Saturday, 24 September 2016

ಪಾಕ್ ಎಂಬ ಉಪದ್ಯಾಪಿ ರಾಷ್ಟ್ರದ ಕುಚೋದ್ಯ


ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯಲ್ಲಿ ಮಾತಾಡುತ್ತಾ ವಿಶ್ವ ನಾಯಕರು ನಂಬುವರು ಎಂಬ ಭ್ರಮೆಯಲ್ಲಿ ಭಾರತದ ಕುರಿತು ಮತ್ತು ಭಾರತಕ್ಕೆ ಮುಕುಟಪ್ರಾಯವಾಗಿರುವ ಕಾಶ್ಮೀರ ಕುರಿತು ಸರಣಿ  ಸುಳ್ಳುಗಳನ್ನು ಹೇಳುತ್ತಾ ಹೋದರು. ತಾವೊ೦ದು  ದೇಶದ ಮುಖ್ಯಸ್ಥ ಎಂಬುದನ್ನೂ ಮರೆತು ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಹೀದೀನ್-ನ ಸುಪ್ರೀಮ್ ಕಮಾಂಡರನಂತೆ ವರ್ತಿಸಿದರು. ನವಾಜ್ ಷರೀಫ್-ರನ್ನು ಅತ್ಯಂತ ನಗೆಪಾಟಲಿಗೀಡುಮಾಡಿದ೦ತಹ ಸಂಗತಿಯೆಂದರೆ ಹಿಜಬುಲ್ ಮುಜಾಹೀದೀನ್–ನ ಭಯೋತ್ಪಾದಕ ಬುರಹಾನ್ ವಾನಿಯನ್ನು ಮುಗ್ಧ, ಅಮಾಯಕ, ಹುತಾತ್ಮ ನಾಯಕನೆಂದು ಹೇಳಿದ್ದು. ಬುರಹಾನ್ ವಾನಿ ಮಾರಕ ಅಸ್ತ್ರಗಳಾದ ಎಕೆ-47 ಬಂದೂಕುಗಳು, ಗ್ರಾನೈಡಗಳನ್ನು ಹೊತ್ತು ನಿಂತ ವಿಡಿಯೋ ಮತ್ತು ಫೋಟೋಗಳನ್ನು ಜಗತ್ತೇ ನೋಡಿದೆ. ನವಾಜ್ ಷರೀಫ್ ಪ್ರಕಾರ ಭಾರತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಹರಣ ಮಾಡುತ್ತಿದೆಯಂತೆ! ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಇದು ಸೂರ್ಯ ಚಂದ್ರರಷ್ಟೇ ಸಾರ್ವತ್ರಿಕ ಸತ್ಯ. ಪಾಕಿಸ್ತಾನದ ಸರಕಾರಿ ಪ್ರಾಯೋಜಿತ  ತಾಲಿಬಾನಿಗಳ ವೇಷದಲ್ಲಿರುವ ಪಾಕಿಸ್ತಾನಿ ಸೈನಿಕರು   ಮತ್ತು ನೇರವಾಗಿ ಪಾಕಿಸ್ತಾನಿ ಸೈನ್ಯವೇ  ಬಲೂಚಿಸ್ತಾನ ಮತ್ತು ಪಿ.ಒ.ಕೆ. ಯಲ್ಲಿಯ ಜನರ ಮೇಲೆ ಎಸಗುತ್ತಿರುವ ದೌರ್ಜನ್ಯಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಬಲೂಚಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಾವಿರ ಸಾವಿರ ಬಲೂಚಿಗಳ ಅಮಾನವೀಯ ಮಾರಣ ಹೋಮ...ನರಮೇಧ, ಪಿ,,ಕೆ.ಯಲ್ಲಿ ಅಮಾಯಕ ಜನರ ಮೇಲೆ ಹಲ್ಲೆ ಮಾನವ ಅಧಿಕಾರಗಳ ಸಬಲಿಕರಣವೇ?? ನ್ಯೂಯಾರ್ಕನ  ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆ ನಡೆಯುತ್ತಿರುವ ಸ್ಥಳದ ಮುಂದೆಯೇ ಬಲುಚೀ ಹೊರಾಟಗಾರರು ಪ್ರದರ್ಶನ ನಡೆಸುತ್ತಿದ್ದಾರೆ, ಅಂಗೈ ಹುಣ್ಣಿಗೆ ಕನ್ನಡಿಯ ಸಾಕ್ಷಿ ಬೇಕೇ?

1947 ಮತ್ತು 1948ರ ಸಂಯುಕ್ತ ರಾಷ್ಟ್ರದ ಗೊತ್ತುವಳಿಯಂತೆ ಕಾಶ್ಮೀರದಲ್ಲಿ ಜನಮತ ಸಂಗ್ರಹವಾಗಬೇಕೆಂದು ನವಾಜ್ ಷರೀಫ್ ಮತ್ತೆ ಒತ್ತಾಯಿಸಿದರು. ಸಂಯುಕ್ತ ರಾಷ್ಟ್ರದ ಗೊತ್ತುವಳಿಯನ್ನು ಸರಿಯಾಗಿ ಓದದೆ ತನ್ನದೇ ರಾಗವನ್ನು ಆಲಾಪಿಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿಭ್ರಮಣೆಯಾಗಿದೆ. ಈ ಗೊತ್ತುವಳಿಗಳ ಕರಡನ್ನು ಕೂಲಂಕುಷವಾಗಿ ಓದಿದಾಗ ತಿಳಿಯುವ ಸಂಗತಿಯೆಂದರೆ ಈ   ಗೊತ್ತುವಳಿಗಳ್ಯಾವೂ ಬಾಧ್ಯವೇ ಅಲ್ಲ. ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವುದು ನಿಯಮಿತವಾಗಿ ಚುನಾವಣೆ ನಡೆದು ಸಂವಿಧಾನಾತ್ಮಕವಾಗಿ ಪ್ರಜಾಪ್ರಭುತ್ವದಿಂದ ಚುನಾಯಿತವಾದ ಸರಕಾರ, ಮುಂದೆ ಬಾಲ ಇರುವ ನಾಯಿಯಂತಿರುವ, ಪಾಕಿಸ್ತಾನಿ  ಸ್ಯೂಡೊಡೆಮೋಕ್ರೆಟಿಕ್ (ಹುಸಿ ಪ್ರಜಾಪ್ರಭುತ್ವದ) ಸರಕಾರವಲ್ಲ. ಚುನಾವಣೆಗಿಂತ  ದೊಡ್ಡ  ಜನಮತಗಣನೆ ಯಾವುದಾದರೂ ಇದೆಯಾ?  ಅಮೆರಿಕಾದ ಸೆನೆಟ್ ಸದಸ್ಯರು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವ ಕುರಿತು ಗೊತ್ತುವಳಿಯನ್ನು  ಅಮೇರಿಕಾದ ಸೆನೆಟ್-ನಲ್ಲಿ ಮಂಡಿಸಿದ್ದಾರೆ. ಭಾರತದಲ್ಲಿರುವ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವ ಮತ್ತು ಪಾಕಿಸ್ತಾನ ಕುರಿತು ಭಾರತದ ನೀತಿ ಮತ್ತು ದೃಷ್ಟಿಕೋನದಲ್ಲಾದ (paradigm shift -ಪ್ಯಾರಾಡೈಮ್ ಶಿಫ್ಟ್) ಆಮೂಲಾಗ್ರ ಬದಲಾವಣೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ರಿಯಾಕ್ಟೀವ್ ನಿಂದ ಪ್ರೋಯಾಕ್ಟೀವ್ ಆಗಿ ಕೆಂಪು ಕೋಟೆ ಮೇಲಿಂದ ಪ್ರಧಾನ ಮಂತ್ರಿಗಳು ಬಲುಚೀ ಜನರ ಬಗ್ಗೆ ಸಂವೇದನೆ ವ್ಯಕ್ತಪಡಿಸಿದ್ದು, ಅವರ ಬೆಂಬಲಕ್ಕೆ ನಿಂತು ಆಕಾಶವಾಣಿಯಲ್ಲಿ ಬಲುಚೀ ಭಾಷೆಯ ಸೇವೆಗಳನ್ನು ಆರಂಭಿಸಿದ್ದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಪಾಕಿಸ್ತಾನವನ್ನು ಎಲ್ಲಾ ರೀತಿಯಿಂದಲೂ ಬಗ್ಗುಬಡೆಯಲು ಭಾರತ ಸರಕಾರ ಸಜ್ಜಾಗಿದೆ ಎಂಬ ಸ್ಪಷ್ಟ ಸಂದೇಶ ಪಾಕಿಸ್ತಾನಕ್ಕೆರವಾನೆಯಾಗಿದೆ..

ಇನ್ನೂ ವಿದೇಶಾಂಗ ನೀತಿಯ  ತಜ್ಞರಾದ ಪಾಕಿಸ್ತಾನದಲ್ಲಿ  ಭಾರತದ ಉಚ್ಚಾಯುಕ್ತರಾಗಿ ಸೇವೆ ಸಲ್ಲಿಸಿದ  ಪಾರ್ಥಸಾರಥಿ ಹಾಗೂ  ಮತ್ತೊರ್ವ ತಜ್ಞ ಕೆ ಸಿ ಸಿಂಗ್-ರಂಥವರ  ಸೇವೆಗಳನ್ನು ಸರಕಾರ ಉಪಯೋಗಿಸಿಕೊಳ್ಳಬೇಕು.  ಇಂಥ ಜತಾಂತ್ರಿಕರನ್ನು ದೇಶ ವಿದೇಶಗಳಿಗೆ ಕಳುಹಿಸಿ ಭಾರತದ ವಾದವನ್ನು ಸಮರ್ಥವಾಗಿ ಮಂಡಿಸಿ ಭಾರತದ ಪರ ಅಭಿಪ್ರಾಯ ಮೂಡುವಂತೆ ನೋಡಿಕೊಳ್ಳಬೇಕು. ಈಗಾಗಲೇ ಸಂಯುಕ್ತ ರಾಷ್ಟ್ರದಲ್ಲಿ ಭಾರತದ ಪ್ರತಿನಿಧಿ ಪಾಕ್ ಪ್ರಧಾನಿಯ ಭಾಷಣಕ್ಕೆ ಕಟು ಶಬ್ದಗಳಲ್ಲಿ ಪ್ರತಿಕ್ರಿಯಿಸಿ ಭಯೋತ್ಪಾದಕರ ಕಾರ್ಖಾನೆಯಾದ ಪಾಕಿಸ್ತಾನದ  ಉಪದ್ಯಾಪಿತನವನ್ನು ಮತ್ತು ಕುಚೋದ್ಯವನ್ನು ಜಗತ್ತಿನ ಮುಂದೆ ಎಳೆ ಎಳೆಯಾಗಿ ಬಿಡಿಸಿಟ್ಟು ಭಾರತ ಭಯೋತ್ಪಾದಕರ ವಿರುದ್ಧ ಸೂಕ್ತವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಹೊಂದಿದೆ ಎಂದು ವಿಶ್ವ ನಾಯಕರ ಮುಂದೆ ಯಶಸ್ವಿಯಾಗಿ ಪ್ರತಿಪಾದಿಸಿದ್ದಾರೆ. ವಿದೇಶಾಂಗ ರಾಜ್ಯ ಸಚಿವರಾದ ಎಂ ಜೆ ಅಕ್ಬರ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.  ಇನ್ನುಭಾರತದ ಅತ್ಯಂತ ಸಮರ್ಥ ವಿದೇಶ ಸಚಿವೆ ಸುಷ್ಮಾ ಸ್ವರಾಜ್   ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯಲ್ಲಿ ಪಾಕ್-ನ ಹತಾಶೆಯ ಪ್ರತೀಕದಂತಿದ್ದ ನವಾಜ್  ಷರೀಫ್ ಭಾಷಣಕ್ಕೆ  ದಿಟ್ಟ ಉತ್ತರಕೊಟ್ಟು ಜಗತ್ತಿನ ಮುಂದೆ ಪಾಕಿಸ್ತಾನವನ್ನು ಬೆತ್ತಲುಗೊಳಿಸಿ ಭಯೋತ್ಪಾದಕ ರಾಷ್ಟ್ರದ ಹುಟ್ಟಡಗಿಸುತ್ತಾರೆಂಬುದರಲ್ಲಿ ಎರಡು  ಮಾತಿಲ್ಲ.   

