದ ಯಹೂದಿಗಳಿಗೆ, ದೇವರು ತಮಗಾಗಿಯೇ  ಭೂಮಂಡಲದ ಈ ಭಾಗವನ್ನು ನಿರ್ಮಿಸಿದ್ದಾನೆ ಎಂಬ ಬಲವಾದ ನಂಬಿಕೆ ಇತ್ತು. ಎರಡನೇಯ ಮಹಾಯುದ್ಧಲ್ಲಿ ಯುರೋಪನಲ್ಲಿ ಯಹೂದಿಗಳ ಮಾರಣಹೋಮ, ಜರ್ಮನ್-ರ  ಕಿರುಕುಳ, ಅವರ ಸಂಕಲ್ಪನ್ನು ಮತ್ತಷ್ಟು ಧೃಢಗೊಳಿಸಿದ್ದವು. ತದನಂತರ ಜಗತ್ತಿನ ವಿವಿಧ ಭಾಗಗಳಿಂದ ವಲಸೆ ಬಂದ ಯಹೂದಿಗಳು (ಜ್ಯೂವ್ಸ್) ತಾಯ್ನಾಡಿನ ಕನಸಿಗೆ ಹಾತೊರೆದು ಕಾದಿದ್ದರು. ನವಂಬರ -೨೯ ೧೯೪೭ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗೀಕರಿಸಿದ ನಿರ್ಣಯದಂತೆ ಪ್ಯಾಲೆಸ್ಟೈನ್-ನ್ನು ವಿಭಜಿಸಿ ಅರಬ್-ರಿಗೆ  ಮತ್ತು  ಯಹೂದಿಗಳಿಗೆ ಪ್ರತ್ಯೇಕ ರಾಷ್ಟ್ರಗಳನ್ನು ನಿರ್ಮಿಸಲಾಯಿತು. ಅಂತಾರಾಷ್ಟ್ರೀಯ ಸಮುದಾಯದ ಈ ನಿರ್ಣಯವನ್ನು ಅರಬ್-ರು ವಿರೋಧಿಸಿದ್ದರು.

ಭೌಗೋಲಿಕವಾಗಿ ಇಸ್ರೇಲ ಮಧ್ಯಪ್ರಾಚ್ಯದ ಮಧ್ಯಭಾಗದಲ್ಲಿ ಮೆಡಿಟರೇನಿಯನ್ ಸಮುದ್ರದ ಪೂರ್ವ ತುದಿಯಲ್ಲಿದೆ. ಇದರ ದಕ್ಷಿಣದ ತುದಿ ಕೆಂಪು ಸಮುದ್ರವನ್ನು ತಲುಪುತ್ತದೆ,ಪಶ್ಚಿಮಕ್ಕೆ ಈಜಿಪ್ಟ್, ಪೂರ್ವದಲ್ಲಿ  ಜೋರ್ಡಾನ್. ಉತ್ತರದಲ್ಲಿ ಲೆಬನಾನ್  ಮತ್ತು ಈಶಾನ್ಯದಲ್ಲಿ  ಸಿರಿಯಾದಿಂದ ಸುತ್ತುವರೆದಿದೆ.ವಿಶ್ವಸಂಸ್ಥೆಯ ನಿರ್ಣಯವನ್ನು ವಿರೋಧಿಸಿ ನೆರೆಯ ಅರಬ್ ರಾಷ್ಟ್ರಗಳು ಇಸ್ರೇಲ್-ನೊಂದಿಗೆ ಯುದ್ಧಕ್ಕಿಳಿದು  ತಿಂಗಳುಗಳ ತೀವ್ರ ಸೆಣಸಾಟದ ತರುವಾಯ ಯುದ್ಧವಿರಾಮಕ್ಕೆ ಒಪ್ಪಿದವು.ಇಸ್ರೇಲ್ ಅದಾಗಲೇ ಈ ವಿರೋಧಿ ರಾಷ್ಟ್ರಗಳ ಬೆವರಿಳಿಸಿತ್ತು. ಇಸ್ರೇಲ ತನ್ನ ಜನತೆಯ ಸಾಮರ್ಥ್ಯ , ತಾಂತ್ರಿಕ ನಿಪುಣತೆ ಮತ್ತು ಕಠಿಣ ಪರಿಶ್ರಮದಿಂದ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ,ದೈತ್ಯ ಮಿಲಿಟರಿ ಶಕ್ತಿಯಾಗಿ, ವಿಶ್ವ ವಿಖ್ಯಾತ ಗೂಢಚಾರ ಸಂಸ್ಥೆ ಮೊಸ್ಸಾದ ಸ್ಥಾಪಿಸಿ,   ಪರಮಾಣು ಶಸ್ತ್ರಾಸ್ತ್ರ ಹೊಂದಿದ ದೇಶವಾಗಿ ವಿಕಸಿತವಾಯಿತು.

೧೯೬೭ರಲ್ಲಿ  ನಡೆದ ಸಿಕ್ಸ್ ಡೇ ವಾರ್ ಎಂದು ಖ್ಯಾತವಾದ ಯುದ್ಧದಲ್ಲಿ ೧೧ ಇಸ್ಲಾಮಿಕ್  ದೇಶಗಳು ಒಟ್ಟಾಗಿ ದಾಳಿ ಮಾಡಿದರೂ, ಕೇವಲ ಆರು ದಿನಗಳಲ್ಲಿ ಯುದ್ಧವನ್ನು ನಿರ್ಣಾಯಕವಾಗಿ ಗೆದ್ದಿತ್ತು ಇಸ್ರೇಲ್. ಇಸ್ರೇಲ್-ನ ಶಕ್ತಿಯ ವಿರಾಟರೂಪ  ವಿಶ್ವಕ್ಕೆ ದರ್ಶನವಾಗಿದ್ದು- ೧೯೭೬ರ  ಇತಿಹಾಸದಲ್ಲೇ ಅತ್ಯಂತ  ಯಶಸ್ವಿ ಒತ್ತೆಯಾಳುಗಳ ವಿಮೋಚನಾ ಕಾರ್ಯಾಚರಣೆ ಎಂದು ಹೆಸರಾದ ಆಪರೇಷನ್ ಥ೦ಡರಬೋಲ್ಟ್’. ೧೩೯ ಪ್ರಯಾಣಿಕರನ್ನು ಹೊತ್ತು ಟೆಲ್-ಅವಿವ್-ಯಿಂದ ಪ್ಯಾರಿಸ್-ಗೆ ಪ್ರಯಾಣಿಸುತ್ತಿದ್ದ  ಏರ್ ಫ್ರಾನ್ಸ್–ನ ವಿಮಾನವನ್ನು  ನಾಲ್ವರು ಭಯೋತ್ಪಾದಕರು ಅಪಹರಿಸಿ ಅಂತಿಮವಾಗಿ ಉಗಾಂಡಾದ ಎಂಟೆಬೆ ಏರಪೋರ್ಟ್-ನಲ್ಲಿ ಇಳಿಸಿದರು. ಉಂಗಾಂಡಾದ ಸರ್ವಾಧಿಕಾರಿ ಇದಿ ಅಮೀನ್ ಬೆಂಬಲ ಈ ಭಯೋತ್ಪಾದಕರಿಗಿತ್ತು. ಫ್ರಾನ್ಸ್ , ಸ್ವೀಡ್ಜರಲ್ಯಾಂಡ್ ಹಾಗೂ ಇನ್ನೂ ಅನೇಕ ದೇಶಗಳ ಜೈಲಿನಲ್ಲಿದ್ದ ಕೆಲ ಉಗ್ರರನ್ನು ಮತ್ತು ಇಸ್ರೇಲಿ ಜೈಲಿನಲ್ಲಿದ್ದ ೪೦ ಉಗ್ರರನ್ನು ಬಿಡುಗಡೆಗೊಳಿಸಬೇಕೆಂಬುದು ಇವರ ಬೇಡಿಕೆಯಾಗಿತ್ತು. ಇಸ್ರೇಲ್ ತನ್ನ ದೇಶದ ಕಾರ್ಯನೀತಿಯಂತೆ    ಯಾವುದೇ ಕಾರಣಕ್ಕೂ  ಉಗ್ರರ ಬೇಡಿಕೆಗಳಿಗೆ ಬಗ್ಗದೇ, ಇಸ್ರೇಲಿನಿಂದ ೫೦೦೦ ಕಿಲೋಮೀಟರ್ ದೂರದಲ್ಲಿದ್ದ ಎಂಟೆಬೆಯಲ್ಲಿನ ಒತ್ತೆಯಾಳುಗಳಾಗಿದ್ದ ಇಸ್ರೇಲಿ ಪ್ರಜೆಗಳನ್ನು ಕಮಾಂಡೋ ಆಪರೇಷನ್ ಮುಖಾಂತರ ಬಂಧಮುಕ್ತಗೊಳಿಸಿ ಇಸ್ರೇಲಿಗೆ ಕರೆತರುವ ಯಾರು ಊಹಿಸಲು ಸಾಧ್ಯವಿರದ ಕಾರ್ಯಾಚರಣೆಯ ರೂಪರೇಷೆಯನ್ನು ಸಿದ್ಧಪಡಿಸಿತ್ತು!! ಸ್ವಾಭಿಮಾನಿ ಇಸ್ರೇಲ್ ಜಗತ್ತೇ ಬೆರಗಾಗುವಂತೆ ಅತ್ಯಂತ ನಿಖರವಾಗಿ ಈ ಸಾಹಸಿ ಕಾರ್ಯಾಚರಣೆಯನ್ನು ಕೈಗೊಂಡು ಉಗ್ರರ ಅಟ್ಟಹಾಸದ ಹುಟ್ಟಡಗಿಸಿತ್ತು. ಈ ಕಾರ್ಯಾಚರಣೆಯಲ್ಲಿ ೧೦೩ ಪ್ರಯಾಣಿಕರನ್ನು ರಕ್ಷಿಸಲಾಯಿತು. ಆದರೆ ೧೯೭೬ರ ಜುಲೈ-೪-ರಂದು  ಈಗಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹೂರ ಹಿರಿಯ ಸಹೋದರ, ಈ ಕಾರ್ಯಾಚರಣೆಯ ಕಾರ್ಯತಂತ್ರದ ರುವಾರಿಯಾಗಿದ್ದ  ಕಮಾಂಡರ್ ಯೋನಾಥನ್ ನೇತನ್ಯಾಹು ಹಾಗೂ ಮೂವರು ಒತ್ತೆಯಾಳುಗಳು ಮೃತಪಟ್ಟರು. ಈ ಘಟನೆಯ ಮೆಲಕು ಹಾಕಿ ನಮ್ಮ ಪ್ರಧಾನಿ ನರೇಂದ್ರ ಮೋದಿ ತಮ್ಮ ಇಸ್ರೇಲ್ ಭೇಟಿಯ ಮೊದಲ ದಿನ ಇದೇ ಜುಲೈ -೪ರಂದು ಯೋನಾಥನ್ ನೇತನ್ಯಾಹುರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.  

