Thursday, 27 April 2017

ಮದುವೆಯ ಈ ಬಂಧ - ಜನ್ಮ ಜನ್ಮದ ಅನುಬಂಧ


ಸಂಜಯ ಹಿಂದಿ ನಿಯತಕಾಲಿಕವೊ೦ದರ ವರದಿಗಾರ ಹಾಗೂ ಲೇಖಕ. ತನ್ನ ಲೇಖನವೊಂದರಲ್ಲಿ ಪತಿ ಹಾಗೂ ಬೀವಿ ಎಂಬೆರಡು ಪದಗಳ ಪ್ರಯೋಗವನ್ನು ನೋಡಿ ಸಂಪಾದಕ ಜೋಶಿಯವರು ಕರೆಸಿ ವಿಚಾರಿಸ್ತಾರೆ. ಶೋಹರನ ಬೀವಿ ಇರ್ತಾಳೆ ಅಥವಾ ಮಿಯಾನ ಬೀವಿ ಇರ್ತಾಳೆ, ಆದರೆ ಪತಿಗೆ ಇರೋದು ಪತ್ನಿ, ಬೀವಿಯಲ್ಲ ಅಂತ ಸಮಜಾಯಿಸ್ತಾರೆ. ಭಾಷಾ ಪ್ರಯೋಗದಲ್ಲಾದ ಪ್ರಮಾದವನ್ನು ಒಪ್ಪಿಕೊಂಡು ತನ್ನ ತಪ್ಪನ್ನು ಸಂಜಯ ತಿದ್ದಿಕೊಳ್ಳುತ್ತಾನೆ. ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧ, ಒಂದಕ್ಕೊಂದು ಅನುರೂಪವಾಗಿದ್ದು ಪ್ರತಿಬಿಂಬಕವಾಗಿವೆ. 

ಸಂಜಯ ಸ್ನೇಹಿತೆಯಾದ ನಿಧಿಗೆ ಫೋನ್ ಮಾಡಿ ಅವಳ ಪತಿ ಮತ್ತು ತನ್ನ ಆಪ್ತಮಿತ್ರ  ನಿಖಿಲನ ಕುರಿತು ವಿಚಾರಿಸಿದಾಗ, ನಿಧಿ ಅವರಿಬ್ಬರ ನಡುವೆ ಇರುವ ಮನಸ್ತಾಪದ ಕುರಿತು ಪ್ರಸ್ತಾಪಿಸಿ ನಿಖಿಲ ಮನೆಗೆ ಬಾರದಿರುವದನ್ನು  ತಿಳಿಸುತ್ತಾಳೆ. ಗಂಡ - ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಯಾರಿಗೆ ತಾನೇ ಗೊತ್ತಿಲ್ಲ! ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಪತಿ ಪತ್ನಿಯ ಸಂಬಂಧ ವಿಶ್ವಾಸದ ತಳಹದಿಯಯ ಮೇಲೆ ನಿಂತಿದೆ. ಅದರಲ್ಲೂ ದುಡಿಯುವ ಜೋಡಿಗಿರುವ ಸಮಯದ ಅಭಾವ,ಸಮನ್ವಯದ ಕೊರತೆ,ಬೇಡದಿರುವ ಅಹಂ(ಇಗೋ), ಕ್ಷುಲ್ಲಕ ಕಾರಣಕ್ಕಾಗಿ ಸುಂದರ ಸಂಸಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಪ್ರೀತಿಸಿ ಹರಸಾಹಸ ಮಾಡಿ ಮನೆಯವರನ್ನು ಒಪ್ಪಿಸಿ ನಿಖಿಲನನ್ನು ವರಿಸಿದ್ದಳು ನಿಧಿ, ಅಂತಹ ಯಾವ ಕಾರಣಕ್ಕಾಗಿ ಪರಸ್ಪರರ ಮುಖ ನೋಡದಷ್ಟು ದೂರ ಹೋದರು??... ಸಂಜಯ ವಿಚಾರ ಮಗ್ನನಾದ. ಸಂಜಯ ನಿಖಿಲಗೆ ಫೋನ್ ಮಾಡಿ ಮನೆಗೆ ಅವ್ಹಾನಿಸಿ ತಾನು ಮನೆಗೆ ಬರುತ್ತಿರುವ ವಿಷಯ ತಿಳಿಸುವಂತೆ ನಿಧಿಯನ್ನು  ಕೇಳಿಕೊಳ್ಳುತ್ತಾನೆ. ನಿಧಿ ಸಂಕೋಚಿಸಿದಾಗ, ತಾನೇ ಖುದ್ದಾಗಿ ನಿಧಿ-ನಿಖಿಲರ ಮನೆಗೆ ಬಂದು, ನಿಖಿಲಗೆ ಫೋನ್ ಮಾಡಿ ಒತ್ತಾಯಪೂರಕವಾಗಿ ನಿಖಿಲನನ್ನು ಕರೆಸಿಕೊಳ್ಳುತ್ತಾನೆ.