ಟೈಮ್ಸ್ ನೌ ಸುದ್ದಿ ವಾಹಿನಿಯಲ್ಲಿ ಮೂರು ನಾಲ್ಕು  ದಿನಗಳಿಂದ ನಡೆಯುತ್ತಿರುವ ತಜ್ಞರೊಂದಿಗಿನ ಸ್ವಾರಸ್ಯಕರ ಚರ್ಚೆ, ಭಾರತ ಪಿ.ಒ.ಕೆ.ಯಲ್ಲಿಯ ಭಯೋತ್ಪಾದಕರ ಶಿಬಿರಗಳ  ಮೇಲೆ ಮಾಡಬಹುದಾದ ಸೀಮಿತವಾದ ಆದರೆ ನಿಖರ ದಾಳಿ (surgical strike), ಪರಿಸ್ಥಿತಿ ಉಲ್ಬಣಿಸಿದರೆ ಭಾರತದೊಂದಿಗೆ ಯಾವ್ಯಾವ ದೇಶಗಳು  ನಿಲ್ಲಬಹುದು ಮತ್ತು ಈ ಸದರ್ಭದಲ್ಲಿ  ಚೀನಾದ ಪಾತ್ರ, ಭಾರತ ಅನುಸರಿಸಬೇಕಾದ ನೀತಿ ಮತ್ತು ಸಧ್ಯ ಭಾರತದ ಮುಂದಿರುವ ವಿಕಲ್ಪಗಳ  ಕುರಿತು  ಬೆಳಕು ಚೆಲ್ಲುತ್ತಿದೆ.  ಅಮೇರಿಕಾದಲ್ಲಿ ಪಾಕಿಸ್ತಾನದ ಪತ್ರಿಕಾಗೋಷ್ಟಿಯಿಂದ ಹೊರದಬ್ಬಲ್ಪಟ್ಟು, ಪಾಕಿಸ್ತಾನಿ ಪತ್ರಕರ್ತರೆನಾದರೂ ಭಾರತದ ಪತ್ರಿಕಾಗೋಷ್ಟಿಗೆ ಬಂದಿದ್ದರೆ ಭಾರತವೂ ಹೀಗೆ ಮಾಡುತ್ತಿತ್ತು ಎಂದು ಅಸಂಬದ್ಧ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ  ಎನ್.ಡಿ.ಟಿ.ವಿ.ಯ ಅವಿವೇಕಿ ಪತ್ರಕರ್ತೆ ಹಾಗೂ ಇಂತಹುದೇ ಗುಂಪಿಗೆ ಸೇರಿದ ತಿಳಿದು ತಿಳಿಯದೆನೋ ಭಯೋತ್ಪಾದಕ ಗುಂಪುಗಳನ್ನು ಸಮರ್ಥಿಸುವವರು (apologists) ಭಾರತದ ಮಾನ ಹರಾಜುಹಾಕುವದಕ್ಕೂ ಹಿಂಜರಿಯುವದಿಲ್ಲ. ಇಂದು(22-09-2016) ರಾತ್ರಿಯ ಟೈಮ್ಸ್ ನೌ ನ ದಿಬೆಟ್ –ನಲ್ಲಿ ಅರ್ಣಬ ಕೇಳಿದ ನೇರ ಪ್ರಶ್ನೆ ನೀವು ಪಾಕ್ ಪ್ರಧಾನಿಯ ಬುರಹಾನ್ ಕುರಿತಾದ ಹೇಳಿಕೆಯನ್ನು ಖಂಡಿಸುವಿರಾ?’ ಪಾಕ್ ಪ್ರಧಾನಿಯ ಹೇಳಿಕೆಯನ್ನು ಖಂಡಿಸದೇ ಬುರಹಾನ್ ವಾನಿಯನ್ನು ಸಮರ್ಥಿಸಿಕೊಂಡು ಮಾತನಾಡಿದ ಸುಪ್ರೀಮ್ ಕೊರ್ಟನ ಅಡ್ವೊಕೇಟ ಶಬನಮ್ ಲೋನ್ ಭಾರತದಲ್ಲಿಯೇ ಇದ್ದು ಭಾರತೀಯ ಸೇನೆಯನ್ನು ಖಂಡಿಸಿ ಮಾತನಾಡಿ  ಕೊನೆಗೆ ಅರ್ಣಬ ಗೋಸ್ವಾಮಿಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತತ್ತರಿಸಿ ಡಿಬೇಟ್-ನಿಂದ ಹೊರನಡೆದರು. ಭಾರತದಲ್ಲಿಯೇ ಇದ್ದು  ಪಾಕ್ ಪರ ಮತ್ತು ಉಗ್ರರ ಪರ ಒಲವು ಮತ್ತು ನಿಲುವು ಹೊಂದಿರುವ ಇಂತಹ  ದೇಶವಿರೋಧಿ ಶಕ್ತಿಗಳನ್ನು ಮೊದಲು ಮಟ್ಟಹಾಕಬೇಕು. ದೇಶದಲ್ಲಿ ಅಸಹಿಷ್ಣುತೆ ಇದೆಯೆಂದು ಗಂಟಲುಹರಿಯುವಂತೆ ಕಿರುಚುತ್ತಿದ್ದ ಅವಾರ್ಡ್ ವಾಪಸಿ ಬ್ರಿಗೇಡ, ಜೆಎನ್.ಯು. ವಿಷಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರನ್ನು ಬೆಂಬಲಿಸಿದ ತಥಾಕಥಿತ ಬುದ್ಧಿಜೀವಿಗಳಿಗೆ ಭಾರತದ ಮಾತೃಭೂಮಿಗಾಗಿ ಜೀವ ತ್ಯಾಗ ಮಾಡಿದ ಸೈನಿಕರು ಕಾಣುತ್ತಿಲ್ಲವೇ??

ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಟ್ಟುಕೊಳ್ಳವಂತೆ ಯಾವುದೇ ಪೂರ್ವಾಗ್ರಹವಿಲ್ಲದೆ ದೇಶಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧ ಅತ್ಯಂತ ಗಟ್ಟಿಯಾಗಿ,ನೇರವಾಗಿ 120ಕೋಟಿ ಭಾರತಿಯರ ಧ್ವನಿಯಾಗಿ ಭಯೋತ್ಪಾದಕರ ಸಮರ್ಥಕರನ್ನು ಎಕ್ಸ್ಪೋಸ್ ಮಾಡುವ ಟೈಮ್ಸ್ ನೌ-ನ ಅರ್ಣಬ ಗೋಸ್ವಾಮಿಯವರನ್ನು ಮೆಚ್ಚಲೆ ಬೇಕು.    

1993-1994ರಲ್ಲಿ ಇಂಡಿಯಾ ಟುಡೇಯಲ್ಲಿ ಓದಿದ ಲೇಖನವೊಂದನ್ನು ಮೆಲುಕುಹಾಕುವದು ಇಲ್ಲಿ ಪ್ರಸ್ತುತವೆನಿಸುತ್ತದೆ. ಆ ಲೇಖನದ ಪ್ರಕಾರ 1984ರಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇಸ್ರೇಲ್-ನ ಸಹಕಾರದಿಂದ ಪಾಕ್-ನ ಪರಮಾಣು ಕೇಂದ್ರವಾದ ಖೌತಾದ ಮೇಲೆ ದಾಳಿ ನಡೆಸುವ ತಯಾರಿಯಲ್ಲಿದ್ದರಂತೆ. ಪಾಕಿಸ್ತಾನದ ಖೌತಾದಲ್ಲಿ ಚೀನಾದ ಸಹಯೋಗದಿಂದ ಪರಮಾಣು ಬಾಂಬ್ ತಯಾರಿಸಲು ಬೇಕಾದ ಎನ್ರಿಚ್ದ ಯುರೇನಿಯಮ್ ಸ೦ಸ್ಕರಿಸುವ ಘಟಕ ಕಾರ್ಯಾರಂಭ ಮಾಡುವ ಪ್ರಾರಂಭಿಕ ಹಂತದಲ್ಲಿತ್ತು. ಹಾಗೇನಾದರೂ ಆಗಿದ್ದರೆ ಪಾಕಿಸ್ತಾನದ ಪರಮಾಣು ಬಾಂಬ್ ತಯಾರಿಸುವ ಕನಸು  ನನಸಾಗುತ್ತಿರಲಿಲ್ಲ ಮತ್ತು ಪಾಕಿಸ್ತಾನ ಜಗತ್ತನ್ನು ನ್ಯೂಕ್ಲೀಯರ ಬಾಂಬ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಲೂ ಆಗುತ್ತಿರಲಿಲ್ಲ. ಆದರೆ ಈ ಸುದ್ದಿ ಹೇಗೋ ಸೋರಿಕೆಯಾಗಿ ಅಮೇರಿಕದ ಅಧ್ಯಕ್ಷರ ಕಿವಿ ತಲುಪಿ, ಅಮೇರಿಕದ ಒತ್ತಡದಿಂದ ಭಾರತದ ಮಾಸ್ಟರ್ ಪ್ಲ್ಯಾನ್ ವಿಫಲವಾಗಿತ್ತು. ವಿಪರ್ಯಾಸವೆಂದರೆ ಮುಂದೆ ಕೆಲ ಕಾಲದ ನಂತರ ಇಂದಿರಾ ಗಾಂಧಿ ಹಂತಕರ ಗುಂಡಿಗೆ ಬಲಿಯಾಗಿದ್ದರು.

ಭಾರತ ಕೈಗೊಳ್ಳಬೇಕಾದ ಕ್ರಮಗಳನ್ನು ಯಾವುದೇ ಟಿ.ವಿ. ಚನಲ್-ನ ಡಿಬೇಟ್-ನಲ್ಲಿ ನಿರ್ಧರಿಸಲಾಗುವದಿಲ್ಲ, ಈಗಾಗಲೇ ಪ್ರಧಾನ ಮಂತ್ರಿಗಳು ದೇಶದ ಸೈನ್ಯಕ್ಕೆ ಊರಿ ದಾಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲು   ಸಂಪೂರ್ಣ ಅಧಿಕಾರ ನೀಡಿದ್ದಾರೆ. ನಮ್ಮ ಸೈನ್ಯ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಜರುಗಿಸುವದೆಂಬ ವಿಶ್ವಾಸ ಪ್ರತಿಯೊಬ್ಬ ಭಾರತಿಯನಿಗೂ ಇದೆ. ಭಾರತ ಅನುಸರಿಸಬೇಕಾದ ನೀತಿ ಮತ್ತು ರಣತಂತ್ರಗಳ ಕುರಿತು ನಿರ್ಧರಿಸಲು ರಾಷ್ಟ್ರೀಯ ಭದ್ರತಾ ಸಲಹಾಕಾರರಾದ ಚಾಣಕ್ಯ ತಂತ್ರಗಳಲ್ಲಿ ನಿಸ್ಸೀಮರಾದ ಅಜಿತ್ ದೋಬಾಲ್ ಇದ್ದಾರೆ. ಅನೇಕ ವರ್ಷಗಳಿಂದ ಕಾಡುತ್ತಿದ್ದ ರಾಜಕೀಯ ಇಚ್ಛಾಶಕ್ತಿಯ ಮತ್ತು ಸಮರ್ಥ ನಾಯಕತ್ವದ  ಕೊರತೆ ನರೇಂದ್ರ ಮೋದಿಯ ನಿರ್ಣಾಯಕ ನಾಯಕತ್ವದಿಂದ ದೂರವಾಗಿದೆ. ಊರಿಯ ಉರಿ ಆರಿ ತಣ್ಣಗಾಗುವ ಮೊದಲೇ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸದಿದ್ದಲ್ಲಿ ಭಾರತ ಪ್ರತಿಕ್ರಿಸುವ ಅವಕಾಶವನ್ನು ಕಳೆದುಕೊಳ್ಳಬಹುದೇನೋ ಎಂಬ ಶಂಕೆ ಜನರಲ್ಲಿ ಮೂಡುತ್ತಿದೆ.  

ಸೈನಿಕ ಹಾಗೂ ರಾಜತಾಂತ್ರಿಕ ಮಾರ್ಗಗಳ ಹೊರತಾಗಿಯೂ ಭಾರತ ಅಂತರಿಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ   ಭಯೋತ್ಪಾದಕರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವರ ವಿರುಧ್ಹ ಕಠಿಣ ಕ್ರಮ ಜರುಗಿಸಬೇಕು. ಭಾರತೀಯ  ಸೇನೆಯನ್ನು ಜರಿಯುವ, ಭಯೋತ್ಪಾದಕರನ್ನು ವೈಭವಿಕರಿಸುವ ಯಾವುದೇ ಚಲನ ಚಿತ್ರ , ಸಾಹಿತ್ಯ, ನಾಟಕಗಳಿಗೆ ಅವಕಾಶ ನೀಡಬಾರದು.  ದೇಶಕ್ಕಾಗಿ ಪ್ರಾಣತ್ತೆತ್ತ ಮಹನೀಯರ ಚರಿತ್ರೆಗಳು,ದೇಶ ಭಕ್ತಿಯನ್ನು ಜಾಗೃತಗೊಳಿಸುವ ಭಾರತೀಯ ಸಂಸ್ಕೃತಿಯ ಶ್ರೇಷ್ಟತೆಯನ್ನು  ಸಾರುವ ಗದ್ಯ ಪದ್ಯಗಳನ್ನು ಶಾಲಾ ಕಾಲೇಜ್-ಗಳ ಪಠ್ಯ ಕ್ರಮದಲ್ಲಿ ಅಳವಡಿಸಬೇಕು. ಅಂದಾಗ ಮಾತ್ರ  ನಿಜ ಅರ್ಥದಲ್ಲಿ  ಭಾರತದ ರಾಷ್ಟ್ರ ನಿರ್ಮಾಣ ಸಾಧ್ಯ.  
          