ಅಮೆರಿಕಾದ ಸಂಗೀತ ನಿರ್ದೇಶಕ ಎಲ್.ಹಾಫಮನ್  ಹಾಗೂ ರಷಿಯಾ ಸಂಜಾತ ಅಮೆರಿಕನ್ ಲೇಖಕ  ಡಿಕ್ ಮೆರಿನ್-ರ ಕೆಲ ಸಾಲುಗಳು ಹೀಗಿವೆ,ಯು ಕ್ಯಾನ್ ಸೇಲ್ ಇನ್ ಎ ಶಿಪ್ ಬೈ ಯುವರಸೆಲ್ಫ್ , ಯು ಕ್ಯಾನ್ ಟೇಕ್ ಎ ನ್ಯಾಪ್ ಬೈ ಯುವರಸೆಲ್ಫ್, ದೇರ್ ಆರ್ ಲಾಟ್ಸ್ ಆಫ್ ಥಿಂಗ್ಸ್ ಯು ಕ್ಯಾನ್ ಡು ಬೈ ಯುವರಸೆಲ್ಫ್ ಬಟ್ ಇಟ್ ಟೇಕ್ಸ್ ಟೂ ಟು ಟ್ಯಾಂಗೋ” ಅಂದರೆ ನೀವು ಒಬ್ಬಂಟಿಯಾಗಿ ನೌಕಾಯಾನ ಮಾಡಬಹುದು,ಒಬ್ಬಂಟಿಯಾಗಿ ಹಾಯಾಗಿ ನಿದ್ರಿಸಬಹುದು ಹಾಗೂ ಒಬ್ಬಂಟಿಯಾಗಿ ಇನ್ನೂ ಸಾಕಷ್ಟು ಕಾರ್ಯಗಳನ್ನು ಮಾಡಬಹುದು, ಆದರೆ ಟ್ಯಾಂಗೋ ನೃತ್ಯ ಮಾಡಲು ಮಾತ್ರ ಇಬ್ಬರು ಬೇಕೆ ಬೇಕು. ಟ್ಯಾಂಗೋ ಒಂದು ಪ್ರಸಿದ್ಧ ನೃತ್ಯ ರೂಪ , ಇದು ಸಂತೋಷ ಉಲ್ಲಾಸ ಮತ್ತು ಉತ್ಸವದ ಪ್ರತೀಕ. ಟೂ ಟು ಟ್ಯಾಂಗೋ’-ನಂತೆಯೇ ನೆರೆಯ ರಾಷ್ಟ್ರಗಳ ತರಬೇತಿ, ಹಣಕಾಸು ಹಾಗೂ ಕುಮ್ಮಕ್ಕಿನಿಂದ ನೆಲೆನಿಂತ ಭಯೋತ್ಪಾದನೆಯ ಪಿಡುಗನ್ನು ಮಟ್ಟಹಾಕಲು ಇಸ್ರೇಲ್ ಮತ್ತು ಭಾರತ ಒಂದಾಗುವದು ಅವಶ್ಯಕ ಮತ್ತು ಅನಿವಾರ್ಯ. ಪಾಕ್ ಪ್ರಾಯೋಜಿತ ಜೆಹಾದಿ ಭಯೋತ್ಪಾದಕರೊಂದಿಗೆ ಹೊರಾಡುತ್ತಿರುವ ಭಾರತಕ್ಕೂ, ವಿಷಮ ಪರಿಸ್ಥಿತಿಯಲ್ಲಿ ಹಮಾಸ್ ಉಗ್ರರೊಂದಿಗೆ ಹೊರಾಡುತ್ತಿರುವ ಇಸ್ರೇಲಗೂ ಬಹಳಷ್ಟು ಸಾಮ್ಯತೆ ಇದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ  ಎರಡೂ ರಾಷ್ಟ್ರಗಳ ಪಾಲುದಾರಿಕೆ , ಸಹಭಾಗಿತ್ವ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಲಿದೆ. ಅತ್ಯಾಧುನಿಕ ಇಸ್ರೇಲಿ ತಂತ್ರಜ್ಞಾನ ಭಾರತದ ಪಾಲಿಗೆ ಅನೇಕ ರೀತಿಯಲ್ಲಿ ವರದಾನವಾಗಲಿದೆ. ಜೋರ್ಡಾನಗೆ ಹೊಂದಿದ ಇಸ್ರೇಲಿನ ಗಡಿಯನ್ನು ಕಾಯಲು ಇಸ್ರೇಲ್ ವಿನೂತನ ಮಾದರಿಯ ರೋಬೋಟ್-ಗಳನ್ನು ಬಳುಸುತ್ತಿದೆ, ಉನ್ನತ ತಾಂತ್ರಿಕತೆಯುಳ್ಳ ಕ್ಯಾಮೆರಾಗಳಿಂದ ನುಸುಳುಕೋರರನ್ನು ಪತ್ತೆ ಹಚ್ಚಿ ರಿಯಲ್–ಟೈಮ್ ಮಾಹಿತಿಯನ್ನು ಮುಖ್ಯ ನಿಯಂತ್ರಣ ಕಕ್ಷಕ್ಕೆ ರವಾನಿಸುತ್ತದೆ. ಮಾಹಿತಿ ತಲುಪಿದ ಕ್ಷಣಾರ್ಧದಲ್ಲಿ ಇಸ್ರೇಲಿ ಸೇನೆ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುತ್ತದೆ. ಇಂತಹದೊಂದು ತಂತ್ರಜ್ಞಾನದ ಪ್ರಯೋಗ ಕಾಶ್ಮೀರದಲ್ಲಿ ನುಸುಳುವ ಉಗ್ರರನ್ನು ಮಟ್ಟಹಾಕಲು ಅವಶ್ಯಕವೆನಿಸುವದಿಲ್ಲವೇ? ಇಸ್ರೇಲ್ ಎಂತಹ ಸಂದರ್ಭದಲ್ಲಿಯೂ  ಭಾರತದ ಜೊತೆ ನಿಲ್ಲುವ ಭರವಸೆಯ ರಾಷ್ಟ್ರ. ಹಿಂದೊಮ್ಮೆ ಇಸ್ರೇಲ್ ಪಾಕಿಸ್ತಾನದ ಪರಮಾಣು ಘಟಕವಾದ ಖೌತಾದ ಮೇಲೆ ದಾಳಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು, ಭಾರತವನ್ನು  ಕೇವಲ ತನ್ನ ವಿಮಾನಗಳಿಗೆ ಮರು ಇಂಧನ (ರೀಫ್ಯೂಯೆಲ್) ವದಗಿಸುವಂತೆ ಕೇಳಿತ್ತಂತೆ!! ಆದರೆ ಕಾರಣಾಂತರಗಳಿಂದ ಭಾರತ ಇದಕ್ಕೆ ಸಮ್ಮತಿಸಿರಲಿಲ್ಲ!