 ನಿಖಿಲ-ನಿಧಿಯರ ವೈವಾಹಿಕ ಜೀವನದಲ್ಲಿ ಬಿರುಕು ತಂದು ಪರಸ್ಪರರನ್ನು ದೂರಮಾಡಿದ ಕಾರಣವನ್ನು ಸಂಜಯ ತಿಳಿಯ ಬಯಸುತ್ತಾನೆ. ಮನದಾಳದ ಅನುಪಮ ಪ್ರೀತಿ, ಹೃದಯಾಂತರಾಳದಲ್ಲಿ ಅಂಕುರಿಸಿದ ಪ್ರೇಮ ಬಾಡಿ, ಹಾಲಿನಂಥ ಸಂಸಾರ ಒಡೆಯುವ ಅಂಚಿಗೆ ಬರಲು ಕಾರಣವಾದ ಹುಳಿ ಏನಿರಬಹುದು? ಆಗ ನಿಧಿ “ನಮ್ಮಿಬ್ಬರಿಗೂ ಯಾಕೋ ಹೊಂದಾಣಿಕೆಯಾಗುತ್ತಿಲ್ಲ,ನಿಖಿಲ ಕಾರಣವಿಲ್ಲದೇ ನನ್ನ ಮೇಲೆ ರೇಗಾಡುತ್ತಾನೆ, ನಾನು ಧರಿಸುವ ಉಡುಗೆ-ತೊಡುಗೆಗಳ ಕುರಿತು ನಿರ್ಧರಿಸುವ ಸ್ವಾತಂತ್ರ್ಯವೂ ನನಗಿಲ್ಲವಾ! ನಾನೇನು ಅರ್ಧಾಂಗಿಣಿಯೋ ಅಥವಾ ಮನೆ ಆಳೋ?” ಎಂದು ತನ್ನ ಗೋಳನ್ನು ಹೇಳಿಕೊಳ್ಳುತ್ತಾಳೆ. ಆಗ ನಿಖಿಲ “ನೋಡು ಸಂಜಯ, ಸಂಜೆ  ಮನೆಗೆ ಬಂದ ತಕ್ಷಣ ಸಮಯಕ್ಕೆ ಸರಿಯಾಗಿ ಒಂದು ಕಪ್ ಚಹಾ ಬಯಸೋದು ತಪ್ಪಾ?ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳನ್ನೇ ನೋಡು,ಹೆಣ್ಣು ಧರಿಸುವ ತುಂಡುಡುಗೆಗಳು ಅನೇಕ ಪ್ರಕರಣಗಳಲ್ಲಿ ಉತ್ತೇಜಕವಾಗಿ ಕೆಲಸ ಮಾಡುತ್ತವೆ ಎನ್ನುವದರಲ್ಲಿ ಏನಾದರೂ ಅನುಮಾನವಾ? ಭಾರತೀಯ ನಾರಿಯ ಸೌಂದರ್ಯ ವೃದ್ಧಿಸುವದೇ ಪರಂಪರಾಗತ ಉಡುಗೆಗಳಿಂದ. ಆದರೂ ಮರ್ಯಾದೆಯ ಮತ್ತು ನಮ್ರತೆಯ ಚೌಕಟ್ಟಿನ್ನಲ್ಲಿನ ಉಡುಗೆ-ತೊಡುಗೆಗಳ ತುಸು ಆಧುನಿಕತೆಯನ್ನು ಯಾರೂ ಜರಿಯರು”. ಇಬ್ಬರೂ ಒಟ್ಟಿಗೆ “ಈ ಪುರಾಣ ಈಗ್ಯಾಕೆ? ನಮಗೆ ತಲಾಕ್ ಬೇಕು” ಎಂದು ಪುನುರಚ್ಚಿರುಸುತ್ತಾರೆ.

ಆಗ ಸಂಜಯ “ನೀವು ತಲಾಕ್ ತೆಗೆದುಕೊಳ್ಳಲು ನಿಕಾಹ್ ಆಗಿಲ್ಲ!! ಡೈವೋರ್ಸ ತೆಗೆದುಕೊಳ್ಳಲು ಮ್ಯಾರೆಜ್ ಆಗಿಲ್ಲ!! ಮಾಂಗಲ್ಯ೦ ತಂತುನಾನೇನ ಮಮಜೀವನ ಹೇತುನ....ಅಂತ ನೂರು ವರುಷಗಳ ಕಾಲ ನೆಮ್ಮದಿಯ ಬದುಕು ನಡೆಸಲು ಅಗ್ನಿ ಸಾಕ್ಷಿಯಾಗಿ ನೀವು ಆಗಿರೋದು, ಹಿಂದೂ ರೀತಿ ರಿವಾಜಿನ ಜನುಮ ಜನುಮದ ಅನುಬಂಧವುಳ್ಳ ವಿವಾಹ!!!! ಇದರಲ್ಲಿ ಸಾವಿರ ಜನ್ಮ ಬಂದರೂ ಬೇರೆಯಾಗುವ ಅವಕಾಶವಿಲ್ಲ. ನಿಮಗೆ ಬೇರೆಯಾಗಲೇಬೇಕೆಂದಿದ್ದರೆ, ಮೊದಲು ನಿಕಾಹ್ ಆಗಿ ನಂತರ ನಾನೇ ನಿಮಗೆ ತಲಾಕ್ ಕೊಡಿಸಲು ಸಹಕರಿಸುತ್ತೇನೆ.”  ಸಂಜಯನ ಮಾತುಗಳಿಂದ ವಾತಾವರಣ ಕೊಂಚ ತಿಳಿಯಾಗಿತ್ತು, ನಿಧಿ-ನಿಖಿಲರ ಮುಖದ ಗಂಟು ಕರಗಹತ್ತಿತ್ತು. ಮದುವೆಯ ಮುಂಚೆ ಕಾಲೇಜಿನಲ್ಲಿ ಲವ್-ಬರ್ಡ್ಸ್ ಆಗಿ, ಕ್ಲಾಸ್ಗೆ ಚಕ್ಕರ್ ಹೊಡದು ಸಿನೆಮಾ ನೋಡಿದ್ದು,ಒಂದೇ ಐಸ್-ಕ್ರೀಮನ್ನು ಇಬ್ಬರು ಸವಿದದ್ದು, ಮದುವೆಗೆ ಎರಡೂ ಕಡೆಯ ಮನೆಯರ ವಿರೋಧವನ್ನು ಸಮರ್ಥವಾಗಿ ಎದುರಿಸಿ, ಮನೆಯವರ ಮನ ಗೆದ್ದು, ಮೌಂಟ್-ಅಬುವಿನ ತಣ್ಣನೆಯ ವಾತಾವರಣದಲ್ಲಿನ ಮಧುಚಂದ್ರದ ಪಿಸುಮಾತಿನ ಬೆಚ್ಚನೆಯ ದಿನಗಳು, ಈ ಜಗತ್ತಿನಲ್ಲಿ ಬಯಸಿದ ಜೀವನಸಾಥಿಯನ್ನು ಪಡೆದ ನಮ್ಮಷ್ಟು ಭಾಗ್ಯವಂತರು ಇನ್ನೊಬ್ಬರಿಲ್ಲ ಎಂದು ಸ್ವರ್ಗದ ಬಾಗಿಲು ತಟ್ಟಿ ಸಂಭ್ರಮಿಸಿದ ದಿನಗಳ ಚಿತ್ರಣ ಕ್ಷಣಾರ್ಧದಲ್ಲಿ ಕಣ್ಣು ಮುಂದೆ ಕಟ್ಟಿದಂತಾಗಿ ಇಬ್ಬರ ಗಂಟಲು ಒಣಗಿತ್ತು.            