ಶ್ರೀನಿವಾಸ.ನಾ.ಪಂಚಮುಖಿ

Saturday, 17 September 2016

ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ – ಪೇ೦ಟೆಡ್ ಸ್ಟಾರ್ಕ್


ಬಣ್ಣ ಬಣ್ಣದ ಬಾನಾಡಿಗಳ ವಿಸ್ಮಯಕಾರಿ ಲೋಕದಲ್ಲಿ ಕೊಕ್ಕರೆ ಕುಟುಂಬಕ್ಕೆ ಸೇರಿದ  ಪೇ೦ಟೆಡ್ ಸ್ಟಾರ್ಕ್-ನ (ಬಣ್ಣದ ಕೊಕ್ಕರೆ), ವರ್ಣಗಳ ಸಂಯೋಜನೆ (ಕಲರ್ ಕಾ೦ಬಿನೇಶನ್) ನಿಜಕ್ಕೂ ಅದ್ಭುತ! ದೇವರು ಯಾವ ರೀತಿಯ ಕುಂಚನ್ನು ಬಳಸಿ ಬಣ್ಣ ಬಳೆದನೋ... ಇಲ್ಲಾ ರವಿವರ್ಮನ ಕುಂಚದಿಂದ ಬಣ್ಣದ ಚಿತ್ತಾರ ಮೂಡಿಸಿದನೋ ತಿಳಿಯದು! ಬೇರಾವ ಕಾರಣಕಲ್ಲದಿದ್ದರೂ ಬಣ್ಣದ ಕೊಕ್ಕರೆಗಳ ಶಕುಂತಲೆಯನ್ನು ನಾಚಿಸುವ ಸೌಂದರ್ಯ,ಕಂಗಳಿಗಾನಂದ ನೀಡುವ ವರ್ಣರಂಜಿತ ದೃಶ್ಯ, ಸೃಷ್ಟಿಕರ್ತನ ಸೃಷ್ಟಿಗೆ ತಲೆಬಾಗುವಂತೆ ಮಾಡುತ್ತದೆ.  

ಕೊಕ್ಕರೆಗಳ ಕುಟುಂಬಕ್ಕೆ ಸೇರಿದ (ಪೇಂಟೆಡ್ ಸ್ಟಾರ್ಕ್) ಬಣ್ಣದ ಕೊಕ್ಕರೆಯ ವೈಜ್ಞಾನಿಕ ಹೆಸರು  ಮ್ಯಾಕ್ಟೀರಿಯ ಲ್ಯೂಕೊಸೆಫೇಲಾ. ಈ ಹಕ್ಕಿಯನ್ನು ಸಂಸ್ಕೃತದಲ್ಲಿ ಪಿಂಗಳಾಕ್ಷ, ಕಚಾಕ್ಷ ಅಥವಾ ಚಿತ್ರಿತ ಮಹಾಬಕ ಎಂದೂ, ಹಿಂದಿಯಲ್ಲಿ ಕಠಸಾರಂಗ ಅಥವಾ ಜಂದಿಲ್ ಎಂತಲೂ ಹಾಗೂ ಮರಾಠಿಯಲ್ಲಿ ಚಿತ್ರ ಬಲಾಕ ಅಥವಾ ಚಾಮ್ಡೋಕ ಎಂದೂ ಕರೆಯುತ್ತಾರೆ.     ಉದ್ದವಾದ ಕಾಲುಗಳುಳ್ಳ  ಬಣ್ಣದ ಕೊಕ್ಕರೆ ಕಾಣಸಿಗುವದು ಭಾರತೀಯ ಉಪಖಂಡದ ಬಯಲು ಪ್ರದೇಶದ ಸಿಹಿನೀರಿನ ಜವುಗು ಪ್ರದೇಶಗಳಾದ ಕೆರೆ, ಸರೋವರ, ನದಿಗಳಲ್ಲಿ. ವಯಸ್ಕ ಬಣ್ಣದ ಕೊಕ್ಕರೆಗಳ ವಿಶಿಷ್ಟವಾದ ಗುಲಾಬಿ ಗರಿಗಳಿಂದಲೇ ಇವುಗಳಿಗೆ  ಪೇಂಟೆಡ್ ಸ್ಟಾರ್ಕ್ (ಬಣ್ಣದ ಕೊಕ್ಕರೆ) ಎಂಬ ಹೆಸರು ಬಂದಿದೆ.  ದಟ್ಟ ಹಳದಿ ಬಣ್ಣದ ಕೆಳಕ್ಕೆ ಬಾಗಿದ ಕೆಂಬರಲನ್ನು (ಐಬೀಸ್) ಹೋಲುವ ಕೊಕ್ಕು, ಕೆಂಪು ಅಥವಾ ಕಿತ್ತಳೆ ಬಣ್ಣದ ಬೋಳು ತಲೆ,  ಬೆನ್ನು ಮತ್ತು ಕುಂಡೆಗಳ (ರಂಪ್) ಮೇಲಿನ ಗುಲಾಬಿ ಬಣ್ಣದ ಪ್ರಕಾಶಮಾನವಾದ  ತುದಿಯುಳ್ಳ ಉದ್ದನೆಯ ಗರಿಗಳು, ದೇಹದ ಮಧ್ಯಭಾಗದಲ್ಲಿನ ಕಪ್ಪು ಬಿಳುಪಿನ ಪಟ್ಟಿ (ಬ್ಯಾಂಡ್), ಬಿಳಿ ಬಣ್ಣದ ದೇಹದ ಉಳಿದ ಭಾಗ, ಗುಲಗಂಜಿ ಕಾಳಿನ೦ತಿರುವ ಕಣ್ಣು, ಬಣ್ಣದ ಕೊಕ್ಕರೆಗಳ ಬಣ್ಣ ಬಣ್ಣದ ಲೋಕ ಬಣ್ಣಿಸಲು ಅಸಾಧ್ಯ!  ರೆಕ್ಕೆ ಬಿಚ್ಚಿ ಸು೦ಯ...ಎಂದು ಹಾರುವಾಗಿನ ಬಣ್ಣದ ಕೊಕ್ಕರೆಯ ಫ್ಲೈಟ್ ನೋಡಲು ಮನಮೋಹಕ!


ಬಣ್ಣದ ಕೊಕ್ಕರೆಗಳು ಆಹಾರಕ್ಕಾಗಿ ಆಳವಿಲ್ಲದ ನೀರಿನಲ್ಲಿ ಹಿಂಡು ಹಿಂಡಾಗಿ  ನದಿ ಮತ್ತು ಸರೋವರದ ಉದ್ದಗಲದಲ್ಲಿ ತಡಕಾಡುತ್ತವೆ.ಒಂಟಿಕಾಲಿನ ಮೇಲೆ ತಪಸ್ಸಿಗೆ ನಿಂತ ಋಷಿಯಂತೆ ಗಂಟೆಗಟ್ಟಲೇ ಮೀನುಗಳ ಬೇಟೆಗಾಗಿ ಕಾಯುತ್ತವೆ.ಅರ್ಧ ತೆರೆದ ಕೊಕ್ಕನ್ನು ನೀರಿನಲ್ಲಿ ಮುಳುಗಿಸಿ ಕಸ ಗೂಡಿಸಿದಂತೆ  ಕ್ಷಿಪ್ರವಾಗಿ ಅಕ್ಕ ಪಕ್ಕದಲ್ಲಿ ಹೊಯ್ದಾಡಿಸಿ ಕೇವಲ ಸ್ಪರ್ಶ ಸಂವೇದನೆಯಿಂದ ಸಣ್ಣ ಮೀನುಗಳನ್ನು ಪಟಪಟನೆ  ಹಿಡಿದು ತಿನ್ನುತ್ತವೆ.  ಆಳವಿಲ್ಲದ ನೀರಿನಲ್ಲಿ ಚಲಿಸುವಾಗ  ತಮ್ಮ ಪಾದಗಳಿಂದ ನೀರನ್ನು ಚದುರಿಸಿ ಅಡಗಿರುವ ಮೀನುಗಳನ್ನು ಹೊರ ಬರುವಂತೆ ಮಾಡುತ್ತವೆ. ಇವುಗಳು ಕೆಲ ಸಾರಿ ಕಪ್ಪೆ
ಮತ್ತು ಚಿಕ್ಕ ಹಾವುಗಳನ್ನೂ ಬೇಟೆಯಾಡಿ ಭಕ್ಷಿಸುತ್ತವೆ.  ಬಣ್ಣದ ಕೊಕ್ಕರೆಗಳು ಗುಂಪು ಗುಂಪಾಗಿ ನದಿ ಸರೋವರದಲ್ಲಿರುವ ಗಿಡ ಮರಗಳಲ್ಲಿ,ಬಹುತೇಕವಾಗಿ  ನೀರಿನಲ್ಲಿ  ವಾಸಿಸುವ ಇತರೆ ಪಕ್ಷಿಗಳೊಂದಿಗೆ ಗೂಡು ಕಟ್ಟಿ ಮನೆ ಮಾಡುತ್ತವೆ.
ಬಹುತೇಕ ನಿಶ್ಯಬ್ದವಾಗಿರುವ ಬಣ್ಣದ ಕೊಕ್ಕರೆಗಳ ಕೊಕ್ಕಿನಿಂದ ಹೊರಹೊಮ್ಮುವ ಧ್ವನಿ ನೋವಿನಿಂದ ನರಳಾಡುವ ಸಣ್ಣ  ನಾದದಂತೆ ಇದ್ದು  ಗೂಡಿನಲ್ಲಿ ಚು೦ಚುಗಳ (ಬಿಲ್-ಗಳ ಕ್ಲಾಟರಿಂಗ್) ಗುಟುರುವಿಕೆಯು ಧ್ವನಿ ಜೋರಾಗಿರುತ್ತದೆ. ಸಾಮಾನ್ಯವಾಗಿ ನದಿ ಸರೋವರಗಳ ಸುತ್ತ ವಾಸಿಸುವ ಇವುಗಳು ಮಾನ್ಸೂನ್-ನಲ್ಲಿ ನೀರಾವರಿಯ ಕಾಲುವೆಗಳು ಹಾಗೂ ಭತ್ತದ ಗದ್ದೆಗಳಲ್ಲಿಯೂ ಕಂಡು ಬರುತ್ತವೆ. ಬಣ್ಣದ ಕೊಕ್ಕರೆಗಳು ಒಂದೇ ಪ್ರದೇಶದ ರಹವಾಸಿ (ರೆಸಿಡ೦ಟ್) ಹಕ್ಕಿಗಳಾಗಿದ್ದು ಹವಾಮಾನಕ್ಕನುಸಾರವಾಗಿ ಕೆಲ ಚಲನವಲನಗಳನ್ನು ಮಾಡುತ್ತವೆ. ತಾರುಣ್ಯದಲ್ಲಿರುವ ಕೆಲ ಬಣ್ಣದ ಕೊಕ್ಕರೆಗಳು ನೂರಾರು ಕಿಲೋಮೀಟರನಷ್ಟು ಚಲಿಸಿರುವ ಕುರಿತು ಪ್ರಮಾಣಗಳಿವೆ.

ಬಣ್ಣದ ಕೊಕ್ಕರೆಗಳ ಸಂತಾನೋತ್ಪತ್ತಿಯ ಋತು  ಮಾನ್ಸೂನ್ ನಂತರ ಚಳಿಗಾಲದಲ್ಲಿ  ಪ್ರಾರಂಭವಾಗಿ ಫೆಬ್ರುವರಿ ತಿಂಗಳಿನವರೆಗೆಮುಂದುವರೆಯುತ್ತದೆ. ಬಣ್ಣದ ಕೊಕ್ಕರೆಗಳು ಒಂದು ಬಾರಿಗೆ ಸುಮಾರು ಒಂದರಿಂದ ಐದಾರು ಮೊಟ್ಟೆಗಳನ್ನಿಟ್ಟು, ಒಂದು ತಿಂಗಳ ಕಾಲ ಕಾವುಕೊಟ್ಟು ನಂತರ ಸುಂದರವಾದ ಪುಟ್ಟ ಮರಿ ಕೊಕ್ಕರೆಗಳು ಮೊಟ್ಟೆಯಿಂದ ಹೊರಹೊಮ್ಮುತ್ತವೆ. ಸುಮಾರು ಎರಡು ತಿಂಗಳ ಕಾಲ ಮರಿಗಳಿಗೆ ಚಿಕ್ಕ ಮೀನಿನ ಗುಟುಕು ಕೊಟ್ಟು ಹಾರಡಲು ಸಿದ್ಧಗೊಳಿಸುತ್ತವೆ. ಗೂಡಿನಲ್ಲಿ  ಬಿಸಿಲಿನಿಂದ ಮರಿಗಳನ್ನು ರಕ್ಷಿಸಲು ತಮ್ಮ ರೆಕ್ಕೆಗಳನ್ನು ಹರಡಿ ಮರಿಗಳಿಗೆ ನೆರಳು ನೀಡಿ ಮಾನವನಿಗಿಂತ ಮಿಗಿಲಾಗಿ ತಾಯ್ತನವನ್ನು ತೋರುತ್ತವೆ.

