Thursday, 4 February 2016

ಪಕ್ಷಿ ನೋಟ

ನನಗೆ ಬರೆಯುವ ಆಸಕ್ತಿ ಮತ್ತು ಆಕಾಂಕ್ಷೆ ಸಾಕಷ್ಟು  ಇದ್ದರೂ ತಥಾ ಕಥಿತ ಸಮಯದ ಅಭಾವದಿಂದ  ಅಂದುಕೊಂಡಷ್ಟು ಬರೆಯಲು ಆಗುತ್ತಿಲ್ಲ . ಈಗ ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುವ ವಿಷಯವೇನೆಂದರೆ ತೀರಾ ಇತ್ತೀಚಿಗೆ ನಾನು ಆಕರ್ಷಿತನಾದ ಒಂದು ಹವ್ಯಾಸದ ಕುರಿತು........ ಅದೇ ಪಕ್ಷಿ ವೀಕ್ಷಣೆ...ಬರ್ಡಿಂಗ್.

Hanging Parakeet/Vernal Parrot

ನಾವು ಹೈ ಸ್ಕೂಲನಲ್ಲಿ ಓದುತ್ತಿರುವಾಗ ನಮ್ಮ ಇಂಗ್ಲೀಷ ಶಿಕ್ಷಕರಾದ ತಿಮ್ಮಾಪುರ ಸರ್  ನಮ್ಮನ್ನು ಹಿಡಕಲ್ ಡ್ಯಾಮ್ ನ   ಕಾಡು-ಮೇಡುಗಳಲ್ಲಿ ಆಗಾಗ ಕರೆದೊಯ್ದು ಪಕ್ಷಿಗಳ ಬಗೆಗಿನ ಸಕಲ ಮಾಹಿತಿಯನ್ನು ವಿವರವಾಗಿ ತಿಳಿಸುತಿದ್ದರು. ಆಗ ಮನಸಿಲ್ಲದಿದ್ದರೂ ತಿಮ್ಮಾಪುರ ಸರ್  ಜೊತೆಗೆ ಹೋಗಿ ಬರುತಿದ್ದೆವು. ಆದರೆ ಪಕ್ಷಿ ವೀಕ್ಷಣೆಯಿಂದ ಅಂತಹ  ಪ್ರಯೋಜನವೇನೂ ಅನಿಸಿರಲಿಲ್ಲ .. “ಇದೇನ ಹುಚ್ಚಾತನಾಪಾ” ಅಂತ ಅನಸ್ತಿತ್ತು. ನಮ್ಮ ಕೈಗಾ ದಲ್ಲಿ ಕಳೆದ ೬ ವರ್ಷಗಳಿಂದ  ಆಯೋಜಿಸಲ್ಪಡುವ ಕೈಗಾ ಬರ್ಡ್ ಮ್ಯಾರ್ಥನ್ಗೆ  ತಿಮ್ಮಾಪುರ ಸರ್  ೩ ಬಾರಿ ಬಂದಿದ್ದರು. ಪ್ರತಿಬಾರಿಯೂ  ಅವರನ್ನು ಭೇಟಿಯಾದಾಗ “ನೀನು ಬರ್ಡ್ ಮ್ಯಾರ್ಥನಗೆ  ಬಾರೋ” ಅನ್ನವರು ನಾನು ಹುನ್ರಿ ಸರ್ ಅಂತಿದ್ದೆ, ಕಳೆದ ವರ್ಷ (೨೦೧೫) ಅವರು ಬಂದಾಗ “ನೀ ಮುಂದಿನ ಸಲ ಬರ್ಡ್ ಮ್ಯಾರ್ಥನಗೆ ಬರಲಿಲ್ಲಾಂದರ ನಿಮ್ಮ ಮನಿಗೆ ಬರುದುಲ್ಲೋ ನೋಡೋ ಶ್ರೀನಿವಾಸ “ ಅಂದರು. ಮನಸ್ಸಿನ ಯಾವುದೋ ಮೂಲೆಯಲ್ಲಿ ಆ ಮಾತು ಕೊರೆಯುತ್ತಿತ್ತು. ನನ್ನ ಜೀವನದಲ್ಲಿ ನಾನು ಒಂದು ಮಟ್ಟಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದರೆ  ಅದಕ್ಕೆ ಕಾರಣಿಕರ್ತರಾದವರಲ್ಲಿ   ತಿಮ್ಮಾಪುರ ಸರ್  ಅತ್ಯಂತ ಪ್ರಮುಖರು. 