ಸಂಜಯ ನಿಧಿಗೆ ಮದುವೆಯ ಅಲ್ಬಮ್ ತರಲು ಹೇಳುತ್ತಾನೆ. ನಿಧಿ ತನ್ನ ವಿವಾಹದ ಮಧುರ ಕ್ಷಣಗಳ ಸ್ಮೃತಿಚಿನ್ಹದಂತಿದ್ದ ಬಂಗಾರದ ಫ್ರೇಮಿನ ಅಲ್ಬಮ್-ನ್ನು ತ೦ದು ಸಂಜಯನ ಕೈಗಿತ್ತಳು. ಸಂಜಯ ಒಂದೊಂದೇ ಫೋಟೋಗಳನ್ನು ನೋಡುತ್ತಾ ನಿಧಿ-ನಿಖಿಲರ ಮದುವೆಯ ಪುಟಗಳನ್ನು ತಿರುವಿಹಾಕುತ್ತಾ ಸವಿ ನೆನಪುಗಳನ್ನು ತಾಜಾಗೊಳಿಸಿ,ಅಲ್ಬಮ್-ನಿಂದ ಫೋಟೋವೊಂದನ್ನು ಹೊರತೆಗೆದು ಇಬ್ಬರ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತಾನೆ. ಇಬ್ಬರೂ ಕೌತುಕದಿಂದ “ಏನಿದರ ವಿಶೇಷ???” ಎನ್ನುತ್ತಾರೆ. ಸಂಜಯ ಅಲ್ಬಮ್-ನಿಂದ ಹೊರತೆಗೆದದ್ದು ವರನ ಪಾದಪೂಜೆಯ ಫೋಟೋ. “ಹಿಂದೂ ವಿಧಿ ವಿಧಾನಗಳಲ್ಲಿ ಹಿರಿಯರು ಅ೦ದ್ರೆ ವಧುವಿನ ತಂದೆ ತಾಯಿಗಳು ವಯಸ್ಸಿನಲ್ಲಿ ಚಿಕ್ಕವನಾದರೂ ವರನ ಪಾದಪೂಜೆ ಮಾಡುತ್ತಾರೆ. ಶಾಸ್ತ್ರಗಳ ಪ್ರಕಾರ ಮದುವೆಯ ಸಂದರ್ಭದಲ್ಲಿ ವಧು-ವರರು ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವಿನ ಪ್ರತಿರೂಪವಿದ್ದಂತೆ. ಇದೇ ಕಾರಣಕ್ಕಾಗಿ ವಯಸ್ಸಿನಲ್ಲಿ ಕಿರಿಯನಿದ್ದರೂ ಹಿರಿಯರಾದ ಅತ್ತೆ ಮಾವ ವರನ ಪಾದಪೂಜೆ ಮಾಡುತ್ತಾರೆ. ಭಗವಾನ್ ವಿಷ್ಣು-ಲಕ್ಷ್ಮೀದೇವಿ ಸಾವಿರ ವರುಷಗಳಾದರು ಬೇರೆಯಾಗುತ್ತರಾ? ಇಂತಹ ಶ್ರೇಷ್ಠ  ಧರ್ಮ ನಮ್ಮದು, ಕಾನೂನು ಅನೇಕ ಕಾರಣಗಳಿಗೆ ವಿಚ್ಛೇಧನಕ್ಕೆ ಅವಕಾಶ ನೀಡಿದರೂ ನಮ್ಮ ಧರ್ಮ ನಮಗೆ ಎಂತಹ ಕಠಿಣ ಪರಿಸ್ಥಿತಿ –ಸಂದರ್ಭದಲ್ಲಿಯೂ ಸಂಯಮ ಕಳೆದುಕೊಳ್ಳದೇ ಒಂದಾಗಿ ಬಾಳಲು ಕಲಿಸುತ್ತದೆ”. ಎಂದು ಸಂಜಯ ಮಾತು ಮುಗಿಸಿದ.