ಬಣ್ಣದ ಕೊಕ್ಕರೆಗಳು ಆಯುಷ್ಯ ಸುಮಾರು 20 ರಿಂದ 30 ವರುಷ. ಒಂದು ಮಧ್ಯಮ ಗಾತ್ರದ ಬಣ್ಣದ ಕೊಕ್ಕರೆ 2 ರಿಂದ 3 ಕೆ.ಜಿ. ತೂಕ ಹೊ೦ದಿದ್ದು,  93 ರಿಂದ 103 ಸೆ.ಮೀ ಎತ್ತರ, 150 ರಿಂದ 160 ಸೆ.ಮೀ ಅಗಲವಾದ  ರೆಕ್ಕೆಗಳನ್ನು ಹೊಂದಿರುತ್ತದೆ. ಗಂಡು ಮತ್ತು ಹೆಣ್ಣು, ಬಣ್ಣದ ಕೊಕ್ಕರೆಗಳು ನೋಡಲು ಒಂದೇ ಥರ ಕಂಡರೂ ಆಕಾರದಲ್ಲಿ ಗಂಡು ದೊಡ್ಡದಾಗಿರುತ್ತದೆ. ಜನವಸತಿಯ  ಹತ್ತಿರದಲ್ಲಿರುವ ಬಣ್ಣದ ಕೊಕ್ಕರೆಗಳ ಕೇಂದ್ರಗಳಾದ ನಮ್ಮ ಕರ್ನಾಟಕದ ಕೊಕ್ಕರೆಬೆಳ್ಳೂರು, ಮೈಸೂರಿನ ರ೦ಗನತಿಟ್ಟು, ಅಲಮಟ್ಟಿಯ ಜಲಾಶಯದ ಸುತ್ತ ಮುತ್ತ,ಆಂಧ್ರಪ್ರದೇಶದ ಗುಂಟೂರ್-ನ ಉಪ್ಪಲಪಾಡು, ರಾಜಸ್ಥಾನದ ಘಾನಾ ರಾಷ್ಟ್ರೀಯ ಉದ್ಯಾನ ವನ, ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳಾಗಿವೆ.


ವಿಶೇಷವಾಗಿ ಕೊಕ್ಕರೆಬೆಳ್ಳೂರಿನಲ್ಲಿ ಹಳ್ಳಿಯ ಜನನಿಬಿಡ ಪ್ರದೇಶಗಳ ಗಿಡ ಮರಗಳಲ್ಲಿ ಬಣ್ಣದ ಕೊಕ್ಕರೆಗಳು ನೀರು ಹಕ್ಕಿಗಳ (ಸ್ಪಾಟ್ ಬಿಲ್ಡ್ ಪೇಲಿಕನ್) ಜೊತೆ ಸೇರಿ ಗೂಡು ಕಟ್ಟುತ್ತವೆ. ಬಣ್ಣದ ಕೊಕ್ಕರೆಗಳ ಗೂಡುಕಟ್ಟಿ ಸಂಸಾರ ಹೂಡುವ ಈ ಕಾಲದಲ್ಲಿ  ಕೊಕ್ಕರೆಬೆಳ್ಳೂರಿನ ಸ್ಥಳೀಯ ನಿವಾಸಿಗಳು ಭದ್ರತೆಯೊದಗಿಸಿ ಬೇಟೆಗಾರರಿಂದ ಬಣ್ಣದ ಹಕ್ಕಿಗಳನ್ನು ರಕ್ಷಿಸಿ ಮಾನವೀಯತೆಯನ್ನು ಮೆರೆಯುತ್ತಾರೆ. ಬಣ್ಣದ ಚಿತ್ತಾರದ ಕೊಕ್ಕರೆಗಳು ಭಾರತದಲ್ಲಿ ಬಹುತೇಕವಾಗಿ ಸುರಕ್ಷಿತವಾಗಿವೆ, ಆದರೆ ಪಾಕಿಸ್ತಾನದಲ್ಲಿ ಸಿಂಧೂ ನದಿಯ ಉದ್ದಕ್ಕೂ ಅಪಾಯವನ್ನು ಎದುರಿಸುತ್ತಿವೆ. ಪಾಕಿಸ್ತಾನ,ಚೀನಾ,  ಥೈಲ್ಯಾಂಡ್,ಲಾವೋಸ್,ವಿಯೆಟ್ನಾಮ್,ಕಾಂಬೋಡಿಯಾ,ಮಲೇಷಿಯಾ ದೇಶಗಳಾದ್ಯಂತ ಬಣ್ಣದ ಕೊಕ್ಕರೆಗಳ ಕುಸಿಯುತ್ತಿರುವ ಸಂಖ್ಯೆಯ ಕಾರಣದಿಂದ ಇವುಗಳನ್ನು ಅಪಾಯದ ಅಂಚಿನಲ್ಲಿರುವ (Near-endangered or near-threatened) ಪಕ್ಷಿ ಪ್ರಭೇದವೆಂದು ವರ್ಗೀಕರಿಸಲಾಗಿದೆ. ಪಾಕಿಸ್ತಾನ ಮತ್ತು ಇನ್ನೂ ಕೆಲ ದೇಶಗಳಲ್ಲಿ ಗೂಡಿನಿಂದ ಮರಿಗಳನ್ನು ಕದ್ದು ವ್ಯಾಪಾರ ಮಾಡುವುದು ಹಾಗೂ ಹಕ್ಕಿಗಳನ್ನು ಬೇಟೆಯಾಡಿ ತಿನ್ನುವುದು ಲಂಗು ಲಗಾಮಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ಕ್ರೂರಿ ಮಾನವನ ಆಸೆಗೆ ಪಾರವೇ ಇಲ್ಲವೇ? ಮೂಕ ಪ್ರಾಣಿ ಪಕ್ಷಿಗಳನ್ನು ಕೊಂದು ಹೊಟ್ಟೆ ತುಂಬಿಸಿಕೊಳ್ಳುವ ಈ ಪ್ರವೃತ್ತಿಗೆ ಕೊನೆ ಎಂದು? ಭಗವಂತನ ಅಗಾಧ ಸೃಷ್ಟಿಯ ಬಣ್ಣದ ಕೊಕ್ಕರೆಗಳ ಸೌಂದರ್ಯವನ್ನು ಸವೆಯುವದನ್ನು ಬಿಟ್ಟು ತಿಂದು ತೇಗುವ ತೀಟೆಯನ್ನು ಬಿಟ್ಟು ವಿಶ್ವ ಮಾನವನಾಗಿ ಬದುಕುವದು ಸಿಂಧುವಲ್ಲವೇ??

Monday, 5 September 2016

ಪರಿಶುದ್ಧ ಪ್ರೇಮಕ್ಕೊಂದು ಪೂರ್ಣವಿರಾಮ

ಬರೀ ಪ್ರಶ್ನಾರ್ಥಕಗಳು, ಅಲ್ಪವಿರಾಮಗಳು, ಆಗೊಮ್ಮೆ  ಈಗೊಮ್ಮೆ ಉದ್ಗಾರವಾಚಕಗಳು ತು೦ಬಿದ್ದ ಅವನ ಜೀವನದಲ್ಲಿ ಸುಖಾಂತ್ಯವಾಗಿ ಪ್ರೀತಿಗೆ ಪೂರ್ಣವಿರಾಮ ಬಿತ್ತಾ!!!!

ಕೆಳ ಮಧ್ಯಮವರ್ಗದಲ್ಲಿ ಜನಿಸಿದ ಶ್ರೀಕಾಂತನದು  ಸಾಧಾರಣ ಮೈಕಟ್ಟು, ನಸುಗೆಂಪು ಬಣ್ಣ,  ಕಾಂತಿಯುತವಾದ ಮುಖಚರ್ಯೆ ಯಾರನ್ನೂ ತನ್ನತ್ತ ಆಕರ್ಷಿಸಬಲ್ಲ,  ಸದಾ ಹಸನ್ಮುಖಿಯಾಗಿರುವ ಹಾಸ್ಯಯುಕ್ತ ವ್ಯಕ್ತಿತ್ವ, ದೋಸ್ತಿ ವಿತ್ ಸಮ್ ಅಂಡ್ ದುಷ್ಮನಿ ವಿತ್ ನನ್ ಅನ್ನೊದನ್ನು ಅಕ್ಷರಶಃ ನಂಬಿಕೊಂಡು ಅದರಂತೆ ನಡೆದುಕೊಂಡು ಬಂದಿದ್ದ. ಓದಿನಲ್ಲಿ ಯಾವಾಗಲೂ ಮುಂದಿದ್ದು ಕಾಲೇಜಿನ ಟಾಪ್ 5 ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದ. ಪರಿಸ್ಥಿತಿಯ ಮಡುವಿಗೆ ಸಿಕ್ಕು ಇಂಜಿನೀಯರಿಂಗ್ ಮಾಡಲಾಗದೆ ಬಿ.ಎಸ್.ಸಿ. ಓದುತ್ತಿದ್ದ. ಎಲ್ಲಾ ಮಧ್ಯಮವರ್ಗದ ಕುಟುಂಬದವರ ಕನಸುಗಳಂತೆ ಈತನದೂ ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಿ ನಿಶ್ಚಿಂತ ಜೀವನ ನಡೆಸುವ ಗುರಿ.

ಬಿ.ಎಸ್.ಸಿ. ಮೊದಲನೆಯ ವರ್ಷ ಭೌತಶಾಸ್ತ್ರದ ಪ್ರಯೋಗಾಲಯದ ಬ್ಯಾಚುಗಳ ವಿಂಗಡನೆಯಾಗಿ ಶುಕ್ರವಾರ ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗಳ ಕಾಲ ಲ್ಯಾಬ್ ನಲ್ಲಿ ಕಳೆಯಬೇಕು. ಆಗಲೇ ಶ್ರೀಕಾಂತನ ಜೀವನದ ನವ್ಯ ಚೈತ್ರ ಕಾಲ ಪ್ರಾರಂಭವಾದದ್ದು...ಇತ್ತ ಮಾಡರ್ನೂ ಅಲ್ಲದ ಅತ್ತ ಸಾ೦ಪ್ರದಾಯಿಕವೂ ಅಲ್ಲದ ಉಡುಗೆಯಲ್ಲಿ ಫಿಸಿಕ್ಸ್ ಲ್ಯಾಬ್ ಗೆ ಕಾಲಿಟ್ಟಳು ಶ್ವೇತಾ... ತೀರಾ ಸೌಂದರ್ಯವಂತೆ ಅಲ್ಲದಿದ್ದರೂ  ಒಂದು ಹೆಣ್ಣು ಆಕರ್ಷಕವಾಗಿ ಕಾಣಲು ಇರಬೇಕಾದ ನಯ ನಾಜೂಕುಗಳು ಅವಳಲ್ಲಿದ್ದವು. 11 ಜನ ಹುಡುಗರಿದ್ದ  ಬ್ಯಾಚನಲ್ಲಿ ಒಬ್ಬಳೇ ಹುಡುಗಿಯಾದ ಶ್ವೇತಾಗೆ ಶ್ರೀಕಾಂತನ ಪಕ್ಕದಲ್ಲೇ ಸ್ಥಾನ  ದೊರಕಿತ್ತು. ಮೊದಲೇ ನಾಚಿಕೆ ಸ್ವಭಾವದವನಾದ ಶ್ರೀಕಾಂತ ನಾಚಿ ನೀರಾಗಿ ಒಳಗೊಳಗೆ ಪುಳಕಿತನಾಗಿದ್ದ. ಮೊದಮೊದಲು ಅಂತಹ ವಿಶೇಷ ಏನೂ ಅನಿಸದಿದ್ದರೂ, ದಿನಗಳುರುಳಿದಂತೆ ಅವನ ಮನಸ್ಸು  ಶ್ವೇತಾಳ ಸಾಮೀಪ್ಯವನ್ನು ಬಯಸುತ್ತಿತ್ತು. ಪ್ರತಿ ಶುಕ್ರವಾರಕ್ಕಾಗಿ ಹಾತೊರೆದು ಕಾಯ್ತಾ ಇದ್ದ, ಶುಕ್ರವಾರ ಏನಾದರೂ ರಜಾ ದಿನವಾದರೆ ಜೀವನ ಶೂನ್ಯವಾಗಿ ಗೋಚರಿಸಲಾರಂಭಿಸಿತು. ಹೀಗೆ ಕಾಲಚಕ್ರ ಉರುಳುತ್ತಾ ಮೂರು ವರುಷಗಳು ಗತಿಸಿದ್ದು ತಿಳಿಯಲೇ ಇಲ್ಲ. ಮನಸ್ಸಿನಲ್ಲಿ ಮಂಡಿಗೆ ತಿನ್ನುವ ಅಂತರ್ಮುಖಿಯಾದ ಶ್ರೀಕಾಂತನ ಅಂತರಾಳದ ಮಾತುಗಳು ಎಂದಿಗೂ ತುಟಿಯ ಮೇಲೆ ಬರಲೇ ಇಲ್ಲ. ಶ್ವೇತಾಳ ಹೃದಯದಲ್ಲಿ ಶ್ರೀಕಾಂತನಿಗಾಗಿ ಸ್ಥಾನ ಇತ್ತಾ ...????

ಬಿ.ಎಸ್.ಸಿ.  ಮುಗಿದ ನಂತರ ಇಬ್ಬರೂ ಬೇರೆ ಬೇರೆ ಕಡೆ ಎಂ.ಎಸ್.ಸಿ. ಮಾಡಿ ಬೇರೆ ಬೇರೆ ಊರುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಆಗಲೂ ಶ್ರೀಕಾಂತನ ಹೃದಯ ಶ್ವೇತಾಳಿಗಾಗಿ ಮಿಡಿಯುತ್ತಿತ್ತು , ಅವಳ ನೆನೆದಾಗಲೆಲ್ಲಾ ಎದೆಬಡಿತ ಹೆಚ್ಚಾಗುತ್ತಿತ್ತು ಶ್ವೇತಾಳ ಕುರಿತಾಗಿ ಯೋಚಿಸುತ್ತ  ಕೊನೆಗೆ ಅವಳಿಗೊಂದು  ಪತ್ರ ಬರೆಯಲು ನಿರ್ಧರಿಸುತ್ತಾನೆ.