Starling

 ನನ್ನಲ್ಲಿ ಚಿಕ್ಕದಾಗಿ ಮೊಳಕೆಯೊಡದಿದ್ದ ಈ ಅಭಿಲಾಷೆಗೆ ತಾರ್ಕಿಕ ಅಂತ್ಯ ಸಿಕ್ಕಿದ್ದು ಸ್ನೇಹಿತರೊಂದಿಗೆ ಅತ್ತಿವೇರಿ ಪಕ್ಷಿಧಾಮಕ್ಕೆ ಭೇಟಿ ಕೊಟ್ಟಾಗ. ಅಲ್ಲಿ ನೋಡ ಸಿಕ್ಕ ಪಕ್ಷಿಗಳ ಸೌ೦ದರ್ಯಕ್ಕೆ ಬೆರಗಾಗಿ ಪಕ್ಷಿಗಳ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ನನ್ನ0ಥವನೂ ಪಕ್ಷಿಲೋಕದ ಕದತಟ್ಟುವಂತಾಯಿತು. ನಿಜ ಅರ್ಥದಲ್ಲಿ ಜ್ಯಾತ್ಯಾತೀತವಾದ, ಪಕ್ಷ ಬೇಧವಿಲ್ಲದ  ಪಕ್ಷಿಗಳ ಬಣ್ಣ ಬಣ್ಣದ  ಲೋಕ ಅದೆಂಥಾ ವಿಸ್ಮಯಕಾರಿ! ಅತ್ತಿವೇರಿ ಪಕ್ಷಿಧಾಮದಲ್ಲಿ ಅಲ್ಲಿಯ ಪಕ್ಷಿಗಳ ಕುರಿತು ಸವಿವರವಾಗಿ ತಿಳಿಸಿಕೊಟ್ಟ ಪಕ್ಷಿ ತಜ್ಞ ಅತ್ತಿವೇರಿ ಮಹೇಶರಿಗೆ ಹ್ಯಾಟ್ಸ್ ಆಫ್. ಅತ್ತಿವೇರಿ ಪಕ್ಷಿಧಾಮ ಸ್ಥಾಪಿತವಾಗಿದ್ದು ಹೆಸರಾಂತ ಪಕ್ಷಿ ತಜ್ಞ ಪಿ ಸುದರ್ಶನರ ಒತ್ತಾಸೆ ಹಾಗೂ ಅವಿರತ ಪ್ರಯತ್ನದಿಂದ, ಅದನ್ನು ಬೆಳಿಸುವಲ್ಲಿ ಮಹೇಶರ ಕೊಡುಗೆ ಕೂಡ ಆಪಾರ.ಅಲ್ಲಿ ಬರುವ ವಲಸೆ ಹಕ್ಕಿಗಳ ಹಾಗೂ ಇತರೆ ಹಕ್ಕಿಗಳ ವೈಜ್ಞಾನಿಕ ನಾಮ, ಪ್ರಭೇದ, ವರ್ಗ , ಕುಟುಂಬ ಮತ್ತು ಅವುಗಳ ನಡವಳಿಕೆಗಳ ವಿವರ ಮಹೇಶರ ಬೆರಳತುದಿಯಲ್ಲಿವೆ. ಪಕ್ಷಿ ಪ್ರೀಯರನ್ನು ಇನ್ನಷ್ಟು ಬೆರಗುಗೊಳಿಸುವ ಸಂಗತಿಯೆಂದರೆ ಮಹೇಶ ಎಲ್ಲ ಬಗೆಯ ಪಕ್ಷಿಗಳ ಹೆಸರನ್ನು ಕನ್ನಡೀಕರಿಸಿ ಹೇಳುವ ರೀತಿ. ನಾವು ಅಂತರಜಾಲವನ್ನು  ಜಾಲಾಡಿದರೂ ಕನ್ನಡದಲ್ಲಿ ಪಕ್ಷಿಗಳ ಹೆಸರು ಕಾಣಸಿಗುವದಿಲ್ಲ. ಕರ್ನಾಟಕದ ಈ ಭಾಗದ ಪಕ್ಷಿ ವೀಕ್ಷಕರಿಗೆ ಅತ್ತಿವೇರಿ  ನೆಚ್ಚಿನ ತಾಣವಾಗಿ, ಪ್ರವಾಸಿಗರನ್ನೂ ಕೂಡ ತನ್ನತ್ತ ಸೆಳೆಯುತ್ತಿದೆ.ಅತ್ತಿವೇರಿಯಲ್ಲಿ ಪ್ರವಾಸಿಗರಿಗೆ ತಂಗಲು ವಿಶ್ರಾ0ತಿಗೃಹದ ವ್ಯವಸ್ಥೆಯನ್ನೂ ಅರಣ್ಯ ಇಲಾಖೆ ಮಾಡಿದೆ, ಇನ್ನೇನು ಕಟ್ಟಡದ ಉಧ್ಗಾಟನೆಯಾಗಬೇಕಾಷ್ಟೆ. ಈ ವಿಶ್ರಾಂತಿಗೃಹದ ಗೋಡೆಗಳ ಮೇಲೆ ಪ್ರಕೃತಿಗೆ ಮತ್ತು ಪಕ್ಷಿಗಳಿಗೆ ಸಂಭದಿಸಿದ ನಾಣ್ಣುಡಿಗಳನ್ನು ಬರೆಸಲಾಗಿದೆ. ಅವುಗಳಲ್ಲಿ ನನ್ನ ಗಮನ ಸೆಳೆದು  ಯೋಚಿಸುವಂತೆ ಮಾಡಿದ್ದು ಚೀನಾ ದೇಶದ ಈ ನಾಣ್ಣುಡಿ “ನಿಮ್ಮ ಹೃದಯವನ್ನು ಯಾವಾಗಲೂ ಹಸಿರಾಗಿಟ್ಟುಕೊಳ್ಳಿ – ಹಕ್ಕಿಯೊಂದು ಅಲ್ಲಿಗೆ ಬಂದರೂ ಬರಬಹುದು”. ಅಬ್ಬಾ! ಎಂತಹ ವಿಚಾರ?    