ನಿಧಿ ಚಹಾ ಮಾಡಿ ತರುತ್ತೇನೆ೦ದು ಆಡುಗೆ ಮನೆಯತ್ತ ನಡೆದಳು. ನಿಖಿಲ-ನಿಧಿಯರ ಕಣ್ಣುಗಳ ತೇವ  ಮರೆಮಾಚಲು ಅಸಾಧ್ಯವಾಗಿತ್ತು, ಕಣ್ಣುಗಳು ತುಂಬಿ ಬಂದಿದ್ದವು.ಅವರಿಬ್ಬರ ಮನಸ್ಸು ಹಗುರವಾಗಿ, ಮಧುರ ಪ್ರೇಮದ ಭಾವ-ವೀಣೆ ಮಿಡಿದು ಮತ್ತೆ ಅನುರಾಗ ಅರಳಿತ್ತು. ನಿಧಿ ಚಹಾ ಮಾಡಿ ಟಿಪಾಯಿಯ ಮೇಲೆ ತಂದಿಟ್ಟಳು, ಸಂಜಯ ತನ್ನ ಕಪ್ಪಿನಲ್ಲಿ ಚಹಾ ಸುರಿದುಕೊಂಡು,ನಿಖಿಲನ ಕಪ್ಪಿಗೂ ಸುರಿದು ಒಂದು ಚಮ್ಮಚ ಸಕ್ಕರೆಯನ್ನು ನಿಖಿಲನ ಕಪ್ಪಿಗೆ ಹಾಕಲು ಹೋದಾಗ, ನಿಧಿ ”ಅಣ್ಣಾ ಅವರಿಗೆ ಸಕ್ಕರೆ ಹಾಕಬೇಡ....ಡೈಬೀಟಿಸ್......”. ಹೀಗೆ ಬೇರೆಯಾಗಲು ನಿರ್ಧರಿಸಿದ್ದ ನಿಧಿ-ನಿಖಿಲಗೆ ಪರಸ್ಪರ  ಮೇಲಿದ್ದ ಸಿಟ್ಟು ದೂರವಾಗಿ ಒಲವಿನ ಜೋಡಿಯಲ್ಲಿ ಮತ್ತೆ ಪ್ರೇಮಾ೦ಕುರವಾಗಿತ್ತು.


ಸಂಜಯ ಇಬ್ಬರ ಕುರಿತು “ತಲಾಕ್ ಭಾರತೀಯ ಶಬ್ದವೇ ಅಲ್ಲ, ಹಿಂದಿಯಲ್ಲಂತೂ ಈ ಶಬ್ದಕ್ಕೆ ಪರ್ಯಾಯ ಪದವೇ ಇಲ್ಲ. ಆಧುನಿಕ ಯುಗದ ಜಾಗತೀಕರಣದ ಜೀವನ ಶೈಲಿಯ ಪರಿಣಾಮಸ್ವರೂಪವಾದ ಲಿವ್-ಇನ್ ಸಂಬಂಧಗಳು,ಒನ್-ನೈಟ್  ಸ್ಟ್ಯಾಂಡ್-ಗಳು ಇತ್ತೀಚಿನ ದಿನಗಳಲ್ಲಿ ಸತಿ-ಪತಿಯರ ವೈವಾಹಿಕ ಜೀವನದ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತಿರುವದು ವಿಷಾದನೀಯ. ಮದುವೆಯ ಜೋಡಿಗಳು ಬ್ರಹ್ಮನ ಸೃಷ್ಟಿ ಎನ್ನುವದು ಪ್ರತೀತಿ, ಸಹಗಮನ ಪದ್ಧತಿಯಷ್ಟೇ ಅನಿಷ್ಟವಾದ ತ್ರಿವಳಿ ತಲಾಕ್ ವಿರುದ್ಧ  ಸಮಾಜದ  ಮಹಿಳೆಯರಲ್ಲಿ ಜಾಗೃತಿ ಮೂಡುತ್ತಿದೆ. ಆದರೂ ನೀವು ಬೇರೆಯಾಗಲೇಬೇಕೆಂದರೆ, ಮೊದಲು ನಿಕಾಹ್ ಆಗಿ ಆಮೇಲೆ ನಾನೇ ಮುಂದೆ ನಿಂತು ನಿಮ್ಮಿಬ್ಬರಿಗೆ ತಲಾಕ್ ಕೊಡಸ್ತೆನೆ” ಎಂದಾಗ, ಇಬ್ಬರ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ. ತಮ್ಮ ಬಾಂಧವ್ಯಕ್ಕೆ ಅಡ್ಡಿಯಾಗಿದ್ದ ಅಪನಂಬಿಕೆಯ  ಮುಳ್ಳುಗಳನ್ನು ಸಂಸಾರವೆಂಬ ಗುಲಾಬಿಯಿಂದ ಕಿತ್ತೆಸೆದು, ಮಕರಂದವನ್ನು ಮರಳಿಸಿದ್ದಕ್ಕೆ, ಮೌನದಿಂದಲೇ ಸಂಜಯಗೆ ಧನ್ಯವಾದಗಳನ್ನು ಅರ್ಪಿಸಿದರು.             

Sunday, 2 April 2017

ವೃದ್ಧಾಪ್ಯದಲ್ಲೂ ಅಸಾಮಾನ್ಯ ಲವಲವಿಕೆ – ಮುಪ್ಪಿನಲ್ಲೂ ಸಾರ್ಥಕ ಜೀವನಕ್ಕೊಂದು ಊರುಗೋಲು



ಯಾರೂ ಅನುಭವಿಸದ, ಕಂಡೂ ಕಾಣರಿಯದ  ಸಾವಿನಾಚೆಯ ಅದ್ಭುತ ಲೋಕವನ್ನು ಬಲ್ಲವರಾರು? ಅಂತಹದೊಂದು ಲೋಕವೇನಾದರೂ ನಿಜವಾಗಿಯೂ ಅಸ್ಥಿತ್ವದಲ್ಲಿದೆಯಾ? ಸಕಲ ಚರಾಚರ ಜೀವರಾಶಿಗಳಿಗೆ ಸೃಷ್ಟಿಕರ್ತನು ತನ್ನದೇ ಆದ ವೈವಿಧ್ಯತೆಯನ್ನು ದಯಪಾಲಿಸಿದ್ದಾನೆ.  ಅದರಲ್ಲೂ  ಮಾನವ ಜನ್ಮ ಪಡೆದ ನಾವೆಲ್ಲಾ ಧನ್ಯರು. ಸುಖದಲ್ಲಿ ಹಿಗ್ಗದೇ ದುಃಖದಲ್ಲಿ ಕುಗ್ಗದೇ ಹುಟ್ಟಿನಿಂದ ಸಾವಿನವರೆಗಿನ ಪಯಣವನ್ನು ಸಮರ್ಪಕವಾಗಿ ಎದುರಿಸಿ ಸಾರ್ಥಕ ಜೀವನ ನಡೆಸುತ್ತಿರುವ,ಸಾಮಾನ್ಯರಲ್ಲೂ ಅಸಾಮಾನ್ಯರೆನಿಸುವ ನಾ ಕಂಡ ಕೆಲ ವೃದ್ಧ ಜೀವಗಳೇ ನನ್ನೀ ಲೇಖನಕ್ಕೆ ಪ್ರೇರಣೆ.