ಇನ್ನು ಮರಭೂಮಿಯಲ್ಲಿಯೂ ಸ್ವಾವಲಂಬಿಯಾಗಿ ತನ್ನದೇ ಆದ ವಿಶಿಷ್ಟ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿ, ಜಗತ್ತೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಇಸ್ರೇಲ್. ತನ್ನ ತಾಂತ್ರಿಕತೆಯ ಸಹಾಯದಿಂದ ತೋಟಗಾರಿಕೆ ಮತ್ತು ಕೃಷಿಯ ವಿನೂತನ ಮಾದರಿಗಳನ್ನು ಅನುಸರಿಸಿ, ಹನಿ ನೀರಾವರಿ ಮುಖಾಂತರ ಮರಭೂಮಿಯಲ್ಲಿ ಕೃಷಿ ಮಾಡುವಲ್ಲಿ ಪರಿಣಿತಿ ಹೊಂದಿದ ದೇಶಗಳಲ್ಲಿ  ಮುಂಚೂಣಿಯಲ್ಲಿರುವ  ರಾಷ್ಟ್ರ ಇಸ್ರೇಲ್. ತನ್ನಲ್ಲಿರುವ ಖನಿಜಗಳಿಂದಾಗಿ ಯಾರನ್ನು ಮುಳಗಲು ಬಿಡದ, ಚರ್ಮ ರೋಗ ನಿವಾರಕ ಔಷಧಿ ಗುಣಗಳನ್ನು ಹೊಂದಿದ  ಮೃತಸಾಗರದ (ಡೆಡ್ ಸೀ) ಬೀಚನ  ಸುತ್ತಮುತ್ತ ಹುಲ್ಲಿನ ಹಸಿರುಹಾಸನ್ನು ಬೆಳೆಸೀದ ಕೀರ್ತಿ ಇಸ್ರೇಲಿನದು. ಪ್ರತಿವರ್ಷ ೧ ಮೀಟರನಷ್ಟು ಕರಗುತ್ತಿರುವ ಮೃತಸಾಗರವನ್ನು ಪಾರಂಪರಿಕ ಸಾಂಸ್ಕೃತಿಕ ಧರೋವರವೆಂದು ಘೋಷಿಸಿ, ಅದರ ಉಳಿವಿಗಾಗಿ ಇಸ್ರೇಲಿ ಸರಕಾರ ಟೊಂಕಕಟ್ಟಿ ನಿಂತಿದೆ. ಜೋರ್ಡಾನ್-ನೊಂದಿಗೆ ಕೆಂಪು ಸಮುದ್ರದಿಂದ ಜೋರ್ಡಾನ್ ಮುಖಾಂತರ ಮೃತ ಸಾಗರಕ್ಕೆ ನೀರು ಹರಿಸುವ ಕಾಲುವೆ ನಿರ್ಮಿಸಲು ಒಪ್ಪಂದ ಮಾಡಿಕೊಂಡಿದೆ.   

ಕೆಲವೇ ತಿಂಗಳುಗಳ ಅಂತರದಲ್ಲಿ  ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ  ಭಾರತ ಮತ್ತು ಇಸ್ರೇಲ್ ಸುಮಾರು ನಲವತ್ತು ದಶಕಗಳ ಕಾಲ ವಿಭಿನ್ನ ದಿಕ್ಕಿನ್ನಲ್ಲೆ ಸಾಗಿದವು.  ದಿವಂಗತ ನರಂಸಿಹರಾವ್ ಪ್ರಧಾನಿಯಾಗಿದ್ದಾಗ ೧೯೯೨ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಣ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲಯಾಯಿತು. ನಂತರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವು ಆರ್ಥಿಕ, ಮಿಲಿಟರಿ, ಕೃಷಿ ಮತ್ತು ರಾಜಕೀಯ ಮಟ್ಟದಲ್ಲಿ ಹಂತ ಹಂತವಾಗಿ ವಿಕಸನಗೊಂಡಿತು. ಬಹುಕಾಲ ಭಾರತೀಯ ಆಂತರಿಕ ಓಲೈಕೆಯ ವೋಟ್ ಬ್ಯಾಂಕ್ ರಾಜಕಾರಣವು ಇಸ್ರೇಲಿನೊಂದಿಗೆ ಅಪೇಕ್ಷಿತ ಸಂಬಂಧ ಹೊಂದಲು ತೊಡಕಾಗಿತ್ತು.೧೯೯೯ರ ಕಾರ್ಗಿಲ್ ಯುದ್ಧದ ಸಮಯದಲ್ಲಿಯೂ ಇಸ್ರೇಲ್ ಭಾರತಕ್ಕೆ ಅಭಯ ಹಸ್ತ ಚಾಚಿತ್ತು.  ನವೆಂಬರ್ 2002 ರಲ್ಲಿ ಇಸ್ರೇಲ್ ಮತ್ತು ಭಾರತ  ಬಾಹ್ಯಾಕಾಶ ಸಂಶೋಧನಾ  ಕ್ಷೇತ್ರದಲ್ಲಿ ಸಹಕರಿಸುವ ಒಪ್ಪಂದಕ್ಕೆ ಸಹಿ ಹಾಕಿದವು. 2006ರಲ್ಲಿ ಭಾರತ ಮತ್ತು ಇಸ್ರೇಲ್ ಕೃಷಿ ಕ್ಷೇತ್ರದಲ್ಲಿ ದೀರ್ಘಕಾಲಿಕ ಸಹಯೋಗದ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು.  20೦0ರದ ನಂತರ ಭದ್ರತೆ ಮತ್ತು ರಕ್ಷಣಾ ವಿಭಾಗದಲ್ಲಿ ಇಸ್ರೇಲ್ ಜೊತೆಗಿನ ವ್ಯಾಪಾರ- ಬಾಂಧವ್ಯ ಬಹುವಾಗಿ ಬೆಳೆಯಿತು. ಪ್ರತಿಕೂಲ (ವೈರಿ)  ವಿಮಾನಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಇತರ ಒಳನುಳುಸುವ  ವೈಮಾನಿಕ ಬೆದರಿಕೆಯನ್ನು ಯಾವುದೇ ಭೂ–ಆಧಾರಿತ ರಡಾರ್-ಗಳಿಗಿಂತ ಮೊದಲೇ  ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದ ಅತ್ಯಾಧುನಿಕ  ಫಲ್ಕಾನ್ ವಾಯುವಾಹಿತ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ  (ಏರ್ ಬೋರ್ನ್ ವಾರ್ನಿಂಗ್ ಐಂಡ್ ಕಂಟ್ರೋಲ್ ಸಿಸ್ಟಮ್ಸ-AWCS),ಎಕ್ಸ್ -೯೫ ರೈಫಲ್-ಗಳು, ಆಧುನಿಕ ರಡಾರ್-ಗಳನ್ನು   ಭಾರತ ಖರೀದಿಸಿ ರಕ್ಷಣಾ ಕ್ಷೇತ್ರದಲ್ಲಿ ಇಸ್ರೇಲಗೆ ದೊಡ್ಡ ಮಾರುಕಟ್ಟೆಯಾಯಿತು. ೨೦೧೨ರಲ್ಲಿ ಆಗಿನ ವಿದೇಶ ಸಚಿವರಾಗಿದ್ದ ಎಸ್.ಎಂ.ಕೃಷ್ಣರ ಇಸ್ರೇಲಿಗೆ ಭೇಟಿ ಇತ್ತು ಭಯೋತ್ಪಾದನೆಯ ವಿರುದ್ಧ ಹೊರಾಟದಲ್ಲಿ ಪರಸ್ಪರ ಸಹಕರಿಸುವ ಮತ್ತು ಪ್ರತ್ಯರ್ಪಣದ ಒಡಬಂಡಿಕೆಗೆ ಸಹಿ ಹಾಕಿದರು. ಇದುವರೆಗೆ ಭಾರತದ ಯಾವುದೇ ನಾಯಕರು ಇಸ್ರೇಲಿಗೆ ಭೇಟಿ ಕೊಟ್ಟರೂ, ಪ್ಯಾಲೆಸ್ಟೈನ್-ಗೂ ಭೇಟಿ ಕೊಡುತ್ತಿದ್ದರು. ೨೦೧೫ರ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ  ಭೇಟಿ ಮತ್ತು ೨೦೧೬ರ ವಿದೇಶ ಸಚಿವೆ ಸುಷ್ಮಾ ಸ್ವರಾಜ್-ರ ಭೇಟಿಯೂ ಇದಕ್ಕೆ ಹೊರತಾಗಿರಲಿಲ್ಲ,