ನಮ್ಮ  ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಅವ್ಹಾನಿಸುವದನ್ನು ಬಿಟ್ಟು ಅತ್ತಿವೇರಿ ಮಹೇಶರಂತಹವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಪುರಸ್ಕರಿಸಬೇಕು ಮತ್ತು  ಇಂತಹವರನ್ನು ಹುಡುಕಿ ಪಕ್ಷಿಧಾಮಗಳ ಅಭಿವೃದ್ಧಿಗೆ ಸಲಹಕಾರರನ್ನಾಗಿ ನೇಮಿಸಿಕೊಂಡು ಸೂಕ್ತ ಧನಸಹಾಯವನ್ನು ಮಾಡಬೇಕು. ಹಾಗಾದಾಗ ಮಾತ್ರ ಪಕ್ಷಿಧಾಮಗಳನ್ನು ಪ್ರವಾಸಿತಾಣಗಳ್ಳನ್ನಾಗಿ   ಅಭಿವೃದ್ಧಿಪಡಿಸಿ  ಹೆಚ್ಚು ಹೆಚ್ಚು ಪ್ರವಾಸಿಗರನ್ನೂ ಆಕರ್ಷಿಸಲು ಪೂರಕ ವಾತಾವರಣ ಸೃಷ್ಟಿಸಲು ಸಾಧ್ಯ.    
      
ಹೀಗೆ ಚಿಗಿಯುತ್ತಿದ್ದ ಪಕ್ಷಿವೀಕ್ಷಣೆಯ ಹಂಬಲ (ತವಕ- ತುಮುಲ) ನನ್ನಲ್ಲಿ ಹವ್ಯಾಸವಾಗಿ ತಳವೂರಿದ್ದು ೨೦೧೬ರ ಕೈಗಾ ಬರ್ಡ್ ಮ್ಯಾರ್ಥನದಲ್ಲಿ  ಭಾಗವಹಿಸಿ ಕೊಡಸಳ್ಳಿ ವಲಯದಲ್ಲಿ ನುರಿತ ಪಕ್ಷಿತಜ್ಞರೊಂದಿಗಿನ ಒಡನಾಟದಿಂದ. ಪಕ್ಷಿಗಳ ಬಗ್ಗೆ ಬೇರೆ ಏನೂ ತಿಳಿಯದಿದ್ದರೂ ಬಣ್ಣ ಬಣ್ಣದ ಹಕ್ಕಿಗಳ ವರ್ಣರಂಜಿತವಾದ ದೇಹ ರಚನೆ, ಚಿಲಿ-ಪಿಲಿಯ ಇಂಚರ, ಮನಸ್ಸಿಗೆ ಮುದ ನೀಡುವ ಸೊಬಗಿಗೆ ಸಾಟಿಯೇ ಇಲ್ಲ.   ಭಗವಂತನ ಸೃಷ್ಟಿ ನಿಜಕ್ಕೂ ಅಧ್ಬುತ!