ಬಯಸದೆ ಬರುವ ವಯೋಸಹಜವಾದ ಜೀವನದ ಕೊನೆಯ ಕಾಲಘಟ್ಟವೆನ್ನಬಹುದಾದ ದೈಹಿಕ  ಸ್ಥಿತಿಯೇ ವೃದ್ಧಾಪ್ಯ. ಜೀವನದ ಸಕಲ ಸಂಕೋಲೆಗಳಿಂದ ಮಾನಸಿಕವಾಗಿ ಮುಕ್ತರಾಗಿ ೮೨ರ ಇಳಿ ಪ್ರಾಯದಲ್ಲೂ ಕುಂದದ ಜೀವನೋತ್ಸಾಹ!! ಅಬ್ಬಾ ಅಪ್ಪಯ್ಯ ಶಾಸ್ತ್ರಿಗಳನ್ನು ನೋಡಿ ಬದುಕುವದನ್ನು ಕಲಿಯಬೇಕು. ಬಹುತೇಕ ಮಧ್ಯಮವರ್ಗದವರ೦ತೆ ಸರಕಾರಿ ಕೆಲಸದಲ್ಲಿದ್ದು ಐಷಾರಮಾದ ಬದುಕಲ್ಲದಿದ್ದರು ಹೊಟ್ಟೆ ಬಟ್ಟೆಗೆ ಕಡಿಮಿಯಿಲ್ಲದ ಧಾರ್ಮಿಕತೆಯಿಂದ ಕೂಡಿದ ತುಂಬು ಕುಟುಂಬದ  ಸಂತೃಪ್ತ  ಜೀವನ ಶಾಸ್ತ್ರಿಗಳದು. ಕಾಲ ಕ್ರಮೇಣ ಮಗಳ ಮದುವೆ ಮಾಡಿ, ಮಕ್ಕಳಿಬ್ಬರನ್ನೂ ಅವರ ಯೋಗ್ಯತೆಗೆ ತಕ್ಕಂತೆ ಓದಿಸಿ ಮದುವೆ ಮಾಡಿ ವಿಶ್ರಾಂತ ಜೀವನ ನಡೆಸಲು ಅರೆಸಿ ಬಂದದ್ದು ಬೆಂದಕಾಳೂರನ್ನು.

