ಒಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ
ಪ್ರಮುಖವಾದ ಅಂಶಗಳೆಂದರೆ ಆರೋಗ್ಯ ಮತ್ತು ಶಿಕ್ಷಣ. ಮೊದಲು ಬರುವದು ಆರೋಗ್ಯ, ಆರೋಗ್ಯವನ್ನು
ಚೆನ್ನಾಗಿ ಇಟ್ಟುಕೊಳ್ಳಲು ನಾವು ನಮ್ಮ
ದಿನಚರಿಯನ್ನು ಸರಿಯಾಗಿ ಕಾರ್ಯರೂಪಕ್ಕೆ ತರುತ್ತಾ ವಾಕಿಂಗೋ ಅಥವಾ ಇನ್ನಾವೋದೋ ವ್ಯಾಯಾಮಾನೋ
ಮಾಡುತ್ತೇವೆ. ಆರೋಗ್ಯದ ಬಗ್ಗೆ ಹೇಳೊದಾದರೆ
ಸಾಕಷ್ಟು ಹೇಳಬಹುದು, ಆದರೆ ನಾನು ಹೇಳ ಹೊರಟಿರುವ ವಿಷಯ ಅದಲ್ಲಾ.
ಒಬ್ಬ ವ್ಯಕ್ತಿಯನ್ನು ಮನುಷ್ಯನನ್ನಾಗಿ ಮಾಡಿ
ಅವನ ವ್ಯಕ್ತಿತ್ತ್ವವನ್ನು ವಿಕಸನಗೊಳಿಸೋದು ಶಿಕ್ಷಣದಿಂದ ಸಾಧ್ಯ.ಇತ್ತೀಚಿನ ದಿನಗಳಲ್ಲಿ
ಇಂಗ್ಲೀಷ್ ಭಾಷೆಯ ವ್ಯಾಮೋಹ ನಮ್ಮನ್ನೆಲ್ಲ ಒಂದು ಪ್ರಪಾತಕ್ಕೆ ತಳ್ಳುತ್ತಾ ಇದೆ. ನಾವೆಲ್ಲಾ
ತಿಳಿದೋ ತಿಳಿದೇನೋ ಈ ಮಹಾಕೂಪಕ್ಕೆ ಬೀಳ್ತಾ ಇದ್ದೇವೆ.ನನ್ನ ಈ ಲೇಖನದ ಉದ್ದೇಶ
ಖಂಡಿತವಾಗಿಯೂ ಇಂಗ್ಲೀಷನ್ನು ದ್ವೇಷಿಸೋದಲ್ಲ. ಆದರೆ ನಮ್ಮ ಇಂದಿನ ಪೀಳಿಗೆಯ ಮಕ್ಕಳು
ಕಳೆದುಕೊಳ್ಳುತ್ತಿರುವದನ್ನು ಎತ್ತಿ ತೋರಿಸುವ ಪ್ರಯತ್ನ.
ನಾನು ಪ್ರತಿಪಾದಿಸುತ್ತಿರೂದೆನೆ0ದರೆ ಕನಿಷ್ಠ
ಪಕ್ಷ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ (ಮಾತೃಭಾಷೆಯಲ್ಲಿಯೇ) ಶಿಕ್ಷಣ
ಕಡ್ಡಾಯವಾಗಬೇಕು.ಇದರ ಜೊತೆಗೆ ಇಂಗ್ಲೀಷ್ ಕೂಡ ಒಂದು ವಿಷಯವಾಗಿ ಒಂದನೆಯ ತರಗತಿಯಿಂದಲೇ
ಕಲಿಸಲ್ಪಡಬೇಕು ಮತ್ತು ಇಂಗ್ಲೀಷ್ ಕಲಿಸುವ ಶಿಕ್ಷಕರ ಗುಣಮಟ್ಟ ಉತ್ಕೃಷ್ಟವಾಗಿರಬೇಕು. ನಮ್ಮ
ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿತರೂ ಅವರು ಬರೆಯುವ ಹಾಗೂ ಮಾತನಾಡುವ ಇಂಗ್ಲೀಷ್ ಯಾವ ಮಟ್ಟದ್ದಾಗಿದೆ
ಊಹಿಸಬಲ್ಲಿರಾ? ಪರಿಸ್ಥಿತಿ ತುಂಬಾ ಗಂಭೀರವಾಗಿದೆ.