ಪ್ರಧಾನಿ ಮೋದಿಯವರ ಇತ್ತೀಚಿನ ಇಸ್ರೇಲ್ ಭೇಟಿ ಐತಿಹಾಸಿಕ ಮತ್ತು ದಿಟ್ಟ ಹೆಜ್ಜೆಯಾಗಿತ್ತು, ಭಾರತೀಯ ಪ್ರಧಾನಿಯೋರ್ವರ ಮೊದಲ ಭೇಟಿ ಇದಾಗಿತ್ತು. ಇಸ್ರೇಲ್-ನ ಪ್ರಧಾನಿ ಬೆಂಜಮಿನ್ ನೇತನ್ಯಾಹು    ಶಿಷ್ಟಾಚಾರವನ್ನು ಬದಿಗೊತ್ತಿ ತಾವೇ ಖುದ್ದಾಗಿ ನಮ್ಮ ಪ್ರಧಾನಿಗೆ  ಅಭೂತಪೂರ್ವ ಸ್ವಾಗತ ಕೋರಿದ್ದರು. ಬಹುತೇಕ ವಿಶ್ಲೇಷಕರು ಗಮನಿಸದ ಸಂಗತಿಯೆಂದರೆ (ಅಥವಾ ಉದ್ದೇಶಪೂರ್ವಕವಾಗಿಯೇ ಮರೆತರೋ.....) ಬೆಂಜಮಿನ್  ನೇತನ್ಯಾಹು ನಮ್ಮ ಪ್ರಧಾನಿಯನ್ನು ವರ್ಲ್ಡ್ ಲೀಡರ್ ಎಂದು ಸಂಬೋಧಿಸಿದ್ದು! ಅಮೇರಿಕದ ಅಧ್ಯಕ್ಷರಿಗೆ,ಧರ್ಮಗುರು ಪೋಪ್-ರಿಗೆ ದೊರೆಯುವ ರೀತಿಯ ಅದ್ದೂರಿ ಸ್ವಾಗತ ಬದಲಾಗುತ್ತಿರುವ ವಿಶ್ವಕ್ಕೆ ದಿಕ್ಸೂಚಿಯಾಗಿದೆ.  ಭಾರತ –ಇಸ್ರೇಲ್ ಮಧ್ಯೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಜಲ ಸಂರಕ್ಷಣೆ,ರಕ್ಷಣಾ ವಲಯದ ಅನೇಕ ಒಡಂಬಡಿಕೆಗಳು ಏರ್ಪಟ್ಟವು. ಪ್ರಧಾನಿಯ ಈ ಭೇಟಿಯ ಫಲಶ್ರುತಿಯಿಂದ ಭಾರತಕ್ಕೆ ಬಾರಕ್ ಕ್ಷಿಪಣಿಗಳು, ಅತ್ಯಾಧುನಿಕ ಕಣ್ಣ್ಗಾವಲು ಡ್ರೋನ್-ಗಳು ದೊರಕುತ್ತಿವೆ.  ಮುಂಬೈನ ನಾರಿಮನ್ ಹೌಸ್-ನ  ಯಹೂದಿ ಕೇಂದ್ರದ ಮೇಲೆ  2008 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದ ಮಗು ಮಸೀದ ಮೋಶೆ ಹೋಲ್ಬರ್ಗ್-ನ್ನು ಮೋದಿ  ಭೇಟಿಯಾದರು. ಪ್ರಧಾನಿಯ ಇಸ್ರೇಲ್ ಭೇಟಿಯನ್ನು ದೇಶದ ಕೆಲ ತಥಾ ಕಥಿತ ಬುದ್ಧಿ ಜೀವಿಗಳು,ಎಡಪಂಥೀಯ ಟೊಳ್ಳು ಜ್ಯಾತ್ಯಾತೀತವಾದಿಗಳು    ಹುಬ್ಬೇರೆಸಿ ಪ್ರಶ್ನಿಸಿದರು.... ಏಕೆಂದರೆ ಅವರು ಇಸ್ರೇಲ್-ಗೆ ಹೋದ ಸಂದರ್ಭದಲ್ಲಿ  ಪ್ಯಾಲಸ್ಟೈನಗೆ ಭೇಟಿ ನೀಡಲಿಲ್ಲ! ಈ ಜನ ಮೇ-2017ರ ಪ್ಯಾಲಸ್ಟೈನ ಅಧ್ಯಕ್ಷ ಮೆಹಮೂದ್ ಅಬ್ಬಾಸ್-ರ ಭಾರತ ಭೇಟಿಯನ್ನು ಉಲ್ಲೇಖಿಸುವದನ್ನು ಮರೆತರು. ಪ್ರಧಾನಿ ಮೋದಿಯ ಚಾಣಕ್ಯ ತಂತ್ರದ  ವಿದೇಶ ನೀತಿಯ ಯಶಸ್ಸಿಗೆ   ಭಾರತದ ಕುರಿತು ವಿವಿಧ ರಾಷ್ಟ್ರಗಳ ಬದಲಾದ/ಬದಲಾಗುತ್ತಿರುವ  ದೃಷ್ಟಿಕೋನ-ಧೋರಣೆಯೇ ಸಾಕ್ಷಿ. ಇಂದಿಗೂ ೭೯%ರಷ್ಟು ಭಾರತೀಯರು ಪ್ರಧಾನಿ ಮೋದಿಯ ದಿಟ್ಟ ನಾಯಕತ್ವವನ್ನು ಮುಕ್ತ ಮನಸ್ಸಿನಿಂದ ಒಪ್ಪಿ ಇಷ್ಟಪಡುತ್ತಾರೆ೦ದಾದರೆ ಮೋದಿಜಿಯ ವಿದೇಶ ನೀತಿಯು ಒಂದು ಕಾರಣ. ಭಾರತ ಮತ್ತು ಇಸ್ರೇಲ್-ನ ಟೂ ಟು ಟ್ಯಾಂಗೋ ಸ್ನೇಹ ಸ೦ಬಂಧ ಇನ್ನಷ್ಟು ಗಟ್ಟಿಗೊಂಡು  ಸಮೃದ್ಧ, ಭಯೋತ್ಪಾದಕತೆ ಮುಕ್ತ ಜಗತ್ತಿನ ನಿರ್ಮಾಣದತ್ತ ದಾಪುಗಾಲು ಹಾಕಲಿ.      