ಜೀವಿತಾವಧಿಯ ಕೊನೆಯ ಕಾಲದಲ್ಲಿ ವಿಧಿಯು ಕಾರಣಾಂತರಗಳಿಂದ ಶಾಸ್ತ್ರಿಗಳನ್ನು ಮತ್ತು ಅವರ ಪತ್ನಿಯನ್ನು ಮಕ್ಕಳಿಂದ ದೂರ ಮಾಡಿತು. ಒಬ್ಬ ಮಗ ಸಂಸಾರವನ್ನು ತ್ಯಜಿಸಿ ಮನತೋಚಿದಂತೆ ಎಲ್ಲೋ ಹೋಗಿ ದೇವಸ್ಥಾನವೊಂದರ ಪೂಜೆ ಮಾಡುತ್ತಾ  ಜೀವನಸಾಗಿಸುತ್ತಿದ್ದರೆ, ಇನ್ನೊಬ್ಬ ತಕ್ಕ ಮಟ್ಟಿಗೆ ಒಳ್ಳೆಯ ಕೆಲಸದಲ್ಲಿದ್ದು ತಂದೆ ತಾಯಿಯರಿಗೆ ನಿಯಮಿತವಾಗಿ ತೀರ್ಥಯಾತ್ರೆಯನ್ನು ಮಾಡಿಸುತ್ತಾ  ಸುಖೀ ಜೀವನ ಸಾಗಿಸುತ್ತಿದ್ದ. ಆದರೆ ಕಾಯಿಲೆ ರೂಪದಲ್ಲಿ ಬಂದೊದಗಿದ ಗಂಡಾಂತರವೊಂದು ಆತನ ಜೀವನದ ದಿಕ್ಕನ್ನೇ ಬದಲಾಯಿಸಿತು. ಶಾಸ್ತ್ರಿಗಳ ಪರಿಶ್ರಮ ಮತ್ತು ಪುಣ್ಯದ ಫಲದಿಂದ ಕಾಯಿಲೆಯೇನೋ ವಾಸಿಯಾಯಿತು ಆದರೆ ಆತ ದುಡಿಯುವ ಸ್ಥಿತಿಯಲ್ಲಿ ಇಲ್ಲ. ಅನಿವಾರ್ಯವಾಗಿ ತನ್ನ ಪುಟ್ಟ ಸಂಸಾರದೊಂದಿಗೆ ಸುಖವಾಗಿರಲು ಬೇರೆ ಮನೆಯಲ್ಲಿ ವಾಸವಾಗಿದ್ದಾನೆ. ಇಂತಹ ನೋವುಗಳೆಲ್ಲವನ್ನೂ ನುಂಗಿ ಎದೆಗುಂದದೇ ಸಮಚಿತ್ತರಾಗಿ ತಮ್ಮ ಕಾಲು ಊರಿ ನಡೆದಾಡಲೂ ಆಗದೆ ಕುಂಡಿ ಸವರುವ (ಹೊಸೆಯುವ)  ಅರ್ಧಾಂಗಿಣಿಗೆ ಬೆನ್ನೆಲುಬಾಗಿ  ಚಿಕ್ಕ ಬಾಡಿಗೆ ಮನೆಯಲ್ಲಿ  ಚೊಕ್ಕ ಸಂಸಾರ ಸಾಗಿಸುತ್ತಿರುವ ಶಾಸ್ತ್ರಿಗಳಿಗೆ ತಮ್ಮ ಜೀವನದ ಕುರಿತು ಯಾವುದೇ ತಕರಾರಾಗಲಿ,ತಾತ್ಸಾರವಾಗಲಿ, ಜಿಗುಪ್ಸೆಯಾಗಲಿ ಇಲ್ಲ. ಬದಲಿಗೆ ತಮ್ಮ  ಎರಡನೆಯ ಹೆಂಡತಿಯಂತಿರುವ ಹಳೆಯ ಸೈಕಲ್ ಮೇಲೆ ಸಾವಕಾಶವಾಗಿ ಸವಾರಿ ಮಾಡುತ್ತಾ ಮನೆಗೆ ಬೇಕಾಗುವ ಸರ೦ಜಾಮುಗಳನ್ನು ಇಳಿ ವಯಸ್ಸಿನಲ್ಲೂ ನಗುಮುಖ ಉತ್ಸಾಹದಿಂದ ಅನಾಯಾಸವಾಗಿ ತರುವದನ್ನು ಕಂಡ ಎಂಥವರಿಗೂ ಬದುಕಿನ ಪಾಠ ಎದ್ದು ಕಾಣುತ್ತದೆ. ಹತ್ತಿರವಿರುವ ಆಸ್ಪತ್ರೆಯೊಂದರಲ್ಲಿ ಮೂರುತಿಂಗಳಿಗೊಮ್ಮೆ ಮೆಡಿಕಲ್ ಚೆಕ್-ಅಪ್ ಮಾಡಿಸಿಕೊಂಡು ಬಂದ ಪೆನ್ಷನ್-ನಲ್ಲಿ ನಿಶ್ಚಿಂತ ಜೀವನ ನಡೆಸುತ್ತಿರುವ ಶಾಸ್ತ್ರಿಗಳ ಜೀವನ ಇಂದಿನ ಯುಗದಲ್ಲಿ ಬೇಡದಿರುವ ಟೆನ್ಷನೆಲ್ಲ ತಲೆಯಲ್ಲಿ ತುಂಬಿಸಿಕೊಂಡು ಅವಧಿಗೆ ಮುನ್ನ ಶುಗರ್,ಬಿ.ಪಿ. ಮಂಡಿ ನೋವಿಗೆ ತುತ್ತಾಗಿ,ಕಿವಿ ಕೇಳದೆ ನರಳುವ ಸಕಲರಿಗೂ ಮಾದರಿ.  ನೆಲದ ಮೇಲೆ ಛಪ್ಪೆ ಹೊಸೆದು ಅರ್ಧಾಂಗಿಣಿ ಅಡುಗೆ ಮಾಡಬೇಕು , ಶಾಸ್ತ್ರಿಗಳು ಪೂಜೆ ಮುಗಿಸಿ ಬಾಳೆ ಎಲಿಯಲ್ಲಿ ಊಟ ಮಾಡಿ  ಹೆಂಡತಿಯ ಸಕಲ ಕಾರ್ಯಗಳಲ್ಲಿ ಕೈಜೋಡಿಸುತ್ತಾ ಯುವ ಜೋಡಿಗಳು ನಾಚುವಂತೆ ಮನೆಯನ್ನು ಅಚ್ಚುಕಟ್ಟಾಗಿಟ್ಟು ಬಂದ ಅತಿಥಿಗಳ ಉಪಚಾರಮಾಡುತ್ತಾ, ಖುದ್ದಾಗಿ ಕೂಡಪಾ..ಕಾಫಿ ಮಾಡತೀನಿ... ಎನ್ನುತ್ತಾ ತಮ್ಮ ಕೋಣೆಯಿಂದ ಪ್ಲೇಟಿನಲ್ಲಿ ಹಚ್ಚಿದ (ವಗ್ಗರಣಿ) ಅವಲಕ್ಕಿ ಹಾಕಿ ನಂತರ ಕಾಫಿ ಕುಡಿಸಿ... ಅಡಕಿಪುಡಿ ಕೊಟ್ಟು.... ಆತ್ಮೀಯತೆಯಿಂದ “ಇನ್ನೊಮ್ಮೆ ಬಂದಾಗ ಹೆಂಡ್ತಿ ಮಕ್ಕಳನ್ನೂ ಕರಕೊಂಡ ಬಾರಪಾ...” ಎಂದಾಗ, ವೃದ್ಧಾಪ್ಯಕ್ಕೆ ಸವಾಲೆಸಿಯುವಂತಿರುವ ಶಾಸ್ತ್ರಿಗಳನ್ನು ಮಧ್ಯ ವಯಸ್ಸಿನಿಂದ ಕಂಡ ನನ್ನ ಮನ ಕರಗಿ ನೀರಾಗಿತ್ತು*************