ಇದಕ್ಕೆಲ್ಲಾ ಯಾರು ಹೊಣೆ?
ನಮ್ಮಲ್ಲಿರುವ ತಪ್ಪು ಕಲ್ಪನೆ,ಕೀಳರಿಮೆ,
ಅತಿಯಾದ ಇಂಗ್ಲೀಷ್ ವ್ಯಾಮೋಹ ಮತ್ತು ನಮ್ಮ ಮಾತೃ ಭಾಷೆಯ ಬಗೆಗಿನ ತಾತ್ಸಾರ ಮನೋಭಾವ. ಜಗತ್ತಿನ
ಇತಿಹಾಸದ ಪುಟಗಳನ್ನು ತಿರುವಿದರೆ ನಮಗೆ ಇದರ ಅರಿವಾದಿತೇನೋ! ವಿಶ್ವದಲ್ಲಿ ಎಲ್ಲರನ್ನು
ಹಿಂದಿಕ್ಕಿ ತಂತ್ರಜ್ಞಾನದಲ್ಲಿ ಅತ್ಯ೦ತ
ಮುಂಚೂಣಿಯಲ್ಲಿರುವ ಜಪಾನ್ ದೇಶದಲ್ಲಿ ಉನ್ನತ ಶಿಕ್ಷಣ ಕೂಡ ಕಲಿಸಲ್ಪಡುವದು ಅವರ ಮಾತೃ ಭಾಷೆಯಲ್ಲೇ.
ಒಂದು ಮಗು ಹುಟ್ಟಿದ ತಕ್ಷಣ ಯಾವ ಭಾಷೆಯನ್ನು ತನ್ನ ತಾಯಿಯಿಂದ ಮತ್ತು ಮನೆಯ ಪರಿಸರದಿಂದ
ಕಲಿಯುತ್ತದೆಯೋ ಆ ಭಾಷೆಯಲ್ಲಿ ಏನು ಕಲಿಸಿದರೂ ಅದಕ್ಕೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ
ಇರುತ್ತದೆ. ಇದನ್ನು ಧೃಡೀಕರಿಸಲು ಯಾವ ಆರ್ಕಿಮಿಡಿಸನ ತತ್ವವಾಗಲಿ ಅಥವಾ ಥೇರಿ ಆಫ್
ರಿಲೇಟಿವಿಟಿಯಾಗಲಿ ಬೇಕಾಗಿಲ್ಲ.ಇವತ್ತು ನಾವು ನಮ್ಮ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಏನಾದರೂ ಕಠಿಣ
ಶಬ್ದ ಅಥವಾ ಆಡು ಭಾಷೆಯ ನುಡಿಗಟ್ಟನ್ನು ಹೇಳ ಹೋದರೆ, ಆ ಮಕ್ಕಳ ಉತ್ತರ...