Wednesday, 5 July 2017

ನಂದನವನದ ನಂದದ ನೆನಪುಗಳು





“ಗತೇ ಶೋಕೋ ನ ಕರ್ತವ್ಯೋ, ಭವಿಷ್ಯಂ ನೈವ್ ಚಿಂತಯೇತ್,ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಃ” ಎಂಬ  ಸಂಸ್ಕೃತದ ಸುಭಾಷಿತದಂತೆ ಅತೀತದ ಬಗ್ಗೆ ಪಶ್ಚಾತಾಪಿಸದೇ, ಭವಿಷ್ಯದ ಬಗ್ಗೆ ಚಿಂತಿಸದೇ, ಬುದ್ಧಿವಂತರು ಯಾವಾಗಲೂ ವಾಸ್ತವದಲ್ಲಿ ಬದುಕುತ್ತಾರೆ. ಆದರೆ, ಅರಿಯದ ನಾಳೆಯ ಸುಂದರ ಕನಸಿನ ಮಾಯಾಲೋಕದಲ್ಲಿ ಭ್ರಮಿಸುತ್ತಾ, ಇಂದಿನ ವಾಸ್ತವವನ್ನು ಮರೆಯುವ ನಮಗೆ, ಸದಾ ಸವಿನೆನಪಾಗಿ ಮನದಲ್ಲಿ ಅಚ್ಚಾಗಿ  ನಂದದೇ ಉಳಿದ ಎಂದಿಗೂ ಮರೆಯಲಾಗದ ನಿನ್ನೆಯ ದಿನಗಳ ಮಧುರ ನೆನಪಿನ ಸುರುಳಿ ಸದಾ ಆಹ್ಲಾದಕರ!!

ಬಾಲ್ಯದ ಬುಹುಕಾಲ ಕಳೆದದ್ದು ಅಂದಿನ ಕಾಲದ ನಮ್ಮ ಪಾಲಿನ ನಂದನವನವಾಗಿದ್ದ ಬೆಳಗಾವಿ ಜಿಲ್ಲೆಯ ಹಿಡಕಲ್-ಡ್ಯಾಮನಲ್ಲಿ. ಆರ್. ಕೆ.ನಾರಾಯಣರ ಮಾಲ್ಗುಡಿಯಂತೆ ಜೀವನದ ಪ್ರತಿಯೊಂದು ಮಗ್ಗುಲಿನ ನೈಜ ದೃಷ್ಟಿಕೋನವನ್ನು  ತೋರಿಸಿ ತಿಳಿಸಿಕೊಟ್ಟ, ಹಳ್ಳಿ ಮತ್ತು ಪಟ್ಟಣದ ಸಮ್ಮಿಶ್ರ ಪರಿಸರದ ಅಪೂರ್ವ ಸಂಗಮ ಹಿಡಕಲ್ ಡ್ಯಾಮಿನದು. ಉತ್ತಮ ಗುಣಮಟ್ಟದ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಊರಿಗೆ ಮುಕುಟಪ್ರಾಯವಾದ ಉತ್ಕೃಷ್ಟ ಮಾಧ್ಯಮಿಕ ಶಾಲೆ (ಎಚ್.ಡಿ.ಪಿ.ಎಚ್.ಎಸ್.),ಸೋರುವ ಛತ್ತಿನ ಸದಾ ಚಟುವಟಿಕೆಯ ತಾಣವಾಗಿದ್ದ ಚಿಕ್ಕ ಬಸ್ ನಿಲ್ದಾಣ, ಮಾದಕ ಸುಂದರಿಯರ೦ತಿದ್ದ – ಕಪ್ಪು ಹೊಗೆ ಚಿಮ್ಮಿಸಿ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದ ಕಪ್ಪು ಮುಖದ ಹಳೆಯ ಟ್ಯಾಕ್ಸಿಗಳು, ಕ್ರಿಕೇಟ್-ಪ್ರೀಯರ ನೆಚ್ಚಿನ ವಿಶಾಲವಾದ ಮೈದಾನ, ಭಕ್ತಿ-ಪ್ರೇಮರಸದ ಸಂಗಮವಾದ ಶಿವಾಲಯ ಮತ್ತು ಹನುಮಂತದೇವರ ದೇವಾಲಯಗಳು, ಸಾಲು ಸಲಾಗಿದ್ದ ತಮಿಳು-ಮಲೆಯಾಳಿಗಳ  ಕಿರಾಣಿ ಅಂಗಡಿಗಳು,ಪ್ರತಿ ಆದಿತ್ಯವಾರಕ್ಕೊಮ್ಮೆ ಸೇರುತ್ತಿದ್ದ ಜನನಿಬಿಡ ಸಂತೆ, ಉಳ್ಳವರ-ಕಳೆದುಕೊಳ್ಳುವರ ಆಶೋತ್ತರ ಈಡೇರಿಸುತ್ತಿದ ಇಸ್ಪೀಟ್ ಕ್ಲಬ್, ಪ್ರೇಮಿಗಳು ಕದ್ದು ಮುಚ್ಚಿ ಓಡಾಡಲು ಅವಕಾಶ ಕಲ್ಪಿಸಿ ಯುವಜನತೆಯ ಸ್ವರ್ಗದಂತಿದ್ದ  ಫಿಲ್ಟರ್ ಹೌಸ್,ಐ.ಬಿ.(ಪರಿವೀಕ್ಷಣ ಮಂದಿರ) ಹಾಗೂ ಡ್ಯಾಮಿನ ಅಕ್ಕಪಕ್ಕದ ಕಾಲುವೆಗಳು, ಪಡ್ಡೆ ಹುಡುಗರ ನೆಚ್ಚಿನ ತಾಣಗಳಾಗಿದ್ದ ಆಗ ತಾನೆ ನಿರ್ಮಾಣ ಹಂತದಲ್ಲಿದ್ದ ಕೆ.ಪಿ.ಸಿ.ಯ ಕ್ವಾರ್ಟರ್ಸ್-ಗಳು (ವಸತಿ  ಕಟ್ಟಡಗಳು)   ಹೀಗೆ ಸಹಜವೆನಿಸಿದರೂ ಅಗಮ್ಯ-ಅನನ್ಯ ವಾತಾವರಣ!

ವಿವಿಧತೆ/ವಿಭಿನ್ನತೆ/ವಿವಾದ-ವಿಷಾದ/ಭಿನ್ನಾಭಿಪ್ರಾಯಗಳ ಮೀರಿ, ಎಡ-ಬಲದ ವಿಚಾರಧಾರೆಯರಿಯದ ನೈಜ ಜ್ಯಾತ್ಯಾತೀತ ಸಮಾಜವನ್ನು ಕಣ್ಣಾರೆ ಕಂಡು ಅನುಭಿಸಿದ ಅನುಭೂತಿಯನ್ನು ಅಕ್ಷರವಾಗಿಸುವ ಪ್ರಯತ್ನವಿದು. ಈಗ ಹೊಳಿ ಹಬ್ಬದಲ್ಲಿ ಅನ್ಯಧರ್ಮೀಯರು ಭಾಗವಹಿಸಿದರೆ ಅದು ಧರ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆನೋ ಎಂಬ ಭಾವ ಮನೆ ಮಾಡಿ, ಆಚರಣೆಗಳು ಒಂದು ಧರ್ಮ ವಿಶಿಷ್ಟಕ್ಕೆ ಮಾತ್ರ ಸೀಮಿತವಾಗಿವೆ.   ಏಕಮೇವ ಗಂಡಸರ ಹಬ್ಬವೆಂದು ಖ್ಯಾತವಾದ  ಹೋಳಿ ಹುಣ್ಣಿಮೆಗೆ ಹೋಳಿಗೆ ತಿಂದು ಹೊಯ್ಕೊಳ್ಳುವದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ! ಕಾಮ ದಹನಮಾಡಲು ಕಟ್ಟಿಗೆ ಕಳುವು ಮಾಡುವದು, ಹಲಗೆ ಬಾರಿಸುತ್ತಾ, ಹೊಯ್ಕೊಳ್ಳುತ್ತ  ಕಾಮನ-ಪಟ್ಟಿ(ವಂತಿಗೆ) ಸಂಗ್ರಹಿಸಲು ಮನೆ ಮನೆಗೆ ತೆರಳುವದು ವಾಡಿಕೆ. ಕೇರಿಯೊಂದರ ಇಂತಹ  ವಿಶಿಷ್ಟವಾದ ಶೈಲಿಯ ಹಲಗೆ ಮೇಳವನ್ನು ಮುನ್ನಡೆಸಿ ಹೋಳಿ ಆಚರಣೆಯ ನೇತೃತ್ವ ವಹಿಸುತ್ತಿದ್ದುದು ಒಬ್ಬ ಮುಸ್ಲಿಂ ಯುವಕ!! ಜ್ಯಾತ್ಯತೀತತಗೆ-ಭಾವೈಕ್ಯತೆಗೆ-ಬಾಂಧವ್ಯಕ್ಕೆ-ಸಹಬಾಳ್ವೆಗೆ  ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?   ಮತ್ತೊಂದು ಕೇರಿಯಲ್ಲಿ ಹೋಳಿಯ ಸಮಯದಲ್ಲಿ ಜರುಗಿದ ಪ್ರಸಂಗವೊಂದು ಅನೇಕ ದಿನಗಳ ಕಾಲ ಓಣಿಯ ಜನರ ಬಾಯಿಗೆ ಆಹಾರವಾಗಿ ಗುಸುಗುಸು ಸುದ್ದಿಗೆ ಕಾರಣವಾಗಿತ್ತು. ಹೋಳಿಯ ಸಂದರ್ಭದಲ್ಲಿ ಸಂಗ್ರಹಿಸಿದ ವಂತಿಗೆಯಿಂದ ಹಬ್ಬ ಆಚರಿಸಿ ಉಳಿದ ಹಣದಲ್ಲಿ ಓಣಿಯ ಮಕ್ಕಳಿಗೆಲ್ಲ ಉಪಹಾರದ ವ್ಯವಸ್ಥೆಯಾಗುತ್ತಿತ್ತು.ಇನ್ನೂ   ಮಿಕ್ಕಿದ ಹಣದಿಂದ ಕ್ರಿಕೇಟ್ ಬ್ಯಾಟ ಖರೀದಿಸುವದಾಗಿ ಠರಾವು ಮಾಡಲಾಯಿತು ಮತ್ತು  ಇದರ ಹೊಣೆಯನ್ನು  ಓಣಿಯ ಹೋಳಿ ಆಚರಣೆ ಸಮಿತಿಯ ಇಬ್ಬರು ಪುಢಾರಿಗಳಿಗೆ ವಹಿಸಲಾಯಿತು. ಮೊದಲೇ  ನಿರ್ಧರಿಸಿದಂತೆ ಹತ್ತಿರದ ಬೆಳಗಾವಿಗೆ ತೆರಳಿ ಉತ್ತಮ ದರ್ಜೆಯ ಬ್ಯಾಟೊ೦ದನ್ನು ಖರೀದಿಸಿ ತಂದರು. ಆದರೆ ಇವರು ಬೆಳಗಾವಿಯಲ್ಲಿ ಭರ್ಜರಿ ಕೋಳಿಯೂಟಮಾಡಿ, ಕಾಶಿನಾಥರ ಅನಂತನ ಅವಾಂತರ ಚಿತ್ರನೋಡಿ ಸೃಷ್ಟಿಸಿದ ಅವಾಂತರದ ವೃತ್ತಾಂತ ಕೇರಿಯ ಜನರ ಹುಬ್ಬೇರಿಸಿ,  ಬೆಚ್ಚಿ ಬೀಳಿಸಿತ್ತು!!