ಇದೇ ಸಾಲಿಗೆ ಸೇರುವ ಇನ್ನೊಬ್ಬ ವೃದ್ಧೆ   ೮೧ರ ಹರೆಯದ ಅನುಸೂಯಜ್ಜಿ...ನನ್ನ ಸ್ನೇಹಿತನೋರ್ವನ ಹತ್ತಿರದ ಸಂಭಂದಿಯಾದ ಅನುಸೂಯಜ್ಜಿಯನ್ನು ಸಂಧಿಸಿ,ಅಕ್ಷರಶಃ ಅಜ್ಜಿ ಕಥೆಯನ್ನು ಅವರ ಬಾಯಿಯಿಂದ ಕೇಳುವ ಭಾಗ್ಯ ಒದಗಿ ಬಂದದ್ದು ಕೆಲ ತಿಂಗಳುಗಳ ಹಿಂದೆ ಸ್ನೇಹಿತನೊ೦ದಿಗೆ ಧಾರವಾಡಕ್ಕೆ ಭೇಟಿ ಇತ್ತಾಗ. ಈ ಇಳಿ ವಯಸ್ಸಿನಲ್ಲಿಯೂ ಚುರುಕಾದ ಕಿವಿಗಳು, ಸರಾಗವಾದ-ಸ್ಪಷ್ಟವಾದ ಮಾತಿನ ಧಾಟಿ ಸಮಯ ಪ್ರಜ್ಞೆ,ಅಗಾಧ ಸಾಮಾನ್ಯ ಜ್ಞಾನ,ಸ್ವಾವಲಂಬಿ ಜೀವನ  ನನ್ನನ್ನು ಚಕಿತಗೊಳಿಸಿತ್ತು. ಮೊದಲನೆಯ ಮಹಡಿಯಲ್ಲಿ ವಾಸಿಸುತ್ತಿದ್ದರೂ  ತಪ್ಪದೆ ಪ್ರತಿ ಗುರುವಾರ ಯಾರ ಸಹಾಯವಿಲ್ಲದೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿ ರಾಯರ ದರ್ಶನ ಮಾಡಿ ತೀರ್ಥ ಪ್ರಸಾದ ಸ್ವೀಕರಿಸುವ ಪರಿಪಾಠವನ್ನು  ಅಜ್ಜಿ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ವೃದ್ಧಾಪ್ಯವೆಂದರೆ ಶಾಪ, ಬಾಗಿದ ಬೆನ್ನು,ರೋಗಗ್ರಸ್ತ ದೇಹ, ಯಾಕಾಗಿ ಹೀಗೆ ಬದುಕಬೇಕು, ದೇವರು ಬೇಗ ಎತ್ತಿಕೊಂಡು ಹೋದರೆ ಸಾಕಪ್ಪಾ  ಎನ್ನುವರ ಸಂಖ್ಯೆನೇ ಹೆಚ್ಚಿರುವ ಇಂದಿನ ಯುಗದಲ್ಲಿ ತಮ್ಮ ಜೀವನದ ಕುರಿತು ಹೆಮ್ಮೆಯಿಂದ ಹೇಳುತ್ತಾ ನೋವುಗಳೆನ್ನೆಲ್ಲಾ ನುಂಗಿ ಸಂತೋಷದ ಬದುಕುವ ಅನುಸಯಜ್ಜಿಂತವರು ತುಂಬಾ ಅಪರೂಪ.