“ಆತ್ಮೀಯ ಶ್ವೇತಾ, ನಿನ್ನನ್ನು ಏನೆಂದು ಸಂಬೋಧಿಸಲಿ ಎಂದು ವಿಚಾರ ಮಾಡಿ ತರ್ಕಿಸಿ ಕೊನೆಗೆ ಬೇರೆ ಯಾವ ಬಾಂಧವ್ಯಕ್ಕಲ್ಲದಿದ್ದರೂ ನಿನ್ನೊಂದಿಗೆ ಫಿಸಿಕ್ಸ್ ಲ್ಯಾಬ್ ನಲ್ಲಿ ಸಹಪಾಠಿಯಾಗಿ ಕಳೆದ ಆ ಅಮೂಲ್ಯ ಮೂರು ವರುಷಗಳ ಸ್ನೇಹದಿಂದಾಗಿ  ನಾನು ಆ ರೀತಿ ಸಂಬೋಧಿಸುವ ಸಲುಗೆಯನ್ನು ಹೊಂದಿರುವೆ ಮತ್ತು ನನ್ನ ಈ ಭಂಡತನವನ್ನು ನೀನು ಕ್ಷಮಿಸುತ್ತಿ ಎಂದು ಭಾವಿಸಿರುವೆ. ನಿನ್ನ ಆಕರ್ಷಣೆ ಮತ್ತು ಸದಾಕಾಲ ಸಾಮೀಪ್ಯವನ್ನು ಬಯುಸುವ ಈ ನನ್ನ ಮನದ ಬಯಕೆ ಯಾವಾಗ ಪ್ರೇಮವಾಗಿ ತಿರುಗಿತೋ ನಾ ಕಾಣೆ. ಆದರೆ ನಾನು ನಿನ್ನನ್ನು ಮನಸಾ ಫ್ರೀತಿಸುತ್ತಿರುವೆನೆಂಬುದರಲ್ಲಿ ಯಾವುದೇ ಸಂಶಯ ಬೇಡ, ಆಯ್ ಲವ್ ಯು ಶ್ವೇತಾ...

ಭೌತಶಾಸ್ತ್ರದ ಪ್ರಯೋಗಾಲಯದಲ್ಲಿನ ನಮ್ಮ ಮೊದಲ ಭೇಟಿ ನಿನಗೆ ನೆನಪಿದೆಯಾ ? ಎಲ್ಲಾ ಕಂಗಳ ನೋಟ ನಿನ್ನ ಮೇಲೆಯೇ ಕೇಂದ್ರೀಕೃತವಾಗಿತ್ತು, ಆಗ ನಿನಗೆ ನನ್ನ ಪಕ್ಕಕ್ಕೆ ಸ್ಥಾನ  ದೊರೆಯಿತು. ಇಂಥ ಅದೃಷ್ಟಕ್ಕೆ ಸಹಪಾಠಿಗಳು ನನ್ನನ್ನು ಪಿಸುಮಾತಿನಲ್ಲಿ ಅಭಿನಂದಿಸಿದ್ದರು. ಇದ್ಯಾವುದೂ ನನಗಾಗ ಅರ್ಥವಾಗಿರಲಿಲ್ಲ ಮತ್ತು ಮೊದಲ ನೋಟದಲ್ಲಿ ಪ್ರೀತಿಯೂ ಆಗಿರಲಿಲ್ಲ.ನಮ್ಮಿಬ್ಬರ ಔಪಚಾರಿಕ ಪರಿಚಯ ಕೂಡ ಆಗಿರಲಿಲ್ಲ ಹಾಗೂ ಪ್ರತಿ ಶುಕ್ರವಾರ 5-6 ಗಂಟೆಗಳ ಕಾಲ ಒಟ್ಟಿಗೆ ಇರುತ್ತಿದ್ದರೂ ನನ್ನ ಮನದಲ್ಲಿ ಅಂತಹ ಕೋಲಾಹಲವೇನೂ ಎದ್ದಿರಲಿಲ್ಲ.    

ಕಾಲಕ್ರಮೇಣ ನನ್ನ ಜೀವನದ ಒಂದು ಹಂತದಲ್ಲಿ ನಾನು ಶುಕ್ರವಾರಕ್ಕಾಗಿ ಕಾಯತೊಡಗಿದೆ, ಪ್ರತಿದಿನ  ಶುಕ್ರವಾರವಾಗಬಾರದೇ ಎಂದು ಹಪಹಪಿಸತೊಡಗಿದೆ... ಶುಕ್ರವಾರ ರಜಾದಿನವಾದಾಗ ಮನದ ತಲ್ಲಣ ಹೆಚ್ಚಾಗಿ,ಎದೆಯಲ್ಲಿ ಕಿಚ್ಚಾಗಿ, ಹೃದಯಕ್ಕೆ ಹುಚ್ಚು ಹಿಡಿದಂತಾಗುತ್ತಿತ್ತು! ಒಂದು ವಿಲಕ್ಷಣ ಭಾವ ಮನದಲ್ಲಿ ಮನೆ ಮಾಡಿ ಮನಸ್ಸು ಭಾರವಾಗುತ್ತಿತ್ತು. ಕೆಲ ವಾರಗಳ ಪರಿಚಯದ ನಂತರ ನೀನು ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದೆ, ನಿನ್ನ ಸುಮಧುರ ಕಂಠದಿಂದ ಬಂದ ಆ ಸಿಹಿ ನುಡಿಗಳು ಇನ್ನೂ ನನ್ನ ಕಿವಿಯಲ್ಲಿ ಮೊಳಗುತ್ತಿವೆ. ಯಾಕೋ ನಿನ್ನೊ೦ದಿಗೆ ಮಾತನಾಡಲು ನನಗೆ ಸಂಕೋಚ, ನಿಜ  ಹೇಳಬೇಕೆಂದರೆ ಮಾತನಾಡಲು ವಿಷಯವೇ ಇರಲಿಲ್ಲ ಕೇವಲ ನೀನು ಕೇಳಿದ ಪ್ರಶ್ನೆಗಳಿಗೆ ಹೌದು ಅಥವಾ ಅಲ್ಲಾ ಎನ್ನುವ ಉತ್ತರ  ಕೊಡುವಲ್ಲೆ ಸಂತೃಪ್ತನಾಗಿದ್ದೆ. ಇದನ್ನು ಮೀರಿ ಮುನ್ನಡೆಯಲೇ ಇಲ್ಲ, ಹೀಗೆ ಮೂರು ವಸಂತಗಳು ಉರುಳಿದವು, ನಮ್ಮ ಕಾಲೇಜಿನ ಅವಧಿಯೂ ಮುಗಿದು ಅಗಲುವಿಕೆಯ ಸಮಯ ಬಂದಿತು.

ನಿನ್ನಿಂದ ದೂರವಾದ ನಂತರ ನನಗೆ ಕನ್ನಡ ಚಲನಚಿತ್ರ ಗೀತೆಯೊಂದು ನೆನಪಾಯಿತು ಕ೦ಗಳು ವಂದನೆ ಹೇಳಿವೆ ಹೃದಯವು ತುಂಬಿ ಹಾಡಿದೆ ಆಡದೆ ಉಳಿದಿಹ ಮಾತು ನೂರಿವೆ’. ರಾತ್ರಿಯ ನಿದ್ರೆ ಮರೀಚಿಕೆಯಾಯಿತು, ಪ್ರತಿ ಶುಕ್ರವಾರವಂತೂ ಕನಸಿನಲ್ಲಿ   ಶ್ರೀ ಎನ್ನುವ  ಆ ನಿನ್ನ ಮಧುರ ಪಿಸುಮಾತಿನ ಧ್ವನಿ ನನ್ನ ಕಿವಿಯಲ್ಲಿ ಮೊಳಗಿದಂತಾಗಿ ಶ್ವೇತಾ... ಎಂದು ಕನವರಿಸುತ್ತಿದ್ದೆ. ನೀನು ಇರುವ ಕಾಲೇಜನಲ್ಲಿ ನನ್ನ ಹತ್ತಿರದ ಸಂಬ೦ಧಿಯೊರ್ವನಿಗೆ ಪ್ರವೇಶ ದೊರಕಿಸುವ ಕುರಿತು ನಿನ್ನೊಂದಿಗೆ ಸಂಪರ್ಕಿಸುವ  ಮುನ್ನ ಪ್ರೊಫೆಸರ್ ಅನಂದರಾವ್ ರನ್ನು ಭೇಟಿ  ಮಾಡಿ ನನಗೊಂದು ಪ್ರಸ್ತಾವಿಕ  ಪತ್ರವನ್ನು (ನೋಟ್) ಬರೆದುಕೊಡುವಂತೆ ಕೇಳಿದಾಗ .  ಶ್ರೀಕಾಂತ ಯಾರ ಹತ್ತರ ಕೆಲಸಕ್ಕೆ ಹೋಗ್ತೀದ್ದೀಯಾ, ಅವಳು ನಿನ್ನನ್ನು ಮನಸ್ಸು ತುಂಬಾ ಪ್ರೀತಿಸ್ತಾಳಪ್ಪಾ.. ಹೋಗಪ್ಪ ಅವಳಿರೋದೇ ನಿನಗಾಗಿ, ನನ್ನ ಅನುಭವಿ ಕಣ್ಣುಗಳು ಸುಳ್ಳು ಹೇಳಲಾರವು. ಎಂದಿದ್ದರು. ನನ್ನ ಮನಸ್ಸಿನಲ್ಲಿ ಮಿಂಚೊಂದು ಸಂಚಾರವಾಗಿ ಉದ್ವೇಗ ತಡೆದುಕೊಳ್ಳಲಾಗದೆ ಕೈ ಕೈ ಹಿಸುಕುತ್ತಾ ಅತ್ತಿಂದಿತ್ತ ಇತ್ತಿಂದತ್ತ ಹುಚ್ಚನ೦ತೆ ಓಡಾಡಿದ್ದೆ.  ಈ ಭರವಸೆಯೊಂದಿಗೆ  ನಾನು ನಿನ್ನ ಭೇಟಿಯಾದೆ, ಯಾವುದೇ ಹಮ್ಮು ಬಿಮ್ಮಿಲ್ಲದೇ ತುಂಬಾ ಸಹೃದಯಿಯಾಗಿ ವಿನಯಶೀಲತೆಯಿಂದ ನನ್ನ ಕೆಲಸವನ್ನು ಮಾಡಿಕೊಟ್ಟು ನನಗೆ ನಿನ್ನೊಂದಿಗೆ ಚಹಾ ಕುಡಿಯುವ ಸೌಭಾಗ್ಯವನ್ನು ಕರುಣಿಸಿದೆ, ಅಂದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ! 

ಅಂದು ನಿನ್ನ ಮನಸ್ಸನ್ನು ಅರಿಯುವ ಮತ್ತು ನನ್ನ ಮನದಾಳದ ಇಂಗಿತವನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೆ.  ನನ್ನಲ್ಲಿಯ ಧೈರ್ಯದ ಕೊರತೆಯೋ ಅಥವಾ ನಿನ್ನ ಮೂಡನ್ನು ಅರಿಯುವಲ್ಲಿಯ  ವಿಫಲತೆಯೋ ನಾ ಕಾಣೆ, ನನ್ನ ಹೃದಯದ ಗೂಡಿನಲ್ಲಿದ್ದ ಮಾತುಗಳು ಅಧರದವರೆಗಿನ ಅಂತರವನ್ನು ಕ್ರಮಿಸಲಿಲ್ಲ. ಪ್ರಾಯಶಃ ಆ ಕಾಲ ಈಗ ಕೂಡಿ ಬಂದಿದೆ, ನಾನು ನಿನ್ನನ್ನು ಮನಸಾ ಪ್ರೀತಿಸುತ್ತೇನೆ ಮತ್ತು ನನ್ನ ಸಂಪೂರ್ಣ ಜೀವನವನ್ನು ನಿನ್ನೊಂದಿಗೆ ಕಳೆಯಲು ಇಚ್ಛಿಸುತ್ತೇನೆ, ಇದನ್ನು ಪುರಸ್ಕರಿವುದು ಅಥವಾ ತಿರಸ್ಕರಿವುದು ನಿನಗೆ ಬಿಟ್ಟದ್ದು.  ಹಾಂ.. ನಾನು ಕೂಡ ಸರಕಾರಿ ಕಾಲೇಜಿನಲ್ಲಿ  ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೆನೆ ಮತ್ತು ತಕ್ಕ ಮಟ್ಟಿಗೆ ಜೀವನದಲ್ಲಿ  ಸೆಟಲ್ ಅಗಿದ್ದೇನೆ.
                                ನಿನ್ನ ಉತ್ತರಕ್ಕಾಗಿ ಕಾತುರದಿಂದ ಕಾಯುತ್ತಿರುವ,
                                                                                                   ಪ್ರೀತಿಯಿಂದ ಪ್ರೀತಿಗಾಗಿ,
                                                                                                         ಶ್ರೀಕಾಂತ.”

ಮುಂದೇನಾಗಬಹುದೆಂಬ ಕುತೂಹಲ, ಕೌತುಕ ತಿಳಿಯುವ ತವಕವಲ್ಲವೇ!!  ಈ ಪತ್ರ ಶ್ವೇತಾಳ ಕೈ ಸೇರಿ  ಅದನ್ನು ಓದಿದ ನಂತರ ಅವಳು ಕೂಡ ಉತ್ತರವನ್ನು ಬರೆಯಲು ನಿಶ್ಚಯಿಸುತ್ತಾಳೆ.     