ಈಗಿನಂತೆ ಸುಲಲಿತ ಸಂಚಾರ ಸಾಧನಗಳಿರದ ಆ ಕಾಲದಲ್ಲಿ ಪರ ಊರಿಗೆ  ಕಾಲೇಜು ಹಾಗೂ ಕಚೇರಿಗೆ ಹೋಗುವ  ಬಹುತೇಕ ಜನರ ಆಯ್ಕೆ ಅಮಿತಾಭ್-ರ  ಡಾನ್ ಚಿತ್ರದಲ್ಲಿ ಬಳಸಿದ ವಾಹನವನ್ನು ಹೋಲುವ ಶೌಕತ್-ರ ಟೆಂಪೋ.... ಸೌಮ್ಯ ಸ್ವಭಾವದ ಸಂಕೇಶ್ವರ ಮೂಲದ ಶೌಕತ್-ರಿಗೆ ಹಿಡಕಲ್ ಡ್ಯಾಮ್ ಎರಡನೇಯ ತವರಾಗಿತ್ತು. ಗುಂಪಾಗಿ ನಾಲ್ಕೈದು ಕುಟುಂಬಗಳು  ಒಟ್ಟಾಗಿ ಎಲ್ಲಾದರು ಪ್ರಯಾಣ ಬೆಳೆಸಲು ನಿರ್ಧರಿಸಿದರೆ ಅದು ಕೇವಲ ಶೌಕತ್-ರ ಟೆಂಪೊದಲ್ಲೇ...... ಪ್ರತಿಬಾರಿ ಗಣೇಶ ಚತುರ್ಥಿಯ ಪ್ರಯುಕ್ತ  ಶೌಕತ್-ರ ಟೆಂಪೋದಲ್ಲಿ ಸಂಕೇಶ್ವರ್ ಹಾಗೂ ಬೆಳಗಾವಿಗೆ ಗಣಪತಿ ನೋಡಲು ಹೋಗುವದೆಂದರೆ ಮಕ್ಕಳಿಗಂತೂ ಹಿಗ್ಗೋ ಹಿಗ್ಗು. ಶೌಕತ್-ರಿಗೆ ಹಿಡಕಲ್ ಡ್ಯಾಮ್ ಕುರಿತು ಅಪಾರ ಪ್ರೀತಿ ಮತ್ತು  ಅಭಿಮಾನವಿತ್ತು, ತಮ್ಮ ತವರಾದ ಸಂಕೇಶ್ವರ್ ತಂಡದ ವಿರುದ್ಧ ಕ್ರಿಕೇಟ್ ಪಂದ್ಯದಲ್ಲೂ ಅವರ ಬೆಂಬಲ ಸದಾ ಹಿಡಕಲ್  ತಂಡಕ್ಕಿರುತ್ತಿತ್ತು. ಕೆಲವೊಮ್ಮೆ ದುಡ್ಡಿಲ್ಲದಿರುವ ಬಡವರಿಗೆ ಉಚಿತವಾಗಿ ತಮ್ಮ ಟೆಂಪೋದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿ    ಮಾನವಿಯತೆಯನ್ನು ಮೆರೆಯುತ್ತಿದ್ದರು.      

ಸಮಾಜದಲ್ಲಿ ಪರರ ಮೋಜಿಗೆ ಮತ್ತು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ಕೆಲ ವಿಶಿಷ್ಟ-ವಿಚಿತ್ರ ವ್ಯಕ್ತಿಗಳ ಉಲ್ಲೇಖ ಅವಶ್ಯವೆನಿಸುತ್ತದೆ. ಡೊಗಳೆ ಚಡ್ಡಿಯಲ್ಲಿ  ವೃದ್ಧರಂತೆ ಕಾಣುತ್ತಿದ್ದ ೫೦ರ ಆಸುಪಾಸಿನ ಬ್ರಹ್ಮಚಾರಿ ವಾಸು, ಹಲವು ಮನೆಗಳಲ್ಲಿ ನಲ್ಲಿಯ ನೀರನ್ನು ದೂರದಿಂದ ಹೊತ್ತು ತಂದು-ತುಂಬಿ, ಪೇಟೆಯಿಂದ ದಿನದ ದಿನಸಿ ಕಾಯಿಪಲ್ಲೆ ತಂದು ಕೊಟ್ಟು ಅವರಿವರ ಮನೆಯಲ್ಲಿ ಊಟ ಮಾಡಿ ಹೊಟ್ಟೆಹೊರೆಯುತ್ತಿದ್ದ. ಚಿಕ್ಕವರು ದೊಡ್ಡವರು ಎಲ್ಲರೂ ವಾಸುನ್ನ ಛೇಡಿಸುವರೇ.. ರಜನೀಕಾಂತ ಶೈಲಿಯಲ್ಲಿ ಚುಟ್ಟಾ ಮೇಲೆ ಹಾರಿಸಿ,ಬಾಯಿಗಿತ್ತು ಸುರ್ ಅಂತ ಝುರಕಿ ಎಳೆದು,ಇಲ್ಲ ಸಲ್ಲದ ಹಾಸ್ಯ ಮಾಡುತ್ತಾ ಮುಖದಲ್ಲಿ ವಿಲಕ್ಷಣ  ಹಾವಭಾವಗಳನ್ನು ತೋರುತ್ತಾ ಎಲ್ಲರನ್ನು ರಂಜಿಸುತ್ತಿದ್ದ. ಅವನ ದುಡಿಮೆಯ ಹುಮ್ಮಸು  ಮತ್ತು ಆಲಸ್ಯರಹಿತ ಸ್ವಾಭಿಮಾನದ ಜೀವನವನ್ನು ಮೆಚ್ಚಲೇಬೇಕು.