ಅಲ್ಲ ಮರು ಪ್ರಶ್ನೆ “ಹಂಗ ಅಂದ್ರ ಏನು?” ಆಮೇಲೆ ನಾವು ಅದನ್ನು, ಅವರಿಗೆ ತಿಳಿದಿರುವ ಹರಕು ಮುರಕು ಇಂಗ್ಲೀಷಿನಲ್ಲಿ ಅರ್ಥ ಮಾಡಿಸೋದರಲ್ಲಿ
ಸುಸ್ತಾಗಿಹೋಗ್ತೀವಿ. ಅದೇ ಆ ಮಗು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು
ಮಾತೃ ಭಾಷೆಯಲ್ಲಿ ಕಲಿತಿದ್ದರೆ ಎಲ್ಲವನ್ನು ಸರಾಗವಾಗಿ
ತಿಳಿದುಕೊಳ್ಳೋ ಸಾಮರ್ಥ್ಯ ಅದರಲ್ಲಿ ತನ್ನಷ್ಟಕ್ಕೆತಾನೇ ಬರುವದು. ಎಲ್ಲಿಯವರೆಗೆ
ಮಕ್ಕಳಿಗೆ ಇಂಗ್ಲೀಷ್ (ಗ್ರಾಮರ್) ಕಲಿಸೋ ಶಿಕ್ಷಕರು ಚೆನ್ನಾಗಿ ಸಿಗುವದಿಲ್ಲವೋ ಅವರು ಇಂಗ್ಲೀಷ್
ಮಾಧ್ಯಮದಲ್ಲಿ ಕಲಿತರೂ ಅವರ ವಾಕ್ಯ ರಚನೆ, ಅವರು ಪ್ರಯೋಗಿಸುವ ವ್ಯಾಕರಣ
ಅತ್ಯ0ತ ಕನಿಷ್ಟ ಗುಣಮಟ್ಟದ್ದಾಗಿರುತ್ತದೆ. ವ್ಯಾಕರಣವಾಗಲಿ
ಭಾಷೆಯ ಮೇಲಿನ ಪ್ರಭುತ್ವವಾಗಲಿ ಒಂದು ಹಂತದ ಮಟ್ಟಿಗೆ ಹಿಡಿತಕ್ಕೆ ಬರಬೇಕೆಂದರೆ ಅದು ಕೇವಲ ಮಾತೃ
ಭಾಷೆಯಲ್ಲಿನ ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವ ವ್ಯಕ್ತಿ ಮಾತೃ ಭಾಷೆಯಲ್ಲಿ ಎಲ್ಲವನ್ನೂ
ಅರ್ಥೈಸಿಕೊಳ್ಳೋ ಸಾಮರ್ಥ್ಯವನ್ನು ಹೊಂದಿರುತ್ತಾನೋ ಆ ವ್ಯಕ್ತಿ ಜಗತ್ತಿನ ಬೇರೆ ಯಾವ ಭಾಷೆಯನ್ನಾದರೂ
ಕಲಿಯಬಲ್ಲ.
ಇದಕ್ಕೆ ಒಂದು ಜ್ವಲಂತ ನಿದರ್ಶನ ಅಂದರೆ
ನಮ್ಮ ಸಹೋದ್ಯೋಗಿಯಾಗಿದ್ದ ಮತ್ತು ಸಧ್ಯಕ್ಕೆ ಸ್ವಯಂ ಉದ್ಯೋಗದಲ್ಲಿ ನಿರತರಾಗಿರುವ ಒಬ್ಬ ನಮ್ಮ ಸ್ನೇಹಿತ. ಅವರು
ಒಬ್ಬ ಜೀನಿಯಸ್,ಯಾವುದೇ ವಿಷಯದ(ಐಟಿ,ಸಾಮಾನ್ಯ ಜ್ಞಾನ,ಅರ್ಥಶಾಸ್ತ್ರ) ಬಗ್ಗೆ ಅಪರಿಮಿತವಾದ ಜ್ಞಾನವನ್ನು
ಹೊಂದಿರುವ, ಇಂಗ್ಲೀಷ್ ಭಾಷೆಯ ಮೇಲೆ ಪ್ರಭತ್ವವನ್ನು ಹೊಂದಿರುವ,ಈತ ಓದಿರುವದು ಕನ್ನಡ ಮಾಧ್ಯಮದಲ್ಲೇ. ನಾನು ಬೇರೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು
ಆದರೆ ಈ ವ್ಯಕ್ತಿ ನಮ್ಮೆಲ್ಲರ ಮಧ್ಯ ಇದ್ದವರು ಮತ್ತು ಇವರ ಸಾಮರ್ಥ್ಯಕ್ಕೆ ನಾವೆಲ್ಲ ಸಾಕ್ಷಿ.
ಈ ವಿಚಾರದಲ್ಲಿ ನಮ್ಮ (AECS) ಮಕ್ಕಳು ಇನ್ನಷ್ಟು ದುರ್ದೈವಿಗಳು.