“ಆತ್ಮೀಯ ಶ್ರೀ , ನಿನ್ನೀ ಪ್ರೀತಿಪೂರ್ವಕ ಪ್ರೇಮ ಪತ್ರಕ್ಕೆ ಧನ್ಯವಾದಗಳು, ಇಂತಹದೊಂದು  ಪ್ರೇಮ ಪತ್ರವನ್ನು ವರುಷಗಳ ಹಿಂದೆ ಇಲ್ಲದಿದ್ದರೂ ಕೆಲ ತಿ೦ಗಳುಗಳ ಹಿಂದೆಯಾದರೂ  ನೀನು ಬರೆಯಬಾರದೇ? ಎಂದು ಅತೀ ಉತ್ಸುಕತೆ ಮತ್ತು ಅಭಿಮಾನದಿಂದ     ಹಾತೊರೆದು ಈ ಅಕ್ಷರ ಪ್ರಾರ್ಥನೆಗಾಗಿ ಹಪಹಪಿಸಿ,ಹವಣಿಸಿ ಕಾದಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ  ನನ್ನ ಜೀವಮಾನಪೂರ್ತಿಯಾಗಿ ನಿನ್ನ ಪ್ರೇಮ ನಿವೇದನೆಗಾಗಿ ಕಾಯುತ್ತಿದ್ದೆ.

ನಿನ್ನನ್ನು ಇನ್ನೂ  ಸಿಹಿಯಾದ ಪೂರ್ವಪ್ರತ್ಯಯಗಳಿಂದ ಸಂಬೋಧಿಸಬೇಕೆಂದಿದ್ದೆ ಆದರೆ ನಿನ್ನ ಉದ್ವೇಗ ಹೆಚ್ಚಿ ಉಬ್ಬಿದಂತಾಗುವೆ ಎಂದು ತಿಳಿದು ನನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡು ಸರಳವಾದ ಪದಗಳಿಂದ ಸಂಬೋಧಿಸಿದೆ. ಇಲ್ಲವಾದಲ್ಲಿ ನನ್ನ ಶಬ್ದಕೋಶವು ಮೈಡಾರ್ಲಿಂಗ್ ಶ್ರೀ’, ನನ್ನ ಪ್ರೀತಿಯ ಶ್ರೀ    ಹಾಗೂ ಇನ್ನೂ ಏನೇನೋ ಉಪಮೇಯಗಳನ್ನು ಬಳಸಲು   ಹುರಿದುಂಬಿಸಿತ್ತು.

ಪ್ರೀತಿಯ ಶ್ರೀ, ಫೀಸಿಕ್ಸ ಲ್ಯಾಬದಲ್ಲಿ ನಿನ್ನ ಪಕ್ಕಕ್ಕೆ ಸ್ಥಾನ ದೊರೆತ ದಿನವೇ ನಾನು ನಿನಗೆ ಮನಸೊತಿದ್ದೆ, ಅಂದಿನಿಂದ ನನ್ನ ಹೃದಯ ನನ್ನದಾಗಿರದೇ ನಿನ್ನಲ್ಲಿ ಲೀನವಾಗಿತ್ತು. ಕೇವಲ ಪ್ರಯೋಗಾಲಯದಲ್ಲಿ ಅಲ್ಲದೇ ಜೀವನ ಪೂರ್ತಿಯಾಗಿ ನಿನ್ನೊಂದಿಗಿರುವಂತಾಗಲೆಂದು  ನಾನು ದೇವರಲ್ಲಿ ಪ್ರತಿನಿತ್ಯ ಪ್ರಾರ್ಥಿಸಿದ್ದೆ. ಕಾಲೇಜಿನ ಮೂರುವರುಷಗಳ ನಿನ್ನ ರಕ್ಷಣಾ ಕವಚ  ನನ್ನ ನೈತಿಕ ಸ್ಥೈರ್ಯ ಮತ್ತು ಧೈರ್ಯವನ್ನು ಹೆಚ್ಚಿಸಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆ ಮೂರು ವರುಷಗಳನ್ನು ನನ್ನ ಕಲ್ಪನೆಯಿಂದ ನಿರ್ಮಿತವಾದ ನಿನ್ನ ನೆರಳಲ್ಲಿ ಸುರಕ್ಷಿತ ಮತ್ತು ದಿಟ್ಟವಾಗಿ ಕಳೆದಿದ್ದೆ. ಆ ಸಮಯದಲ್ಲಿ ನೀನು ನನ್ನ ಮೇಲೆ ಮಾಡಿದ ಜೋಕೊಂದನ್ನು ಆಗಾಗ ನಪಿಸಿಕೊಂಡು ನಗುತ್ತಿರುತ್ತೇನೆ, ನನ್ನನ್ನು ಒಂದು ಡಜನ್ ಹೋರಿಗಳ ಮಧ್ಯದಲ್ಲಿ ಒಂದೇ ಹಸು ಎಂದು ಬೇರೆ ಸಹಪಾಠಿಗಳು ಛೇಡಿಸುತ್ತಿದ್ದುದು ನೆನಪಿದೆಯಾ? ಹಾಗಾಗಿ ಈ ಹಸುವಿಗಾಗಿ ಲ್ಯಾಬ್ ಅಸಿಸ್ಟಂಟ್ ಕುಳಿತುಕೊಳ್ಳಲು ಸ್ಟೂಲೊಂದನ್ನು ಕೊಡಮಾಡಿದ್ದ. ಅದನ್ನು ಮೋಜಿಗಾಗಿ ನೀನು ಆಕ್ಷೇಪಿಸಿದ್ದೆ, ನಿನ್ನ ಆಕ್ಷೇಪಣೆ ಗಂಭೀರವಾಗಿರಲಿಲ್ಲೆಂದು ನನಗೆ ತಿಳಿದಿತ್ತು. ನಾನು ಬ್ಯಾಲೆನ್ಸ್ ರೂಮಗೆ ಹೋಗಿಬರುವಷ್ಟರಲ್ಲಿ ಸ್ಟೂಲ್ ಕಾಣೆಯಾಗಿತ್ತು ಆಗ ಕೆಲವರು ಅದು ನಿನ್ನೊಂದಿಗಿದೆ ಎಂದು ಪಿಸುಗುಟ್ಟಿದ್ದರು. ನನ್ನ ಬೆನ್ನ ಹಿಂದೆ ಏನೇ ಗಾಳಿಮಾತುಗಳನ್ನಾಡಿದರೂ ನನ್ನೊಂದಿಗೆ ನೇರವಾಗಿ ಜೋಕ್ ಮಾಡುವ ಧೈರ್ಯ  ಯಾರಿಗೂ ಇರಲಿಲ್ಲ. ವಾಸ್ತವವಾಗಿ ನನಗೆ ನಿನ್ನೊಂದಿಗೆ ಮಾತನಾಡುವ ನೆಪ  ಬೇಕಿತ್ತು, ಅ೦ಥ ಪ್ರಸ೦ಗ ಈಗ ಒದಗಿ ಬಂದಿತ್ತು. ನಾನು ಸ್ಟೂಲ್ ಹಿಂದಿರುಗಿಸಲು ನಿನ್ನನ್ನು ವಿನ೦ತಿಸಿಕೊಂಡಾಗ  ನೀನು ಮುಗುಳ್ನಕ್ಕು ಸನ್ನೆಮಾಡಿ ಟೇಬಲ್ ನ ನನ್ನ ಭಾಗದಕಡೆಗೆ ತೋರಿಸಿದ್ದೆ. ಟೇಬಲ್ ನ ಡ್ರಾವರನ ಕೆಳಗಡೆಯೇ ಸ್ಟೂಲ್ ಇತ್ತು.

ಶ್ರೀ ಡೀಯರ್ ನಾನಾಗಲೇ ನಿನ್ನ ಪ್ರೀತಿಯಲ್ಲಿ ತೇಲಿ ಹೋಗಿದ್ದೆ , ನೀನು ಮಾಡಿದ ಜೋಕ್ ಪ್ರೀತಿಯನ್ನು ವೃದ್ಧಿಸುವ  ಕೆಲಸ ಮಾಡಿತ್ತು. ಈ ಜೋಕನ್ನು ನನ್ನ ಅನೇಕ ಸ್ನೇಹಿತೆಯರೊಂದಿಗೆ ಹೇಳಿ ಸಂಭ್ರಮಿಸಿದ್ದೆ. ಆಗಿನಿಂದ ನಮ್ಮ ಪ್ರೇಮದ ಕುರಿತು ಮುಂದುವರೆಯುವ ಅನೇಕ ಪ್ರಯತ್ನಗಳನ್ನು ಮಾಡಿದ್ದೆ ಆದರೆ ಎಂದೂ ಸಭ್ಯತೆಯ ಇತಿಮಿತಿಗಳನ್ನು ಮೀರಲಿಲ್ಲ. ನಿನಗಿದ್ಯಾವುದೂ ಅರ್ಥವೇ ಆಗಲಿಲ್ಲ. ನನ್ನ ಮನದಾಳದ ಆರ್ದ್ರತೆಯನ್ನು ಅರಿತುಕೊಳ್ಳುವಲ್ಲಿ ನೀನು ಅಷ್ಟೊಂದು ಉತ್ಸುಕನಾಗಿರಲಿಲ್ಲ.   

ಆದರೆ ನನ್ನ ಪ್ರೇಮ ಪರಿಶುದ್ಧವಾಗಿತ್ತು ಮತ್ತು ನಿನ್ನ ಮುಗ್ಧತೆ ಬಗ್ಗೆ ನನಗೆ ಅರಿವಿತ್ತು. ಕಾಲೇಜಿನ ಮೆಟ್ಟಿಲೇರಿದಾಗಿನಿಂದ  ನಾನು  ನಿನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ , ನೀನೆ೦ದಿಗೂ ಗಾಳಿಮಾತುಗಳನ್ನಾಡುವವರ ಗುಂಪಿನೊಂದಿಗೆ ಸೇರಿ ಬೆನ್ನ ಹಿಂದೆ ಉಡಾಫೆಯ ಮಾತುಗಳನ್ನಾಡುತ್ತಿರಲಿಲ್ಲ. ನಿನ್ನನ್ನು ಮಡಿವಂತನೆ೦ದು ತಿಳಿಯದೆ ನಿನ್ನ ಈ ಗುಣವನ್ನು ಸಹಪಾಠಿಗಳೂ ಕೊಂಡಾಡಿ ಗೌರವಿಸುತ್ತಿದ್ದರು. ನನ್ನ ಆಯ್ಕೆಯ ಬಗ್ಗೆ ನನಗೆ ಆತ್ಮವಿಶ್ವಾಸವಿತ್ತು, ಇಂದಿಲ್ಲ ನಾಳೆ ನೀನು ನನ್ನವನಾಗುವೆಯೆಂಬ ಭರವಸೆ ಇತ್ತು, ಇದಕ್ಕಾಗಿ ದೇವರಲ್ಲಿ ಸದಾಕಾಲ ಪ್ರಾರ್ಥಿಸುತ್ತಿದ್ದೆ. ಈಗ  ಕುಂತರೆ ನಿಂತರೆ ನಿಂದೆ ಧ್ಯಾನಾ, ಕನಸಲು ಮನಸಲು ಎಲ್ಲೆಲ್ಲೂ ನೀನೆ !!! ನನ್ನ ದಿನಚರಿ  ಪ್ರಾರಂಭವಾಗುವದೇ ನಿನ್ನ ಭಾವಚಿತ್ರವನ್ನು ನೋಡುವದರಿಂದ..... ಇಂತಹ ಯಾವುದೇ ಭಾವಚಿತ್ರವನ್ನು ನೀನು ನನಗೆ ಕೊಟ್ಟಿರಲಿಲ್ಲ ಆದರೆ ನನ್ನ ಕಡೆ ಎರಡಿವೆ! ಒಂದು ಕೇವಲ ನಿನ್ನದು ಮತ್ತೊಂದರಲ್ಲಿ ನಾನು ನೀನು ಸ್ವರ್ಗದಲ್ಲಿ ಮಾಡಿದ ಜೋಡಿಯಾಗಿ ಗೋಚರಿಸುತ್ತಿದ್ದೇವೆ. ಈ ಫೋಟೋಗಳನ್ನು ಮತ್ತು ಅವುಗಳಲ್ಲಿ ಅಡಗಿರುವ ನನ್ನ ಭಾವನೆಗಳನ್ನೂ ಮನೆಯವರಿಂದ ಎಂದೂ ಮುಚ್ಚಿಡುವ ಪ್ರಯತ್ನ ಮಾಡಲಿಲ್ಲ. ಮೊದಮೊದಲು ನನ್ನ ತಾಯಿ ವಿರೋಧಿಸಿದರೂ ನನ್ನ ಪರಿಶುದ್ಧ ಪ್ರೇಮ, ಮುಗ್ಧತೆ ಮತ್ತು ನಿನ್ನನ್ನು ವರಿಸುವ ಇಚ್ಛೆ ಕುರಿತು ಮನದಟ್ಟಾದ ನಂತರ  ಅವಳಿಗೂ ನನ್ನ ಬಗ್ಗೆ ಸಹಾನುಭೂತಿ ಇದೆ. ಕೆಲ ತಿಂಗಳುಗಳ ಹಿಂದೆಯೇ ಅವಳು ನಿನ್ನನು ಕಂಡು ನಮ್ಮ ಮದುವೆಯ ಕುರಿತು ಮಾತನಾಡುವವಳಿದ್ದಳು ಆದರೆ ನನ್ನ ಪ್ರೀತಿಯ ಮೇಲಿನ ಅಪಾರ ವಿಶ್ವಾಸದಿಂದ ನಾನೇ ಅವಳನ್ನು ತಡೆದು ಸುಮ್ಮನೆ ಕಾಯುವಂತೆ  ಹೇಳಿದ್ದೆ.