ಸರಿ ಸುಮಾರು ವಾಸೂನ ವಯಸ್ಸಿನವನೇ ಆದ ಪಾಯಿಂಟ್-ಪರಿಮಳ ಎಂಬ ವಿಚಿತ್ರ ಹೆಸರಿನಿಂದ ಕರೆಯಲ್ಪುಡುತ್ತಿದ್ದ ವ್ಯಕ್ತಿ ಸಮಾಜದ ಸಾಮೂಹಿಕ ಮೋಜಿನ ವಸ್ತುವಾಗಿದ್ದ. ಅರೆ–ಬರೆ ಬಟ್ಟೆಯಲ್ಲಿ ಬಸ್-ಸ್ಟ್ಯಾಂಡ್-ನಲ್ಲಿ ಬಿದ್ದು ಕೊಂಡು, ವಾಣಿಯ ಮೇಲೆ ನಿಯಂತ್ರಣವಿಲ್ಲದೆ ಒಮ್ಮೊಮ್ಮೆ ಸಭ್ಯ ಸಂಸಾರಸ್ತರನ್ನು ಮುಜುಗುರಕ್ಕೀಡುಮಾಡುತ್ತಿದ್ದ. ಆದೊಮ್ಮೆ ಕೆಲ ಕಿಡಗೇಡಿ ಹುಡುಗರು ಪಾಯಿಂಟ್-ಪರಿಮಳ ಮಲಗಿದಾಗ ಅವನ ಚೊಣ್ಣಕ್ಕೆ ಪಟಾಕಿಯನ್ನು ಕಟ್ಟಿ, ಪಟಾಕಿಯ ಸದ್ದಾದಾಗ ಗಾಬರಿಯಿಂದ   ಬಸ್-ಸ್ಟ್ಯಾಂಡ್-ನ ಸುತ್ತ ಓಡಾಡಿ ಸುಸ್ತಾಗಿ, ಆ ಹುಡುಗರನ್ನು ವಾಚಾಮಗೋಚರವಾಗಿ ನಿಂದಿಸಿದ್ದ. ಸಮಾಜದಲ್ಲಿ ಪರರನ್ನು ಸ೦ಕಷ್ಟಕ್ಕೆ ಸಿಲುಕಿಸಿ ಸಂತೋಷಪಡುವ ವಿಕೃತ ಮನಸ್ಥಿತಿ ಬದಲಾಗಬೇಕು, ಸಮಾಜದಲ್ಲಿ ಸಕಲರು ಗೌರವದಿಂದ ಬಾಳಿ ಬದುಕುವಂತಾಗಬೇಕು, ಅಂದಾಗ ಮಾತ್ರ ಗಾಂಧೀಜಿಯ ರಾಮ ರಾಜ್ಯದ ಕನಸಿಗೆ ಒಂದು ಅರ್ಥ ಕಲ್ಪಿಸಿದಂತಾಗುತ್ತದೆ. ಹಿಡಕಲ್ ಡ್ಯಾಮ್ ಬಸ್ ಸ್ಟಾಂಡ್-ನಲ್ಲಿ ಎಲ್ಲರ ಗಮನಸೆಳೆಯುತ್ತಿದ್ದ, ಬರು-ಹೋಗುವ ಬಸ್, ಟ್ಯಾಕ್ಸಿ, ಟೆ೦ಪೊಗಳಲ್ಲಿ ಎರಡೂ ಕಾಲುಗಳ ಮೇಲೆ ಸ್ಥಿಮಿತವಿಲ್ಲದಿದ್ದರೂ ಪಾದರಸದಂತೆ ಸಂಚರಿಸಿ ಭಿಕ್ಷೆ ಬೇಡುತ್ತಿದ್ದ ಇನ್ನೊಬ್ಬ ವ್ಯಕ್ತಿಯೇ ಕಾಕಾ ಕಾಲ ಇಲ್ಲ!! ಒಮ್ಮೊಮ್ಮೆ ಬೇರೆ ಊರುಗಳಿಗೂ ಉಚಿತವಾಗಿ ಪ್ರಯಾಣ ಬೆಳೆಸುತ್ತಿದ ಈತನ ಹೆಸರನ್ನು ಯಾರೂ ಅರಿಯರು, ಕಾಕಾ ಕಾಲ ಇಲ್ಲ ಅಂತಲೇ ಎಲ್ಲರಿಗೂ ಚಿರಪರಿಚಿತ.   

ಹಿಡಕಲ್ ಡ್ಯಾಮ್-ನ ಗಾಸಿಪ್ ಕೇಂದ್ರಗಳೆಂದೇ ಹೆಸುರುವಾಸಿಯಾದ ಎರಡು ಕಟ್ಟೆಗಳು, ಕ್ರಿಕೇಟ್ ಮೈದಾನದ ಕಟ್ಟೆ ಮತ್ತು ಇನ್ನೊಂದು ಗ್ರಂಥಾಲಯ ಸಂಕೀರ್ಣದ ಕಟ್ಟೆ. ಈ ಎರಡೂ ಸ್ಥಳಗಳು ದೇಶದ,ಜಗತ್ತಿನ ಹಾಗೂ ಊರಿನ ಆಗು ಹೋಗುಗಳ ಕುರಿತು ನಡೆಯುವ ಕುತೂಹಲಕರ  ಚರ್ಚೆಗಳಿಗೆ,ಗಾಸಿಪ್-ಗಳಿಗೆ  ವೇದಿಕೆಯಾಗಿ ಸಾಕ್ಷಿಯಾಗಿದ್ದವು. ಹೈಸ್ಕೂಲ್-ನಲ್ಲಿ  ಓದುತ್ತಿದ್ದ ಹದಿಹರೆಯದ  ನಮಗೆ ಇಂತಹ ಚರ್ಚೆಗಳಲ್ಲಿ ನಮಗಿಂತ ಹಿರಿಯರ ಮಾತುಗಳನ್ನು ಕೇಳಿ ವಿಷಯದ ಕುರಿತು ನಮಗಿದ್ದ ಜ್ಞಾನವನ್ನು ಪ್ರದರ್ಶಿಸುವ ಅವಕಾಶ ದೊರೆಯುತ್ತಿತ್ತು. ಲೈಬ್ರರಿಯಲ್ಲಿ ಕನ್ನಡ ದಿನ ಪತ್ರಿಕೆ, ವಾರ ಪತ್ರಿಕೆಗಳಾದ ತರಂಗ,ಸುಧಾ,ಪ್ರಜಾಮತ ಹಾಗೂ ಸ್ಪೋರ್ಟ್ಸ್ ಸ್ಟಾರ್-ನ ಪುಟಗಳನ್ನು ತಿರುವಿ ಹಾಕುತ್ತಾ, ಪಕ್ಕದಲ್ಲಿ ಯಾರು ಇಲ್ಲದನ್ನು ಖಚಿತ ಪಡಿಸಿಕೊಂಡು ಆಗಿನ ಕಾಲದ ಬಹುತೇಕ ವಯಸ್ಕರರು ಓದಲು ಹವಣಿಸುತ್ತಿದ್ದ ವಿಶೇಷ ಅಂಕಣಕ್ಕಾಗಿ ಸಂಕೋಚದಿಂದಲೇ ಪೊಲೀಸ್ ನ್ಯೂಸ್ ಪತ್ರಿಕೆಯಲ್ಲಿ ಇಣುಕುತ್ತಿದ್ದುದ್ದು, ಯಾರಾದರೂ ಬಂದರೆ ಮುಜುಗುರವಾಗದಿರಲೆಂದು ಬೇರೊಂದು ಪತ್ರಿಕೆಯನ್ನು ಅದರ ಮೇಲೆ ಇರಿಸುವದನ್ನು ನೆನಸಿಕೊಂಡರೆ ಮನ ಪುಳುಕಿತಗೊಳ್ಳುತ್ತದೆ!