ಅಜ್ಜಿಯೇ ಹೇಳುವಂತೆ ಅನುಸಯಜ್ಜಿಯನ್ನು ಅವರ  ಗಂಡ ದಿವಂಗತ ಹನುಮಂತರಾವ್(೨೧ರ ಹರೆಯದ), ಅಜ್ಜಿಯ ಊರಿಗೆ ಬಂದಾಗ ಹದಿನಾರರ ಪ್ರಾಯದ ಅನುಸೂಯಾಳನ್ನು ಮೆಚ್ಚಿ ಹಿರಿಯರ ಮುಂದೆ ಮದುವೆಯ ಪ್ರಸ್ತಾಪವಿಟ್ಟಿದ್ದರಂತೆ. ಅಜ್ಜಿಯದು ಒಂಥರಾ ಪ್ರೇಮ ವಿವಾಹವೆಂದರೂ ಅಡ್ಡಿ ಇಲ್ಲ. ಅನುಸೂಯ  ಅತ್ತೆಯ ಮನೆಯಲ್ಲೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸೈ ಎನಿಸಿಕೊಂಡಿದ್ದರು.... ಮುಂದೆ ಹನುಮ೦ತರಾವರಿಗೆ ಪೋಸ್ಟ್ ಮಾಸ್ತರ್ ಅಂತ  ಮುಂಬೈ-ಗೆ  ವರ್ಗವಾಯಿತು,ಅನುಸೂಯ ಗಂಡನನ್ನು ಕೆಲ ದಿನಗಳಮಟ್ಟಿಗೆ ಅಗಲಬೇಕಾಯಿತು. ಕೆಲ ತಿಂಗಳುಗಳ ತರುವಾಯ ಅಜ್ಜಿ ಒಂಟಿಯಾಗಿ, ಇಡ್ಲಿ-ವಡಾಗೆ ಹೆಸರಾದ ತೆಲಗಿ ಸ್ಟೇಷನ್-ನಿಂದ ರೈಲಿನಲ್ಲಿ  ಸೋಲಾಪುರ್ ಮಾರ್ಗವಾಗಿ ಮಾಯಾನಗರಿ ಮುಂಬೈಗೆ ಪ್ರಯಾಣ ಬೆಳೆಸಬೇಕಾಯಿತು. ಮರಾಠಿಯ ಲವಲೇಶವೂ ಗೊತ್ತಿಲ್ಲದ ಅನುಸೂಯ ಮುಂಬೈಗೆ ಒಂಟಿಯಾಗಿ ಅದು ೬೦ವರುಷಗಳ ಹಿಂದೆ!! ಅಜ್ಜಿಯ ದಿಟ್ಟತನವನ್ನು ಮೆಚ್ಚಲೇಬೇಕು. ಮುಂಬೈಯ ಉಪನಗರವೊಂದರ ಪುಟ್ಟ ಮನೆಯಲ್ಲಿ ಬೆಳಗ್ಗೆ ೪ಘಂಟೆಗೆ ಎದ್ದು ಗಂಡನಿಗಾಗಿ ಡಬ್ಬಿ ಕಟ್ಟಿ ಲೋಕಲ್ ಟ್ರೈನಿನಲ್ಲಿ ಪೋಸ್ಟ್ ಮಾಸ್ತರನ್ನು ಬೀಳ್ಕೊಡಬೇಕು. ಈ ರೀತಿ ಚಾಣಾಕ್ಷತೆಯಿಂದ ಸಂಸಾರ ನಡೆಸುತ್ತಾ ಮುದ್ದಾದ ಮೂರು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಾಯಿಯಾಗಿ ಮಮತೆಯ ಸಾಕಾರ ಮೂರ್ತಿಯಾಗಿ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವಲ್ಲಿ ಮಹತ್ವದ ಪಾತ್ರವಹಿಸಿದಳು. ಇಬ್ಬರು ಹೆಣ್ಣು ಮಕ್ಕಳಿಗೆ ಸರಕಾರಿ ಉದ್ಯೋಗವೂ ದೊರೆತು  ಸಮಯಕ್ಕೆ ಸರಿಯಾಗಿ ಎಲ್ಲಾ ಮಕ್ಕಳ ಮದುವೆಯಾಯಿತು. ಆದರೆ ವಿಧಿಯ ಆಟ ಅವಧಿಗೆ ಮುನ್ನ ಬ್ಯಾಂಕನಲ್ಲಿ ಉದ್ಯೋಗಿಯಾಗಿದ್ದ ಮಗಳು ಕ್ಯಾನ್ಸರಗೆ ತುತ್ತಾಗಿ ಪ್ರಾಣಬಿಟ್ಟಳು. ಹನುಮ೦ತರಾಯರು ಹುಬ್ಬಳ್ಳಿಗೆ ವರ್ಗವಾಗಿ ಬಂದು ಪ್ಲಾಟ್ ಖರೀದಿಸಿ ನೆಲೆಸಲು ಪುಟ್ಟ ಮನೆಯೊಂದನ್ನು ಕಟ್ಟಿಸಿದರು ಎಂದು ಅಜ್ಜಿ ಹೆಮ್ಮೆಯಿಂದ ಹೇಳುತ್ತಾಳೆ.ಅನುಸೂಯಾ ಅಜ್ಜಿಯ ಕಣ್ಣಮುಂದೆಯೇ ಮುಂದೆ ಜೀವನಸಾಥಿಯಾದ ಹನುಮಂತರಾಯರು ತೀರಿಹೋದಾಗ ಅಜ್ಜಿಯ ದುಃಖ ಹೇಳತೀರದು, ಆಕಾಶವೇ ಕಳಚಿ ಬಿದ್ದಂತಾಗಿತ್ತು. ಆದರೂ ಅಜ್ಜಿ ಸುಧಾರಿಸಿಕೊಂಡು  ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳದೇ ಆಶಾವಾದಿಯಾಗಿ ಮಗ, ಸೊಸೆ ಮತ್ತು ಪುಟ್ಟ ಮಮ್ಮಗಳೊಂದಿಗೆ ಮಗ ಕಟ್ಟಿಸಿದ ಮೊದಲನೆಯ ಮಹಡಿಯ ಮನೆಯಲ್ಲಿ ನಿಶ್ಚಿಂತೆಯಿಂದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅನುಸೂಯಜ್ಜಿಯು ಇಂದಿಗೂ ಮನೆಗೆಬಂದ ಪರಿಚಿತರು ಬಂಧು ಬಳಗದವರನ್ನು ಬರಮಾಡಿಕೊಂಡು, ಸಕಲ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ,ಸದಾ ಹಸನ್ಮುಖಿಯಾಗಿದ್ದಾರೆ. ಅಜ್ಜಿಯ ಎದೆಗಾರಿಕೆಯನ್ನು, ಪ್ರಭುದ್ದತೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ.**************    


ಅನಿಯಮಿತ-ಅನಿಯಂತ್ರಿತ ಜೀವನಶೈಲಿಯ ಫಲವಾಗಿ, ಜೀವನದ ತೊಳಲಾಟದ ಶರಶಯ್ಯಯ ಮೇಲೆ ಮಲಗಿ - ನಲುಗಿ ಭೀಷ್ಮರಂತೆ ಇಚ್ಛಾ ಮೃತ್ಯುವಿನ ಭಾಗ್ಯವನ್ನು ಪಡೆಯದೇ,  ವೃದ್ಧಾಪ್ಯ ಒಂದು ಶಾಪ...... ಹೇಗೋ ಬದುಕಿ ಕೊನೆಗೆ ಭಗವಂತನ ಪಾದ ಸೇರೋದು........ ಎಂದು ಶಪಿಸುತ್ತಾ ಬದುಕುವ ಜನರೇ ಹೆಚ್ಚು. ಅಪ್ಪಯ್ಯ ಶಾಸ್ತ್ರಿಗಳು ಮತ್ತು ಅನುಸೂಯಜ್ಜಿಯ೦ಥವರ ಅಸಾಮಾನ್ಯ ಲವಲವಿಕೆ-ಚಟುವಟಿಕೆ-ಜೀವೊನತ್ಸಾಹ-ಉಲ್ಲಾಸ, ಬದುಕಿನ ಬವಣೆಯನ್ನು ನುಂಗಿ-ಮರೆತು, ಮುಪ್ಪಿಗೆ ಸವಾಲೆಸೆದು ಬದುಕನ್ನು ಅನುಭವಿಸುವ ಬಗೆ ಸಕಲರಿಗೂ ಆದರ್ಶಪ್ರಾಯವಾಗಿ ಮುಪ್ಪಿನ ಜೀವನಕ್ಕೊಂದು ಊರುಗೋಲಾಗುತ್ತದೆಂದರೆ ತಪ್ಪಾಗಲಾರದು. ಇಂತಹ ಇನ್ನೂ ಅನೇಕ ವೃದ್ಧರೊಂದಿಗಿನ ಒಡನಾಟದ ಕುರಿತು ಬರೆಯುವದು ಸಾಕಷ್ಟಿದೆ ಆದರೆ ಸದ್ಯಕ್ಕೆ ಇಷ್ಟು ಸಾಕು.