 ನಮ್ಮ ಕಾಲೇಜಿನ ಅವಧಿ ಮುಗಿಯುವ ಮುನ್ನ  ಗ್ರೂಪ್ ಫೋಟೋವೊಂದನ್ನು ತೆಗಿಸಿಕೊಂಡದ್ದು ನೆನಪಿದೆಯಾ? ಅದರಲ್ಲಿ ನಾನು ನಿನ್ನ ಹಿಂದೆ ನಿಂತಿದ್ದೆ..ಅದರಿಂದಲೇ ನಮ್ಮಿಬ್ಬರ ಜೋಡಿಯ ಸುಂದರ ಭಾವಚಿತ್ರವೊಂದನ್ನು ಮಾಡಿಸಿದ್ದು! ಹಾಗೆ ನಿನ್ನ ಭಾವಚಿತ್ರವೊಂದು ಕಾಲೇಜಿನಲ್ಲಿ ಪ್ರಕಟಿಸಿದ ಸ್ಮರಣಸಂಚಿಕೆಯ ಸಂಪಾದಕೀಯದಲ್ಲಿ ದೊರಕಿತು. ಈಗ ನನ್ನ ಪ್ರೀತಿಯ ದೊರೆಯ  ಭಾವಚಿತ್ರ ಹೇಗೆ ನನ್ನ ಕೈಸೇರಿತೆಂದು ಗೊತ್ತಾಯಿತಲ್ಲವಾ!   

ನೀನು ನಮ್ಮ ಮನೆಗೆ ಬಂದಾಗ ನನ್ನ ತಾಯಿ ಅಡುಗೆಮನೆಯಲ್ಲಿ  ಚಹಾ ಮಾಡುವಲ್ಲಿ ಬ್ಯುಸಿಯಾಗಿದ್ದಳು. ಆದರೂ  ನಿನ್ನದೊಂದು ಇಣುಕುನೋಟ ಅವಳಿಗೆ ದೊರಕಿತ್ತು. ಅವಳು ಕೌತುಕದಿಂದ ನಮ್ಮಿಬ್ಬರ ನಡುವಿನ ಮಾತುಕತೆ ಮತ್ತು ನಿನ್ನ ಮಾತಿನ ಧಾಟಿಯ ಕುರಿತು ವಿಚಾರಿಸಿ ನನ್ನ ಉತ್ತರದಿಂದ ನಿರಾಶಳಾಗಿದ್ದಳು. ಅವಳಿಗೆ ನನ್ನ ಪ್ರೀತಿಯ ಮೇಲೆ ನನಗಿದ್ದ  ವಿಶ್ವಾಸದ ಕುರಿತು ಹೇಳಿ ಇಂದಲ್ಲ ನಾಳೆ ನೀನು ನನ್ನನ್ನು ಬಯಸಿ ಸ್ವೀಕರಿಸುತ್ತಿ ಎಂದೂ ಸಮಾಧಾನ ಪಡಿಸಿದ್ದೆ. ನನ್ನ ತಾಯಿ ಹಾಗೆ ಆಗಲೆಮ್ಮ, ನಿನ್ನ ಈ ಕನಸು ಆದಷ್ಟು ಬೇಗ ನನಸಾಗಲಿ ಎಂದೂ ಹರಸಿದ್ದಳು.

ಶ್ರೀ ಡಾರ್ಲಿಂಗ ಆದಷ್ಟು ಬೇಗ ಬಂದು ನನ್ನ ತಾಯಿಯಲ್ಲಿ ನಿವೇದಿಸಿ ಮಾನಸಿಕವಾಗಿ ನಿನ್ನವಳಾಗಿರುವ ನನ್ನನ್ನು ಔಪಚಾರಿಕವಾಗಿ ವರಿಸು, ನನ್ನ ತಾಯಿಯೂ ನಿನ್ನ ಸ್ವಾಗತಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಅಳಿಯನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿರುವಳು. ನಾನು ನಿನ್ನ ತೋಳಬಂಧನದಲ್ಲಿ ಸಂಭ್ರಮಿಸಲು ಹಾತೊರೆಯುತ್ತಿದ್ದೇನೆ. ನನ್ನ ತುಟಿಗಳ ಮೇಲೆ ನಿನ್ನ ಸಿಹಿ ತುಟಿಗಳ ಮುತ್ತಿನ ಸುರಿಮಳೆಯಲ್ಲಿ ಸ್ವರ್ಗದ ಬಾಗಿಲು ತಟ್ಟುವ ಸಡಗರದ ಕನಸನ್ನು ಕಾಣುತ್ತಿರುವೆ.

ನಿನ್ನ ಪ್ರೇಮಪತ್ರ ಕೈಸೇರಿದ ಮೇಲೆ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ, ಈ ನಿನ್ನ ಪ್ರೇಮಪತ್ರವನ್ನು ಮುದ್ದಾಡುತ್ತಾ ಆಕಾಶದಲ್ಲಿ ತೇಲಾಡುತ್ತಿದ್ದೇನೆ. ನನ್ನಲ್ಲಿಯ ಬದಲಾವಣೆಗಳು ನನ್ನ ತಾಯಿಯ ಗಮನಕ್ಕೆ ಬಂದಿವೆಯಾದರೂ ನಿನ್ನ ಪ್ರೇಮಪತ್ರದ ಕುರಿತು ನಾನು ಏನನ್ನು ಹೇಳಿಲ್ಲ. ದಯಮಾಡಿ ನೀನೆ ಖುದ್ದಾಗಿ ಬಂದು ನನ್ನ ತಾಯಿಗೆ ಈ ಸಿಹಿ ಸುದ್ದಿಯನ್ನು ತಿಳಿಸು.
                                                           ಎಂದೆಂದೂ ನಿನ್ನವಳಾದ,
                                                                                                                 ಪ್ರೀತಿಯ  ಪ್ರೇಯಸಿ    
                                                                                                                        ಶ್ವೇತಾ “


ಶ್ವೇತಾಳ ಉತ್ತರವನ್ನು ಓದಿ ಭಾವುಕನದ ಶ್ರೀಕಾಂತನ ಕಣ್ಣಿಂದ ಆನಂದ ಭಾಷ್ಪಗಳು ಉದುರಿದವು. ತಡಮಾಡದೆ ಶ್ವೇತಾಳ ಊರಿಗೆ ಪ್ರಯಾಣಬೆಳಸಿ ಎಲ್ಲ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ತನ್ನ ಕನಸಿನ ರಾಣಿಯನ್ನು ಶಾಶ್ವತವಾಗಿ ತನ್ನವಳಾಗಿಸಿಕೊಂಡು ಪರಿಶುದ್ಧ ಪ್ರೇಮಕ್ಕೆ ಪೂರ್ಣವಿರಾಮವಿತ್ತಿದ್ದ. 

Thursday, 1 September 2016

ಸಹ್ಯಾದ್ರಿಯ ಮಡಿಲ ರಮ್ಯ ತಾಣ – ಅಂಬೋಲಿ



ಜಿಟಿ ಜಿಟಿ ಮಳೆ.... ಕಿಚಿ ಪಿಚಿ ಕೆಸರಿನೊಂದಿಗೆ ಮುಂಗಾರು ಹಚ್ಚ ಹಸಿರ ತೋರಣವನ್ನು ಕಟ್ಟಿಂತೆಂದರೆ, ಚಿಣ್ಣರಿಂದ ನುಣ್ಣರವರೆಗೂ ಸಂಭ್ರಮ ತರುವ ಕಾಲ.  ನದಿಗಳು ಮೈದುಂಬಿ ಜಲಪಾತಗಳಾಗಿ ಎತ್ತರದಿಂದ ಧುಮುಕಿ ಭೂತಾಯಿಯ ಚರಣ ಸ್ಪರ್ಶ ಮಾಡಿ ಪ್ರಶಾಂತವಾಗುವ  ದೃಶ್ಯಗಳು  ತನು ಮನ ತಣಿಸುತ್ತವೆ. ಪ್ರಕೃತಿ ಸೌಂದರ್ಯವನ್ನು ಮನಸಾರೆ  ಸವಿಯಲು, ಪರಿಸರ ಪ್ರೇಮಿಗಳನ್ನು, ಚಾರಣಪ್ರೀಯರನ್ನು ಹಾಗೂ ಸಾಮಾನ್ಯ ಪ್ರವಾಸಿಗರನ್ನು ಆಕರ್ಷಿಸಿ ಕೈಬೀಸಿ ಕರೆಯುವ ಸಹ್ಯಾದ್ರಿಯ ಮಡಿಲ ರಮ್ಯ ತಾಣವೇ ಅಂಬೋಲಿ. ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ  ಬೆಳಗಾವಿಯಿಂದ ಸಾವಂತವಾಡಿ ಮಾರ್ಗದಲ್ಲಿ ಬೆಳಗಾವಿಯಿಂದ ಸುಮಾರು 75ಕಿ.ಮೀ. ದೂರದಲ್ಲಿ, ಸಮುದ್ರ ಮಟ್ಟದಿಂದ 690ಮೀಟರ್ ಎತ್ತರದಲ್ಲಿರುವ ಅಂಬೋಲಿ, ಮಹಾರಾಷ್ಟ್ರದಲ್ಲಿಯೇ ಅತೀ ಹೆಚ್ಚು ಮಳೆಬೀಳುವ ಪ್ರದೇಶ. ಪಶ್ಚಿಮ ಘಟ್ಟದ ಅಂಬೋಲಿ ಪರಿಸರದ  ವಿಶ್ವವಿಖ್ಯಾತ ಹಾಟ್ ಸ್ಪಾಟ್’’ ಆಗಿದೆ ಮತ್ತು ಅನೇಕ ವಿಧದ ಅಸಾಮಾನ್ಯ ಸಸ್ಯ,  ಪ್ರಾಣಿ ಪಕ್ಷಿ ಸಂಕುಲಗಳಿಗೂ ಆಶ್ರಯತಾಣವಾಗಿದೆ. ಆದರೂ ಅಲ್ಲಲ್ಲಿ ತಲೆ ಎತ್ತುತ್ತಿರುವ ರಿಸಾರ್ಟ್ ಹಾಗೂ ಹೊಟೇಲಗಳು ಪರಿಸರದ ಮೂಲರೂಪವನ್ನು ಹಾಳುಗೆಡುವಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತಿರುವದನ್ನು  ಅಲ್ಲಗಳೆಯಲಾಗುವದಿಲ್ಲ.


ಅಂಬೋಲಿ ಜಲಪಾತ ಅತ್ಯಂತ ಸುರಕ್ಷಿತ ಮತ್ತು ಪ್ರಶಾಂತ ಜಲಪಾತಗಳಲ್ಲೊಂದು, ದೊಡ್ಡವರು ಚಿಕ್ಕವರು ಯಾರಾದರೂ ಕಾಂಕ್ರೀಟನ ಮೆಟ್ಟಿಲುಗಳ ಮುಖಾಂತರ ಜಲಪಾತದ ತುದಿಯ ಸಮೀಪ ತಲುಪಬಹುದು. ಮುಂಗಾರಿನ ಮಳೆಯಲ್ಲಿ ಅಂಬೋಲಿಯ ಭವ್ಯ ಜಲಪಾತದ ವೈಭವವು ದ್ವಿಗುಣವಾಗಿ ದೇಶಾದ್ಯಂತ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಜಲಪಾತ ಜೋಗ, ಗೋಕಾಕ ಹಾಗೂ ಗೊಡಚಲಮಲ್ಕಿ ಜಲಪಾತಗಳಂತೆ ರುದ್ರರಮಣೀಯವಲ್ಲದಿದ್ದರೂ ಮನಸ್ಸಿಗೆ ಮುದ ನೀಡಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿ ನೋಡುಗರ ಕಂಗಳಿಗೆ ರಸದೌತಣವನ್ನು ನೀಡುತ್ತದೆ. ಅಂಬೋಲಿ ಜಲಪಾತ ಸಹ್ಯಾದ್ರಿಯ ಪಕೃತಿ    ಸೊಬಗಿಗೆ ಮೆರಗು ತಂದುಕೊಟ್ಟಿದೆ. ಎತ್ತರದಿಂದ ಭೋರ್ಗರೆವ ಈ ಜಲಪಾತದ ನೀರಿಗೆ ಬೆನ್ನೊಡ್ಡಿ ಮೈ ಮನ ಮರೆತು ಮಿಂದರೆ ಧನ್ಯತಾ ಭಾವ ಮನಸ್ಸನ್ನು ಆವರಿಸುತ್ತದೆ.