ಹಿಡಕಲ್ ಜನರ ಕ್ರೀಡಾಸಕ್ತಿ ಮತ್ತು ಕ್ರೀಡಾಭಿನಕ್ಕೆ ಮೆರಗು ತಂದುಕೊಟ್ಟದ್ದು ೮೦ರ ದಶಕದ ಮಧ್ಯಭಾಗದಲ್ಲಿ ಆಯೋಜಿಸಲಾದ ರಾಜಮಟ್ಟದ ಹೊನಲು ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿ. ರಾಜ್ಯದ ನಾನಾ ಪ್ರದೇಶಗಳಿಂದ ಬಂದ ಹೆಸರಾಂತ ವ್ಹಾಲಿಬಾಲ್- ಪಟುಗಳು ಭಾಗವಹಿಸಿದ ಆ ಪಂದ್ಯಾವಳಿಯಲ್ಲಿ ಆಡಿದ ಹೊಸಮನಿಯವರು ಮುಂದೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಬೆಳಗಾವಿ ಜಿಲ್ಲೆಯ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟವೂ ಕೂಡ ಹಿಡಕಲ್ ಡ್ಯಾಮಿನಲ್ಲಿ ಆಯೋಜಿಸಲ್ಪಟ್ಟಿತ್ತು, ನನ್ನ ಹೃದಯದಲ್ಲಿ ಶಾಶ್ವತವಾಗಿ ಮನೆಮಾಡಿದ್ದು ಹುಕ್ಕೇರಿ ತಾಲೂಕಿನ ಶಾಲೆಯೊಂದರ ವಯೋವೃದ್ಧ ಮುಖ್ಯೋಧ್ಯಾಪಕಿಯೊಬ್ಬರು  ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಲಯಬದ್ಧವಾಗಿ ಹಾಡಿದ “ಒಪ್ಪತ್ತು ಮಾಡತಾರ ಬೋಗೋಣಿ ಉಪ್ಪಿಟ್ಟು ಬಡುತಾರ.... ಮತ್ತು ಸೆಜ್ಜಿ ರೊಟ್ಟಿ ಚವಳಿಕಾಯಿ ಹಪ್ಪಳಸಂಡಿಗಿ ಉಪ್ಪಿನಕಾಯಿ ಮಂದಿ ಭಾಳ ಬಂದರಾಂತ ಅರ್ಧಾ ಗಿರ್ದಾ ನೀಡತಾರ ಬಂದೇವರಪ್ಪ ಬಂದೇವ ನಾವು ಬೀಗರ ಮನಿಗೆ.. ” ಎಂಬ ಜಾನಪದ ಗೀತೆಗಳು.  ಒಟ್ಟಾರೆಯಾಗಿ ಹೇಳುವಾದದರೆ ಕ್ರೀಡೆಗಳ ವಿಷಯದಲ್ಲಿ  ಹಿಡಕಲ್ ಡ್ಯಾಮ್ ಸಮಯವನ್ನು  ಹಿಂದಿಕ್ಕಿತ್ತು. ೧೯೮೮-೧೯೮೯ರಲ್ಲಿ ನಮ್ಮ ಮಾಧ್ಯಮಿಕ ಶಾಲಾ ತಂಡ ಬಾಲ್ ಬ್ಯಾಡ್ಮಿಂಟನ್-ಲ್ಲಿ ಜಿಲ್ಲಾ ಚಾಂಪಿಯನ್ ಆಗಿತ್ತು!

 ನಮಗಿದ್ದ ಕ್ರಿಕೇಟ್-ನ ಅಪರಿಮಿತ ಹುಚ್ಚಿನ ಕುರಿತು ಬೆಳಕು ಚೆಲ್ಲುವ ಘಟನೆಯೊಂದು ನಡೆದದ್ದು  1985ರಲ್ಲಿ. ಏಳನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ, ಬೆನ್ಸನ್ ಐಂಡ್ ಹೇಜಿಸ್ ವರ್ಲ್ಡ್ ಚಾಂಪಿಯನ್-ಶಿಪ್ ಕ್ರಿಕೇಟ್ ಪಂದ್ಯಾವಳಿಯ ಫೈನಲ್ ಪಂದ್ಯ, ಭಾರತ ಮತ್ತು ಪಾಕಿಸ್ತಾನ ಪರಸ್ಪರ  ಎದುರಾಳಿಗಳು. ದೂರದರ್ಶನ ನಿಜಕ್ಕೂ ಸಾಮಾನ್ಯರಿಂದ ತುಂಬಾ ದೂರವಿದ್ದ ಕಾಲವದು, ಇಡೀ ಊರಿನಲ್ಲಿ ಒಂದೋ ಎರಡು ಟಿ.ವಿ.ಗಳು, ಅವುಗಳಿಗೆ ಬಾನೆತ್ತರದ ಎಂಟೆನಾಗಳು, ಸರ್ಕಸ್ ಮಾಡಿ 360ಕೋನದಲ್ಲಿ ಸಂಪೂರ್ಣವಾಗಿ ತಿರುಗಿಸಿದಾಗ, ಯಾವುದೋ ಒಂದು ಕೋನದಲ್ಲಿ ಚುಕ್ಕೆ ತುಂಬಿದ ಚಿತ್ರಗಳು ಟಿ.ವಿ.ಪರದೆಮೇಲೆ  ಮೂಡಿ ಬರುತ್ತಿದ್ದವು. ಅಂತಿಮ ಪಂದ್ಯದ ವೀಕ್ಷಣೆಗಾಗಿ ಊರಲ್ಲಿನ ಟಿ.ವಿ.ಯನ್ನು ಸ್ಪಷ್ಟ ಸಿಗ್ನಲ್ ದೊರೆಯುವ ಹತ್ತಿರದ ಗುಡ್ಡದ ಮೇಲಿದ್ದ ಹುನ್ನೂರ್ ಐ.ಬಿ.ಗೆ ಒಯ್ಯಲಾಗಿತ್ತು. ಈ ಸುದ್ದಿ ಕ್ರಿಕೇಟ್ ಪ್ರೇಮಿಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ, ತಂಡೋಪತಂಡವಾಗಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಹುನ್ನೂರ್ ಐ.ಬಿ. ತಲುಪಹತ್ತಿದರು. ನಾವು ಮನೆಯಲ್ಲಿ ತಿಳಿಸದೇ ಯಾವುದೋ ಒಂದು ಟೆಂಪೋದಲ್ಲಿ ದುಡ್ಡಿಲ್ಲದೇ ಕಾಡಿ ಬೇಡಿ, ಹುನ್ನೂರ್ ಐ.ಬಿ. ಸೇರಿ ಆ ಪಂದ್ಯವನ್ನು ವೀಕ್ಷಿಸಿದ್ದು ಮರೆಯಲು ಸಾಧ್ಯವೇ ಇಲ್ಲ. ಶ್ರೀಕಾಂತ್ ಪಂದ್ಯ ಶ್ರೇಷ್ಠ ಮತ್ತು ರವಿ ಶಾಸ್ತ್ರಿ ಸರಣಿ ಶ್ರೇಷ್ಠರಾಗಿ (ಚಾಂಪಿಯನ್ ಆಫ್ ಚಾಂಪಿಯನ್ಸ್) ಬಹುಮಾನವಾಗಿ ದೊರೆತ ಕಾರನ್ನೇರಿ  ಮೈದಾನದ ಸುತ್ತ ಪ್ರದಕ್ಷಿಣೆ ಹಾಕಿದ ದ್ರಶ್ಯಗಳು ನೆನಪು ಇನ್ನೂ ಮಾಸಿಲ್ಲ! ಕೇಬಲ್ ಟಿ.ವಿ.ಯ ಆಗಮನವಾದ ನಂತರದಲ್ಲಿ ಭಾರತದ ಕ್ರಿಕೇಟ್ ಪಂದ್ಯವೊಂದು ನಡೆಯುತ್ತಿದ್ದಾಗ ಕೆ.ಇ.ಬಿ. ಕೃಪೆಯಿಂದ ವಿದ್ಯುತ್ ಕೈಕೊಟ್ಟು ದಿನವಿಡೀ ಕರೆಂಟ್ ಬರುವದಿಲ್ಲವೆನ್ನುವದು ಖಾತ್ರಿಯಾಗಿ ಕ್ರೀಡಾಭಿಮಾನಿಗಳೆಲ್ಲ ಸೇರಿ ದುಡ್ಡು ಸಂಗ್ರಹಿಸಿ ಕೇಬಲ್ ಟಿ.ವಿ. ರೂಮ್ ಮುಂದೆ ಜನೇರಟರ್-ನಿಂದ ಸಂಪರ್ಕ ಒದಗಿಸಿ ಪಂದ್ಯ ವೀಕ್ಷಿಸುವ ವ್ಯವಸ್ಥೆ ಮಾಡಿದ್ದರು!   
     

ಹೀಗೆ ಇನ್ನೂ ಅನೇಕ ನೆನಪುಗಳು ಬುತ್ತಿಯನ್ನು ಬಿಚ್ಚಿ ಬಡಿಸಿ ಮೆಲಕು ಹಾಕುವ ಆಸೆ...............