ಯಾಕೆ0ದರೆ ಇಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ಅವಕಾಶವಂತೂ ಇಲ್ಲವೇ ಇಲ್ಲಾ. ಆದರೆ ಕನಿಷ್ಟ
ಪಕ್ಷ 1ನೇ ತರಗತಿಯಿಂದ ಕನ್ನಡವನ್ನು ಒಂದು
ವಿಷಯವಾಗಿ ಕಲಿಯುವ ಅವಕಾಶವು ಇರಲಿಲ್ಲ. ನಮ್ಮ ಸ್ನೇಹಿತರ ಭಗೀರಥ ಪ್ರಯತ್ನದಿಂದ ಈ ಆಯ್ಕೆ ನಮ್ಮ ಮಕ್ಕಳಿಗೆ
2012-2013ನೇ ಶೈಕ್ಷಣಿಕ ವರ್ಷದಿಂದ ದೊರೆಕಿದೆ.ನಮ್ಮ ಮಕ್ಕಳಿಗೆ ಬಸ್ ಬೋರ್ಡ
ಓದಲಿಕ್ಕಾಗತ್ತೋ ಇಲ್ಲವೋ ಎನ್ನೋ ಪರಿಸ್ಥಿತಿ ಇತ್ತು, ಆದರೆ ಈಗ ಮಕ್ಕಳು ಕನ್ನಡ ಪುಸ್ತಕವನ್ನು ಸರಾಗವಾಗಿ ಓದಬಲ್ಲರು.
ಇಂದು ಮಾತೃ ಭಾಷೆಯಲ್ಲಿ ಶಿಕ್ಷಣ ಸಾಧ್ಯವಾಗದೇ
ಹೋದರೆ ನಾಳೆ ನಮ್ಮ ದಾಸ ಸಾಹಿತ್ಯ ಹಾಗೂ ವಚನ
ಸಾಹಿತ್ಯದ ಪರಂಪರೆಯನ್ನು ಅಭ್ಯಸಿಸಿ ಇಡೀ
ವಿಶ್ವಕ್ಕೆ ನಮ್ಮ ಮಹಾನ್ ಸಾಧಕರ ಸಾಧನೆಯನ್ನು
ಬಿತ್ತರಿಸುವ ಕನಸನ್ನು ನನಸು (ಅಲ್ಲಾ ಕರ್ತವ್ಯ) ಮಾಡುವವರಾರು? ನಮ್ಮ ಮುಂದಿನ ಪೀಳಿಗೆಯಿಂದ
ನಾವು ಆಪೇಕ್ಷಿಸುವದಾದರು ಏನು? ನಮ್ಮ ಈ ನೀರೀಕ್ಷೆಗಳೆಲ್ಲವೂ
ಹುಸಿಯಾಗದಂತೆ ನೋಡಿಕೊಳ್ಳ ಬೇಕಾದರೆ ನಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಕೊಡಿಸಲೇ
ಬೇಕು. ನಮ್ಮ ವಸತಿ ಸಂಕೀರ್ಣದಲ್ಲಿರುವ0ಥ ಮಲಯಾಳಿ ಭಾಷಿಕರೂ ಕೂಡ ತಮ್ಮ ಮಕ್ಕಳಿಗೆ ಮಲಯಾಳಂ ಕಲಿಸೋಗೊಸ್ಕರ ಕ್ಲಾಸುಗಳನ್ನು
ಆರಂಭಿಸಿದ್ದಾರೆ. ಇದು ಖಂಡಿತಾ ಸ್ವಾಗತರ್ಹ ಬೆಳವಣಿಗೆ.
ಯಾವ ರೀತಿ ಜನನಿ ಮತ್ತು ಜನ್ಮ ಭೂಮಿ ಪವಿತ್ರವೋ, ಮಾತೃ ಭಾಷೆಯೂ ಅಷ್ಟೇ
ಪವಿತ್ರವಾದದ್ದು. ಕನ್ನಡದ ಕಂಪನ್ನು ಉಳಿಸಲು
ಬೆಳೆಸಲು ಮಾತೃ ಭಾಷೆಯಲ್ಲಿ ಶಿಕ್ಷಣ ಅತ್ಯಗತ್ಯ .