ಮಹಾರಾಷ್ಟ್ರದ ಸಿಂಧುದುರ್ಗ  ಜಿಲ್ಲೆಯ ವೆಂಗುರ್ಲಾ ಬಂದರು ಮತ್ತು ಕರ್ನಾಟಕದ ಬೆಳಗಾವಿ ನಗರದ ಮಾರ್ಗಮಧ್ಯದಲ್ಲಿ
ಬರುವ ಅಂಬೋಲಿ ಗ್ರಾಮ, ಬ್ರಿಟಿಷರು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ತಮ್ಮ ರಕ್ಷಣಾ ಸಾಮಗ್ರಿ ಸರಬರಾಜು ಮಾಡಲು  ವ್ಯಾಪಕವಾಗಿ ಬಳಸಿದಾಗಿನಿಂದ  ಐತಿಹಾಸಿಕವಾಗಿ ಬೆಳಕಿಗೆ ಬಂತು. ಬ್ರಿಟಿಷರ ನೆಚ್ಚಿನ ತಾಣವಾಗಿ ಅಂಬೋಲಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಕರ್ನಲ್ ವೆಸ್ಟ್ರೋಪ್ ವಿಶೇಷ ಆಸಕ್ತಿವಹಿಸಿದ್ದನೆಂದು ಹೇಳಲಾಗುತ್ತದೆ. ಜಲಪಾತಕ್ಕೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಪ್ರವಾಸಿಗರ ಹಸಿವು ಹಿಂಗಿಸಲು ವಡಾ- ಪಾವ್, ಚುನಮುರಿ-ಭಡಂಗ, ಸಮೋಸಾ, ಸುಟ್ಟ ಮತ್ತು ಕುದಿಸಿದ ಗೊಂಜಾಳ ತೆನೆ, ಬಿಸಿ ಬಿಸಿ ಚಹಾ ಯತೇಚ್ಚವಾಗಿ ದೊರಕುತ್ತವೆ.    


ಅಂಬೋಲಿ ಜಲಪಾತದಿಂದ ಬೆಳಗಾವಿ ಕಡೆಯ ರಸ್ತೆಯಲ್ಲಿ 3 ಕಿಲೋಮೀಟರ್ ಕ್ರಮಿಸಿದರೆ ನಾವು ತಲುಪುವದು ಪುರಾಣ ಪ್ರಸಿದ್ಧ ಹಿರಣ್ಯಕೇಶಿ ನದಿಯ ಉಗಮಸ್ಥಾನ. ಇಲ್ಲಿರುವ ಬಂಡೆಗಳ ಗುಹೆಗಳಲ್ಲಿ ಹಿರಣ್ಯಕೇಶಿ ನದಿ ಹುಟ್ಟುತ್ತದೆ, ಗುಹೆಗಳ ಸುತ್ತ ನಿರ್ಮಿಸಲ್ಪಟ್ಟಿರುವ  ಪುರಾತನವಾದ ಹಿರಣ್ಯಕೇಶ್ವರ ದೇವಾಲಯದ ಪ್ರಶಾಂತ ಪರಿಸರ ಪ್ರವಾಸಿಗರಲ್ಲಿ ಭಕ್ತಿ ಹುಟ್ಟಿಸಿ ಅಧ್ಯಾತ್ಮಿಕತೆಯನ್ನು ಹೆಚ್ಚಿಸುತ್ತದೆ. ದಂತಕಥೆಯೊಂದರ ಪ್ರಕಾರ ಅಂಬೋಲಿಯ ಸುತ್ತಮುತ್ತ ಪುರಾಣ ಕಾಲದ ಸುಮಾರು  108 ಶಿವ ದೇವಾಲಯಗಳಿವೆ ಆದರೆ ಈ ವರೆಗೆ ಕೇವಲ ಒಂದು ಡಜನ್ ದೇವಾಲಯಗಳು ಮಾತ್ರ ಬೆಳಕಿಗೆ ಬಂದಿವೆ. ಇಂತಹ ಡಜನ್ ಶಿವಾಲಯಗಳಲ್ಲಿ ಹಿರಣ್ಯಕೇಶಿ ನದಿಯ ಉಗಮಸ್ಥಾನದ ಹಿರಣ್ಯಕೇಶ್ವರ ದೇವಾಲಯವು ಒಂದು. ಮುಂದೆ ಇದೇ  ಹಿರಣ್ಯಕೇಶಿ ನದಿ ಕರ್ನಾಟಕದಲ್ಲಿ ಘಟಪ್ರಭಾ ನದಿಯಾಗಿ ಹರಿಯುತ್ತದೆ.

ಅಂಬೋಲಿ ಘಟ್ಟದಲ್ಲಿ ನೋಡಲೇಬೇಕಾದ ಇನ್ನೊ೦ದು ಸ್ಥಳ ಕವಳಾ ಸೇಠ್ ಅಥವಾ ಕವಳೆ ಸೇಡ (ವೀಕ್ಷಣಾ ಸ್ಥಳ) ವೀವ್ ಪಾಯಿಂಟ್. ಅಂಬೋಲಿ ಜಲಪಾತದಿಂದ ಬೆಳಗಾವಿ ಕಡೆಯ ರಸ್ತೆಯಲ್ಲಿ ಸುಮಾರು 9 ಕಿಲೋಮೀಟರ್ ಕ್ರಮಿಸಿ ಮುಖ್ಯ ರಸ್ತೆಯಿಂದ ಎಡಗಡೆ ತಿರುಗಿ ಮತ್ತೆ 3 ಕಿಲೋಮೀಟರ್ ಸಾಗಿದರೆ ಸಿಗುವ  ನಿಸರ್ಗದ ಅದ್ಭುತ ಸೃಷ್ಟಿಗಳೊಲ್ಲೊಂದಾದ ಕಣಿವೆ ಪ್ರದೇಶವೇ ಕವಳಾ ಸೇಠ್ ! ಈ ಕಣಿವೆ ಪ್ರದೇಶದಲ್ಲಿ ವಿವಿಧೆಡೆಯಿಂದ ಬೀಳುವ ಹಲವು ಚಿಕ್ಕ ಜಲಪಾತಗಳನ್ನು ಕಾಣಬಹುದು. ಈ ಕಣಿವೆಯ ಜಲಪಾತಗಳ ವಿಶೇಷತೆಯಂದರೆ, ಮುಂಗಾರಿನಲ್ಲಿ ಬೀಸುವ ಗಾಳಿಯ ರಭಸಕ್ಕೆ  ಜಲಪಾತವು ಹಿಮ್ಮುಖವಾಗಿ ನೀರನ್ನು ಮೇಲಕ್ಕೆ ದಬ್ಬಿ ನೋಡುಗರನ್ನು ಒದ್ದೆಗೊಳಿಸಿ ನಿಬ್ಬೆರಗಾಗಿಸುತ್ತದೆ! ಇದೇ ಕಾರಣಕ್ಕಾಗಿ  ಇಲ್ಲಿಯ ಜಲಪಾತ ಹಿಮ್ಮುಖ ಜಲಪಾತ (ರಿವರ್ಸ್ ವಾಟರ್ ಫಾಲ್ಸ್) ಎಂದು ಪ್ರಸಿದ್ಧಿ ಪಡೆದಿದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ಯಾವುದೇ ಅವಘಡಗಳು ಸಂಭವಿಸುವದನ್ನು ತಡೆಯಲು ಕವಳಾ ಸೇಠ್ ಕಣಿವೆಯ ಸುತ್ತ ಸುರಕ್ಷಿತ ಕಟ-ಕಟೆಯನ್ನು ನಿರ್ಮಿಸಿದೆ.

ಭರ್ತಿ ಮಳೆಗಾಲದಲ್ಲಿ ದಟ್ಟವಾದ ಮಂಜು ಇಡೀ ಪ್ರದೇಶವನ್ನು ಆವರಿಸಿ ಆಗಾಗ ಸೂರ್ಯನ ರಶ್ಮಿ-ಗಳು ಮೋಡದ ಮಂಜನ್ನು ಭೇದಿಸಿ ಬರುವ ದೃಶ್ಯ, ರವಿಯು ಪ್ರಕೃತಿಯ ಮಡಿಲಲ್ಲಿ ಕಣ್ಣು ಮುಚ್ಚಾಲೆಯಾಡುತ್ತಿರುವನೆನೋ ಎಂಬಂತೆ ಭಾಸವಾಗುತ್ತದೆ!  ಮೋಡಗಳು ಮರೆಯಾಗಿ ಕೆಲ ಕ್ಷಣ ಹೊಂಬಿಸಿಲು ಹೊರಸೂಸುವ ನಸುಬೆಳಕಿನಲ್ಲಿ ನೋಡ ಸಿಗುವ ಕವಳಾ ಸೇಠ್ ಕಣಿವೆಯ ನೋಟ ನಿಜಕ್ಕೂ ಸೌಂದರ್ಯ ದೇವತೆಯ ದರ್ಶನವಾದಂತೆ ಭಾಸವಾಗುತ್ತದೆ! ನಿಸರ್ಗದ ವಿವಿಧ ಬಗೆಯ ಸದ್ದುಗಳಿಂದ   ಉತ್ಪತ್ತಿಯಾಗುವ ಸಂಗೀತದೊಂದಿಗೆ ಪ್ರಕೃತಿಯ ಮೌನವನ್ನು ಅನುಭವಿಸಲು ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ಪ್ರದೇಶ ಕವಳಾ ಸೇಠ್.  ಕವಳಾ ಸೇಠ್-ಗೆ ಭರ್ಜರಿ ಮುಂಗಾರಿನ ಸಮಯದಲ್ಲಿ ಅಂದರೆ ಜೂನ್ ಮಧ್ಯ ಭಾಗದಿಂದ   ಆಗಸ್ಟ್-ನ ಮಧ್ಯ ಭಾಗದವರೆಗೂ ಭೇಟಿ ನೀಡುವದು ಸೂಕ್ತ.    
  
ಅನೇಕ ವಿಧದ ವನ್ಯ ಜೀವಿಗಳಿಗೆ ಆಶ್ರಯತಾಣವಾಗಿರುವ ಅಂಬೋಲಿ ಘಟ್ಟದಲ್ಲಿ ಕಾಡೆಮ್ಮೆ,ಕಾಡು ಹಂದಿ,ಮಂಗ, ಹುಲ್ಲೆಗಳು (ಎಂಟೆಲೋಪಗಳು), ಜಿ೦ಕೆಗಳೂ ಕೂಡ ಕಾಣಸಿಗುತ್ತವೆ, ಸಮಯ ಸಂದರ್ಭ ಸರಿಯಾಗಿದ್ದಾರೆ ಕೆಲ ಬಾರಿ ಚಿರತೆಯನ್ನು ನೋಡಬಹುದು.    ಅಂಬೋಲಿ ಘಟ್ಟ, ತಮ್ಮ ಕೆಮೆರಾದಲ್ಲಿ ವಿವಿಧ ಬಗೆಯ ಪಕ್ಷಿಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಉತ್ಸುಕರಾಗಿರುವ ಪಕ್ಷಿ ವೀಕ್ಷಕರಿಗೂ ಕುತೂಹಲ ಹುಟ್ಟಿಸುವ  ಸ್ಥಳ. ಮಂಗಟ್ಟೆಗಳು (ಹಾರ್ನ್ ಬಿಲ್), ಪ್ಯಾರಾಡೈಸ್ ನೊಣಹಿಡುಕ   (ಪ್ಯಾರಡೈಸ್ ಫ್ಲೈ ಕ್ಯಾಚರ್), ಕಾಜಾಣ (ಡ್ರೋ೦ಗೊ), ಹಳದಿ ಹುಬ್ಬಿನ ಪಿಕಳಾರ (ಯಲ್ಲೋ ಬ್ರೌಡ ಬುಲ್-ಬುಲ್), ಕೆಂಪು-ಮೀಸೆಯ ಪಿಕಳಾರ (ರೆಡ್ ವಿಸ್ಕರ್ಡ್ ಬುಲ್-ಬುಲ್), ಹಳದಿ ಬೆನ್ನಿನ ಸೂರಕ್ಕಿ (ಕ್ರಿಮ್ಸನ್ ಬ್ಯಾಕ್ದ್ ಸನ್ ಬರ್ಡ್), ಕಿತ್ತಳೆ-ತಲೆಯ ನೆಲ ಸಿಳ್ಳಾರ (ಆರೆಂಜ್ ಹೆಡೆಡ್ ಗ್ರೌಂಡ್ ಥ್ರಶ್), ಹರಟೆಮಲ್ಲಗಳು(ಬ್ಯಾಬ್ಲರ್) ಇವೆ ಮುಂತಾದ ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಇಷ್ಟೇ ಅಲ್ಲದೇ ಅನೇಕ ವಿಧದ ಚಿಟ್ಟೆಗಳು, ಕಪ್ಪೆಗಳು  ಹಾಗೂ ಸರಿಸೃಪಗಳು ಅಂಬೋಲಿ ಘಟ್ಟದ ಕಾಡಿನಲ್ಲಿ ಮನೆ ಮಾಡಿವೆ. ಈ ಸ್ಥಳದಲ್ಲಿ ಕಂಡು ಬರುವ ಸಸ್ಯ – ಗಿಡಗಳಲ್ಲಿ  ಹೊಳೆ ಮತ್ತಿ, ಬೀಟೆ, ನಂದಿ,  ಹಿರ್ದಾ, ಐನ್, ಅಂಜಾನ್, ಶೀಗೆಕಾಯಿ, ಮಾವು, ಫರ್ನ್ ಮುಖ್ಯವಾದವುಗಳು.


ಒಟ್ಟಾರೆಯಾಗಿ ಹೇಳುವಾದದರೆ ಸಹ್ಯಾದ್ರಿ ಮಡಿಲ ರಮ್ಯ ತಾಣವಾದ ಅಂಬೋಲಿಯನ್ನು ಒಮ್ಮೆ ನೋಡಿ ಅನುಭವಿಸಿ ಆನಂದಿಸಬೇಕು.